ಸಿನಿಮಾ ಆಡಿಶನ್ಗೆ ಹೋಗಿ ವಾಪಾಸ್ ಬಂದಿದ್ದೇಕೆ ರಿಯಾಲಿಟಿ ಶೋ ಸ್ಟಾರ್ ಸುಶ್ಮಿತಾ ಜಗ್ಗಪ್ಪ
ಬಣ್ಣದ ಲೋಕಕ್ಕೆ ಬರಬೇಕು ಅನ್ನುವುದು ಸಾಮಾನ್ಯವಾಗಿ ಬಹಳಷ್ಟು ಜನರ ಕನಸು. ಅಂತೆಯೇ ಬಣ್ಣದ ಲೋಕದ ಬಗ್ಗೆ ಹಲವಾರು ರೀತಿಯ ಊಹಾಪೋಹಗಳು ಇವೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಮಾಯಾ ಜಗತ್ತು ಸೇಫ್ ಅಲ್ಲ ಎಂಬ ಮಾತೇ ಹೆಚ್ಚು. ಹೀಗಿರುವಾಗ ನಟಿ, ಸುಶ್ಮಿತಾ ಜಗಪ್ಪ ತಮಗಾದ ಆಡಿಷನ್ ಅನುಭವ ಒಂದನ್ನು ಹಂಚಿಕೊಂಡಿದ್ದಾರೆ.
'ಮಜಾಭಾರತ' ಕಾರ್ಯಕ್ರಮದ ಮೂಲಕ ಕಿರುತೆರೆಗೆ ಕಾಲಿಟ್ಟ ಸುಶ್ಮಿತಾ ಜಗ್ಗಪ್ಪ ತಮ್ಮ ಕಾಮಿಡಿ ಸೆನ್ಸ್ನಿಂದ ಫೇಮಸ್ಸು. ಇಲ್ಲಿಂದ 'ಗಿಚ್ಚಿ ಗಿಲಿ ಗಿಲಿ' ರಿಯಾಲಿಟಿ ಶೋ ಮೂಲಕ ಬಹಳಷ್ಟು ಮುನ್ನೆಲೆಗೆ ಬಂದ ನಟಿ ಸುಶ್ಮಿತಾ ತಮ್ಮ ಆಡಿಷನ್ ಅನುಭವವನ್ನು ಹಂಚಿಕೊಂಡು ಹೆಣ್ಣು ಮಕ್ಕಳಿಗೆ ಪ್ರಮುಖ ಸಂದೇಶವನ್ನು ನೀಡಿದ್ದಾರೆ.

ರಿಯಾಲಿಟಿ ಶೋ ನಂತರ ಹಲವಾರು ಸಿನಿಮಾಗಳಿಂದ ಆಫರ್ ಬಂದಾಗ ನಟಿ ಸುಶ್ಮಿತಾ ಸಂತಸದಿಂದ ನಟಿಸಬೇಕು ಎಂಬ ಕನಸು ಹೊತ್ತಿದ್ದರಂತೆ. ಹೀಗಿರುವಾಗ ಆದ ಒಂದು ಘಟನೆ ಅವರನ್ನು ಸಿನಿ ಜಗತ್ತಿನ ಈ ಮುಖದ ಕಡೆಗೆ ಎಚ್ಚರಿಸಿದೆ.
"ಗಿಚ್ಚಿ ಗಿಲಿ ಗಿಲಿ ಶೋ ನಂತರ ನನಗೆ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಇತ್ತು. ಅಂತೆಯೇ ಫಿಲ್ಮ್ ಆಫರ್ಗಳು ಬಂದಾಗ ಬಹಳ ಖುಷಿಪಟ್ಟಿದ್ದೆ. ಒಂದೆರಡು ಸಿನಿಮಾ ಆಡಿಶನ್ಗೆ ಹೋಗುವ ತಯಾರಿಯನ್ನು ನಡೆಸಿದೆ. ಒಂದೊಮ್ಮೆ ಆಡಿಶನ್ಗೆ ಕಾಲ್ ಬಂದಿತ್ತು. ವಿಚಿತ್ರವೆಂದರೆ ಒಂದು ಹೋಟೆಲ್ ಲಾಡ್ಜ್ನಲ್ಲಿ ಆಡಿಶನ್ ಇಟ್ಟಿದ್ದರು. ಸಾಮಾನ್ಯವಾಗಿ ನಾನು ಆಡಿಶನ್ಗೆ ಯಾರನ್ನಾದರೂ ಜೊತೆಗೆ ಕರೆದುಕೊಂಡು ಹೋಗುತ್ತೇನೆ. ಆದರೆ ಅಂದು ನನ್ನ ಸ್ನೇಹಿತರೆಲ್ಲರೂ ಬ್ಯುಸಿ ಇದ್ದಿದ್ದರಿಂದ ನಾನು ಒಬ್ಬಳೇ ಆಡಿಶನ್ ಗೆ ಹೋದೆ" ಎಂದು ತನ್ನಗಾದ ಅನುಭವವನ್ನು ಹಂಚಿಕೊಂಡಿದ್ದರು ನಟಿ ಸುಶ್ಮಿತಾ.

ನಂತರ "ಆ ಲೋಕೇಶನ್ಗೆ ಹೋದಾಗ ಅದು ಯಾಕೋ ಲಾಡ್ಜ್ಗೆ ಹೋಗುವುದು ಬೇಡ ಬೇಡ ಎಂದು ನನ್ನ ಮನಸ್ಸು ಹೇಳುತ್ತಿತ್ತು. ಕೆಲ ಮೆಟ್ಟಿಲು ಹತ್ತಿ ಮೂರನೇ ಫ್ಲೋರ್ವರೆಗೂ ಹೋದವಳಿಗೆ, ಮತ್ಯಾಕೋ ಇದು ಸರಿಯಾದ ಜಾಗ ಅಲ್ಲ ಎಂದೆನಿಸಿ ವಾಪಸ್ ಬಂದ್ಬಿಟ್ಟೆ. ಅಂದು ನಾನು ಮಾಡಿದ್ದ ಒಳ್ಳೆಯ ನಿರ್ಧಾರ ಹಾಗೂ ನನ್ನನ್ನು ತಡೆದ ನನ್ನ ಮನಸ್ಸಾಕ್ಷಿಗೆ ನಾನು ಋಣಿ. ಸಿನಿ ಜಗತ್ತಿನ ಮುಖವನ್ನು ನಾವೆಲ್ಲರೂ ಅರಿತಿರಬೇಕು. ಆಡಿಶನ್ ಆಗಲಿ, ಏನೇ ಆಗಲಿ ಸದಾ ನಮ್ಮೊಂದಿಗೆ ಒಬ್ಬರನ್ನು ಜೊತೆಗಿರಿಸಿಕೊಳ್ಳುವುದು ಒಳ್ಳೆಯದು" ಎಂದು ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ ಕಲಾವಿದೆ ಸುಶ್ಮಿತಾ ಜಗ್ಗಪ್ಪ.
ಇತ್ತೀಚೆಗಷ್ಟೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುವರ್ಣ ಸೂಪರ್ ಸ್ಟಾರ್ ನಲ್ಲಿ ಭಾಗವಹಿಸಿದ್ದರು ಸುಶ್ಮಿತಾ. ಆ ಸಮಯದಲ್ಲಿ ತಮಗಾದ ಕಹಿ ಅನುಭವವನ್ನು ಮುಕ್ತವಾಗಿ ಸುಶ್ಮಿತಾ ಕಿರುತೆರೆ ವೀಕ್ಷಕರ ಎದುರು ಹಂಚಿಕೊಂಡಿದ್ದಾರೆ. ಆ ಮೂಲಕ ಚಿತ್ರಗಳಲ್ಲಿ ನಟಿಸಬೇಕು ಎಂದು ಕನಸು ಕಾಣುವ ಹಲವಾರು ಹೆಣ್ಣು ಮಕ್ಕಳಿಗೆ ಈ ಉದಾಹರಣೆ ಎಚ್ಚರಿಕೆ ಆಗಲಿ ಎಂಬ ಸಂದೇಶವನ್ನು ಸಾರಿದ್ದಾರೆ.


Click it and Unblock the Notifications











