ಒಂದೇ ಧಾರಾವಾಹಿ ಆದರೆ ಭಾಷೆ ಎರಡು.. ಒಂದೇ ಪಾತ್ರ ಒಬ್ಬರೇ ನಟಿ; 'ಗಟ್ಟಿಮೇಳಂ'ನಲ್ಲಿ ಅಶ್ವಿನಿ ಮೂರ್ತಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಲಕ್ಷ್ಮಿ ನಿವಾಸ' ವೂ ಒಂದು. ಕೌಟುಂಬಿಕ ಕಥಾಹಂದರವನ್ನೊಳಗೊಂಡಿರುವ ಈ ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆದಿದೆ. 'ಗಟ್ಟಿಮೇಳಂ' ಎನ್ನುವ ಹೆಸರಿನಲ್ಲಿ ಜೀ ತಮಿಳಿನಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದ್ದು ಅದರಲ್ಲಿ ಹೆಚ್ಚಿನ ಕಲಾವಿದರುಗಳು ಕನ್ನಡದವರು ಎಂಬುದೇ ಸಂತಸದ ವಿಚಾರ.
ಛಾಯಾ ಸಿಂಗ್, ಸೌಂದರ್ಯ ರೆಡ್ಡಿ, ವಿರಾಟ್, ಸ್ವಾತಿ, ಆನಂದ್ ಹೀಗೆ ಕನ್ನಡ ಕಿರುತೆರೆಯ ಕಲಾವಿದರುಗಳು ತಮಿಳಿನ 'ಗಟ್ಟಿಮೇಳಂ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಮಗದೊಂದು ಸಿಹಿ ಸುದ್ದಿಯನ್ನು ಈ ಧಾರಾವಾಹಿ ತಂಡ ಹೊರಹಾಕಿದೆ. ಅದೇನೆಂದರೆ ಇದೀಗ ಮತ್ತೋರ್ವ ಕನ್ನಡತಿ ಕೂಡಾ 'ಗಟ್ಟಿಮೇಳಂ' ಧಾರಾವಾಹಿ ತಂಡ ಸೇರಿದ್ದಾರೆ.

'ಲಕ್ಷ್ಮಿನಿವಾಸ' ಧಾರಾವಾಹಿಯಲ್ಲಿ ಚೆಲುವಿ ಆಗಿ ನಟಿಸುತ್ತಿರುವ ಅಶ್ವಿನಿ ಮೂರ್ತಿ ಅವರು ಇದೀಗ ತಮಿಳು ಕಿರುತೆರೆಗೆ ಕಾಲಿಡಲಿದ್ದಾರೆ. ಜೀ ತಮಿಳು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳಂ' ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಅಶ್ವಿನಿ ಮೂರ್ತಿ. ಅಂದ ಹಾಗೇ ಈಕೆ ತಮಿಳು ಧಾರಾವಾಹಿಯಲ್ಲೂ ಈಕೆ ಚೆಲುವಿ ಆಗಿ ನಟಿಸುತ್ತಿರುವುದು ವಿಶೇಷ. ಇಂತಹ ಸುವರ್ಣಾವಕಾಶ ಸಿಗುವುದು ತೀರಾ ಅಪರೂಪ. ಒಂದೇ ಧಾರಾವಾಹಿ, ಒಂದೇ ಪಾತ್ರ, ಎರಡು ಭಾಷೆ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಇದೀಗ ಅಶ್ವಿನಿಮೂರ್ತಿ ಅವರಿಗೆ ಆ ಅವಕಾಶ ದೊರಕಿದ್ದು ಇನ್ನು ಮುಂದೆ ಆಕೆ ತಮಿಳು ಕಿರುತೆರೆಯಲ್ಲಿಯೂ ಚೆಲುವಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಅಂದ ಹಾಗೇ ಅಶ್ವಿನಿ ಮೂರ್ತಿ ಅವರು ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷಣ' ಧಾರಾವಾಹಿಯಲ್ಲಿ ನಾಯಕಿ ನಕ್ಷತ್ರಳ ಅಕ್ಕ ಆಗಿ ಈಕೆ ಅಭಿನಯಿಸಿದ್ದರು. ಇದರ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮರಳಿ ಮನಸ್ಸಾಗಿದೆ' ಧಾರಾವಾಹಿಯಲ್ಲಿ ನಾಯಕ ವಿಕ್ರಾಂತ್ನ ಚಿಕ್ಕಮ್ಮನ ಮಗಳು ಸಾಹಿತ್ಯಳಾಗಿ ಈಕೆ ಅಭಿನಯಿಸಿದ್ದರು.
