Shambavi Venkatesh: ಎರಡು ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ ಮರಳಿದ ನಟಿ ಶಾಂಭವಿ ವೆಂಕಟೇಶ್
ಶಾಂಭವಿ ವೆಂಕಟೇಶ್ ಕಿರುತೆರೆ ವೀಕ್ಷಕರಿಗೆ ಪರಿಚಿತ ಹೆಸರು ಎಂದರೆ ತಪ್ಪಾಗಲಾರದು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯಲ್ಲಿ ಖಳನಾಯಕಿ ದಿಶಾ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಶಾಂಭವಿ ತದ ನಂತರ ಗರ್ಭಿಣಿಯಾಗಿದ್ದ ಕಾರಣ ನಟನೆಗೆ ವಿದಾಯ ಹೇಳಿದ್ದರು. 2021 ರ ಜೂನ್ ತಿಂಗಳಿನಲ್ಲಿ ಮುದ್ದಾದ ಅವಳಿ ಮಕ್ಕಳಿಗೆ ಜನ್ಮ ನೀಡಿದ ಶಾಂಭವಿ ಮತ್ತೆ ಕಿರು ತೆರೆಯತ್ತ ಮುಖ ಮಾಡಿದ್ದಾರೆ.
ಮಗ ಮತ್ತು ಮಗಳ ಲಾಲನೆ ಪಾಲನೆಗಾಗಿ ನಟನೆಯಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದ ಶಾಂಭವಿ ವೆಂಕಟೇಶ್ ಮತ್ತೊಮ್ಮೆ ಸಿಹಿ ಸುದ್ದಿ ಕೊಟ್ಟಿದ್ದಾಗಿದೆ. ಎರಡು ವರ್ಷಗಳ ಗ್ಯಾಪ್ ನ ನಂತರ ಮತ್ತೆ ನಟನೆಯತ್ತ ಶಾಂಭವಿ ಮುಖ ಮಾಡಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಅಮೃತಧಾರೆ'ಯಲ್ಲಿ ನಾಯಕ ಗೌತಮ್ ದಿವಾಣ್ ಮಾಜಿ ಪ್ರೇಯಸಿ ಮಾನ್ಯ ಆಗಿ ನಟಿಸುವ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ.

ಸಂತಸ ಹಂಚಿಕೊಂಡಿದ್ದ ಶಾಂಭವಿ
ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಶಾಂಭವಿ ಮೊದಲ ದಿನದ ಶೂಟಿಂಗ್ನ ಫೋಟೋವೊಂದನ್ನು ಹಂಚಿಕೊಂಡಿದ್ದು "ಐ ಆ್ಯಮ್ ಬ್ಯಾಕ್.. ಚೀಯರ್ಸ್ ಟು ದಿ ನ್ಯೂ ಬಿಗಿನಿಂಗ್.. ನಿಮ್ಮೆಲ್ಲರ ಹಾರೈಕೆ ಇರಲಿ" ಎಂದು ಬರೆದುಕೊಂಡಿದ್ದರು.
ಅಷ್ಟಕ್ಕೂ ಮಾನ್ಯ ಪಾತ್ರದ ಹಿನ್ನಲೆಯೇನು?
ನಾಯಕ ಗೌತಮ್ ದಿವಾಣ್ ಮಾಜಿ ಪ್ರೇಯಸಿ ಆಗಿದ್ದ ಮಾನ್ಯ ಸದ್ಯ ಅವನಿಂದ ದೂರವಾಗಿದ್ದಾಳೆ. ಅಂದ ಹಾಗೇ ಗೌತಮ್ ಮತ್ತು ಮಾನ್ಯ ಪ್ರೇಮಿಗಳು ಹೌದಾಗಿದ್ದರೆ ಅವರು ಅದ್ಯಾಕೆ ದೂರವಾದರು? ಶಕುಂತಲಾಳೇ ಅವರಿಬ್ಬರನ್ನು ದೂರ ಮಾಡಿದಳಾ? ಇಷ್ಟು ದಿನಗಳ ಕಾಲ ಸುಳಿವೇ ಇಲ್ಲದಂತಿದ್ದ ಆಕೆ ಇದೀಗ ಗೌತಮ್ ಮದುವೆ ನಿಶ್ಚಯವಾದ ಬಳಿಕ ಅದ್ಯಾಕೆ ಆತನನ್ನು ಭೇಟಿಯಾಗಬೇಕು, ಅವನೊಂದಿಗೆ ಮಾತನಾಡಬೇಕು ಎಂದು ಬಯಸುತ್ತಾಳೆ ಎಂಬುದಕ್ಕೆ ಉತ್ತರ ಸಿಗಬೇಕಿದೆ.
ನಟಿಸಿದ್ದು ಬೆರಳೆಣಿಕೆಯಷ್ಟು ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಿಗೂಢರಾತ್ರಿ' ಧಾರಾವಾಹಿಯಲ್ಲಿ ಮಂದಾಕಿನಿಯಾಗಿ ನಟಿಸಿದ್ದ ಶಾಂಭವಿ ಆ ಪಾತ್ರದ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು. ತದ ನಂತರ ದಿಶಾ ಆಗಿ ಬದಲಾದ ಆಕೆ ವಿಲನ್ ಆಗಿಯೂ ಕಿರುತೆರೆಯಲ್ಲಿ ಅಬ್ಬರಿಸಿದ್ದರು.

ಹಿರಿತೆರೆಯಲ್ಲಿಯೂ ಮೋಡಿ
ಮುಂದೆ ಹಿರಿತೆರೆಗೆ ಪಾದಾರ್ಪಣೆ ಮಾಡಿದ ಆಕೆ ಸ್ಯಾಂಡಲ್ ವುಡ್ನ ಬ್ಲಾಕ್ ಬಾಸ್ಟರ್ ಸಿನಿಮಾ 'ಕೆಜಿಎಫ್ ಚಾಪ್ಟರ್ 1'ರಲ್ಲಿ ವಿಶೇಷ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಮಾತ್ರವಲ್ಲದೇ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾದಲ್ಲಿಯೂ ನಾಯಕಿಯ ಗೆಳತಿಯಾಗಿ ಶಾಂಭವಿ ಕಾಣಿಸಿಕೊಂಡಿದ್ದರು.


Click it and Unblock the Notifications











