ಉಮಾಶ್ರೀ ನಗುನಗುತ್ತಾ ತೆರೆದಿಟ್ಟ ತನ್ನ ಕಣ್ಣೀರ ಕಥೆ
ಈ ಭಾನುವಾರ 'ಸಖತ್ ಸಂಡೇ ವಿತ್ ಸುದೀಪ್' ಕಾರ್ಯಕ್ರಮ ಸಖತ್ತಾಗಿಯೇ ಇತ್ತು. ಏಕೆಂದರೆ ಸುದೀಪ್ ಜೊತೆ ವೇದಿಕೆ ಹಂಚಿಕೊಂಡಿದ್ದು ಬೇರಾರು ಅಲ್ಲ ಆಡು ಮುಟ್ಟದ ಸೊಪ್ಪಿಲ್ಲ ಅವರು ಮಾಡದ ಪಾತ್ರವೇ ಇಲ್ಲ ಎಂದು ಕರೆಸಿಕೊಂಡಿರುವ ಅಭಿನೇತ್ರಿ ಉಮಾಶ್ರೀ.
ಅವರು ತಮ್ಮ ಹಳೆಯ ಲವ್ ಸ್ಟೋರಿ, ಚಿತ್ರರಂಗದಲ್ಲಿ ಇಟ್ಟ ಹೆಜ್ಜೆಗಳು, ತಮ್ಮ ಗಂಡ ಮಕ್ಕಳು, ಎರಡನೇ ಹೆಂಡತಿ ಮಕ್ಕಳು ಹೀಗೆ ಸಾಕಷ್ಟು ರಸವತ್ತಾದ ವಿಚಾರಗಳನ್ನು ಹಂಚಿಕೊಂಡರು. ಉಮಾಶ್ರೀ ಅವರ ಹಲವಾರು ಮುಖಗಳನ್ನು ತೆರೆದಿಡುವಲ್ಲಿ ಸುದೀಪ್ ಸಹ ಯಶಸ್ವಿಯಾದರು.
ಸ್ಯಾಂಡಲ್ ವುಡ್ ಸಿನಿಮಾ ಇಂಡಸ್ಟ್ರಿಯ ಅತ್ಯಂತ ಕ್ರಿಯಾಶೀಲ ನಟಿ ಪುಟ್ಟ ಮಲ್ಲಿ ಉಮಾಶ್ರೀ ಅವರು ವೇದಿಕೆ ಬಂದಾಗ 'ಪುಟ್ನಂಜ' ಚಿತ್ರದ ಪುಟ್ಟ ಮಲ್ಲಿ ಪುಟ್ಟ ಮಲ್ಲಿ ನೋಡು ನೀ ಇಲ್ಲಿ ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ...ಹಾಡಿನ ಮೂಲಕ ಅವರು ವೇದಿಕೆಗೆ ಆಗಮಿಸಿದರು.
ವೇದಿಕೆಗೆ ಬಂದವರೇ ಕಿರುತೆರೆ ವೀಕ್ಷಕರಿ ಫ್ಲೈಯಿಂಗ್ ಉಮ್ಮಾ ಕೊಟ್ಟುಬಿಟ್ಟರು. ಉಮಾಶ್ರೀ ಅವರ ಉಮ್ಮಾಗೆ ಬಹಳ ಡಿಮ್ಯಾಂಡ್ ಇದೆ ಎಂದು ಸುದೀಪ್ ಅಂದಾಗ ಮುಂದೆ ಬಹಳ ಇತ್ತು ಎಂದರು ಈಗಿಲ್ಲ ಎಂದರು ಉಮಾಶ್ರೀ.
ಒಂದು ವೇಳೆ ನಾನು ಬಿಗ್ ಬಾಸ್ ಸ್ಪರ್ಧಿಯಾಗಿದ್ದರೆ ಖಂಡಿತ ವಿನ್ ಆಗುತ್ತಿದ್ದೆ ಎಂದರು. ಬಳಿಕ ಕಾಶಿನಾಥ್ ಜೊತೆಗಿನ ತಮ್ಮ 'ಅನುಭವ' ಚಿತ್ರದ ವಿಚಾರ ಬಂದಾಗ ಅವರು ಯಾಕೋ ಸ್ವಲ್ಪ ಕಸಿವಿಸಿ ಆದಂತೆ ಕಂಡರೂ ಬಳಿಕ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಪಡ್ಡೆಗಳ ನಿದ್ದೆಗೆಡಿಸಿದ ಪದ್ದಿ ಪಾತ್ರ
ಹೋದ ಕಡೆಯಲ್ಲಾ ಪಡ್ಡೆ ಹುಡುಗರ ಮನಸ್ಸಿನ ಮೇಲೆ ಪದ್ದಿ ಪಾತ್ರ ತುಂಬಾ ಪರಿಣಾಮ ಬೀರಿತು. ಎಲ್ಲಾ ಪಡ್ಡೆ ಹುಡುಗಳು ಮನಸ್ಸಿನಲ್ಲೇ ಮಂಡಕ್ಕಿ ತಿಂದರು. ಹೆಂಗೆ ಅಂದ್ರೆ ಹಂಗೆ ಎಂದು ಕಣ್ಣು ಹೊಡೆದರು.

