Sujatha Akshaya: ಪಾತ್ರಕ್ಕಾಗಿ ಆಟೋ ಓಡಿಸಲು ಕಲಿತ ಸುಜಾತಾ ಅಕ್ಷಯ್.. ಹಿಡಿದಿದ್ದೆಷ್ಟು ದಿನ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡ ನಟಿ ಸುಜಾತಾ ಅಕ್ಷಯ್ ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ನಾಯಕಿಯ ಅಮ್ಮ ಪುಷ್ಪ ಪಂಡಿತ್ ಆಗಿ ಬಣ್ಣ ಹಚ್ಚುತ್ತಿದ್ದಾರೆ.
ನೆಗೆಟಿವ್ ಪಾತ್ರದ ಮೂಲಕ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾಗಿದ್ದ ಸುಜಾತಾ ಅಕ್ಷಯ್ ಸದ್ಯ ಪುಷ್ಪ ಪಂಡಿತ್ ಆಗಿ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆಶ್ಚರ್ಯಕರವಾದ ಸಂಗತಿಯೆಂದರೆ ಸುಜಾತಾ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯ ಪುಷ್ಪ ಪಂಡಿತ್ ಪಾತ್ರಕ್ಕಾಗಿ ಆಟೋರಿಕ್ಷಾ ಓಡಿಸುವುದನ್ನು ಕೂಡಾ ಕಲಿತುಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಸುಜಾತಾ ಅಕ್ಷಯ್ ಅವರೇ ಹಂಚಿಕೊಂಡಿದ್ದಾರೆ.

ಆಟೋರಿಕ್ಷಾ ಓಡಿಸುವ ಸುಜಾತಾ
"ನಾನು ಈ ಧಾರಾವಾಹಿಯಲ್ಲಿ ನಾಯಕಿ ಕೃತಿಯ ಅಮ್ಮನಾಗಿ ಕಾಣಿಸಿಕೊಂಡಿದ್ದೇನೆ. ನನ್ನ ಎರಡನೇ ಮಗಳ ಮದುವೆಗಾಗಿ ಮನೆಯನ್ನು ಅಡವಿಡುವ ಪರಿಸ್ಥಿತಿ ಬರುತ್ತದೆ. ಆದರೆ ಸರಿಯಾದ ಸಮಯಕ್ಕೆ ಹಣ ಪಾವತಿಸದೆ ಮನೆಯನ್ನು ಕಳೆದುಕೊಂಡಾಗ ಹಣವನ್ನು ಹೇಗಾದರೂ ಸಂಪಾದಿಸಲು ಆಟೋರಿಕ್ಷಾ ಚಲಾಯಿಸುವುದನ್ನು ಶುರು ಮಾಡುತ್ತೇನೆ. ಇದು ಸದ್ಯದ ಧಾರಾವಾಹಿಯ ಕಥೆ" ಎಂದು ಫಿಲ್ಮಿಬೀಟ್ ಜೊತೆಗೆ ಹಂಚಿಕೊಳ್ಳುತ್ತಾರೆ ಸುಜಾತಾ ಅಕ್ಷಯ್.
ಆಟೋ ರಿಕ್ಷಾ ಓಡಿಸಲು ಹಿಡಿದಿದ್ದೆಷ್ಟು ದಿನ?
ಇದರ ಜೊತೆಗೆ "ಧಾರಾವಾಹಿಯ ನಿರ್ದೇಶಕರು ನನಗೆ ಆಟೋರಿಕ್ಷಾ ಕಲಿಯಲು ಎಷ್ಟು ದಿನ ಬೇಕು ಎಂದು ಕೇಳಿದಾಗ 20 ದಿನಗಳು ಎಂದು ಹೇಳಿದ್ದೆ. ಆದರೆ ಅದಕ್ಕೂ ಮೊದಲೇ ಆಟೋರಿಕ್ಷ ಚಲಾಯಿಸುವುದನ್ನು ಕಲಿತೆ. ಇದೊಂದು ವಿಶೇಷ ಪಾತ್ರ ಹಾಗೂ ನನಗೆ ಬಹಳಷ್ಟು ಖುಷಿ ಕೊಟ್ಟಿದೆ. ಧಾರಾವಾಹಿ ವೀಕ್ಷಕರು ಅಭಿಮಾನಿಗಳು ತುಂಬಾ ಪಾಸಿಟಿವ್ ಆಗಿ ನನ್ನ ಪಾತ್ರವನ್ನು ಸ್ವೀಕರಿಸಿರುವುದು ನನಗೆ ಇನ್ನಷ್ಟು ಖುಷಿ ತಂದಿದೆ. ಸದ್ಯದವರೆಗಂತೂ ನಾನು ಈ ಪಾತ್ರವನ್ನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ" ಎಂದು ಸಂತಸದಿಂದ ಫಿಲ್ಮಿಬೀಟ್ ಜೊತೆಗೆ ಹೇಳಿಕೊಂಡಿದ್ದಾರೆ ನಟಿ ಸುಜಾತ ಅಕ್ಷಯ್.

ಮೇಘಾ ಆಗಿ ಕಿರುತೆರೆಗೆ ಎಂಟ್ರಿ
'ನಾಕುತಂತಿ' ಧಾರಾವಾಹಿಯ ಮೇಘಾ ಆಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ಸುಜಾತಾ ಮುಂದೆ 'ಮನೆಯೊಂದು ಮೂರು ಬಾಗಿಲು', 'ಬದುಕು', 'ಎಲ್ಲಾ ಮರೆತಿರುವಾಗ', 'ಸ್ವಾಭಿಮಾನ', 'ರಾಧಾ', 'ಸೃಷ್ಟಿ', 'ಅರಮನೆ', 'ಪ್ರೀತಿ ಎಂದರೇನು?', 'ಮುಗಿಲು' ಸೇರಿದಂತೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ರಾಧಾ ರಮಣ' ಧಾರಾವಾಹಿಯಲ್ಲಿ ಖಳನಾಯಕಿ ಸಿತಾರಾ ಆಗಿ ಬಣ್ಣ ಹಚ್ಚಿದ್ದ ಈಕೆಗೆ ಆ ಪಾತ್ರ ಸಾಕಷ್ಟು ಜನಪ್ರಿಯತೆ ನೀಡಿತ್ತು. ಮುಂದೆ 'ಆರತಿಗೊಬ್ಬ ಕೀರ್ತಿಗೊಬ್ಬ', 'ಹೂಮಳೆ' ಧಾರಾವಾಹಿಯಲ್ಲಿ ನಟಿಸಿದ್ದ ಸುಜಾತಾ ಸದ್ಯ ಪುಷ್ಪ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.


Click it and Unblock the Notifications











