'ಕೆಂಡಸಂಪಿಗೆ'ಯಿಂದ ಹೊರ ಬಂದ ಕಾವ್ಯಾ ಸ್ಥಾನ ತುಂಬಿದವರು ಯಾರು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕೆಂಡಸಂಪಿಗೆ' ಧಾರಾವಾಹಿ ಬಹಳ ಪ್ರಸಿದ್ಧಿ ಪಡೆದಿದೆ. ಸದ್ಯಕ್ಕಂತೂ ಬಹಳಷ್ಟು ರೋಚಕ ತಿರುವುಗಳನ್ನು ಹೊಂದಿರುವ ಈ ಕಥೆ, ಪ್ರೇಕ್ಷಕರನ್ನು ತನ್ನತ್ತ ಸೆಳೆದಿಟ್ಟಿದೆ. ಹೀಗಿರುವಾಗಲೇ ಧಾರಾವಾಹಿಯ ತಂಡದಿಂದ ಬೇಸರದ ಸಂಗತಿಯೊಂದು ಇದೀಗ ಹೊರಬಿದ್ದಿದೆ. ಹೌದು, ನಾಯಕಿ ಸುಮನಾ ಆಗಿ ಅಭಿನಯಿಸುತ್ತಿದ್ದ ಕಾವ್ಯಾ ಶೈವ ಧಾರಾವಾಹಿಯಿಂದ ಹೊರ ನಡೆದಿದ್ದಾರೆ.
ಹೌದು, ನಟಿ ಕಾವ್ಯಾ ಶೈವ 'ಕೆಂಡಸಂಪಿಗೆ' ಧಾರಾವಾಹಿ ಆರಂಭವಾದಾಗಿನಿಂದಲೂ ಸುಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಧಾರಾವಾಹಿಯಲ್ಲಿ ಸಾಧು ಸ್ವಭಾವದ ಹುಡುಗಿಯಾಗಿ ಕಾಣಿಸಿಕೊಳ್ಳುವ ಈ ಪಾತ್ರ ಕಥೆಯುದ್ದಕ್ಕೂ ಬಹಳ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ತನ್ನತ್ತ ಸೆಳೆದಿತ್ತು.

ತನ್ನ ಪ್ರೀತಿಯ ತಮ್ಮನ ಸಾವಿಗೆ ಸೇಡು ತೀರಿಸಿಕೊಳ್ಳಲೆಂದೆ ಹೊರಟಿರುವ ಸುಮನಾಳಿಗೆ ಪ್ರತಿ ಬಾರಿಯೂ ಸೋಲೇ ಆಗಿತ್ತು. ಅತ್ತ ಸಾಧನಾಳ ಪ್ಲಾನ್ಗಳೇ ಗೆಲ್ಲುತ್ತಿದ್ದವು. ಹಾಗಾಗಿ ಸುಮನಾ ಪಾತ್ರ ಹೆಚ್ಚು ಕಮ್ಮಿ ಯಾವಾಗಲೂ ಅತ್ತುಕೊಂಡೆ ಪ್ರೇಕ್ಷಕರ ಮುಂಬರುತಿತ್ತು. ಹೀಗಿರುವಾಗ ಸದ್ಯಕ್ಕೆ ಸುಮನಾ ಕಿಡ್ನ್ಯಾಪ್ ಆಗಿದ್ದು ಅವಳ ಹುಡುಕಾಟದಲ್ಲಿ ಕಥೆ ಮುಂದುವರೆಯುತ್ತಿದೆ. ಹಾಗೆ ಸುಮನಾಳನ್ನು ಸಾಯಿಸಿರುವುದಾಗಿ ಸಾಧನಾ ಎಲ್ಲರಿಗೂ ಹೇಳಿದ್ದಾಳೆ.
ಈ ರೀತಿಯ ರೋಚಕ ತಿರುವು ಪಡೆದುಕೊಂಡಿರುವಾಗಲೇ ನಟಿ ಕಾವ್ಯಾ ಶೈವ ಧಾರಾವಾಹಿಯಿಂದ ಹೊರ ಬಂದಿರುವುದು ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ. ಅವರು ಧಾರಾವಾಹಿಯಿಂದ ಏಕೆ ಹೊರಬಂದಿದ್ದಾರೆ ಎಂಬ ಕಾರಣ ಸದ್ಯಕ್ಕೆ ತಿಳಿದಿಲ್ಲ. ಆದರೆ, ಅವರೇ ತಮ್ಮ ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಂನಲ್ಲಿ ಹೊರ ಬರುತ್ತಿರುವ ವಿಚಾರದ ಬಗ್ಗೆ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
"ನಾನು ಬಹಳ ಪ್ರೀತಿಯಿಂದ ಶ್ರಮಪಟ್ಟು ಈ ಪಾತ್ರವನ್ನು ನಿರ್ವಹಿಸಿದ್ದೇನೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಈ ಪಾತ್ರದಿಂದ ನಾನು ಪಡೆದ ಪ್ರೀತಿಗಿಂತಲೂ ಹೆಚ್ಚು ಪ್ರೀತಿಯನ್ನು ಮುಂಬರುವ ಕೆಲಸಗಳಲ್ಲಿ ಪಡೆಯುತ್ತೇನೆ ಎಂಬ ಭರವಸೆ ನನಗಿದೆ" ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಧಾರಾವಾಹಿಯ ಸಹನಟರು ಕೂಡ 'ವಿ ವಿಲ್ ಮಿಸ್ ಯು ಕಾವ್ಯಾ" ಎಂದು ಕಮೆಂಟ್ ಹಾಕಿದ್ದಾರೆ.
ಅಂದಹಾಗೆ ಇದೀಗ ಕಾವ್ಯಾ ಶೈವ ಅವರು ನಿರ್ವಹಿಸುತ್ತಿದ್ದ ಸುಮನ ಪಾತ್ರಕ್ಕೆ ಈಗಾಗಲೇ ಬೇರೊಬ್ಬರು ಆಯ್ಕೆಯಾಗಿದ್ದಾರೆ. 'ಕೆಂಡಸಂಪಿಗೆ' ಧಾರಾವಾಹಿ ಟೈಟಲ್ ಕಾರ್ಡ್ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆಕೆ ಬೇರಾರೂ ಅಲ್ಲ, ಮಧುಮಿತಾ. ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೇನುಗೂಡು' ಎಂಬ ಧಾರಾವಾಹಿಯಲ್ಲಿ ಪ್ರಾಚಿ ಎಂಬ ಪಾತ್ರವನ್ನು ನಿರ್ವಹಿಸಿದ್ದರು ಮಧುಮಿತಾ. ಇನ್ನು ಮುಂದೆ ಸುಮನ ಪಾತ್ರವನ್ನು ಯಾವ ರೀತಿ ನಿಭಾಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