ಉಮಕ್ಕಾ ಎಂದು ಸಂಭೋಧಿಸಿದ ಸುದೀಪ್
ಉಮಕ್ಕಾ ಎಂದು ಸಂಭೋದಿಸಿದ ಸುದೀಪ್ ಅವರು ಬಹಳ ಕಚಗುಳಿ ಇಡುವಂತಹ ಪ್ರಶ್ನೆಗಳನ್ನು ಉಮಾಶ್ರೀ ಕಡೆಗೆ ಎಸೆದರು. ಚಿಕ್ಕ ವಯಸ್ಸಿನಲ್ಲಿ ಸಿಕ್ಕಾಪಟ್ಟೆ ತುಂಟಿ ಹಾಗೂ ಕಳ್ಳಿ ಎಂದೂ ಉಮಾಶ್ರೀ ಹೇಳಿಕೊಂಡರು. ದೇವರ ಹುಂಡಿ ಕದ್ದಿದ್ದೆ. ಆದರೆ ದೇವರು ಕ್ಷಮಿಸಿದ ಆದರೆ ಅಮ್ಮ ಕ್ಷಮಿಸಲಿಲ್ಲ.

ಹುಂಡಿ ಕದ್ದ ಕಥೆ ಹೇಳಿದ ಉಮಾಶ್ರೀ
ಇವಳೇ ಕದ್ದಿದ್ದಾಳೆ ಎಂದು ನಮ್ಮಮ್ಮನಿಗೆ ಡೌಟು. ನಿಜ ಹೇಳಬೇಕು ತಗೊಂಡಿದ್ದೀಯಾ ಇಲ್ಲಾ ಅಂದ್ರೆ ನೋಡೂ ಎಂದು ಹೆದರಿಸಿದರು. ಒಂದು ಕಡೆ ಮಚ್ಚು ಇನ್ನೊಂದು ಕಡೆ ಮಣ ಇಟ್ಟುಕೊಂಡು ಎದುರುಗಡೆ ಕೂತುಕೊಂಡು ನಿಜ ಹೇಳಬೇಕು ಎಂದು ಪದೇ ಪದೇ ಕೇಳಿದರು. ಅವರು ಕಣ್ಣು ಕಿಸಿದು ಕೇಳುತ್ತಿದ್ದರೆ ಭಯ ಆಗುತ್ತಿತ್ತು. ಒಪ್ಪಿಕೊಂಡೆ ಎಂದು ತಾವು ಚಿಕ್ಕಂದಿನಲ್ಲಿ ಮಾಡಿದ ತಪ್ಪನ್ನು ಉಮಾಶ್ರೀ ಹೇಳಿದರು.

