ಮಗನಿಗೆ ಕೃಷ್ಣ ವೇಷ ಹಾಕಿ ಸಂಭ್ರಮಿಸಿದ ಕಿರುತೆರೆ ನಟಿ ರಾಧಿಕಾ ರಾವ್; ಫೋಟೋ ವೈರಲ್
ಶ್ರಾವಣ ಮಾಸ ಶುರುವಾಗಿದೆ. ಜೊತೆಗೆ ಹಬ್ಬಗಳ ಸಂಭ್ರಮವೂ ಕೂಡಾ. ಇಂದು (ಆಗಸ್ಟ್ 26) ಶ್ರೀಕೃಷ್ಣ ಜನ್ಮಾಷ್ಟಮಿ. ಭಗವಾನ್ ಶ್ರೀಕೃಷ್ಣ ಹುಟ್ಟಿದ ದಿನ ಇದು. ಈ ಹಬ್ಬವನ್ನು ನಾಡಿನ ಎಲ್ಲೆಡೆ ಸಂಭ್ರಮದಿಂದ ಆಚರಿಸುತ್ತೇವೆ. ಇದರ ಜೊತೆಗೆ ಮುದ್ದು ಮಕ್ಕಳಿಗೆ ಕೃಷ್ಣನ ವೇಷ ಧರಿಸಿ, ರಾಧೆಯ ವೇಷ ಧರಿಸಿ ಫೋಟೋಶೂಟ್ ಮಾಡಿಸಿಕೊಳ್ಳುವವರಿಗೇನೂ ಕಡಿಮೆಯಿಲ್ಲ. ಇನ್ನು ಸ್ಯಾಂಡಲ್ವುಡ್ ಸಲೆಬ್ರಿಟಿಗಳೆಂದರೆ ಕೇಳಬೇಕೆ?
ಕಿರುತೆರೆ ನಟಿ ರಾಧಿಕಾ ರಾವ್ ತಮ್ಮ ಮಗನಿಗೆ ಕೃಷ್ಣನ ವೇಷ ಹಾಕಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಜೊತೆಗೆ ತಾವು ಯಶೋಧೆಯಾಗಿ ಮಿಂಚಿರುವುದು ಕೂಡಾ ವಿಶೇಷ. ಮಗನ ಫೋಟೋವನ್ನು ಹಂಚಿಕೊಂಡಿರುವ ರಾಧಿಕಾ ರಾವ್ ಅವರು "ಶ್ರೀಕೃಷ್ಣನು ನಿಮ್ಮನ್ನು ಸದಾಚಾರದ ಮಾರ್ಗದ ಕಡೆಗೆ ನಡೆಸಲಿ ಮತ್ತು ನಿಮ್ಮ ಜೀವನದಲ್ಲಿ ಸಂತೋಷವನ್ನು ತರಲಿ. ಶ್ರೀಕೃಷ್ಣನ ಕೊಳಲು ನಿಮ್ಮ ಹೃದಯವನ್ನು ಸಂತೋಷದ ಸಂಗೀತದಿಂದ ತುಂಬಲಿ. ಜನ್ಮಾಷ್ಟಮಿಯ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ.

