Sindhu Rao: ಬಾಲನಟಿಯಾಗಿ ದಿಗ್ಗಜರ ಜೊತೆ ಹಂಚಿಕೊಂಡಿದ್ದ ಸಿಂಧೂ ರಾವ್ ಕಿರುತೆರೆಗೆ ವಾಪಸ್
ಸೀತಾರಾಮ ಧಾರಾವಾಹಿಯಲ್ಲಿ ನಟಿಸುತ್ತಿರುವ ಸಿಂಧೂ ರಾವ್ ಬಣ್ಣ ಹಚ್ಚಿದ್ದಾರೆ. ನಾಯಕ ರಾಮ್ ಚಿಕ್ಕಮ್ಮನ ಪಾತ್ರದಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಬಹಳ ದಿನಗಳ ಬಳಿಕ ಸಿಂಧೂ ಮತ್ತೆ ಬಣ್ಣದ ಲೋಕಕ್ಕೆ ವಾಪಸ್ ಆಗಿದ್ದಾರೆ. ಬಾಲ ನಟಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಸಿಂಧೂ ರಾವ್, ವಿಷ್ಣುವರ್ಧನ್, ಅಂಬರೀಶ್, ದೇವರಾಜ್, ರವಿಚಂದ್ರನ್, ಶಿವಣ್ಣ ಸೇರಿದಂತೆ ಹಲವು ನಟರ ಜೊತೆಗೆ ತೆರೆ ಹಂಚಿಕೊಂಡಿದ್ದರು.
ಸಿನಿಮಾ ಹಾಗೂ ಸೀರಿಯಲ್ಗಳಲ್ಲಿ ನಟಿಸಿ, ತಮ್ಮ ನಟನೆ ಮೂಲಕವೇ ಚಿರಪರಿಚಿತರಾಗಿದ್ದ ಸಿಂಧೂ, ಬಹಳ ದೊಡ್ಡ ಬ್ರೇಕ್ ಪಡೆದುಕೊಂಡು ಇದೀಗ ತಮ್ಮ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ. ನಟಿ ಸಿಂಧು ರಾವ್ ಅವರ ಕುಟುಂಬದಲ್ಲಿ ಯಾರೂ ಕಲಾವಿದರಲ್ಲ. ಅಜ್ಜಿ ಮನೆಯ ಬಳಿಯೇ ಹಿರಿಯ ನಿರ್ದೇಶಕ ಫಣಿ ರಾಮಚಂದ್ರ ಅವರ ಅತ್ತೆ ಮನೆ ಇತ್ತು. 'ನಾನೆಂದು ನಿಮ್ಮವವೇ' ಚಿತ್ರಕ್ಕಾಗಿ ನಿರ್ದೇಶಕರು ಬಾಲಕರ ಆಡಿಷನ್ ನಡೆಸುತ್ತಿದ್ದರು.

ಸಿಂಧೂ ಅವರ ಅಜ್ಜಿ ಫಣಿ ರಾಮಚಂದ್ರ ಅವರ ಬಳಿ ತೆರಳಿ ತಮ್ಮ ಮೊಮ್ಮಗಳ ಬಗ್ಗೆ ಹೇಳಿದರಂತೆ. ಆಗ ನಿರ್ದೇಶಕರು ಸಿಂಧೂಗೆ ಹುಡುಗನ ಡ್ರೆಸ್ ಮಾಡಿ ನೋಡಿ, ಸುಮ್ಮನೆ ಹೋದವರು ಕೆಲ ದಿನಗಳ ಬಳಿಕ ಪುನಃ ಬಂದು 'ನಾನೆಂದು ನಿಮ್ಮವನೇ' ಚಿತ್ರಕ್ಕೆ ಆಯ್ಕೆ ಮಾಡಿಯೇ ಬಿಟ್ಟರಂತೆ. ಅಲ್ಲಿಂದ ಸಿಂಧೂ ಅವರ ಸಿನಿಮಾ ಜರ್ನಿ ಶುರುವಾಯ್ತು.
