ಅಪ್ಪು ಹುಟ್ಟಿದ ದಿನವೇ ಈ ನಟಿಯದ್ದೂ ಬರ್ತ್ಡೇ; ನಗುವಿನ ರಾಜಕುಮಾರನ ನೆನೆದು ಕಣ್ಣೀರಾದ ಕೃತಿಕಾ
ಕಿರುತೆರೆ ನಟಿ ಕೃತಿಕಾ ರವೀಂದ್ರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ರಾಧಾ ಕಲ್ಯಾಣ'ದಲ್ಲಿ ನಾಯಕಿ ರಾಧಿಕಾ ಆಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿದ ಬೆಡಗಿ ಈಕೆ. ರಾಧಿಕಾ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದ ಕೃತಿಕಾ ರವೀಂದ್ರ ತದ ನಂತರ ಮಿಂಚಿದ್ದು ಗಿರಿಜಾ ಆಗಿ. 'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ನಾಯಕಿ ಗಿರಿಜಾ ಆಗಿ ಅಭಿನಯಿಸಿದ ಈಕೆ ವಯಸ್ಸಿಗೂ ಮೀರಿದ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಾಕೆ.
ಹೀಗಿರುವಾಗ ಕೃತಿಕಾ ರವೀಂದ್ರ ಅವರ ಪಾಲಿಗೆ ಮಾರ್ಚ್ 17 ಸ್ಪೆಷಲ್ ದಿನ! ಯಾಕೆಂದರೆ ಇಂದು ಆಕೆಯ ಹುಟ್ಟುಹಬ್ಬವೂ ಹೌದು. ಸ್ಪೆಷಲ್ ದಿನ ಯಾಕೆಂದರೆ ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟಿದ ದಿನವೂ ಹೌದು. "ಈ ದಿನ ನನ್ನ ಪಾಲಿಗಂತೂ ಸ್ಪೆಷಲ್ ದಿನ. ಅಪ್ಪು ಹುಟ್ಟಿದ ದಿನವೇ ನಾನು ಹುಟ್ಟಿದ್ದು. ನಾನು ತುಂಬಾ ಲಕ್ಕಿ" ಎಂದು ಬಹಳ ಖುಷಿಯಿಂದ ಹೇಳುತ್ತಾರೆ ಕೃತಿಕಾ ರವೀಂದ್ರ.

"ನಾನು ಮುಂಚೆ ಎಲ್ಲಾ ಹೇಳ್ಕೊಳ್ತಿದ್ದೆ, ಅಪ್ಪು ಅವರ ಬರ್ತ್ ಡೇ ದಿನಾನೇ ನಾನು ಹುಟ್ಟಿರೋದು, ಎಷ್ಟು ಖುಷಿಯಿದೆ ಗೊತ್ತಾ ಅಂತ. ಅಪ್ಪು ಅವರು ನಮ್ಮನ್ನಗಲಿ ಹೋದಾಗ ನನಗೆ ಆ ವರ್ಷದ ಬರ್ತ್ ಡೇಯನ್ನು ಆಚರಿಸಲು ಸಾಧ್ಯವೇ ಆಗಲಿಲ್ಲ. ಯಾಕೆಂದರೆ ಅಪ್ಪು ಇಲ್ವಲ್ಲಾ ಎಂಬ ನೋವು ತುಂಬಾ ಕಾಡ್ತಿತ್ತು. ನಾನು ಅಪ್ಪು ಅವರ ಬಹು ದೊಡ್ಡ ಅಭಿಮಾನಿ. ಮುಂಚೆಯಿಂದಲೂ ನನಗೆ ಅಪ್ಪು ಎಂದರೆ ತುಂಬಾ ಇಷ್ಟ. ಅಪ್ಪು ನೆನಪಿಂದ ಸಾಕಷ್ಟು ಅತ್ತಿದೆ. ಅತ್ತು ಕೇಕ್ ಕಟ್ ಮಾಡಿದ್ದೂ ಇದೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗಿನ ಸಂದರ್ಶನದಲ್ಲಿ ಕೃತಿಕಾ ಹೇಳಿಕೊಂಡಿದ್ದಾರೆ.
