"ನನ್ನ ಕೈಲಾದಷ್ಟು ಮಟ್ಟಿಗೆ ಶ್ರಾವಣಿ ಪಾತ್ರಕ್ಕೆ ಜೀವ ತುಂಬಿದ್ದೇನೆ"; ಪಾತ್ರಕ್ಕೆ ಅನುಷಾ ರಮೇಶ್ ವಿದಾಯ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಅವನು ಮತ್ತೆ ಶ್ರಾವಣಿ'. ಈ ಹೊಸ ಧಾರಾವಾಹಿಯಲ್ಲಿ ನಾಯಕಿ ಶ್ರಾವಣಿಯಾಗಿ ಅನುಷಾ ರಮೇಶ್ ಅಭಿನಯಿಸುತ್ತಿದ್ದರು. ಆದರೆ, ಕಾರಣಾಂತರಗಳಿಂದ ಈ ಪಾತ್ರಕ್ಕೆ ಅವರು ವಿದಾಯ ಹೇಳಿದ್ದಾರೆ.
ಹೌದು, ತಮ್ಮ ಸ್ಚ ಇಚ್ಛೆಯಿಂದಲೇ ಶ್ರಾವಣಿ ಪಾತ್ರದಿಂದ ನಟಿ ಅನುಷಾ ರಮೇಶ್ ಹೊರಬಂದಿದ್ದಾರೆ. ಇನ್ನು ಈಶಿಕಾ ಶೆಟ್ಟಿಗಾರ್ ಅವರು ಇನ್ನು ಮುಂದೆ ಶ್ರಾವಣಿಯಾಗಿ ಕಾಣಿಸಿಕೊಳ್ಳಲಿದ್ದು, ಅವರು ನಟಿಸಿರುವ ಸಂಚಿಕೆ ಪ್ರಸಾರ ಶುರುವಾಗಿದೆ.

ಇನ್ನು ಅನುಷಾ ರಮೇಶ್ ಅವರು ತಾವು ಶ್ರಾವಣಿ ಪಾತ್ರದಿಂದ ಹೊರಬಂದಿರುವ ವಿಚಾರವನ್ನು ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ಸ್ವತಃ ಅವರೇ ಹಂಚಿಕೊಂಡಿದ್ದಾರೆ. 'ಅವನು ಮತ್ತೆ ಶ್ರಾವಣಿ' ಧಾರಾವಾಹಿಯ ಶೂಟಿಂಗ್ ಸಮಯದಲ್ಲಿ ತೆಗೆದಿರುವಂತಹ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿರುವ ಅನುಷಾ ರಮೇಶ್ ಅವರು "ಇದು ನನ್ನ ಜೀವನದಲ್ಲಿ ಕಳೆದಿರುವಂತಹ ಅತ್ಯುತ್ತಮ ಕ್ಷಣಗಳು" ಎಂದು ಬರೆದುಕೊಂಡಿದ್ದಾರೆ.
"ಶ್ರಾವಣಿ ಪಾತ್ರದಿಂದ ನಾನು ಹೊರಬರುತ್ತಿದ್ದೇನೆ. ಈ ಜರ್ನಿ ತುಂಬಾ ಚಿಕ್ಕದಾದರೂ ತುಂಬಾ ಸೊಗಸಾಗಿತ್ತು. ಶ್ರಾವಣಿ ಪಾತ್ರಕ್ಕೆ ನೀವು ಜೀವನ, ಬಣ್ಣ, ಸವಾಲು ಹಾಗೂ ಸಂತೋಷದ ಒಟ್ಟು ಮೂಟೆಯನ್ನು ತುಂಬಿದ್ದೀರಿ. ನನ್ನ ಕೈಲಾದಷ್ಟು ಮಟ್ಟಿಗೆ ನಾನು ಶ್ರಾವಣಿ ಪಾತ್ರಕ್ಕೆ ಜೀವ ತುಂಬಿದ್ದೇನೆ. ನಿಮ್ಮನ್ನು, ನಿಮ್ಮ ಪ್ರೀತಿಯನ್ನು ನಾನು ಖಂಡಿತಾ ಮಿಸ್ ಮಾಡಿಕೊಳ್ಳಲಿದ್ದೇನೆ" ಎಂದು ಇನ್ಸ್ಟಾಗ್ರಾಂನಲ್ಲಿ ನಟಿ ಅನುಷಾ ರಮೇಶ್ ಬರೆದುಕೊಂಡಿದ್ದಾರೆ .