ಸಾಲು ಸಾಲು ಚಿತ್ರಗಳಲ್ಲಿ ನಟನೆ
'ನಾನೆಂದು ನಿಮ್ಮವನೇ', 'ರಾಯರು ಬಂದರು ಮಾವನ ಮನೆಗೆ', 'ಮಿಸ್ಟರ್ ಮಹೇಶ್ ಕುಮಾರ್', 'ಮದರ್ ಇಂಡಿಯಾ', 'ಆಯುಧ', 'ರಾಜ ಮಾರ್ತಾಂಡ', 'ಕಲಾವಿದ', 'ಪುಟ್ಮಲ್ಲಿ', 'ಒಂದಾಗೋಣ ಬಾ', 'ಮೌನರಾಗ' ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಸಿಂಧು ಬಾಲನಟಿಯಾಗಿ ಕಾಣಿಸಿಕೊಂಡರು. ಮೊದಲ ಸಿನಿಮಾ ಬಳಿಕ ಸತತವಾಗಿ ಐದಾರು ಚಿತ್ರಗಳಿಗೆ ಸಿಂಧೂ ಬಾಲಕನಾಗಿ ನಟಿಸಿದ್ದರು. ನಂತರವೇ ಬಾಲಕಿಯಾಗಿ ನಟಿಸಲು ಪ್ರಾರಂಭಿಸಿದ್ದು. 'ಮೌನರಾಗ' ಚಿತ್ರಕ್ಕೆ 1996-97ರಲ್ಲಿ ಆಕೆಗೆ ರಾಜ್ಯ ಪ್ರಶಸ್ತಿ ಕೂಡ ಸಿಕ್ಕಿತ್ತು.
ಆ ಕಾರಣಕ್ಕೆ ನಾಯಕಿ ಅವಕಾಶ ಸಿಗಲಿಲ್ಲ
ಹತ್ತನೇ ತರಗತಿ ವೇಳೆಗೆ ಓದಿನ ಕಡೆಗೆ ಗಮನ ಕೊಡಬೇಕು ಎಂದು ನಟನೆ ನಿಲ್ಲಿಸಿದ್ದರು. ಮತ್ತೆ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಡಲು ಬಹಳ ಪ್ರಯತ್ನಿಸಿದರಂತೆ. ಆದರೆ, ಕುಳ್ಳಗಿದ್ದಾರೆ ಎಂಬ ಕಾರಣಕ್ಕೆ ಹಲವು ಸಿನಿಮಾಗಳು ಕೈತಪ್ಪಿದವು ಎನ್ನುತ್ತಾರೆ ಸಿಂಧು, ಬಳಿಕ ಕಿರುತೆರೆಗೆ ಎಂಟ್ರಿ ಕೊಟ್ಟು, 'ಮಾಂಗಲ್ಯ', 'ರಂಗೋಲಿ' ಧಾರಾವಾಹಿಗಳ ಮೂಲಕ ಜನಮನ ಗೆದ್ದರು. ರಂಗೋಲಿಯ ಆರತಿ ಎಂದು ಅದೇ ಹೆಸರಲ್ಲೇ ಈಗಲೂ ಗುರುತಿಸುತ್ತಾರೆ. ಧಾರಾವಾಹಿಗಳಿಂದ ಬ್ರೇಕ್ ಪಡೆದು, ಕೆಲಸ, ಮನೆ ಎಂದು ಬ್ಯುಸಿಯಾಗಿದ್ದರು. 2017ರಲ್ಲಿ ಮಹೇಶ್ ರಾಮಕೃಷ್ಣಯ್ಯ ಎಂಬುವರನ್ನು ವಿವಾಹವಾದರು.
ರೀ ಎಂಟ್ರಿ ಕೊಟ್ಟಿರುವ ನಟಿ
ಸಿಂಧೂ ನಟನೆಯನ್ನು ಮುಂದುವರಿಸಲು ಮಹೇಶ್ ಅವರು ಬಹಳ ಸಪೋರ್ಟ್ ಮಾಡುತ್ತಾರೆ. ಪತಿ ಮಹೇಶ್, ಏರೋಬಿಕ್ ಇನ್ಸ್ಟ್ರಕ್ಟರ್, ಆಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕೋವಿಡ್ಗೂ ಮುನ್ನ ಸಿಂಧು ಅವರು 'ಗುಬ್ಬಿ ಮರಿ' ಸಿನಿಮಾದಲ್ಲಿ ನಟಿಸಿದರು. ಕಮ್ ಬ್ಯಾಕ್ ಮಾಡಬೇಕು ಎಂದು 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ನಟಿಸಿದರು. ಆದರೆ, ಕೋವಿಡ್ ಬಂದ ಕಾರಣ ಸೆಕೆಂಡ್ ಇನ್ನಿಂಗ್ಸ್ ಸಕ್ಸಸ್ ಕಾಣಲಿಲ್ಲ. ಈಗ 'ಸೀತಾರಾಮ' ಧಾರಾವಾಹಿ ಮೂಲಕ ರೀಎಂಟ್ರಿ ಕೊಟ್ಟಿದ್ದಾರೆ. ಇನ್ನಾದರೂ ಸಿಂಧೂಗೆ ಕಿರುತೆರೆಯಲ್ಲಿ ಹೆಚ್ಚಿನ ಸಕ್ಸಸ್ ಸಿಗಲಿ ಎಂದು ಹಾರೈಸೋಣ.


Click it and Unblock the Notifications