"ಬರ್ತ್ ಡೇ ದಿನ ನಾನು ಅತ್ತಾಗ ನನ್ನ ಫ್ರೆಂಡ್ಸ್, ಜೊತೆಯಲ್ಲಿದ್ದವರೆಲ್ಲಾ ಹೇಳಿದ್ರು. ಸತ್ಯ ಹೇಳಬೇಕೆಂದರೆ ನೀನು ಹೆಮ್ಮೆಪಡ್ಬೇಕು. ಅಪ್ಪು ಅಂತವರು ಹುಟ್ಟಿದ ದಿನ, ಸೇಮ್ ದಿನ ನೀನು ನಿನ್ನ ಬರ್ತ್ ಡೇ ಶೇರ್ ಮಾಡ್ಕೊಳ್ತಿದ್ದೀಯಾ. ಅದರ ಬಗ್ಗೆ ಪ್ರೌಡ್ ಫೀಲ್ ಆಗ್ಬೇಕು. ಅದರ ಬಗ್ಗೆ ಯೋಚನೆ ಮಾಡು. ಅಂಥ ದೊಡ್ಡ ಮನುಷ್ಯ ಅವರು. ಅವ್ರು ಏನೇ ಕೆಲಸ ಮಾಡಿದ್ರು ಅದನ್ನ ಅವರು ಎಲ್ಲೂ ಹೇಳ್ಕೊಂಡಿಲ್ಲ. ಅವರು ತೀರ್ಕೊಂಡ ಮೇಲೆನೇ ನಮಗೆ ಎಷ್ಟೋ ವಿಷಯ ಗೊತ್ತಾಗಿದ್ದು, ಅವರು ಹೀಗೆ ಮಾಡಿದ್ದಾರೆ, ಇಷ್ಟೊಂದು ಕೊಟ್ಟಿದ್ದಾರೆ ಅಂತ. ಅವರು ಯಾವತ್ತೂ ಇಲ್ಲ ಅಂತ ಹೇಳ್ದೋರು ಅಲ್ವಂತೆ. ಅಷ್ಟು ಸೈಲೆಂಟ್ ಆಗಿ ಇದ್ದು ಎಲ್ಲಾ ಕೆಲ್ಸ ಮಾಡ್ತಿದ್ದಂತ ಪರ್ಸನಾಲಿಟಿ ಅವ್ರು. ಅವರ ಬರ್ತ್ ಡೇ ದಿನ ನನ್ನ ಬರ್ತ್ ಡೇ ಶೇರ್ ಮಾಡ್ಕೊಳ್ತಿದ್ದೀನಿ ಅನ್ನುವುದಕ್ಕೆ ಇವತ್ತು ನನಗೆ ತುಂಬಾ ಹೆಮ್ಮೆಯಿದೆ, ಖುಷಿಯಿದೆ. ಇಂತಹವರು ಹುಟ್ಟಿದ ದಿನ ನಾನು ಹುಟ್ಟಿರುವುದಕ್ಕೆ ಸಮಾಧಾನವಿದೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡಿದ ಕೃತಿಕಾ ರವೀಂದ್ರ ಹೇಳಿಕೊಂಡಿದ್ದಾರೆ.
"ಒಂದು ಘಟನೆ ಈಗಲೂ ನೆನಪಿದೆ. ನನ್ನನ್ನು ಫ್ರೆಂಡ್ಸ್ ಎಲ್ಲಾ ಆಚೆ ಕರ್ಕೊಂಡು ಹೋಗಿರ್ತಾರೆ. ಆ ದಿನ ನಾನು ತುಂಬಾನೇ ಬೇಜಾರಲ್ಲಿದ್ದೆ. ಅಪ್ಪು ಅವರು ಇಲ್ಲದೇ ಇದ್ದ ಫಸ್ಟ್ ಈಯರ್ ಬರ್ತ್ ಡೇ ಅದು. ತುಂಬಾ ಬೇಜಾರಲ್ಲಿ ಕಾರಲ್ಲಿ ನಾನು ಕೂತಿದ್ದೆ. ನಮ್ಮ ಮನೆ ಹತ್ತಿರ ನಾನು ಬರುವಾಗ ಒಂದಷ್ಟು ಜನ ಅಪ್ಪು ಅವರ ಹೆಸರಲ್ಲಿ ಅನ್ನದಾನ ಮಾಡ್ತ ಇದ್ದಿದ್ದು ನೋಡ್ದೆ. ಅಪ್ಪು ಅವರ ಹೆಸರಲ್ಲಿ ಫ್ರೀ ಆಗಿ ದಾನ ಕೊಡ್ತಿರೋದು ಗೊತ್ತಾಯ್ತು. ಅಪ್ಪು ಅವರ ಅಭಿಮಾನಿಗಳ ಒಂದು ಟೀಂ ನನ್ನ ಪಕ್ಕದಲ್ಲೇ ಪಾಸ್ ಆಗ್ತಾ ಇತ್ತು. ಅದು ಟೂ ವೀಲರ್ನಲ್ಲಿ. ಅವರ ಕೈಯಲ್ಲಿ ಎಲ್ಲಾ ಒಂದೊಂದು ಬಾವುಟಗಳಿತ್ತು. ಅದರಲ್ಲಿ ಕರ್ನಾಟಕದ ಬಾವುಡದ ಜೊತೆಗೆ ಅಪ್ಪು ಫೋಟೋವಿತ್ತು. ನನಗೂ ಒಂದು ಸಿಕ್ಕಿದ್ರೆ ಎಷ್ಟು ಚೆನ್ನಾಗಿತ್ತು ಎಂದು ಅಂದ್ಕೊಂಡೆ" ಎಂದು ಕೃತಿಕಾ ರವೀಂದ್ರ ಹೇಳಿಕೊಂಡಿದ್ದಾರೆ.