ಇದರ ಜೊತೆಗೆ "ನಾನು ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಲು ಮುಖ್ಯ ಕಾರಣ ಅಮ್ಮ. ಅವರಿಂದಲೇ ನಾನು ನಟಿಯಾಗಲು ಕಾರಣ. ಅವರಿಗೆ ಧನ್ಯವಾದಗಳು. ಇದರ ಜೊತೆಗೆ ನನ್ನ ಸಹೋದರಿ ಪೂಜಾ, ಶ್ರೇಯ, ರಾಗು ಇವರಿಗೂ ಧನ್ಯವಾದಗಳು. ನೀವು ನೀಡಿದ ನಿರಂತರ ಬೆಂಬಲಕ್ಕೆ ಧನ್ಯವಾದಗಳು" ಎಂದು ನಟಿ ಅನುಷಾ ರಮೇಶ್ ಬರೆದುಕೊಂಡಿದ್ದಾರೆ.
ಇದರ ಜೊತೆಗೆ "ನನ್ನ ಸಹ ಕಲಾವಿದರಿಗೆ, ನೀವು ವಿಶೇಷವಾಗಿ ಪೂಜಾ ರಮೇಶ್, ಸ್ಮೈಲ್ ಗುರು ರಕ್ಷಿತ್, ಪ್ರತಿಕ್ಷಾ ಸಿದ್ಧರಾಜು ಅವರಿಗೂ ಧನ್ಯವಾದಗಳು. ಆ ಕಷ್ಟದ ಸಮಯದಲ್ಲಿ ನನ್ನ ದಿನಗಳನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಉತ್ತಮಗೊಳಿಸಿದ್ದೀರಿ" ಎಂದು ಬರೆದುಕೊಂಡಿದ್ದಾರೆ. ಮಾತ್ರವಲ್ಲದೇ ಸ್ಕಂದ ಅಶೋಕ್, ರೋಹಿತ್ ರಂಗಸ್ವಾಮಿ, ಹರ್ಷಿತ ರಾಮಚಂದ್ರ, ಸ್ವಾತಿ ಜೈನ್, ನಂದಿನಿ ಜೈನ್, ಚೈತ್ರಾ ರಾವ್ ಸಚಿನ್ ಮತ್ತು ಉಳಿದ ಕಲಾವಿದರುಗಳಿಗೂ ನೀಡಿದ ಬೆಂಬಲ, ಪ್ರೋತ್ಸಾಹಕ್ಕೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
'ಅವನು ಮತ್ತು ಶ್ರಾವಣಿ' ಧಾರಾವಾಹಿಯಲ್ಲಿ ನಾಯಿಯೊಂದು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ಚೀಕು ಆಗಿ ಕಿರುತೆರೆ ವೀಕ್ಷಕರಿಗೆ ಮನರಂಜಿಸುತ್ತಿರುವ ಸಿಂಬಾ ನಾನು ಭೇಟಿಯಾದ ಅತ್ಯಂತ ಮುದ್ದಾದ ನಾಯಿಮರಿ ಎಂದು ಅನುಷಾ ರಮೇಶ್ ಬರೆದುಕೊಂಡಿದ್ದಾರೆ. ಅಂದ ಹಾಗೇ ಅನುಷಾ ಅವರು ಅವರ ಇಡೀ ಜೀವನದಲ್ಲಿ ಭೇಟಿಯಾದ ಏಕೈಕ ನಾಯಿಮರಿ ಎಂದರೆ ಅದು ಸಿಂಬಾವಂತೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಶ್ರೀಮತಿ ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ನಾಯಕಿಯ ತಂಗಿಯಾಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು ಅನುಷಾ ರಮೇಶ್. ಮುಂದೆ ಓದಿನ ಸಲುವಾಗಿ ನಟನೆಯಿಂದ ಬ್ರೇಕ್ ಪಡೆದುಕೊಂಡ ಆಕೆ ಎಂಬಿಎ ಪದವಿಯನ್ನು ಕೂಡಾ ಪಡೆದರು. ಎಂಟು ವರ್ಷಗಳ ದೀರ್ಘ ಗ್ಯಾಪ್ನ ನಂತರ ಮತ್ತೊಮ್ಮೆ ಕಿರುತೆರೆಗೆ ಮರಳಿದ ಈಕೆ ಶ್ರಾವಣಿಯಾಗಿ ಕಿರುತೆರೆ ವೀಕ್ಷಕರಿಗೆ ಮೋಡಿ ಮಾಡಿದರು. ಇದೀಗ ಶ್ರಾವಣಿ ಪಾತ್ರದಿಂದ ಹೊರಬಂದಿರುವ ಈಕೆ ಮತ್ತೆ ಬೇರೆ ಪ್ರಾಜೆಕ್ಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರ ಮುಂದಿನ ದಿನಗಳಲ್ಲಿ ಸಿಗಬೇಕಿದೆ.


Click it and Unblock the Notifications











