ಎರಡೂವರೆ ವರ್ಷದ ಬಳಿಕ 'ಸ್ನೇಹದ ಕಡಲಲ್ಲಿ' ಎಂದ 'ನಮ್ಮನೆ ಯುವರಾಣಿ'; ಯಾರೀ ನಟಿ?
'ನಮ್ಮನೆ ಯುವರಾಣಿ' ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯು ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿತ್ತು. ರಘು ಗೌಡ, ಕಾವ್ಯಾ ಮಹಾದೇವ್, ದೀಪಕ್ ಗೌಡ, ಅಂಕಿತಾ ಅಮರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಈ ಧಾರಾವಾಹಿ ಬರೋಬ್ಬರಿ ಮೂರು ವರ್ಷಗಳ ಕಾಲ ಪ್ರಸಾರ ಕಂಡಿತ್ತು. ಒಟ್ಟು 1085 ಸಂಚಿಕೆಗಳು ಪೂರೈಸಿದ್ದ ಈ ಧಾರಾವಾಹಿಯು ಮುಂದೆ ಒಡಿಯಾ ಹಾಗೂ ಗುಜರಾತಿ ಭಾಷೆಗೆ ಡಬ್ ಆಗಿದ್ದು ಸಂತಸದ ವಿಚಾರ.
ಧಾರಾವಾಹಿ ಮುಗಿದು ಎರಡೂವರೆ ವರ್ಷಗಳಾಗುತ್ತಾ ಬಂದಿದೆ. ಈಗ್ಯಾಕೆ ನಮ್ಮನೆ ಯುವರಾಣಿ ಸುದ್ದಿ ಎಂದು ಆಲೋಚಿಸುತ್ತಿದ್ದೀರಾ? 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಅಹಲ್ಯಾ ಆಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ನಟಿ ಕಾವ್ಯಾ ಮಹಾದೇವ್ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಹೌದು, ಎರಡೂವರೆ ವರ್ಷಗಳ ಕಾಲ ಕಿರುತೆರೆಯಿಂದ ದೂರವಿದ್ದ ಕಾವ್ಯಾ ಮಹಾದೇವ್ ಇದೀಗ ಹೊಸ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಸ್ನೇಹದ ಕಡಲಲ್ಲಿ' ಧಾರಾವಾಹಿಯಲ್ಲಿ ಕಾವ್ಯಾ ಮಹಾದೇವ್ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಈಗಾಗಲೇ ಧಾರಾವಾಹಿಯ ಪ್ರೋಮೋವೊಂದು ಹೊರಬಂದಿದ್ದು ಕಿರುತೆರೆ ವೀಕ್ಷಕರ ಮನ ಸೆಳೆದಿದೆ. 'ನಮ್ಮನೆ ಯುವರಾಣಿ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಕಾವ್ಯಾ ಮಹಾದೇವ್ ಅವರನ್ನು ಮತ್ತೆ ಹೊಸ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ನೋಡುತ್ತಿರುವುದು ವೀಕ್ಷಕರಿಗೂ ಖುಷಿ ತಂದಿದೆ.
'ನಮ್ಮನೆ ಯುವರಾಣಿ' ಧಾರಾವಾಹಿಯ ನಂತರ ಬೇರೆ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ ಕಾವ್ಯಾ ಮಹಾದೇವ್ ರಿಯಾಲಿಟಿ ಶೋ ವಿನಲ್ಲಿ ಭಾಗವಹಿಸಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜ ರಾಣಿ ಸೀಸನ್ 2'ರಲ್ಲಿ ತಮ್ಮ ಪತಿಯ ಜೊತೆಗೆ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಕಾವ್ಯ ಮಹಾದೇವ್ ಆ ಸೀಸನ್ ನ ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದರು.
ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಷ್ಟೇ ಕಾವ್ಯಾ ಮಹಾದೇವ್ ಅಭಿನಯಿಸಿದ್ದರೂ, ಸಹಜ ನಟನೆಯ ಮೂಲಕ ಗುರುತಿಸಿಕೊಂಡಿರುವ ಬೆಡಗಿ. ರಂಗಭೂಮಿಯ ಮೂಲಕ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡಿದ್ದರು ಕಾವ್ಯಾ ಮಹಾದೇವ್. ಹೌದು, ಕಾಲೇಜು ವಿದ್ಯಾರ್ಥಿನಿಯಾಗಿದ್ದಾಗಲೇ ಈಕೆ ನಾಟಕಗಳಲ್ಲಿ ನಟಿಸಿದ್ದರು.

ಮುಂದೆ ಎಂ.ಎಸ್.ಮೂರ್ತಿಯವರ 'ಅಭಿನಯ ತರಂಗ' ಸೇರಿದ ಕಾವ್ಯಾ ಮಹಾದೇವ್ ನಟನೆಯ ಆಗು ಹೋಗುಗಳ ಬಗ್ಗೆ ತಿಳಿದುಕೊಂಡರು. ತರಬೇತಿ ಪಡೆದಿದ್ದೇ ತಡ, ಆಗ ನಡೆಯುತ್ತಿದ್ದ ಚರಣದಾಸಿ ಧಾರಾವಾಹಿಯ ಆಡಿಶನ್ ಗೂ ಆಕೆ ಹೋದರು. ಮುಂದೆ ನಡೆದಿದ್ದೆಲ್ಲಾ ಆಶ್ಚರ್ಯಕರ ಸಂಗತಿ. ಹೌದು, ಆಡಿಶನ್ಗೆ ಹೋದ ಆಕೆ ಆಯ್ಕೆಯೂ ಆಗಿದ್ದರು. ಚರಣದಾಸಿ ಧಾರಾವಾಹಿಯ ದೀಪಾಳಾಗಿ ಕಿರುತೆರೆಗೆ ಕಾಲಿಟ್ಟ ಈಕೆ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆದರು.
ಮುಂದೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾ ನಿನ್ನ ಬಿಡಲಾರೆ'ಯಲ್ಲಿ ಕಾಂಚನಾ ಆಗಿ ಅಭಿನಯಿಸಿದ ಕಾವ್ಯಾ ಮಹಾದೇವ್ ಮೊದಲ ಬಾರಿಗೆ ಖಳನಾಯಕಿಯಾಗಿ ಕಿರುತೆರೆಯಲ್ಲಿ ಮಿಂಚಿದರು. ಮಾತ್ರವಲ್ಲ ಕಾಂಚನಾ ಪಾತ್ರ ಆಕೆಗೆ ಸಾಕಷ್ಟು ಖುಷಿಯನ್ನು ನೀಡಿತ್ತು. ಜೊತೆಗೆ ಆ ಧಾರಾವಾಹಿಯಲ್ಲಿ ಆಕೆ ದೆವ್ವದ ಪಾತ್ರಕ್ಕೆ ಜೀವ ತುಂಬಿದರು.
ನಂತರ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಅಹಲ್ಯಾ ಆಗಿ ನಟಿಸಿದ ಈಕೆ ಪಾಸಿಟಿವ್ ಮಾತ್ರವಲ್ಲದೇ ನೆಗೆಟಿವ್ ಪಾತ್ರದ ಮೂಲಕ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸಿದರು. ಇದೀಗ 'ಸ್ನೇಹದ ಕಡಲಲ್ಲಿ' ಧಾರಾವಾಹಿಯ ಮೂಲಕ ಈಕೆ ಮತ್ತೆ ಕಿರುತೆರೆಗೆ ಮರಳಿದ್ದು ಯಾವ ರೀತಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಾರೆ ಎಂದು ನೋಡಬೇಕಾಗಿದೆ.


Click it and Unblock the Notifications