"ಗೊತ್ತಿಲ್ಲ.. ನನಗೆ ಅವತ್ತು ಯಾಕೆ ಹಾಗೆ ಅನ್ನಿಸ್ತು ಅಂತ. ಕೂಡಲೇ ಅಪ್ಪು ಅಭಿಮಾನಿಗಳು ಯಾರೋ ಬಂದ್ರು. ತಗೋಳಿ ಮೇಡಂ, ಇದನ್ನು ಹಿಡ್ಕೊಳ್ಳಿ. ಇದನ್ನ ನೀವೇ ಇಟ್ಕೊಳ್ಳಿ ಅಂದ್ರು. ಅಪ್ಪು ಚಿತ್ರ ಇರುವ ಆ ಬಾವುಟವನ್ನು ಕೊಟ್ರು. ನನಗೆ ಖುಷಿಯಲ್ಲಿ ಕಣ್ಣಲ್ಲಿ ನೀರು ಬಂತು. ಅಯ್ಯೋ ಅಪ್ಪು ಇದನ್ನೆಲ್ಲಾ ಕೇಳಿಸ್ಕೊಳ್ತಿದ್ದಾರಾ ಎಂದು ಒಂದು ಕ್ಷಣಕ್ಕೆ ಅನ್ನಿಸಿತ್ತು. ಮನೆ ತನಕ ನಾನು ಬಾವುಟ ಹಿಡ್ಕೊಂಡು ಬಂದೆ" ಎಂದು ಕೃತಿಕಾ ರವೀಂದ್ರ ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
"Appu lives on ಅಷ್ಟೇ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಅಂತ ಹೇಳ್ತಾರಲ್ಲ. ಒಟ್ಟಿನಲ್ಲಿ ನಾನು ತುಂಬಾನೇ ಲಕ್ಕಿ ಅಂತ ನಾನು ಖುಷಿಯಿಂದ, ಹೆಮ್ಮೆಯಿಂದ ಹೇಳ್ಕೋಳ್ತೇನೆ. ಥ್ಯಾಂಕ್ಯೂ ಅಪ್ಪು, ಜೀವನದ ಮೌಲ್ಯಗಳನ್ನು ಹೇಳಿಕೊಟ್ಟಿದ್ದಕ್ಕೆ. ಹೇಗೆ ಬದುಕಬೇಕು ಅಂತ ಹೇಳಿ ಹೋಗಿರೋದಕ್ಕೆ" ಎಂದು ನಟಿ ಕೃತಿಕಾ ರವೀಂದ್ರ ಮಾಹಿತಿ ನೀಡಿದ್ದಾರೆ.
ಇನ್ನು ಇದರ ಹೊರತಾಗಿ ಇನ್ಸ್ಟಾಗ್ರಾಂನಲ್ಲಿಯೂ ಪುನೀತ್ ರಾಜ್ ಕುಮಾರ್ ಅವರಿಗೆ ವಿಶ್ ಮಾಡಿದ್ದಾರೆ ಈಕೆ. ಇನ್ಸ್ಟಾಗ್ರಾಂನಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೊತೆಗಿರುವ ಫೋಟೋ ಶೇರ್ ಮಾಡಿರುವ ಇವರು "ಹ್ಯಾಪಿ ಬರ್ತ್ ಡೇ ಅಪ್ಪು ಸರ್. ನಿಮ್ಮ ಬರ್ತ್ ಡೇ ದಿನಾನೇ ನಾನು ಹುಟ್ಟಿರೋದು ಅಂತ ಹೇಳ್ಕೊಳೋಕೆ ಹೆಮ್ಮೆ ಆಗತ್ತೆ ನಂಗೆ. ನೀವು ಬದುಕಿದ್ದ ರೀತಿನೇ ಒಂದು ಕಲಿಕೆ. ಫಾರೆವರ್ ಯುವರ್ ಫ್ಯಾನ್" ಎಂದು ಬರೆದುಕೊಂಡಿದ್ದಾರೆ ನಟಿ ಕೃತಿಕಾ ರವೀಂದ್ರ.


Click it and Unblock the Notifications











