ಹೊಸ ವರ್ಷದ ಸಂಭ್ರಮದಲ್ಲಿ ಕಿರುತೆರೆ ನಟಿ ಕೃತಿಕಾ ರವೀಂದ್ರ ಕೃಷ್ಣ-ಅರ್ಜುನನ ಕಥೆ ಹೇಳಿದ್ದೇಕೆ?
ಹೊಸ ವರ್ಷ ಶುರುವಾಗಿದೆ. 2023 ಕಳೆದು 2024 ಬಂದಿದೆ. ಎಲ್ಲರೂ ಕಳೆದು ಹೋಗಿರುವಂತಹ ವರ್ಷದಲ್ಲಿ ನಡೆದಿರುವಂತಹ ಘಟನೆಗಳನ್ನು ಮತ್ತೊಮ್ಮೆ ಮೆಲುಕು ಹಾಕುತ್ತಿದ್ದಾರೆ. ಕಿರುತೆರೆ ನಟಿ ಕೃತಿಕಾ ರವೀಂದ್ರ ಕೂಡಾ ಇದಕ್ಕೆ ಹೊರತಾಗಿಲ್ಲ. ಫಿಲ್ಮಿಬೀಟ್ ಜೊತೆಗೆ ಮಾತನಾಡಿದ ಕೃತಿಕಾ ರವೀಂದ್ರ "ಕಳೆದು ಹೋಗಿರುವಂತಹ ವರ್ಷ ಸಾಕಷ್ಟು ಅನುಭವ ನೀಡಿದೆ" ಎನ್ನುತ್ತಾರೆ. "ಜೊತೆಗೆ ನಮ್ಮ ಭೂಮಿಗೆ ಬಂದ ಭಗವಂತ ಧಾರಾವಾಹಿಯ ಶೂಟಿಂಗ್ ಕೂಡಾ ಕಳೆದ ಜನವರಿಯಿಂದಲೇ ಶುರುವಾಗಿದ್ದು. ಆದರೆ ಪ್ರಸಾರ ಶುರುವಾಗಿದ್ದು ಮಾರ್ಚ್ ತಿಂಗಳಿನಿಂದ" ಎಂದು ನೆನಪಿಸಿಕೊಳ್ಳುತ್ತಾರೆ.
"ಕಿರುತೆರೆ ವೀಕ್ಷಕರೆಲ್ಲಾ ನಮ್ಮ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ. ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಗಿರಿಜಾ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಮನೆಯ ಮಗಳಾಗಿ ಸ್ವೀಕರಿಸಿದ್ದಾರೆ. ನಾನು ಕೊನೆಯದಾಗಿ ನಟಿಸಿದ್ದು, ರಾಧಾ ಕಲ್ಯಾಣ ಧಾರಾವಾಹಿ. ಅದು ಮುಕ್ತಾಯಗೊಂಡ ಏಳು ವರ್ಷಗಳ ಬಳಿಕ ನಾನು ಕಿರುತೆರೆಗೆ ಮರಳಿದ್ದೇನೆ. ಆದರೂ ವೀಕ್ಷಕರು ಅದೇ ಪ್ರೀತಿ ತೋರಿಸುತ್ತಿದ್ದಾರೆ, ಪ್ರೋತ್ಸಾಹ ನೀಡುತ್ತಿದ್ದಾರೆ" ಎಂದು ಫಿಲ್ಮಿಬೀಟ್ ಜೊತೆಗೆ ಹಂಚಿಕೊಳ್ಳುತ್ತಾರೆ ಕೃತಿಕಾ ರವೀಂದ್ರ.

"ಕಳೆದ ವರ್ಷದ ಅತ್ಯದ್ಭುತ ಕ್ಷಣ ಎಂದರೆ ಅವಾರ್ಡ್ ಪಡೆದುಕೊಂಡಿದ್ದು. ಗಿರಿಜಾ ಪಾತ್ರಕ್ಕೆ ಉತ್ತಮ ನಟಿ ಅವಾರ್ಡ್ ಬಂತು. ಉತ್ತಮ ಕಲಾವಿದರುಗಳೊಂದಿಗೆ ತೆರೆ ಹಂಚಿಕೊಳ್ಳುವ ಸುವರ್ಣಾವಕಾಶ ದೊರಕಿತು. ಇನ್ನು ಇದರ ಜೊತೆಗೆ ತಂಡದ ಕಡೆಯಿಂದಲೂ ಅಷ್ಟೇ. ಸಾಕಷ್ಟು ಪ್ರೀತಿ, ಪ್ರೋತ್ಸಾಹ ಸಿಕ್ಕಿದೆ, ಸಿಗುತ್ತಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಹೇಳುತ್ತಾರೆ ಕೃತಿಕಾ ರವೀಂದ್ರ.
"ಮತ್ತೊಂದು ವಿಷಯವೆಂದರೆ ಕಳೆದ ವರ್ಷದಿಂದ ನನ್ನ ಅಮ್ಮ ನನ್ನ ಜೊತೆಯಲ್ಲಿ ವಾಸಿಸುತ್ತಿದ್ದಾರೆ. ಇಷ್ಟು ಸಮಯಗಳ ಕಾಲ ಊರಿನಲ್ಲಿ ಇರುತ್ತಿದ್ದ ಅವರು ಕಳೆದ ವರ್ಷ ಬೆಂಗಳೂರಿಗೆ ಶಿಫ್ಟ್ ಆದರು. ಇದರ ಹೊರತಾಗಿ ಕಳೆದ ವರ್ಷ ನನ್ನ ವರ್ಕೌಟ್ ಅದ್ಭುತವಾಗಿ ಸಾಗಿದೆ. ಫಿಟ್ನೆಸ್ ಕೂಡಾ ಅಷ್ಟೇ" ಎಂದು ಕೃತಿಕಾ ಅವರು ಫಿಲ್ಮಿಬೀಟ್ ಜೊತೆಗೆ ಮಾತನಾಡುವಾಗ ಹೇಳುತ್ತಾರೆ.

"ಕೃಷ್ಣ ಪರಮಾತ್ಮನಲ್ಲಿ ಅರ್ಜುನ ಕೇಳ್ತಾನಂತೆ - ಈ ಯುದ್ಧಭೂಮಿಯಲ್ಲಿ ನನಗೆ ಒಂದು ಮಾತು ಕೇಳ್ಬೇಕು ಅಂತ ಅನ್ನಿಸ್ತಿದೆ. ಒಬ್ಬ ಮನುಷ್ಯ ಖುಷಿಯಾದಾಗ ಕೇಳಿದ್ರೂ, ಸುಖದಲ್ಲಿದ್ದಾಗ ಕೇಳಿದ್ರೂ ಆ ಮನುಷ್ಯನಿಗೆ ಸಮಾಧಾನ ಆಗ್ಬೇಕು ಅಂತ ಒಂದು ಮಾತನ್ನು ಹೇಳು ಕೃಷ್ಣ ಅಂದಾಗ. ಅದಕ್ಕೆ ಕೃಷ್ಣ ಈ ಸಮಯವೂ ಕಳೆದು ಹೋಗುತ್ತದೆ ಎಂದು ಹೇಳ್ತಾನೆ. ಹಾಗಾಗಿ ನೀವು ಎಷ್ಟೇ ಖುಷಿಯಾಗಿರಿ, ದುಃಖದಲ್ಲಿರಿ, ಆದರೆ ನೆನಪಿಡಿ ಆ ಸಮಯ ಕಳೆದು ಹೋಗುತ್ತದೆ. ಇದನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿರುವಂತಹ ವರ್ಷ ಇದು. ಕೆಲವು ವಿಷಯವಳನ್ನು ಹಾಗೇ ಬಿಟ್ಟು ಮತ್ತಷ್ಟು ಸಂತೋಷದಿಂದ ಬದುಕುವುದು ತುಂಬಾ ಒಳ್ಳೆಯದು. ಲಿವ್, ಲವ್, ಲಾಫ್ ಅಷ್ಟೇ" ಎಂದು ಕಳೆದುಹೋದ ವರ್ಷದ ಕುರಿತು ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ ಕೃತಿಕಾ ರವೀಂದ್ರ.


Click it and Unblock the Notifications