ಬಾಲಕೃಷ್ಣನನ್ನು ಅತ್ಯದ್ಭುತವಾಗಿ ಸೆರೆ ಹಿಡಿದ ಟಿನ್ನಿ ಬ್ಲಿಂಕ್ ಫೋಟೊಗ್ರಫಿ, ಮೇಕಪ್ ಕಲಾವಿದೆ ಶುಭ ಆರ್ಟಿಸ್ಟ್ರಿ, ಕೇಶ ವಿನ್ಯಾಸದಲ್ಲಿ ಸಹಕರಿಸಿದ ಪವಿತ್ರಾ ಕೌಂಡಿನ್ಯ ಜ್ಯುವೆಲರ್ಸ್ ಹಾಗೂ ಜ್ಯುವೆಲ್ಲರಿ ನೀಡಿ ಫೋಟೋಶೂಟ್ ಅಂದ ಹೆಚ್ಚಿಸಿದ ಹಿತಾ ರೆಂಟಲ್ ಜ್ಯುವೆಲರಿ ಅವರಿಗೆ ಧನ್ಯವಾದಗಳನ್ನು ಕೂಡಾ ಈಕೆ ತಿಳಿಸಿದ್ದಾರೆ. ಜೊತೆಗೆ ಈ ವಿಶೇಷ ಫೋಟೋಶೂಟ್ನ ಕುರಿತು ಫಿಲ್ಮಿಬೀಟ್ ಕನ್ನಡ ಜೊತೆಗೆ ರಾಧಿಕಾ ರಾವ್ ಹಂಚಿಕೊಂಡಿದ್ದಾರೆ.
"ನನ್ನ ಕಂದಮ್ಮನಿಗೆ ಒಂದು ವರ್ಷ ಆಯ್ತು. ಅಂಬೆಗಾಲಿಂದ ಪುಟ್ಟ ಪುಟ್ಟ ಹೆಜ್ಜೆ ಇಡುವುದಕ್ಕೆ ಶುರು ಮಾಡಿದ್ದಾನೆ. ಓಡಾಡುವುದಕ್ಕೆ ಶುರು ಮಾಡಿದ್ದಾನೆ. ಕೃಷ್ಣ ಜನ್ಮಾಷ್ಟಮಿಗೆ ನನ್ನ ಪುಟ್ಟ ಕೃಷ್ಣ ಮನೆ ತುಂಬಾ ಓಡಾಡ್ಕೊಂಡು, ತರಲೆ ಮಾಡ್ಕೊಂಡು ಎಲ್ಲಾ ಇರ್ತಾನೆ. ಮಗ ಅಗಸ್ತ್ಯನ ಆಟ, ತುಂಟಾಟ ಎಲ್ಲವೂ ಕೃಷ್ಣನಿಗೆ ರಿಲೇಟ್ ಆಗುವ ಕಾರಣ ನಾನು ಈ ಫೋಟೋಶೂಟ್ ಮಾಡೋಣ ಅಂಥ ಅಂದುಕೊಂಡೆ" ಎಂದು ಫಿಲ್ಮ್ಬೀಟ್ ಕನ್ನಡ ಜೊತೆಗೆ ನಟಿ ರಾಧಿಕಾ ರಾವ್ ಹಂಚಿಕೊಂಡಿದ್ದಾರೆ.
ಇದರ ಜೊತೆಗೆ "ಸತ್ಯ ಹೇಳ್ಬೇಕು ಅಂತ ಅಂದ್ರೆ ಕೃಷ್ಣ ಫೋಟೋಶೂಟ್ ಮಾಡಿಸುವಾಗ ನನಗೆ ತುಂಬಾನೇ ಕಷ್ಟ ಆಯ್ತು. ಯಾಕಂದ್ರೆ ಅಷ್ಟೇ ತುಂಟತನ ಇತ್ತು. ಅಳು, ನಗು ಎಲ್ಲಾ ಇತ್ತು. ಫೋಟೋಗ್ರಾಫರ್ ಟಿನಿ ಬ್ಲಿಂಕ್ ತೇಜು ತುಂಬಾ ತಾಳ್ಮೆಯಿಂದ ಫೋಟೋ ತೆಗೆದಿದ್ದಾರೆ. ಒಟ್ಟಿನಲ್ಲಿ ತುಂಬಾ ಕಷ್ಟಪಟ್ಟು, ಇಷ್ಟಪಟ್ಟು ಮಾಡಿಸಿದ ಫೋಟೋಶೂಟ್ ಇದು" ಎಂದು ಫೋಟೋಶೂಟ್ ಹಿಂದಿನ ಸಂಗತಿಯನ್ನು ರಾಧಿಕಾ ರಾವ್ ಬಿಚ್ಚಿಟ್ಟಿದ್ದಾರೆ.

"ನಾನು ನನ್ನ ಚಿಕ್ಕಮ್ಮನ ಮಕ್ಕಳಿಗೆಲ್ಲಾ ಕೃಷ್ಣ ವೇಷ ಹಾಕ್ತಿದ್ದೆ. ಅವರ ಪುಟ್ಟ ಪುಟ್ಟ ಮಕ್ಕಳಿಗೆ ಕೃಷ್ಣನಂತೆ ಅಲಂಕಾರ ಮಾಡಿ ಅಷ್ಟಮಿಯನ್ನು ಸಂಭ್ರಮಿಸುತ್ತಿದ್ದೆ. ನನ್ನ ಮಗನಿಗೆ ನಾನು ಕೃಷ್ಣನ ವೇಷ ಹಾಕಿ ಸಂಭ್ರಮಿಸುತ್ತೇನೆ ಎಂದು ನಾನು ಯಾವತ್ತಿಗೂ ಅಂದುಕೊಂಡಿರಲಿಲ್ಲ. ಇದೀಗ ಮುದ್ದು ಮಗನಿಗೆ ಕೃಷ್ಣನ ವೇಷ ಹಾಕಿರುವುದು, ಫೋಟೋಶೂಟ್ ಮಾಡಿಸಿಕೊಂಡಿರುವುದು ಎಲ್ಲವೂ ತುಂಬಾನೇ ಖುಷಿಯಾಗುತ್ತಿದೆ" ಫಿಲ್ಮಿಬೀಟ್ ಕನ್ನಡ ಜೊತೆಗೆ ರಾಧಿಕಾ ರಾವ್ ಹಂಚಿಕೊಂಡಿದ್ದಾರೆ.
ಅಂದ ಹಾಗೇ ರಾಧಿಕಾ ರಾವ್ ಅವರು ಈ ಹಿಂದೆ ತಮ್ಮ ಮಗ ಅಗಸ್ತ್ಯನಿಗೆ ರಾಮನ ವೇಷ ಹಾಕಿಸಿದ್ದರು. ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಟಾಪನೆಯ ದಿನ ರಾಧಿಕಾ ರಾವ್ ಅವರು ತಮ್ಮ ಮುದ್ದು ಮಗನಿಗೆ ಬಾಲರಾಮನ ವೇಷ ಹಾಕಿಸಿ ಪೋಟೊಶೂಟ್ ಮಾಡಿಸಿಕೊಂಡಿದ್ದು, ಅದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದೀಗ ಬಾಲಕೃಷ್ಣನ ವೇಷ ಹಾಕಿದ್ದು ಮುದ್ದು ಕೃಷ್ಣನನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.


Click it and Unblock the Notifications