'ಮರಳಿ ಮನಸ್ಸಾಗಿದೆ' ಧಾರಾವಾಹಿಯಲ್ಲಿ ಪೆದ್ದು ಹುಡುಗಿಯ ಪಾತ್ರಕ್ಕೆ ಜೀವ ತುಂಬಿದ್ದ ಅಶ್ವಿನಿ ಚಾಲೆಂಜಿಂಗ್ ಆದ ಪಾತ್ರದಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು. 'ಬಯಸದೇ ಬಳಿ ಬಂದೆ' ಧಾರಾವಾಹಿಯಲ್ಲಿಯೂ ಈಕೆ ಅಭಿನಯಿಸಿದ್ದು ಇದೀಗ ಪರಭಾಷೆಯ ಕಿರುತೆರೆಯಲ್ಲಿ ನಟನಾ ಛಾಪನ್ನು ಪಸರಿಸುತ್ತಿದ್ದಾರೆ.
ನಟನೆಯ ಹೊರತಾಗಿ ಅಶ್ವಿನಿಮೂರ್ತಿ ಬ್ಯುಸಿನೆಸ್ ವುಮೆನ್ ಕೂಡಾ ಹೌದು. ಸೌಂದರ್ಯಶಾಸ್ತ್ರಜ್ಞೆ ಹಾಗೂ ಕಾಸ್ಮೆಟಾಲಜಿಸ್ಟ್ ಆಗಿರುವ ಅಶ್ವಿನಿ ಬೆಂಗಳೂರಿನಲ್ಲಿಯೇ ಉದ್ಯಮವನ್ನು ನಡೆಸುತ್ತಿದ್ದಾರೆ. ಜೊತೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಎಆರ್ ಗ್ಲಾಮ್ ಹೌಸ್ ಎಂಬ ಸ್ವಂತ ಸಲೂನ್ ಅನ್ನು ಕೂಡಾ ಈಕೆ ಹೊಂದಿದ್ದಾರೆ.
ಅಂದ ಹಾಗೇ ನಟನೆ ಮತ್ತು ಉದ್ಯಮ ಎರಡನ್ನೂ ಸರಿದೂಗಿಸಿಕೊಂಡು ಸಾಗುತ್ತಿರುವ ಅಶ್ವಿನಿ ಮೂರ್ತಿ ಅವರಿಗೆ ನಟಿಯಾಗಬೇಕು, ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬುದು ಬಾಲ್ಯದ ಕನಸಾಗಿತ್ತು. ಇದರ ಜೊತೆಗೆ ಉದ್ಯಮಿಯಾಗಬೇಕು ಎಂದು ಕೂಡಾ ಈಕೆ ಬಯಸಿದ್ದರು. ಇದೀಗ ಬಾಲ್ಯದ ಕನಸು ಹಾಗೂ ಉದ್ಯಮಿ ಆಗುವ ಬಯಕೆ ಇದೆರಡನ್ನೂ ಸಾಧಿಸಿರುವ ಖುಷಿಯಲ್ಲಿದ್ದಾರೆ ಅಶ್ವಿನಿಮೂರ್ತಿ.


Click it and Unblock the Notifications











