'ರಂಗನಾಯಕ'ನ ಅಮ್ಮನಾಗಿ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚೈತ್ರಾ ಕೊಟ್ಟೂರು
'ಮಠ' ಸಿನಿಮಾ ಖ್ಯಾತಿಯ ಗುರುಪ್ರಸಾದ್ ಹಾಗೂ ನವರಸನಾಯಕ ಜಗ್ಗೇಶ್ ಅವರ ಕಾಂಬಿನೇಶನ್ನ ಹೊಸ ಸಿನಿಮಾ 'ರಂಗನಾಯಕ'. ಮುಂದಿನ ತಿಂಗಳು ಮಾರ್ಚ್ 8 ರಂದು ಈ ಸಿನಿಮಾ ತೆರೆ ಕಾಣಲಿದೆ. 'ಮಠ' , 'ಎದ್ದೇಳು ಮಂಜುನಾಥ' ಸಿನಿಮಾದ ಬಳಿಕ ಮತ್ತೊಮ್ಮೆ ಗುರುಪ್ರಸಾದ್ - ಜಗ್ಗೇಶ್ ಜೋಡಿ ಸಿನಿ ವೀಕ್ಷಕರನ್ನು ರಂಜಿಸಲು ಬರುತ್ತಿದೆ.
ಅಂದ ಹಾಗೇ ಈ ಸಿನಿಮಾದ ಮುಖ್ಯವಾದ ವಿಚಾರವೆಂದರೆ 'ರಂಗನಾಯಕ' ಸಿನಿಮಾದಲ್ಲಿ ನವರಾಸ ನಾಯಕ ಜಗ್ಗೇಶ್ ಅವರ ಅಮ್ಮನಾಗಿ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಕಾಣಿಸಿಕೊಳ್ಳಲಿದ್ದಾರೆ.

ಜಗ್ಗೇಶ್ ತಾಯಿಯ ಪಾತ್ರದಲ್ಲಿ ನಟಿಸಿರುವ ಚೈತ್ರಾ ಕೊಟ್ಟೂರು ವಯಸ್ಸಿಗೂ ಮೀರಿದ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನದಲ್ಲಿ ತಮ್ಮ ಸಂತಸವನ್ನು ಕೂಡಾ ಆಕೆ ವ್ಯಕ್ತಪಡಿಸಿದ್ದಾರೆ. ಕಲಾವಿದೆಯಾಗಿರುವ ಚೈತ್ರಾ ಕಲೆಗಾಗಿಯೇ ತನ್ನ ಬದುಕನ್ನು ಮುಡಿಪಾಗಿಟ್ಟವರು.
"ಚೈತ್ರಾ ಕೊಟ್ಟೂರು ಅಂದರೆ ಯಾರು, ಏನು ಎಂಬುದನ್ನು ಸಾಬೀತು ಮಾಡುವ ಅನಿವಾರ್ಯ ಆಕೆಗಿತ್ತು. ಆ ಸಂದರ್ಭದಲ್ಲಿ ಅವಕಾಶ ಕೊಟ್ಟು ಪ್ರೋತ್ಸಾಹ ನೀಡಿದವರು ಬೇರಾರೂ ಅಲ್ಲ, ಗುರುಪ್ರಸಾದ್" ಎಂದು ಆಕೆ ಹೇಳಿಕೊಂಡಿದ್ದಾರೆ.

ಇದರ ಜೊತೆಗೆ ಪಾತ್ರದ ಆಯ್ಕೆಯ ಬಗ್ಗೆ ಗೊಂದಲ ಬೇಡ. ಆ ಪಾತ್ರನಾ ಎಂದು ಹೆಚ್ಚು ಆಲೋಚನೆ ಮಾಡಬೇಡ. ನಿನ್ನ ಕೆಲಸ ನಗಿಸುವುದು. ನೀನು ಈ ಪಾತ್ರದಲ್ಲಿ ಕಾಣಿಸಿಕೊಂಡರೆ ನಿನಗೆ ಒಳ್ಳೆಯದಾಗುತ್ತದೆ ಎಂದು ಗುರುಪ್ರಸಾದ್ ಹುರಿದುಂಬಿಸಿದರು ಎಂದು ಚೈತ್ರಾ ಕೊಟ್ಟೂರು ಹೇಳುತ್ತಾರೆ .
ಇದರ ಜೊತೆಗೆ ಜಗ್ಗೇಶ್ ಅಮ್ಮನ ಪಾತ್ರಕ್ಕೆ ಒಪ್ಪಿಗೆ ಕೊಟ್ಟಾಯಿತು. ಆದರೆ, ಮುಂದೆ ಹೇಗೆ ನಟಿಸುವುದು ಎಂಬ ಭಯವೂ ಸಹಜವಾಗಿ ಕಾಡಿತ್ತಂತೆ. ಶೂಟಿಂಗ್ ಸೆಟ್ಗೆ ಹೋಗುವಾಗಲೂ ಭಯದಿಂದಲೇ ಆಕೆ ಹೋಗಿದ್ದರಂತೆ. ಆದರೆ, ಅಲ್ಲಿ ಜಗ್ಗೇಶ್ ಅವರು ನೀಡಿದ ಕಂಫರ್ಟ್, ಧೈರ್ಯದಿಂದ ಕೊಟ್ಟ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದರಂತೆ ಚೈತ್ರಾ ಕೊಟ್ಟೂರು.
ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಿರುತೆರೆಗೆ ಕಾಲಿಟ್ಟಿದ್ದ ಚೈತ್ರಾ ಕೊಟ್ಟೂರು ಆ ಶೋ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡರು. ಮುಂದೆ 'ಸೂಜಿದಾರ' ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ ಈಕೆ ನಂತರ ಕಾಣಿಸಿಕೊಂಡಿದ್ದು ಜಿಲ್ಲಾಧಿಕಾರಿಯಾಗಿ. ಆಲ್ವಿನ್ ಫ್ರಾನ್ಸಿಸ್ ನಿರ್ದೇಶನದ 'ಒಂದು ದಿನ ಒಂದು ಕ್ಷಣ' ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲಿ ಚೈತ್ರಾ ಕೊಟ್ಟೂರು ಅವರು ಜಿಲ್ಲಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡರು.
ಇದರ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಗ್ನಪತ್ರಿಕೆ' ಧಾರಾವಾಹಿಯಲ್ಲಿಯೂ ಈಕೆ ನಟಿಸಿದ್ದಾರೆ. ಹೌದು, ಲಗ್ನಪತ್ರಿಕೆ ಧಾರಾವಾಹಿಯಲ್ಲಿ ನಾಯಕನ ಅತ್ತಿಗೆ ನಮೃತಾ ಆಗಿ ಅಭಿನಯಿಸಿದ ಈಕೆ ಮೊದಲ ಬಾರಿಗೆ ಖಳನಾಯಕಿಯಾಗಿ ಅಬ್ಬರಿಸಿದರು. ಈಗ 'ರಂಗನಾಯಕ' ಸಿನಿಮಾದ ಮೂಲಕ ಮತ್ತೊಮ್ಮೆ ಸಿನಿ ವೀಕ್ಷಕರನ್ನು ರಂಜಿಸಲಿರುವ ಚೈತ್ರಾ ಗೆಲ್ಲುತ್ತಾರಾ ಎಂದು ಕಾದುನೋಡಬೇಕಾಗಿದೆ.


Click it and Unblock the Notifications











