'ಬ್ರಹ್ಮಗಂಟು' ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಲು ಬರುತ್ತಿರೋ ಈ ನಟಿ ಯಾರು?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗೌರಿಶಂಕರ' ಧಾರಾವಾಹಿಯಲ್ಲಿ ಗ್ರೀಷ್ಮಾ ಪಾತ್ರದಲ್ಲಿ ನಟಿಸುತ್ತಿರುವ ಕಾವ್ಯಾ ರಮೇಶ್ ಇದೀಗ ಮಗದೊಂದು ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಬ್ರಹ್ಮಗಂಟು'ವಿನಲ್ಲಿ ರೂಪಳಾಗಿ ಕಾವ್ಯಾ ರಮೇಶ್ ಅಭಿನಯಿಸಲಿದ್ದಾರೆ.
ತಂಗಿ ದೀಪಾಳ ತದ್ವಿರುದ್ಧ ಈ ರೂಪ. ತನ್ನ ಅಂದದ ಬಗ್ಗೆ ಈಕೆಗೆ ತುಂಬಾ ಜಂಭ. ತಂಗಿ ದೀಪಾ ಇರುವುದೇ ತನ್ನ ಸೇವೆಗೆ ಎಂಬ ಸ್ವಾರ್ಥ ಈಕೆಯದು. ರೂಪಾಳಿಗೆ ಸೂಪರ್ ಸ್ಟಾರ್ ಆಗಿ ಬಣ್ಣದ ಜಗತ್ತನ್ನು ಆಳಬೇಕು ಎಂಬ ಆಸೆ. ಅದಕ್ಕಾಗಿಯೇ ಗುಟ್ಟು ಗುಟ್ಟಾಗಿ ಆಕೆ ಪ್ಲಾನ್ ಮಾಡುತ್ತಿರುತ್ತಾಳೆ. ಇನ್ನು ಚೆನ್ನಾಗಿರುವುದೆಲ್ಲವೂ ತನಗೆ ದಕ್ಕಬೇಕು ಎನ್ನುವ ಹಠಮಾರಿ ಈ ರೂಪ. ಸದಾ ಆಡಂಬರ ಬಯಸುವ ಇವಳಿಗೆ ಜವಾಬ್ದಾರಿ ಕಡಿಮೆ. ಇದು 'ಬ್ರಹ್ಮಗಂಟು' ಧಾರಾವಾಹಿಯ ರೂಪ ಪಾತ್ರಧಾರಿಯ ಪರಿಚಯ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೀತಾವಲ್ಲಭ' ಧಾರಾವಾಹಿಯಲ್ಲಿ ಅದಿತಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು ಕಾವ್ಯಾ ರಮೇಶ್. ಪೋಷಕ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟುಅದ್ಭುತ ನಟನೆಯ ಮೂಲಕ ವೀಕ್ಷಕರ ಮನ ಸೆಳೆದ ಕಾವ್ಯಾ ರಮೇಶ್ ನಂತರ ಕಾಣಿಸಿಕೊಂಡಿದ್ದು ಹಿರಿತೆರೆಯಲ್ಲಿ.
'ಚೌಕಾಬಾರ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಕಾವ್ಯಾ ರಮೇಶ್ ಎರಡನೇ ನಾಯಕಿಯಾಗಿ ನಟಿಸಿದರು. ನಂತರ 'ಮೂಲತಃ ನಮ್ಮವರೇ' ಸಿನಿಮಾದಲ್ಲಿಯೂ ಎರಡನೇ ನಾಯಕಿಯಾಗಿ ಮಿಂಚಿದ ಈಕೆ, ನಾಯಕಿಯಾಗಿ ಭಡ್ತಿ ಪಡೆದಿದ್ದು 'ನೋಟದ ಪುಟಗಳು' ಸಿನಿಮಾದ ಮೂಲಕ.

ತದ ನಂತರ 'ಶಭಾಷ್ ಬಡ್ಡಿಮಗ್ನೇ' ಸಿನಿಮಾದಲ್ಲಿ ಬಣ್ಣ ಹಚ್ಚಿರುವ ಈಕೆ ಪರಭಾಷೆಯ ಸಿನಿರಂಗದಲ್ಲಿ ಗುರುತಿಸಿಕೊಂಡಿರುವ ಬೆಡಗಿ. ಹೌದು, ತೆಲುಗಿನ 'ನಚ್ಚಿನಾವುಡು' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಈಕೆ ಪರಭಾಷೆಯ ಸಿನಿರಂಗದಲ್ಲಿ ನಟನಾ ಕಂಪನ್ನು ಪಸರಿಸಿದ್ದಾರೆ. ಇದೀಗ ರೂಪ ಆಗಿ ಕಿರುತೆರೆಗೆ ಕಾಲಿಡಲಿರುವ ಕಾವ್ಯಾ ರಮೇಶ್ ಹೊಸ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಲು ತಯಾರಾಗಿದ್ದಾರೆ.


Click it and Unblock the Notifications