ಇಷ್ಟಕ್ಕೂ ಹುಂಡಿ ಕದ್ದಿದ್ದು ಯಾಕೆ?
ಕದ್ದಿದ್ದು ತಿನ್ನಕ್ಕೆ...ತಿನ್ನುವ ಚಟ ನನಗೆ. ಅಂಗಡಿಯಲ್ಲಿ ಆಗ ಕಮ್ಮರಕಟ್ಟು, ಪಾಕಂಪಪ್ಪು, ಕಡ್ಲೆ ಬೀಜ, ಕೊಬ್ಬರಿ ತಿನ್ನಲು ಕದ್ದಿದ್ದೆ ಎಂದು ಹೇಳಿದರು. ಕೊಬ್ಬರಿ ಆಗೆಲ್ಲಾ ಒಂದು ಎರಡು ಪೈಸೆಗೆಲ್ಲಾ ಇವು ಸಿಗುತ್ತಿದ್ದವು ಎಂದು ತಮ್ಮ ಕಳೆದು ಹೋದ ದಿನಗಳನ್ನು ನೆಪಸಿಕೊಂಡರು.

ಅಮ್ಮನಾಗಿ ನಾನೂ ಸ್ಟ್ರಿಕ್ಟ್ ಬಳಿಕ ಠುಸ್
ಮಕ್ಕಳಿಗೆ ಮದುವೆಯಾಗುವವರೆಗೂ ನಾನು ತುಂಬಾ ಸ್ಟ್ರಿಕ್ಟ್ ಆಗಿದ್ದೆ. ಅವರಿಗೆ ಮದುವೆಯಾದ ಮೇಲೆ ಠುಸ್. ಏಕೆಂದರೆ ನಡೆಯಬೇಕಲ್ಲಾ ಎಂದು ಹೇಳಿದರು. ಚಿತ್ರರಂಗದಲ್ಲಿ ತಮಗೆ ಇಷ್ಟವಾದ ಹೀರೋ ಯಾರು ಎಂದು ಕೇಳಿದ್ದಕ್ಕೆ ಅಯ್ಯೋ ನನಗೆ ಗಂಡಸರ ಮೇಲೆ ಇಷ್ಟವಿರಲಿಲ್ಲ ಎಂದು ಎಲ್ಲರೂ ಹುಬ್ಬೇರುವಂತೆ ಮಾಡಿದರು.

ಎನ್ ಎಸ್ ರಾವ್ ಬಹಳ ಒಳ್ಳೆಯ ಮನುಷ್ಯ
ಬಳಿಕ ಸುದೀಪ್, ಉಮಾಶ್ರೀ ಇಬ್ಬರೂ ನಕ್ಕು ನನಗೆ ಮಹಿಳಾ ಕಲಾವಿದರೆಂದರೆ ತುಂಬಾ ಇಷ್ಟ ಎಂದರು. ಕಲ್ಪನಾ ತನ್ನ ಮೆಚ್ಚಿನ ನಟಿ ಎಂದು ಹೇಳಿದರು. ಮೀರಾ ಕುಮಾರಿ ಇಷ್ಟ ಎಂದರು. ಹಾಗೆಯೇ ಹೀರೋಗಳಲ್ಲಿ ರಾಜ್ ಕುಮಾರ್ ಎಂದರು. ಒಂದು ಕಾಲದದಲ್ಲಿ ಹಿಟ್ ಫೇರ್ ಎನ್ನಿಸಿಕೊಂಡಿದ್ದ ಎನ್ ಎಸ್ ರಾವ್ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿ ಬಹಳ ಒಳ್ಳೆ ಮನುಷ್ಯ ಎಂದರು. ಅವರಿಬ್ಬರ ಹಿಟ್ ಫೇರನ್ನು ಸುದೀಪ್ ನೆನಪಿಸಿದರು.

ಮನೆಗೆ ಬರುತ್ತಿತ್ತು ಪ್ರೇಮ ಪತ್ರಗಳ ರಾಶಿ
ನಾನು ಆಗ ಮಾಡಿದಂತಹ ಪಾತ್ರಗಳು ಹುಡುಗರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತಿದ್ದವು. ರಾತ್ರಿ ನಿದ್ದೆ ಬರುತ್ತಿರಲಿಲ್ಲವಂತೆ. ಆಗ ನನಗೆ ಬರುತ್ತಿದ್ದ ಪ್ರೇಮ ಪತ್ರಗಳನ್ನು ಓದುತ್ತಿದ್ದರೆ ಅವರು ನನ್ನನ್ನು ಪತ್ನಿ , ಗೆಳತಿ, ಪ್ರೇಯಸಿ ಎಂದು ಭಾಸಿಸುತ್ತಿದ್ದರು. ಅವನ್ನೆಲ್ಲಾ ಹರಿದು ಬಿಸಾಕುತ್ತಿದ್ದೆ. ಎಲ್ಲಿ ನನ್ನ ಮಕ್ಕಳು ನೋಡುತ್ತಾರೋ ಎಂಬ ಭಯ.

