'ಭೂಮಿಗೆ ಬಂದ ಭಗವಂತ' ಎನ್ನುತ್ತಿದ್ದಾರೆ ಕೃತಿಕಾ ರವೀಂದ್ರ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿ ರಾಧಿಕಾ ಆಗಿ ನಟಿಸಿದ್ದ ಕೃತಿಕಾ ರವೀಂದ್ರ ಮತ್ತೆ ಬಣ್ಣ ಹಚ್ಚಲು ತಯಾರಾಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ "ಭೂಮಿಗೆ ಬಂದ ಭಗವಂತ" ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಲಿದ್ದಾರೆ.
ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ವಿಜಯದಶಮಿ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೃತಿಕಾ ರವೀಂದ್ರ ಇದೀಗ ಪೂರ್ಣ ಪ್ರಮಾಣದ ನಾಯಕಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. 'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ನಾಯಕಿಯಾಗಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿರುವ ಕೃತಿಕಾ ಬಾಲಕಲಾವಿದೆಯಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಸಂಗತಿ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಅಶೋಕ್ ಕಶ್ಯಪ್ ನಿರ್ದೇಶನದ 'ಝುಂ ಝುಂ ಜುಂಬಾ'ದಲ್ಲಿ ಅಭಿನಯಿಸುವ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟರು.
ಸಣ್ಣ ವಯಸ್ಸಿನಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಕೃತಿಕಾ ನಾಟಕ, ಸಂಗೀತ, ನೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಇದರ ಜೊತೆಗೆ ಈಕೆ ಯಕ್ಷಗಾನ ಕಲಾವಿದೆಯಾಗಿಯೂ ಮೋಡಿ ಮಾಡಿದ್ದರು.

'ಪದ್ಮ' ಆಗಿ ಮೋಡಿ
'ಪಟ್ರೆ ಲವ್ಸ್ ಪದ್ಮ' ಸಿನಿಮಾದಲ್ಲಿ ನಾಯಕಿಯ ಪಾತ್ರಕ್ಕಾಗಿ ಹುಡುಕಾಟ ನಡೆಯುತ್ತಿತ್ತು. ಆ ಆಡಿಶನ್ನಲ್ಲಿ ಭಾಗಬಹಿಸುವ ಅವಕಾಶ ಕೃತಿಕಾ ಅವರಿಗೂ ಸಿಕ್ಕಿತ್ತು. ಆಡಿಶನ್ ಹೋಗಿದ್ದ ಕೃತಿಕಾ ಪದ್ಮ ಪಾತ್ರಕ್ಕೆ ಆಯ್ಕೆಯಾದಾಗ ಸ್ವರ್ಗಕ್ಕೆ ಮೂರೇ ಗೇಣು. ಚಿತ್ರದ ನಾಲ್ವರು ನಾಯಕಿಯರಲ್ಲಿ ಒಬ್ಬರಾಗಿ ನಟಿಸಿದ್ದರು. ತದ ನಂತರ 'ಲಿಫ್ಟ್ ಕೊಡ್ಲಾ' ಸಿನಿಮಾದಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕೃತಿಕಾ ರವೀಂದ್ರ ನಂತರ ಕಿರುತೆರೆಗೆ ಕಾಲಿಟ್ಟರು.

ಕಿರುತೆರೆಯ 'ಮನೆಮಗಳು' ಕೃತಿಕಾ
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನೆಮಗಳು' ಧಾರಾವಾಹಿಯಲ್ಲಿ ಇಂಚರಾ ಪಾತ್ರಕ್ಕೆ ಜೀವ ತುಂಬಿದ್ದ ಕೃತಿಕಾ ಮುಂದೆ ಓದಿನ ಕಾರಣಕ್ಕಾಗಿ ನಟನೆಯಿಂದ ಬ್ರೇಕ್ ಪಡೆದುಕೊಂಡರು. ಮುಂದೆ ಪದವಿ ಪಡೆದುಕೊಂಡ ಈಕೆ 'ರಾಧಾ ಕಲ್ಯಾಣ' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡಿದರು.

'ಒಲವೇ' ಆಲ್ಬಮ್ನಲ್ಲಿ ಮಿಂಚು
'ರಾಧಾ ಕಲ್ಯಾಣ' ಧಾರಾವಾಹಿಯ ನಂತರ ಮತ್ತೆ ಹಿರಿತೆರೆಗೆ ಪಾದಾರ್ಪಣೆ ಮಾಡಿದ ಕೃತಿಕಾ 'ಕೆಂಗುಲಾಬಿ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಮುಂದೆ 'ಯಾರಿಗೆ ಯಾರುಂಟು',' ಶಾರ್ದೂಲ', 'ರಾಜನಿವಾಸ' ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದರು. ಕೃತಿಕಾ ಸುಕೃಶಿ ಕ್ರಿಯೇಷನ್ಸ್ ನಡಿಯಲ್ಲಿ ಮೂಡಿಬಂದ 'ಒಲವೇ' ಎನ್ನುವ ಆಲ್ಬಂ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.


Click it and Unblock the Notifications











