ಶ್ರಾವಣಿ ಪಾತ್ರದ ಮೂಲಕ ಮೋಡಿ ಮಾಡುತ್ತಿರೋ ನಟಿ ಇಶಿಕಾ ಶೆಟ್ಟಿಗಾರ್: ಹಿನ್ನೆಲೆಯೇನು?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅವನು ಮತ್ತು ಶ್ರಾವಣಿ' ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕ ರಮಣ ಆಗಿ ಅಭಿನಯಿಸಿದ್ದ ಸ್ಕಂದ ಅಶೋಕ್ ಅವರು ನಾಯಕ ಅಭಿಮನ್ಯು ಆಗಿ ಮೋಡಿ ಮಾಡುತ್ತಿದ್ದಾರೆ.
ಇನ್ನು 'ಅವನು ಮತ್ತು ಶ್ರಾವಣಿ' ಧಾರಾವಾಹಿ ಶುರುವಾಗುವಾಗ ಅನುಷಾ ರಮೇಶ್ ಅವರು ನಾಯಕಿ ಶ್ರಾವಣಿಯಾಗಿ ನಟಿಸುತ್ತಿದ್ದರು. ಮುಂದೆ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಾಗ ಆ ಜಾಗಕ್ಕೆ ಬಂದವರೇ ನಟಿ ಇಶಿಕಾ ಶೆಟ್ಟಿಗಾರ್. ಮೊದಲ ಬಾರಿಗೆ ನಾಯಕಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿರುಗ ನಟಿ ಇಶಿಕಾ ಶೆಟ್ಟಿಗಾರ್ ಉಡುಪಿ ಜಿಲ್ಲೆಯವರು.

ಬಿಬಿಎ, ಎಲ್ಎಲ್ಬಿ ಪದವೀಧರೆಯಾದ ಈಕೆ ತಂದೆ ತಾಯಿಗೆ ಒಬ್ಬಳೇ ಮಗಳು. ಶ್ರಾವಣಿಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ನಟಿ ಇಶಿಕಾ ಶೆಟ್ಟಿಗಾರ್ ಅವರು ಬಣ್ಣದ ಲೋಕದ ನಂಟು ಬೆಳೆಸಿಕೊಂಡಿದ್ದು ಬಾಲನಟಿಯಾಗಿ. ತದ ನಂತರ ಸ್ಯಾಂಡಲ್ ವುಡ್ ಮೂಲಕ ಸಿನಿಮಾಗೆ ಪಾದಾರ್ಪಣೆ ಮಾಡಿದರು ನಟಿ ಇಶಿಕಾ.
'ಮನದ ಮರೆಯಲಿ' ಎಂಬ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಇಶಿಕಾ ಶೆಟ್ಟಿಗಾರ್ ಇದೀಗ ಶ್ರಾವಣಿ ಪಾತ್ರದ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದ್ದಾರೆ. "ಇದೇ ಮೊದಲ ಬಾರಿಗೆ ನಾನು ಕಿರುತೆರೆಗೆ ಕಾಲಿಟ್ಟಿದ್ದೇನೆ. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ನಿಜವಾಗಿಯೂ ಖುಷಿಯಾಗುತ್ತಿದೆ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದರು ನಟಿ ಇಶಿಕಾ ಶೆಟ್ಟಿಗಾರ್.

'ಅವನು ಮತ್ತು ಶ್ರಾವಣಿ' ಧಾರಾವಾಹಿಯ ಭಾಗವಾಗುತ್ತಿರುವುದಕ್ಕೆ ನನಗೆ ನಿಜವಾಗಿಯೂ ಖುಷಿ ಇದೆ. ಮೊದಲಿಗೆ ಶ್ರಾವಣಿ ಪಾತ್ರ ದೊರೆತಾಗ ಸಹಜವಾಗಿ ಆತಂಕವಾಗಿತ್ತು. ಈಗಾಗಲೇ ಒಬ್ಬರು ಆ ಪಾತ್ರದಲ್ಲಿ ನಟಿಸಿದ್ದರು. ಅವರು ಪಾತ್ರದಿಂದ ಹೊರಬಂದಾಗ ನನಗೆ ಅವಕಾಶ ಸಿಕ್ಕಿತ್ತು. ಕಿರುತೆರೆ ವೀಕ್ಷಕರು ಅವರನ್ನು ಶ್ರಾವಣಿಯಾಗಿ ಒಪ್ಪಿಯಾಗಿತ್ತು. ಈಗ ಇದ್ದಕ್ಕಿದ್ದಂತೆ ನನ್ನನ್ನು ಸ್ವೀಕರಿಸುತ್ತಾರಾ ಎಂಬ ಅಳುಕು ಕಾಡಿತ್ತು" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ನಟಿ ಇಶಿಕಾ ಶೆಟ್ಟಿಗಾರ್.
"ಜನ ಈಗ ಶ್ರಾವಣಿ ಪಾತ್ರವನ್ನು ಒಪ್ಪಿದ್ದಾರೆ. ನನ್ನ ನಟನೆಯನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ. ಕಿರುತೆರೆ ವೀಕ್ಷಕರು ಇಷ್ಟು ಬೇಗ ನನ್ನನ್ನು ಒಪ್ಪಿಕೊಳ್ಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ ಇದೀಗ ಜನರು ನನ್ನನ್ನು ಸ್ವೀಕರಿಸಿರುವುದು ಕಂಡು ಖುಷಿಯಾಗಿದೆ" ಎಂದು ಹೇಳಿಕೊಂಡಿದ್ದಾರೆ ನಟಿ ಇಶಿಕಾ ಶೆಟ್ಟಿಗಾರ್.


Click it and Unblock the Notifications