ಪಡ್ಡೆಗಳ ಪಾಲಿಗೆ ನಾನೊಬ್ಬ ಭೋಗದ ಹೆಣ್ಣು ಮಗಳಾಗಿದ್ದೆ
ಒಟ್ಟಾರೆಯಾಗಿ ಅವರ ಮನಸ್ಸಿನಲ್ಲಿ ನಾನೊಬ್ಬ ಭೋಗದ ಹೆಣ್ಣು ಮಗಳಾಗಿದ್ದೆ. ಯಾರಿಗೂ ನನಗೆ ಡೈರೆಕ್ಟ್ ಆಗಿ ಪ್ರೊಪೋಸ್ ಮಾಡುವ ತಾಕತ್ತು ಇರಲಿಲ್ಲ.
ಈ ವಯಸ್ಸಿನಲ್ಲೂ ಆ ವಯಸ್ಸಿನಲ್ಲೂ ನನ್ನ ಮುಂದೆ ಯಾರೂ ಬರಲಿಲ್ಲ ಎಂದು ಹಾಸ್ಯ ಚಟಾಕಿ ಸಿಡಿಸಿದರು. ನನ್ನ ನೋಡಿದರೆ ಎಲ್ಲಾ ಭಯ ಪಡುತ್ತಿದ್ದರು. ವನಕ್ಕೂ ಕರೆಯಲಿಲ್ಲ ಎಲ್ಲಿಗೂ ಕರೆಯಲ್ಲಿಲ್ಲ ಎಂದರು.

ಲವ್ವರ್ ಜೊತೆ ಎರಡು ಕನಸು ನೋಡಿದ್ದು
ಬಳಿಕ 'ಎರಡು ಕನಸು' ಚಿತ್ರವನ್ನು ನೆನಪಿಸಿಕೊಂಡರು. ನಾನು ಆಗ ಒಬ್ಬರನ್ನು ಲವ್ ಮಾಡುತ್ತಿದ್ದೆ ಎಂದರು. ಆಮೇಲೆ ಮದುವೆಯೂ ಆದೆವು ಎಂದರು.
ಒಂದ್ಸಲ ಎರಡು ಕನಸಿಗೆ ಇನ್ನೊಂದು ಸಲ 'ಮಯೂರ'ಗೆ ಹೋಗಿದ್ದಾಗಿ ಹೇಳಿದರು. ಮಹಾರಾಣಿ ಕಾಲೇಜಿನಲ್ಲಿ ಫಸ್ಟ್ ಪಿಯುಸಿ ಓದುತ್ತಿದ್ದೆ. ಕಾಲೇಜಿಗೆ ಬಂಕ್ ಹೊಡೆದು ಮೂವೀ ಹೋಗುತ್ತಿದ್ದೆವು ಎಂದು ತಮ್ಮ ಪ್ರೇಮ ಪುರಾಣ ಬಿಚ್ಚಿಟ್ಟರು.

ಹದಿನಾರುವರೆ ವರ್ಷಕ್ಕೆ ಲವ್ವು
ಹದಿನಾರುವರೆ ವರ್ಷಕ್ಕೆ ಲವ್ವು ಮಾಡಕ್ಕೆ ಶುರು ಮಾಡಿದ್ದೆ. ನನ್ನ ಗೆಳತಿಯ ಸಹವಾಸ ದೋಷದಿಂದ ಈ ರೀತಿ ಆಯಿತು ಎಂದರು. ನಾನು ಅಪ್ಪಿತಪ್ಪಿ ಫಸ್ಟ್ ಶೋ ಸೆಕೆಂಡ್ ಶೋಗೆ ಹೋಗುತ್ತಿರಲಿಲ್ಲ. ಏನಿದ್ದರೂ ಮಾರ್ನಿಂಗ್ ಶೋ ಎಂದರು. ತಮ್ಮ ಲವ್ ಸ್ಟೋರಿಯನ್ನು ಹೇಳಿದರು. ಅತ್ತೆಗೆ ಹೇಗೆ ಕಾಳು ಹಾಕಿದೆ ಎಂಬುದನ್ನು ಹೇಳಿದರು.

