ಪುಷ್ಪಾ ಪಂಡಿತ್ ಪಾತ್ರಕ್ಕಾಗಿ ಆಟೋ ಓಡಿಸುವುದನ್ನು ಕಲಿತಿದ್ದ ನಟಿ ಸುಜಾತಾ ಅಕ್ಷಯ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯು ಇತ್ತೀಚೆಗಷ್ಟೇ ತನ್ನ ಪಯಣ ನಿಲ್ಲಿಸಿದೆ. ವಿಭಿನ್ನ ರೀತಿಯ ಕಥಾಹಂದರವನ್ನೊಳಗೊಂಡಿದ್ದ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯು ಇದ್ದಕ್ಕಿದ್ದಂತೆ ಅಂತ್ಯ ಹಾಡಿದೆ. ಧಾರಾವಾಹಿಯಲ್ಲಿ ನಾಯಕಿ ವರ್ಣಿಕಾ ತಾಯಿ ಪುಷ್ಪಾ ಪಂಡಿತ್ ಪಾತ್ರದಲ್ಲಿ ಸುಜಾತಾ ಅಕ್ಷಯ್ ಅಭಿನಯಿಸುತ್ತಿದ್ದರು. ಈಗ ಧಾರಾವಾಹಿ ಮುಕ್ತಾಯಗೊಂಡ ಬಳಿಕ ಈ ಪಯಣದ ಕುರಿತು ಮಾತನಾಡಿದ್ದಾರೆ.
"ಕಥೆಯೊಂದು ಶುರುವಾಗಿದೆ ಧಾರಾವಾಹಿಯ ಕಥೆ ತುಂಬಾ ಸುಂದರವಾಗಿತ್ತು. ತನಗಿರುವ ಮೂರು ಮಕ್ಕಳನ್ನು ಶ್ರೀಮಂತ ಮನೆಗೆ ಸೊಸೆಯಾಗಿ ಮಾಡಿಕೊಳ್ಳುವ ಮಹಾದಾಸೆ ಪುಷ್ಪಾ ಪಂಡಿತ್ಗೆ ಇತ್ತು. ಆ ಪುಷ್ಪಾ ಪಾತ್ರಕ್ಕೆ ನಾನು ಜೀವ ತುಂಬಿದ್ದೆ. ಜೊತೆಗೆ ತನ್ನ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು, ಕಷ್ಟ ಸುಖಗಳನ್ನು ಆಕೆ ಅದು ಹೇಗೆ ಎದುರಿಸುತ್ತಾಳೆ ಎಂಬುದನ್ನು ಕೂಡಾ ಸೊಗಸಾಗಿ ತೋರಿಸಲಾಗಿತ್ತು. ಒಟ್ಟಿನಲ್ಲಿ ಪುಷ್ಪಾ ಪಾತ್ರದಲ್ಲಿ ನಟನೆಗೆ ಸಾಕಷ್ಟು ಅವಕಾಶವಿತ್ತು" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಸಂತಸ ವ್ಯಕ್ತಪಡಿಸುತ್ತಾ ನಟಿ ಸುಜಾತಾ ಅಕ್ಷಯ ಹೇಳುತ್ತಾರೆ.

