Tejaswini Prakash: ಪಾರ್ವತಿಯಾಗಿ ಮೋಡಿ ಮಾಡುತ್ತಿರುವ ಕಿರುತೆರೆಯ ಫೇಮಸ್ ಖಳನಾಯಕಿ
ಒಂದೊಮ್ಮೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡರೆ ಸಾಕು, ಮೇಲಿಂದ ಮೇಲೆ ಅವಕಾಶಗಳು ಬರುತ್ತಲೇ ಇರುತ್ತವೆ. ಸಿಕ್ಕ ಮೊದಲ ಅವಕಾಶವನ್ನೇ ಚೆನ್ನಾಗಿ ಬಳಸಿಕೊಂಡರೆ ಯಶಸ್ವಿಯಾಗುವುದು ಸುಳ್ಳಲ್ಲ! ಇದು ನಮ್ಮ ಸ್ಯಾಂಡಲ್ ವುಡ್ ನಟ-ನಟಿಯರಿಗಿರುವ ಒಂದು ಬಹುದೊಡ್ಡ ಅದೃಷ್ಟ ಎಂದರೆ ತಪ್ಪಾಗಲಾರದೆನೋ. ಬಣ್ಣದ ಜಗತ್ತಿನಲ್ಲಿ ಮಿಂಚಬೇಕೆಂಬುದು ಹಲವಾರು ಜನರ ಕನಸಾಗಿರುತ್ತದೆ.
ಆ ಕನಸು ನನಸಾಗಲು ಎಂತದ್ದೇ ಶ್ರಮಪಡಲು ಅವರು ಸಿದ್ಧರಿರುತ್ತಾರೆ. ನಟನೆಯಲ್ಲಿ ಯಶಸ್ವಿಯಾಗಲು ದೊಡ್ಡ ದೊಡ್ಡ ಪಾತ್ರಗಳೇ ಮಾಡಬೇಕೆಂದೇನಿಲ್ಲ. ಚಿಕ್ಕ ಚಿಕ್ಕ ಪಾತ್ರಗಳ ಮೂಲಕವೂ ಜನರ ಮನ ಗೆದ್ದಿರುವ ಎಷ್ಟೋ ಜ್ವಲಂತ ಸಾಕ್ಷಿಗಳು ಇಂದು ನಮ್ಮ ಎದುರಿಗಿದೆ. ಬೆಳ್ಳಿತೆರೆ ಮೂಲಕ ನಟನೆಗೆ ಕಾಲಿಟ್ಟು ನಂತರ ಕಿರುತೆರೆಯಲ್ಲಿ ತಮ್ಮ ಚಾಪು ಮೂಡಿಸಿರುವ ಹಲವಾರು ನಟ ನಟಿಯರ ಪೈಕಿ ನಟಿ ತೇಜಸ್ವಿನಿ ಪ್ರಕಾಶ್ ಕೂಡ ಒಬ್ಬರು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಕ್ತಿ ಪ್ರಧಾನ ಧಾರಾವಾಹಿ 'ಶ್ರೀ ಉಧೋ ಉಧೋ ರೇಣುಕಾ ಯಲ್ಲವ್ವ'ದಲ್ಲಿ ಪಾರ್ವತಿಯಾಗಿ ನಟಿಸುತ್ತಿರುವ ತೇಜಸ್ವಿನಿ ಪ್ರಕಾಶ್ಗೆ ಇದು ಎರಡನೇ ಭಕ್ತಿ ಪ್ರಧಾನ ಧಾರಾವಾಹಿ. ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಯಲ್ಲಿ ಕಾಳಿಯಾಗಿ ಅಭಿನಯಿಸಿದ್ದ ತೇಜಸ್ವಿನಿ ಪ್ರಕಾಶ್ ಖಳನಾಯಕಿಯಾಗಿ ಕಿರುತೆರೆ ಜಗತ್ತಿನಲ್ಲಿ ಮಿಂಚಿದ್ದರು.

ಸಿನಿಮಾದಿಂದ ನಟನೆ ಆರಂಭ
ಕಲರ್ಸ್ ಕನ್ನಡ ವಾಹಿನಿಯಲ್ಲಿ ವಿನೋದ್ ಧೋಂಡಾಳೆ ನಿರ್ದೇಶನದ 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಖಳನಾಯಕಿ ಲಾವಣ್ಯ ಆಗಿ ಅಭಿನಯಿಸಿದ್ದ ತೇಜಸ್ವಿನಿ ಪ್ರಕಾಶ್ ಕಿರುತೆರೆ ಪಯಣ ಶುರುವಾಗಿದ್ದು ನಿಹಾರಿಕಾಳಾಗಿ. ಹೌದು, ವಿನು ಬಳಂಜ ನಿರ್ದೇಶನದ 'ನಿಹಾರಿಕಾ' ಧಾರಾವಾಹಿಯಲ್ಲಿ ನಾಯಕಿ ನಿಹಾರಿಕಾ ಆಗಿ ನಟಿಸಿ ಸೈ ಎನಿಸಿಕೊಂಡಿದ್ದ ತೇಜಸ್ವಿನಿ ಪ್ರಕಾಶ್ ಬೆಳ್ಳಿತೆರೆಯಿಂದ ಬಣ್ಣದ ಯಾನ ಶುರು ಮಾಡಿದ್ದರು.

ದರ್ಶನ್ ತಂಗಿ ಪಾತ್ರದಲ್ಲಿ ನಟಿಸಿದ್ದರು
'ಮಸಣದ ಮಕ್ಕಳು' ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಬಂದಿರುವ ತೇಜಸ್ವಿನಿ ಪ್ರಕಾಶ್ ಮೊದಲ ಸಿನಿಮಾದಲ್ಲಿಯೇ ಉತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಚೆಲುವೆ. ನಂತರ ಸ್ಯಾಂಡಲ್ ವುಡ್ ನ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಅಭಿನಯದ 'ಗಜ' ಸಿನಿಮಾದಲ್ಲಿ ದರ್ಶನ್ ಅವರ ತಂಗಿಯ ಪಾತ್ರದಲ್ಲಿ ತೇಜಸ್ವಿನಿ ಕಾಣಿಸಿಕೊಂಡ ತೇಜಸ್ವಿನಿ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ.

ಸೂಪರ್ ಹಿಟ್ ಸಿನಿಮಾಗಳಲ್ಲಿ ತೇಜಸ್ವಿನಿ ನಟನೆ
'ಈ ಪ್ರೀತಿ ಏಕೆ ಭೂಮಿ ಮೇಲಿದೆ', 'ಮಾತಾಡ್ ಮಾತಾಡ್ ಮಲ್ಲಿಗೆ', 'ಗೂಳಿ ಹಟ್ಟಿ', 'ಸವಿ ಸವಿ ನೆನಪು', 'ಬಂಧು ಬಳಗ','ಅರಮನೆ', 'ಜೊತೆಯಾಗಿ ಹಿತವಾಗಿ', 'ತರಂಗಿಣಿ', 'ಪ್ರೀತಿ ನೀ ಹೀಂಗ್ಯಾಕೆ', 'ಕಿಲಾಡಿ ಕೃಷ್ಣ', 'ನಂದಗೋಕುಲ','ಕಲ್ಯಾಣ ಮಸ್ತು', 'ನಿತ್ಯ ಜೊತೆ ಸತ್ಯ', 'ಡಯಾನಾ ಹೌಸ್' ಹೀಗೆ ಹಲವು ಸಿನಿಮಾಗಳಲ್ಲಿ ತಮ್ಮ ನಟನೆಯ ಚಾಪನ್ನು ಪ್ರದರ್ಶಿಸಿದ್ದಾರೆ.

ಬಿಗ್ಬಾಸ್ ಮನೆಯಲ್ಲೂ ಮೋಡಿ
ಅಷ್ಟೇ ಅಲ್ಲದೆ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿಯಾಗಿ ತಮ್ಮ ಗುಣ ಸ್ವಭಾವ ಹಾಗೂ ಸಾಮರ್ಥ್ಯದಿಂದಲೇ ಜನಮನ ಸೆಳೆದರು. ಇಂಥ ನಟಿಗೆ ಕನ್ನಡವಷ್ಟೇ ಅಲ್ಲದೆ ಪರಭಾಷೆಗಳಿಂದಲೂ ಅವಕಾಶ ದೊರಕಿರುವುದು ಸಂತೋಷದ ವಿಚಾರ. ಹೌದು! ತೆಲುಗಿನ 'ಕಣ್ಣಲೋ ನೀ ರೂಪಮಯೆ' ಹಾಗೂ 'ಪ್ರತಿಕ್ಷಣಮ್' ಎಂಬ ಎರಡು ಚಿತ್ರಗಳ ಮೂಲಕ ತೆಲುಗಿನ ಅಭಿಮಾನಿಗಳ ಮನಸ್ಸನ್ನು ಈ ಚೆಲುವೆ ಗೆದ್ದಿದ್ದಾರೆ.


Click it and Unblock the Notifications