ಲವ್ವರೇ ಕಡೆಗ ಬಾಳ ಸಂಗಾತಿ
ನನ್ನ ಲವ್ವರು ಕಡೆಗೆ ನಮ್ಮ ಯಜಮಾನರು ಆದರು ಎಂದರು. ತಂಗಾಳಿಯಲ್ಲಿ ನಾನು ತೇಲಿ ಬಂದೆ ಹಾಡನ್ನು ನೆನಪಿಸಿಕೊಂಡರು. ಸುದೀಪ್ ಜೊತೆ ಕುಂಟುತ್ತಾ ಹೆಜ್ಜೆಯನ್ನೂ ಹಾಕಿ ರಂಜಿಸಿದರು. ಪುಟ್ನಂಜ ಚಿತ್ರದ ಪಾತ್ರವನ್ನು ನೆನಪಿಸಿಕೊಂಡರು. ತನ್ನ ಜೀವನದಲ್ಲಿ ಬಹಳ ಖುಷಿ ಕೊಟ್ಟ ಪಾತ್ರ ಎಂದರು.

ಎರಡನೇ ಹೆಂಡತಿ ಮಕ್ಕಳನ್ನು ಪೋಷಿಸಿದ್ದೇನೆ
ತನ್ನ ಗಂಡನ ಎರಡನೇ ಹೆಂಡತಿ ಮಕ್ಕಳನ್ನು ತಾನೇ ನೋಡಿಕೊಂಡಿದ್ದೇನೆ ಎಂದರು. ಆ ಮಕ್ಕಳು ಅಷ್ಟೇ ನನ್ನ ದೊಡ್ಡಮ್ಮ ಎಂದು ಬಹಳ ಹಚ್ಚಿಕೊಂಡಿವೆ ಎಂದರು. ಮಕ್ಕಳು ಮಕ್ಕಳೇ ಅಲ್ಲವೇ. ನಾವು ಮಾಡಿದ ತಪ್ಪಿಗೆ ಅವರಿಗೇಕೆ ಶಿಕ್ಷೆ ನೀಡಬೇಕು ಎಂದು ಹೇಳುವಾಗ ಅವರ ಕಣ್ಣಲ್ಲಿ ತಾಯಿಯ ಪ್ರೇಮ ಉಕ್ಕುತ್ತಿತ್ತು.

ಅರೆ ಹುಚ್ಚಿ ಪಾತ್ರ ಮಾಡಲು ನನಗಿಷ್ಟ
ಅರೆ ಹುಚ್ಚಿ ಪಾತ್ರ ಮಾಡಲು ನನಗಿಷ್ಟ. ಉರ್ದು ಮಿಶ್ರಿತ ಕನ್ನಡ ಮಾತನಾಡುವ ಅಲ್ಪ ಸಂಖ್ಯಾತ ಮಹಿಳೆ ಪಾತ್ರ ಮಾಡಲು ಇಷ್ಟ ಎಂದರು. ಬಿಗ್ ಬಾಸ್ ಕಾರ್ಯಕ್ರಮದಿಂದ ಸ್ಪರ್ಧಿಗಳು ಮಾನಸಿಕವಾಗಿ ಎಷ್ಟು ಗಟ್ಟಿಯಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. ಇದೊಂದು ವಿಭಿನ್ನ ಕಾರ್ಯಕ್ರಮ ಎಂದರು. ಕಡೆಗೆ ಉಮಕ್ಕನ ಜೊತೆ ಪುಟ್ಟ ಮಲ್ಲಿ ಪುಟ್ಟ ಮಲ್ಲಿ ