"ವಿಧವೆಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ರಿಂದ ಅಮ್ಮನ ಮನಸ್ಸಿಗೆ ನೋವಾಯ್ತು ": ಕಿರುತೆರೆ ನಟಿ ಪ್ರತಿಭಾ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಕ್ತಿಪ್ರಧಾನ ಧಾರಾವಾಹಿ 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ'ದಲ್ಲಿ ರೇವತಿ ಪಾತ್ರಕ್ಕೆ ಜೀವ ತುಂಬುತ್ತಿರುವ ಪ್ರತಿಭಾ ಅವರಿಗೆ ಆ ಪಾತ್ರ ತಂದುಕೊಟ್ಟಿರುವಂತಹ ಜನಪ್ರಿಯತೆ ಅಷ್ಟಿಷ್ಟಲ್ಲ. 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರವಾಹಿಯಲ್ಲಿ ಹದಿಹರೆಯ ತರುಣಿಯಿಂದ ಮದುವೆಯಾಗಿ ನಂತರದಲ್ಲಿ ವಿಧವೆಯಾಗುವ ರೇವತಿ ಎಂಬ ಪಾತ್ರವನ್ನು ಅದ್ಭುತವಾಗಿ ನಟಿಸಿ ಕಿರುತೆರೆ ಪ್ರಿಯರ ಮನದಲ್ಲಿ ತಮಗೊಂದು ಪರ್ಮನೆಂಟ್ ಜಾಗ ಗಿಟ್ಟಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದೇನೋ.
ರೇವತಿ ಪಾತ್ರದ ಬಗ್ಗೆ ಬಹಳ ಖುಷಿಯಿಂದ ತಮ್ಮ ಅನುಭವಗಳನ್ನು ಹಂಚಿಕೊಂಡಿರುವ ನಟಿ ಪ್ರತಿಭಾ 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಯಲ್ಲಿ ರೇವತಿ ಪಾತ್ರಕ್ಕೆ ಜೀವ ತುಂಬುವ ಅವಕಾಶ ದೊರಕಿತ್ತು. "ನವೀನ್ ಕೃಷ್ಣ ನಿರ್ದೇಶನದಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದೆ ಎಂದು ತಿಳಿದ ತಕ್ಷಣ ಒಪ್ಪಿಕೊಂಡೆ. ನಿರ್ದೇಶಕ ನವೀನ್ ಕೃಷ್ಣ ಅವರದು ಅದ್ಭುತ ನಿರ್ದೇಶನ. ಅವರ ಕಾರ್ಯ ವೈಖರಿ ನನಗೆ ಬಹಳ ಹಿಡಿಸುತ್ತದೆ . ಹಾಗಾಗಿ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಯನ್ನು ಅವರು ನಿರ್ದೇಶಿಸುತ್ತಿದ್ದಾರೆ ಎಂದು ಗೊತ್ತಾದ ತಕ್ಷಣ ನನಗೆ ಸಿಕ್ಕಿರುವುದು ಸುವರ್ಣ ಅವಕಾಶ ಎಂದು ನಂಬಿ ಒಪ್ಪಿಕೊಂಡು ಬಿಟ್ಟೆ" ಎಂದು ಹೇಳುತ್ತಾರೆ ಪ್ರತಿಭಾ.

ಮೊದಲ ಭಕ್ತಿಪ್ರಧಾನ ಧಾರಾವಾಹಿ
"ಅಂದ ಹಾಗೇ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ನನ್ನ ಮೊದಲ ಭಕ್ತಿ ಪ್ರಧಾನ ಧಾರಾವಾಹಿಯೂ ಹೌದು ಅನ್ನಿ. ಇಲ್ಲಿಯವರೆಗೆ ನಾನು ಈ ರೀತಿಯ ಪೌರಾಣಿಕ ಅಥವಾ ಭಕ್ತಿ ಪೂರ್ವಕ ಧಾರಾವಾಹಿಗಳಲ್ಲಿ ನಟಿಸಿಲ್ಲ. ಮಾತ್ರವಲ್ಲ ಯಾವುದೇ ನಾಟಕಗಳಲ್ಲಿಯೂ ಬಣ್ಣ ಹಚ್ಚಿಲ್ಲ. ಹಾಗಾಗಿ ಇದು ನನಗೊಂದು ಹೊಸ ಅನುಭವ. ನನ್ನ ಶೂಟ್ನ ಮೊದಲ ದಿನ ಬಹಳ ಚಾಲೆಂಜಿಂಗ್ ಆಗಿತ್ತು. ಪಾತ್ರದ ಬಗ್ಗೆ ಗೊತ್ತಿದ್ದರೂ ಅಷ್ಟೇನೂ ತಿಳಿದಿರಲಿಲ್ಲವಾದ್ದರಿಂದ ನಟನೆ ಚಾಲೆಂಜಿಂಗ್ ಆಗಿತ್ತು. ಹುಟ್ಟಿದಾಗಿನಿಂದಲೂ ತನ್ನ ತಂದೆಯಿಂದ ದೂರವೇ ಇಡಲ್ಪಡುವ ರೇವತಿ ಎಂಬ ಹುಡುಗಿ ಅಪಶಕುನ ಎಂದು ಎಲ್ಲರಿಂದ ಅಪಮಾನಕ್ಕೆ ಒಳಗಾಗಿರುತ್ತಾಳೆ. ಇದಿಷ್ಟೇ ನನಗೆ ಮೊದಲು ರೇವತಿ ಪಾತ್ರರ ಬಗ್ಗೆ ಗೊತ್ತಿದ್ದದ್ದು" ಎಂದು ತಮ್ಮ ಮೊದಲ ದಿನದ ಅನುಭವವನ್ನು ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಕುಂಕುಮ ಕೊಡಲು ನಿರಾಕರಿಸಿದ್ದರು
"ಒಂದೊಮ್ಮೆ ಒಂದು ಹಳ್ಳಿಯಲ್ಲಿ ಒಂದು ಅಜ್ಜಿ ನನಗೆ ಕುಂಕುಮ ಕೊಡಬಾರದೆಂದು ಬೇರೆ ಹೆಂಗಸರಲ್ಲಿ ಹೇಳಿದ್ದರು. ಅದು ಯಾಕೆ ಹಾಗೆ ಹೇಳಿದ್ದಾರೆ ಎಂದು ನಮಗೆ ಎಷ್ಟು ಹೊತ್ತು ತಿಳಿಯಲೇ ಇಲ್ಲ. ನಂತರ ನಾವು ಪರಾಮರ್ಶಿಸಿದಾಗ ಗೊತ್ತಾಯ್ತು, ಆ ಅಜ್ಜಿ ನನ್ನನ್ನು ರೇವತಿ ಎಂದೇ ತಿಳಿದಿದ್ದರು. ಆದರೆ ನಾನು ರೇವತಿಯಲ್ಲ ಅದು ಬರೀ ಪಾತ್ರವಷ್ಟೇ! ನಾನು ಪ್ರತಿಭಾ ಎಂದು ಎಷ್ಟೇ ಅವರನ್ನು ಅರ್ಥ ಮಾಡಿಸಲು ಪ್ರಯತ್ನ ಪಟ್ಟರೂ ಆಕೆಯ ಮುಗ್ಧ ಮನಸ್ಸು ಅದಕ್ಕೆ ತಯಾರಿರಲಿಲ್ಲ" ಎಂದು ಹೇಳಿದ ಪ್ರತಿಭಾ ತಮ್ಮ ಪಾತ್ರ ಅಷ್ಟರ ಮಟ್ಟಿಗೆ ವೀಕ್ಷಕರು ಮೆಚ್ಚಿಕೊಂಡಿದ್ದಾರೆ ಎಂದು ಸಂತಸವನ್ನು ವ್ಯಕ್ತಪಡಿಸುತ್ತಾರೆ.

ತಾಯಿಗೆ ಕಿರಿಕಿರಿ ಆಗಿತ್ತು.
"ಇಷ್ಟೇ ಅಲ್ಲದೆ ನಾನು ವಿಧವೆ ಪಾತ್ರವನ್ನು ಮಾಡುವಾಗ ನಮ್ಮ ಮನೆಯಲ್ಲಿ ಮುಖ್ಯವಾಗಿ ನನ್ನ ತಾಯಿಗೆ ಮಾನಸಿಕವಾಗಿ ಸ್ವಲ್ಪ ಕಿರಿಕಿರಿ ಆಗಿತ್ತು. ಮಗಳನ್ನು ಈ ರೀತಿ ತೆರೆ ಮೇಲೆ ನೋಡುವುದಕ್ಕೂ ತಾಯಂದಿರು ಇಷ್ಟಪಡುವುದಿಲ್ಲ. ಹಾಗಾಗಿ ಅಮ್ಮನ ಸೂಕ್ಷ್ಮ ಮನಸ್ಥಿತಿಗೆ ಇವೆಲ್ಲವನ್ನೂ ಸ್ವೀಕರಿಸಲು ಸ್ವಲ್ಪ ಸಮಯ ಹಿಡಿಬೇಕು. ಅಲ್ಲದೆ ರೇವತಿ ಎಂಬ ಪಾತ್ರ ಬಹಳ ಚಾಲೆಂಜಿಂಗ್ ಇದರಲ್ಲಿ ಎರಡು ಮೂರು ವಿಭಿನ್ನ ವಿಚಿತ್ರ ವ್ಯಕ್ತಿತ್ವವನ್ನು ಒಂದೇ ಪಾತ್ರ ಬಿಂಬಿಸುತ್ತ ಹೋಗುತ್ತದೆ. ಹಾಗಾಗಿ ಇದು ನಟನೆಗೆ ನನಗೆ ಬಹಳ ಖುಷಿ ಕೊಡುತ್ತದೆ. ನನ್ನ ಸ್ನೇಹಿತರು ಕುಟುಂಬಸ್ಥರು ಮುಖ್ಯವಾಗಿ ಪ್ರೇಕ್ಷಕರು ನನಗೆ ಬಹಳ ಸಪೋರ್ಟ್ ಆಗಿದ್ದಾರೆ. ಹಾಗಾಗಿ ರೇವತಿ ಪಾತ್ರ ನನಗೆ ಬಹಳ ಅಚ್ಚುಮೆಚ್ಚು ಎಂದು ಹೇಳುತ್ತೇನೆ" ಎಂದು ತಮ್ಮ ಪಾತ್ರದ ಬಗ್ಗೆ ಖುಷಿಯಿಂದಲೇ ಹೇಳುತ್ತಾರೆ ನಟಿ ಪ್ರತಿಭಾ.


Click it and Unblock the Notifications











