ಕನ್ನಡ ಕಿರುತೆರೆಯ 'ಕಿನ್ನರಿ' ಭೂಮಿ ಶೆಟ್ಟಿ ತಮಿಳು ಚಿತ್ರರಂಗಕ್ಕೆ ಎಂಟ್ರಿ
'ಕಿನ್ನರಿ'ಯಾಗಿ ಕಿರುತೆರೆಗೆ ಪರಿಚಿತರಾದ ಕುಂದಾಪುರದ ಕುವರಿ ಹೆಸರು ಭೂಮಿ ಶೆಟ್ಟಿ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ಬೆಡಗಿ ಭೂಮಿ ಶೆಟ್ಟಿ. ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿರುವ ಭೂಮಿ ಶೆಟ್ಟಿ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ನಲ್ಲಿಯೂ ಬಹಳಷ್ಟು ಖ್ಯಾತಿಯನ್ನು ಗಳಿಸಿದರು. ಇದೀಗ ಕನ್ನಡದ ಕಿನ್ನರಿ ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದಾರೆ.
ತಮಿಳು ಸಿನಿಮಾವೊಂದರಲ್ಲಿ ನಟಿಸಲಿರುವ ಭೂಮಿ ಶೆಟ್ಟಿ ಸಖತ್ ಖುಷಿಯಲ್ಲಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ ಕೂಡಾ ಬಿಡುಗಡೆಯಾಗಿದ್ದು, ಸಿನಿ ಪ್ರಿಯರು ಮೆಚ್ಚಿಕೊಂಡಿದ್ದಾರೆ. ಒಂದು ಭಾಷೆಯಲ್ಲಿ ನಮ್ಮನ್ನು ನಾವು ಕಲಾವಿದರಾಗಿ, ಒಳ್ಳೆಯ ನಟರಾಗಿ ಸಾಬೀತು ಮಾಡಿದಾಗಲೇ ಬೇರೆ ಭಾಷೆಯಲ್ಲಿ ಅವಕಾಶ ಸಿಗುವುದು ಎಂದು ಎಂಬುದು ಭೂಮಿ ಶೆಟ್ಟಿಯ ಅಭಿಪ್ರಾಯ.

ಭಾಷೆ ಯಾವುದೇ ಇರಲಿ, ಒಳ್ಳೆಯ ಪಾತ್ರಗಳು ಸಿಕ್ಕರೆ ನಾನು ನಟಿಸಲು ಸಿದ್ಧ ಎಂದು ಭೂಮಿ ಶೆಟ್ಟಿ ಹೇಳುತ್ತಾರೆ. ಇದೀಗ ತಮಿಳು ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ ನಟಿ ಭೂಮಿ ಶೆಟ್ಟಿ. ಇದರ ಜೊತೆಗೆ ಭಾಷೆಯ ಬಗ್ಗೆ ಒಂದಷ್ಟು ಅಂಜಿಕೆ ಆಕೆಗಿದೆ. ಆದರೆ, ಆದಷ್ಟು ಬೇಗ ಭಾಷೆಯನ್ನು ಸುಲಲಿತವಾಗಿ ಕಲಿಯುತ್ತೇನೆ ಎಂಬ ಆತ್ಮವಿಶ್ವಾಸವನ್ನು ಆಕೆ ಬೆಳೆಸಿಕೊಂಡಿದ್ದಾರೆ.
ಇನ್ನು ತನಗೆ ಸಿಗುವ ಪಾತ್ರಗಳ ಬಗ್ಗೆ ಭೂಮಿ ಶೆಟ್ಟಿ ಯಾವತ್ತಿಗೂ ಏನನ್ನೂ ಹೇಳುವುದಿಲ್ಲ. ಯಾಕೆಂದರೆ, ನಿರ್ದೇಶಕರಿಗೆ ಭೂಮಿ ಇಂತಹದ್ದೇ ಪಾತ್ರಕ್ಕೆ ಹೋಲುತ್ತಾರೆ ಎಂಬ ಕಲ್ಪನೆ ಇರುತ್ತದೆ. ಹಾಗಾಗಿ ಅವರು ತಾನು ಪಾತ್ರಕ್ಕೆ ಸರಿ ಹೊಂದುತ್ತೇನೆ ಎಂಬ ಕಾರಣದಿಂದಲೇ ಭೂಮಿ ಶೆಟ್ಟಿ ಅವರನ್ನು ಆಯ್ಕೆ ಮಾಡುತ್ತಾರೆ ಎಂದು ಆಕೆ ನಂಬಿದ್ದಾರೆ. ತನಗೆ ಸಿಕ್ಕ ಪಾತ್ರಕ್ಕೆ ತನ್ನ ಕೈಲಾದಷ್ಟು ಮಟ್ಟಿಗೆ ಜೀವ ತುಂಬುವುದೊಂದೇ ಆಕೆಯ ಕೆಲಸ ಎಂಬುದು ಭೂಮಿ ಶೆಟ್ಟಿ ಮಾತು.

'ಕಿನ್ನರಿ' ಧಾರಾವಾಹಿಯ ಮಣಿಯಾಗಿ ಕನ್ನಡ ಕಿರುತೆರೆಯಲ್ಲಿ ಮಿಂಚಿದ ಕುಂದಾಪುರದ ಕುವರಿ ಮತ್ತೆ ಕಾಣಿಸಿದ್ದು ಪರಭಾಷೆಯ ಕಿರುತೆರೆಯಲ್ಲಿ. ತೆಲುಗಿನ 'ನಿನ್ನೆ ಪೆಳ್ಳಾಡಾತಾ' ಧಾರಾವಾಹಿಯಲ್ಲಿ ನಾಯಕಿಯಾಗಿ ಕಮಾಲ್ ಮಾಡಿದ ಭೂಮಿ ಶೆಟ್ಟಿ ನಂತರ ಕಾಣಿಸಿದ್ದು ದೊಡ್ಮನೆಯಲ್ಲಿ. ಕನ್ನಡ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟ ಈ ನಟಿ ನಂತರ ತೆಲುಗಿನ 'ಅಕ್ಕ ಚೆಲುಲು' ಧಾರಾವಾಹಿಗೆ ಬಣ್ಣ ಹಚ್ಚಿದರು.
ಇನ್ನು ಕೊರೊನಾ ಲಾಕ್ ಡೌನ್ ಸಮಯದಲ್ಲಿ ಬಿಡುಗಡೆಯಾದ 'ಇಕ್ಕಟ್' ಸಿನಿಮಾದಲ್ಲಿ ಈಕೆ ನಾಯಕಿಯಾಗಿ ನಟಿಸಿದ್ದು, ನಾಗಭೂಷಣ್ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು 'ವಾಸಂತಿ' ಎನ್ನುವ ಕಲಾತ್ಮಕ ಸಿನಿಮಾದಲ್ಲಿ ಭೂಮಿ ಬಣ್ಣ ಹಚ್ಚಿದ್ದು, ವೆಬ್ ಸಿರೀಸ್ನಲ್ಲಿಯೂ ಕಾಣಿಸಿಕೊಂಡಿದ್ದಾರೆ.


Click it and Unblock the Notifications











