ನಿರ್ದೇಶಕನ ಮೇಲೆ ಗಂಭೀರ ಆರೋಪ ಹೊರಿಸಿದ ನಟಿ: ದೂರು ದಾಖಲು
ಚಿತ್ರರಂಗದಲ್ಲಿ, ಟಿವಿ ರಂಗದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚು. ಮಾನಸಿಕ ಮಾತ್ರವೇ ಅಲ್ಲದೆ ದೈಹಿಕ ದೌರ್ಜನ್ಯಗಳು ಸಹ ಮಹಿಳೆಯರ ಮೇಲೆ ಆಗಾಗ್ಗೆ ಆಗುತ್ತಿರುತ್ತದೆ. ಕೆಲವ ವರ್ಷಗಳ ಹಿಂದೆ ಸಹ ನಿರ್ದೇಶಕರು ನಟಿಯರನ್ನು ಹೊಡೆದು ಅಭಿನಯ ಮಾಡಿಸುವ ಪರಿಪಾಠ ಇತ್ತು. ಹೀಗೆ ಹೊಡೆಯುವುದನ್ನು 'ಶಿಸ್ತು' ಎಂದು ಪರಿಗಣಿಸಲಾಗಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ, ಆದರೆ ಪೂರ್ಣ ಬದಲಾಗಿಲ್ಲ.
ಇದೀಗ ನಟಿ ಅನ್ನಪೂರ್ಣ ವಿಠಲ್ ಶೋ ಒಂದರ ನಿರ್ದೇಶಕ ಹಾಗೂ ಸಹ ನಟರ ವಿರುದ್ಧ ಮಾನಸಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಡಿಯೋ ಪ್ರಕಟಿಸಿರುವ ಜೊತೆಗೆ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದಾರೆ.
'ಸಹಕುಟುಂಬ ಸಹಪರಿವಾರ' ಶೋನ ನಟಿ ಅನ್ನಪೂರ್ಣ, ಆ ಶೋನ ನಿರ್ದೇಶಕ ಭರತ್ ಗಾಯಕ್ವಾಡ್ ವಿರುದ್ಧ ಮುಂಬೈನ ದಾದರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಿರ್ದೇಶಕನ ಮೇಲೆ ಮಾತ್ರವೇ ಅಲ್ಲದೆ ಸಹ ನಟರಾದ ನಂದಿತಾ ದೂರಿ, ಪಾಟ್ಕರ್ ವಿರುದ್ಧವೂ ಕಿರುಕುಳದ ಆರೋಪ ಹೊರಿಸಿದ್ದಾರೆ.

ಆ ಬಳಿಕ ವಿಡಿಯೋ ಒಂದನ್ನು ಪ್ರಕಟಿಸಿರುವ ಅನ್ನಪೂರ್ಣ, ಭರತ್ ಗಾಯಕ್ವಾಡ್ ನನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ನನ್ನನ್ನು ಅವಾಚ್ಯ ಶಬ್ದಗಳನ್ನು ಬಳಸಿ ಕೆಟ್ಟದಾಗಿ ಬೈಯ್ಯುತ್ತಿದ್ದ. ಸಹನಟರ ಬಳಿ ನನ್ನ ಬಗ್ಗೆ ಕೆಟ್ಟಾದಾಗಿ ಚಾಡಿ ಹೇಳಿ ಮಾನ ಹಾನಿ ಮಾಡುತ್ತಿದ್ದ ಎಂದು ಆರೋಪಿಸಿದ್ದಾರೆ.
ಕಳೆದ 25 ವರ್ಷಗಳಿಂದಲೂ ಅನ್ನಪೂರ್ಣ, ಸಿನಿಮಾ, ಟಿವಿ ಉದ್ಯಮದಲ್ಲಿದ್ದಾರೆ. ತನ್ನ ವಯಸ್ಸಿನ ಬಗ್ಗೆ ನಿರ್ದೇಶಕ ಭರತ್ ಕೆಟ್ಟದಾಗಿ ಮಾತನಾಡುತ್ತಿದ್ದ ಎಂದು ಅನ್ನಪೂರ್ಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹೇಳಿದ್ದಾರೆ. 'ಸಹಕುಟುಂಬ ಸಹಪರಿವಾರ್' ಶೋನ ಸಹನಟರಾದ ನಂದಿತಾ ದೂರಿ ಸಹ ತನ್ನ ವಿರುದ್ಧ ಷಡ್ಯಂತ್ರ ಮಾಡಿರುವುದಾಗಿ ಹೇಳಿದ್ದಾರೆ.
ಅನ್ನಪೂರ್ಣ ಈ ಹಿಂದೆ ಹಲವು ಹಿಂದಿ ಧಾರಾವಾಹಿಗಳಲ್ಲಿ, ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಸಹಕುಟುಂಬ ಸಹಪರಿವಾರ' ಅನ್ನಪೂರ್ಣ ನಟನೆಯ ಮೊದಲ ಮರಾಠಿ ಧಾರಾವಾಹಿ. ದಕ್ಷಿಣ ಭಾರತದವರಾದ ಅನ್ನಪೂರ್ಣ ಎರಡು ದಶಕಗಳಿಂದಲೂ ಹೆಚ್ಚಿನ ಕಾಲ ಹಿಂದಿ ಧಾರಾವಾಹಿ ಉದ್ಯಮದಲ್ಲಿದ್ದಾರೆ. ವಿಡಿಯೋದಲ್ಲಿ ಕಣ್ಣೀರು ಹಾಕುತ್ತಾ ನಿರ್ದೇಶಕನ ಮೇಲೆ ಅನ್ನಪೂರ್ಣ ಆರೋಪ ಮಾಡಿದ್ದು, ನಿರ್ದೇಶಕ ಭರತ್ನಿಂದಾಗಿ ನಾನು ಖಿನ್ನತೆಗೆ ಒಳಗಾದೆ ಎಂದಿದ್ದಾರೆ. ವಿಡಿಯೋ ನೋಡಿದ ಹಲವರು ಸಾಮಾಜಿಕ ಜಾಲತಾಣದಲ್ಲಿ ಅನ್ನಪೂರ್ಣ ಬೆಂಬಲಕ್ಕೆ ನಿಂತಿದ್ದಾರೆ.


Click it and Unblock the Notifications











