'ರಾಮಾಚಾರಿ' ನಟಿ ಮೌನ ಗುಡ್ಡೆಮನೆ ಮೊದಲ ಸಿನಿಮಾ 'ಕುಲದಲ್ಲಿ ಕೀಳ್ಯಾವುದೋ' ಬಗ್ಗೆ ಹೇಳಿದ್ದೇನು?
ಕಿರುತೆರೆಯ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ನಟ ನಟಿಯರು ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಮಾಮೂಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ರಾಮಚಾರಿ' ಧಾರಾವಾಹಿಯ ಮೌನ ಗುಡ್ಡೆಮನೆ ಕೂಡಾ ಇದಕ್ಕೆ ಹೊರತಾಗಿಲ್ಲ. 'ರಾಮಚಾರಿ' ಧಾರಾವಾಹಿಯಲ್ಲಿ ನಾಯಕಿ ಚಾರು ಆಗಿ ಅಭಿನಯಿಸಿ, ಸೀರಿಯಲ್ ಪ್ರಿಯರ ಮನ ಸೆಳೆದ ಮೌನ ಗುಡ್ಡೆಮನೆ ಇದೀಗ ಸಿಹಿ ಸುದ್ದಿಯನ್ನು ನೀಡಿದ್ದಾರೆ.
ಹೌದು, ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಮೌನ ಗುಡ್ಡೆಮನೆ ಇದೀಗ ಸ್ಯಾಂಡಲ್ವುಡ್ ನತ್ತ ಮುಖ ಮಾಡಿದ್ದಾರೆ. ಸ್ಯಾಂಡಲ್ವುಡ್ನ ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ಅವರ 'ಯೋಗರಾಜ್ ಸಿನಿಮಾಸ್'ನಲ್ಲಿ ಮೂಡಿ ಬರಲಿರುವ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾದಲ್ಲಿ ನಾಯಕಿಯಾಗಿ ಈಕೆ ಬಣ್ಣ ಹಚ್ಚಲಿದ್ದಾರೆ.

ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ ಕೆ ಮತ್ತು ವಿದ್ಯಾ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದ ನಿರ್ದೇಶನವನ್ನು ಕೆ.ರಾಮ್ ನಾರಾಯಣ್ ಅವರು ಮಾಡಲಿದ್ದಾರೆ. ನಾಯಕಿಯಾಗಿ ನಟಿಸಲಿರುವ ಮೌನ ಗುಡ್ಡೆಮನೆ ಅವರು ತಮ್ಮ ಲುಕ್ ಇರುವ ಪೋಸ್ಟರ್ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಪೋಸ್ಟರ್ ಶೇರ್ ಮಾಡಿಕೊಂಡಿರುವ ಮೌನ ಗುಡ್ಡೆಮನೆ "ನನ್ನ ಕನಸುಗಳು ನಿಜವಾಗಲು ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಬೇಕು. ನನ್ನ ಮೊದಲ ಸಿನಿ ಪಯಣಕ್ಕೆ ಬೆಂಬಲ ನೀಡಿ" ಎಂದು ಈಕೆ ಬರೆದುಕೊಂಡಿದ್ದಾರೆ. ಇನ್ನು ಎಲ್ಲಾ ತಾನು ಅಂದುಕೊಂಡಂತೆ ಆಗಿದ್ದರೆ ಮೌನ ಇಂದು ಏರ್ ಫೋರ್ಸ್ನಲ್ಲಿರುತ್ತಿದ್ದರು. ಮೊದಲಿನಿಂದಲೂ ಏರ್ ಫೋರ್ಸ್ಗೆ ಸೇರಬೇಕು ಎಂಬ ಕನಸನ್ನು ಈಕೆ ಕಂಡಿದ್ದರು. ಆದರೆ ಅದಕ್ಕೆ ಅವರ ತಂದೆಯ ಒಪ್ಪಿಗೆ ಸಿಕ್ಕಿರಲಿಲ್ಲ.
ಇದರ ಜೊತೆಗೆ 'ಮಿಸ್ ತುಳುನಾಡು' ಸ್ಪರ್ಧೆ ಈಕೆಯ ಬದುಕನ್ನೇ ಬದಲಾಯಿಸಿತು ಎಂದರೆ ಸುಳ್ಳಲ್ಲ. ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಗಲೇ ಮಿಸ್ ತುಳುನಾಡು ಸ್ಪರ್ಧೆಗೆ ಆಯ್ಕೆಯಾದ ಈಕೆ ಮುಂದೆ ನಂತರ ವಾಲಿದ್ದು ಮಾಡೆಲಿಂಗ್ನತ್ತ. ಮಾಡೆಲಿಂಗ್ ಲೋಕದಲ್ಲಿ ಕಾಣಿಸಿಕೊಂಡ ಈಕೆ ಇಂದು ಕಿರುತೆರೆ, ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಅಮ್ಮನ ಆಸೆ ಒಂದರ್ಥದಲ್ಲಿ ಕಾರಣ ಎನ್ನಬಹುದು.

ಮೌನ ಅವರ ಅಮ್ಮನಿಗೆ ಬಣ್ಣದ ಲೋಕದಲ್ಲಿ ನೋಡಬೇಕು ಎಂಬ ಆಸೆಯಿತ್ತು. ಅದೇ ಕಾರಣದಿಂದ ನಟಿಯಾಗುವಂತೆ ಆಕೆಯನ್ನು ಪ್ರೇರೇಪಿಸುತ್ತಿದ್ದರು. ಆದರೆ ಆ ಸಮಯದಲ್ಲಿ ಮೌನ ಅವರು ಸಂಪೂರ್ಣ ಓದಿನತ್ತ ಗಮನ ಹರಿಸಿದ್ದರಿಂದ ಬಂದಂತಹ ಅವಕಾಶಗಳನ್ನು ನಿರಾಕರಿಸಿದರು.
'ರಾಮಾಚಾರಿ' ಧಾರಾವಾಹಿಯ ಚಾರು ಆಲಿಯಾಸ್ ಚಾರುಲತಾ ಆಗಿ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಈಕೆ ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರೆ. ಆರಂಭದಲ್ಲಿ ನೆಗೆಟಿವ್ ಹಾಗೂ ರಗಡ್ ಲುಕ್ನಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಂಡ ಈಕೆ ಇದೀಗ ಪಾಸಿಟಿವ್ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ನಲ್ಲಿ ಎರಡು ವರ್ಷವೂ ಪ್ರಶಸ್ತಿ ಪಡೆದಿರುವ ಈಕೆ ಹಿರಿತೆರೆಯಲ್ಲಿಯೂ ಯಶಸ್ವಿ ಪಡೆಯಲಿ ಎಂಬುದೇ ನಮ್ಮ ಹಾರೈಕೆ.


Click it and Unblock the Notifications











