ಕಾವ್ಯಾ ಶಾಸ್ತ್ರಿ ತೊರೆದ 'ರಾಧಿಕಾ' ಪಾತ್ರಕ್ಕೆ ತೇಜಸ್ವಿನಿ ಶೇಖರ್ ಎಂಟ್ರಿ: ಯಾರೀ ನಟಿ?
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಧಿಕಾ' ಧಾರಾವಾಹಿಯಲ್ಲಿ ನಾಯಕಿ ರಾಧಿಕಾ ಆಗಿ ಅಭಿನಯಿಸುತ್ತಿದ್ದ ಕಾವ್ಯಾ ಶಾಸ್ತ್ರಿ ತಮ್ಮ ಪಾತ್ರಕ್ಕೆ ವಿದಾಯ ಹೇಳಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಈ ಸುದ್ದಿ ಸೀರಿಯಲ್ ಪ್ರಿಯರಿಗೆ ಶಾಕ್ ಕೊಟ್ಟಿತ್ತು.
ಇದೀಗ ಆ ಜಾಗಕ್ಕೆ ಮತ್ತೋರ್ವ ನಟಿಯ ಆಗಮನವಾಗಿದೆ. ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪೌರಾಣಿಕ ಧಾರಾವಾಹಿ 'ಉಧೋ ಉಧೋ ಶ್ರೀ ರೇಣುಕಾ ಯಲ್ಲವ್ವ'ದಲ್ಲಿ ರಾಣಿ ಇಂದುಮತಿಯಾಗಿ ಅಭಿನಯಿಸುತ್ತಿರುವ ತೇಜಸ್ವಿನಿ ಶೇಖರ್ ಇನ್ನು ಮುಂದೆ ರಾಧಿಕಾಳಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಲಿದ್ದಾರೆ.

ಆಕಸ್ಮಿಕವಾಗಿ ನಟನೆಗೆ ಪಾದಾರ್ಪಣೆ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೌಭಾಗ್ಯವತಿ' ಧಾರಾವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ತೇಜಸ್ವಿನಿ ಎಂದಿಗೂ ನಟಿಯಾಗಬೇಕು ಎಂದು ಬಯಸಿದವರಲ್ಲ. ಬದಲಿಗೆ ಅಚಾನಕ್ ಆಗಿ ದೊರೆತ ಅವಕಾಶ ಆಕೆಯನ್ನು ನಟಿಯಾಗಿಸಿದ್ದು ಮಾತ್ರವಲ್ಲದೇ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಮಿಂಚುತ್ತಿದ್ದಾರೆ.
ಸಾಲು ಸಾಲು ಧಾರಾವಾಹಿಗಳಲ್ಲಿ ನಟನೆ
'ಸೌಭಾಗ್ಯವತಿ' ಧಾರಾವಾಹಿಯ ನಂತರ 'ಮಧುಬಾಲಾ', 'ಮಹಾನದಿ' ಧಾರಾವಾಹಿಗಳಲ್ಲಿ ನಟಿಸಿದ್ದ ತೇಜಸ್ವಿನಿ ಶೇಖರ್ ವಿಲನ್ ಆಗಿಯೂ ಕಿರುತೆರೆಯಲ್ಲಿ ಗುರುತಿಸಿಕೊಂಡಾಕೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನೀಲಿ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಇವರು ನಟಿಸಿ ಸೈ ಎನಿಸಿಕೊಂಡಿದ್ದಾರೆ
ಭಕ್ತಿಪ್ರಧಾನ ಧಾರಾವಾಹಿಯಲ್ಲೂ ನಟನೆ
ಆ ಬಳಿಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸಂಘರ್ಷ' ಧಾರಾವಾಹಿಯಲ್ಲಿ ಜಿಲ್ಲಾಧಿಕಾರಿ ಇಂದಿರಾ ಪಾತ್ರಕ್ಕೆ ಜೀವ ತುಂಬಿದ್ದರು. ತೇಜಸ್ವಿನಿ ಸದ್ಯ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಕ್ತಿ ಪ್ರಧಾನ ಧಾರಾವಾಹಿ 'ಶ್ರೀ ಉಧೋ ಉಧೋ ರೇಣುಕಾ ಯಲ್ಲವ್ವ' ಧಾರಾವಾಹಿಯಲ್ಲಿ ರಾಣಿ ಇಂದುಮತಿಯಾಗಿ ಅಭಿನಯಿಸುತ್ತಿದ್ದಾರೆ.

ರಾಧಿಕಾ ಪಾತ್ರಕ್ಕೆ ಎಂಟ್ರಿ
ಸದ್ಯ 'ಉಧೊ ಉಧೋ ಶ್ರೀ ರೇಷುಕಾ ಯಲ್ಲವ್ವ'ದ ಇಂದುಮತಿಯಾಗಿ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ತೇಜಸ್ಬಿನಿ ಇನ್ನು ಮುಂದೆ ರಾಧಿಕಾ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸಲು ತಯಾರಾಗಿದ್ದಾರೆ. ಇದರ ಜೊತೆಗೆ ಈಗಾಗಲೇ ತೇಜಸ್ವಿನಿ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದು 'ಲಾಂಗ್ ಡ್ರೈವ್' ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications











