Brinda Acharya: ಪೌರಾಣಿಕ ಧಾರಾವಾಹಿಯಲ್ಲಿ ನಟಿಸಿದ್ದ ನಟಿ.. ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿದ್ದೇಗೆ?
ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಅನೇಕ ನಟಿಯರು ಇಂದು ಹಿರಿತೆರೆಯಲ್ಲಿ ಬ್ಯುಸಿಯಾಗುತ್ತಿರುವುದು ಹೊಸತೇನಲ್ಲ. ಆ ಸಾಲಿಗೆ ಇದೀಗ ಹೊಸದಾಗಿ ಸೇರ್ಪಡೆಯಾಗಿರುವ ಈಕೆಯ ಹೆಸರು ಬೃಂದಾ ಆಚಾರ್ಯ. 'ಮೊಗ್ಗಿನ ಮನಸ್ಸು' ಸಿನಿಮಾ ಖ್ಯಾತಿಯ ಶಶಾಂಕ್ ನಿರ್ದೇಶನದ 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾದಲ್ಲಿ ಶಿವಾನಿಯಾಗಿ ಅಭಿನಯಿಸಲಿರುವ ಬೃಂದಾ ಆಚಾರ್ಯ ನಟನೆಗೆ ಕಾಲಿಟ್ಟಿದ್ದು ಕಿರುತೆರೆಯಿಂದ ಎನ್ನುವ ವಿಚಾರ ಹಲವರಿಗೆ ತಿಳಿದಿರಲಿಕ್ಕಿಲ್ಲ.
ಲವ್ವಿ ಸ್ಟಾರ್ ಪ್ರೇಮ್ ಅಭಿನಯದ 'ಪ್ರೇಮಂ ಪೂಜ್ಯಂ' ಸಿನಿಮಾ ಮೂಲಕ ಹಿರಿತೆರೆಯಲ್ಲಿ ಕಾಣಿಸಿಕೊಂಡು ಇದೀಗ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುವ ಸುವರ್ಣಾವಕಾಶ ಪಡೆದುಕೊಳ್ಳುತ್ತಿರುವ ಬೃಂದಾ ಆಚಾರ್ಯ ನಟನೆಗೆ ತಳಪಾಯವೇ ಕಿರುತೆರೆ. 'ಪ್ರೇಮಂ ಪೂಜ್ಯಂ' ಸಿನಿಮಾದ ನಂತರ 'ಜ್ಯೂಲಿಯೆಟ್ 2', 'ರೀತು', 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾಗಳಲ್ಲಿ ನಟಿಸುತ್ತಿರುವ ಬೃಂದಾ ಆಚಾರ್ಯ ಪೌರಾಣಿಕ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು.

ಬಾಲ್ಯದಿಂದಲೇ ನಟಿಯಾಗೋ ಕನಸು
ಸಣ್ಣ ವಯಸ್ಸಿನಿಂದಲೂ ನಟಿಯಾಗಬೇಕು, ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಕನಸು ಕಂಡಿದ್ದ ಬೃಂದಾ ಆಚಾರ್ಯ ಇದೀಗ ಕನಸು ನನಸು ಮಾಡಿಕೊಂಡ ಸಂತಸದಲ್ಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾಕಾಳಿ' ಧಾರಾವಾಹಿಯ ಆಡಿಶನ್ನಲ್ಲಿ ಆಯ್ಕೆಯಾದ ಆಕೆ ರತಿ ಪಾತ್ರಕ್ಕೆ ಸೆಲೆಕ್ಟ್ ಆದರು.
2ನೇ ಧಾರಾವಾಹಿಯೂ ಕೂಡಾ ಪೌರಾಣಿಕವೇ!
ರತಿಯಾಗಿ ನಟಿಸಿ ಕಿರುತೆರೆ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದ ಬೃಂದಾ ಆಚಾರ್ಯ ನಂತರ ನಟಿಸಿದ್ದು ಕೂಡಾ ಪೌರಾಣಿಕ ಧಾರಾವಾಹಿಯಲ್ಲಿಯೇ ಎನ್ನುವುದು ವಿಶೇಷ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಶನಿ' ಧಾರಾವಾಹಿಯಲ್ಲಿ ನಂತರ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಪೋಷಕ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಮನೆ ಮಾತಾದ ಈಕೆ ನಂತರ ಹಿರಿತೆರೆಗೆ ಮುಖ ಮಾಡಿದ್ದು ಮಾತ್ರವಲ್ಲದೇ ನಾಯಕಿಯಾಗಿಯೂ ಭಡ್ತಿ ಪಡೆದರು.

'ಪ್ರೇಮಂ ಪೂಜ್ಯಂ' ಮೂಲಕ ಸಿನಿಮಾ ಎಂಟ್ರಿ
'ಶನಿ' ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ 'ಪ್ರೇಮಂ ಪೂಜ್ಯಂ' ಸಿನಿಮಾದಲ್ಲಿ ನಾಯಕಿಯ ಪಾತ್ರಕ್ಕಾಗಿ ಆಡಿಶನ್ ನಡೆಯುತ್ತಿರುವ ವಿಚಾರ ಬೃಂದಾ ಆಚಾರ್ಯಗೆ ತಿಳಿದಿತ್ತು. ಆದದ್ದಾಗಲಿ ಎಂದು ಚಿತ್ರತಂಡಕ್ಕೆ ತಮ್ಮ ಫೋಟೋಗಳನ್ನು ಕಳಿಸಿಕೊಟ್ಟಿದ್ದರು. ಬೃಂದಾ ಆಚಾರ್ಯ ಫೋಟೋ ನೋಡಿದ ಸಿನಿಮಾ ನಿರ್ದೇಶಕ ರಾಘವೇಂದ್ರ ಇವರನ್ನೇ ನಾಯಕಿಯಾಗಿ ಆಯ್ಕೆ ಮಾಡಿದರು. ಒಟ್ಟಿನಲ್ಲಿ ಕಿರುತೆರೆಯಿಂದ ನಟನೆ ಆರಂಭಿಸಿ ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ಬೃಂದಾ ಆಚಾರ್ಯ ತಮ್ಮ ಬಾಲ್ಯದ ಕನಸು ನನಸು ಮಾಡಿಕೊಂಡಿರುವ ಖುಷಿಯಲ್ಲಿದ್ದಾರೆ.


Click it and Unblock the Notifications