"ಇನ್ನು ಮುಖ್ಯವಾದ ವಿಚಾರವೊಂದಿದೆ. ನಾನು ಪುಷ್ಪಾ ಪಾತ್ರಕ್ಕಾಗಿ ಆಟೋ ಓಡಿಸುವುದನ್ನು ಕೂಡಾ ಕಲಿತುಕೊಂಡಿದ್ದೆ. ಮೊದಲಿಗೆ ನಿರ್ದೇಶಕರು ನನಗೆ ರಿಕ್ಷಾ ಕಲಿಯಲು ಎಷ್ಟು ದಿನ ಬೇಕು ಎಂದು ಕೇಳಿದಾಗ ಅದಕ್ಕೆ ನಾನು 20 ದಿನಗಳು ಬೇಕು ಎಂದು ಹೇಳಿದ್ದೆ. ಆದರೆ, ನಾನು ಅದಕ್ಕೂ ಮೊದಲೇ ರಿಕ್ಷಾ ಓಡಿಸುವುದನ್ನು ಕಲಿತೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಸುಜಾತಾ ಅಕ್ಷಯ್ ಮಾತಾಡುವಾಗ ಹೇಳಿಕೊಂಡಿದ್ದರು.
"ಪುಷ್ಪಾ ಪಂಡಿತ್ ಪಾತ್ರಕ್ಕಾಗಿ ನಾನು ತುಂಬಾ ತಯಾರಿಯನ್ನು ಮಾಡಿಕೊಂಡಿದ್ದೆ. ಜೊತೆಗೆ ಸಾಕಷ್ಟು ಕಷ್ಟವನ್ನು ಕೂಡಾ ಪಟ್ಟಿದ್ದೇನೆ. ಪುಷ್ಪಾ ಪಂಡಿತ್ ಪಾತ್ರದಲ್ಲಿ ನಾನು ಅಭಿನಯಿಸುವಾಗ ತುಂಬಾ ನಕ್ಕಿದ್ದೇನೆ, ಅತ್ತಿದ್ದೇನೆ ಮತ್ತು ಅವಮಾನ ಅನುಭವಿಸಿದ್ದೇನೆ. ಅನೇಕ ಸವಾಲನ್ನು ಸ್ವೀಕರಿಸಿದ್ದೇನೆ" ಎಂದು ಫಿಲ್ಮಿಬೀಟ್ ಜೊತೆಗೆ ನಟಿ ಸುಜಾತಾ ಅಕ್ಷಯ್ ಸಂತಸ ವ್ಯಕ್ತಪಡಿಸಿದ್ದರು.

ನಿರೂಪಕಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟ ಸುಜಾತಾ ಅಕ್ಷಯ್ 'ನಾಕುತಂತಿ' ಧಾರಾವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. ಮನೆಯೊಂದು ಮೂರು ಬಾಗಿಲು', 'ಎಲ್ಲಾ ಮರೆತಿರುವಾಗ', 'ಭೃಂಗದ ಬೆನ್ನೇರಿ', 'ಬದುಕು', 'ಸ್ವಾಭಿಮಾನ', 'ರಾಧಾ', 'ಸೃಷ್ಟಿ', 'ಪ್ರೀತಿ ಎಂದರೇನು', 'ಅರಮನೆ', 'ಮುಗಿಲು' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದ ಈಕೆ ತದ ನಂತರ ಸ್ವಲ್ಪ ಸಮಯ ನಟನೆಯಿಂದ ದೂರವಿದ್ದರು.
'ರಾಧಾ ರಮಣ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸುವ ಮೂಲಕ ಮತ್ತೆ ನಟನೆಗೆ ಮರಳಿದ ಈಕೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ನಂತರ 'ಆರತಿಗೊಬ್ಬ ಕೀರ್ತಿಗೊಬ್ಬ', 'ಹೂಮಳೆ' ಧಾರಾವಾಹಿಯಲ್ಲಿ ಅಭಿನಯಿಸಿರುವ ಈಕೆ ಪುಷ್ಪಾ ಪಂಡಿತ್ ಆಗಿ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಇನ್ನು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸುವರ್ಣ ಸಂಕಲ್ಪ' ಕಾರ್ಯಕ್ರಮದ ನಿರೂಪಣೆಯಲ್ಲಿ ಬ್ಯುಸಿಯಾಗಿರುವ ಸುಜಾತಾ ಅಕ್ಷಯ ಹೊಸದಾಗಿರುವ ಹಾಗೂ ಚಾಲೆಂಜಿಗ್ ಆಗಿರುವಂತಹ ಪಾತ್ರದಲ್ಲಿ ನಟಿಸಲು ಕಾಯುತ್ತಿದ್ದಾರೆ.


Click it and Unblock the Notifications











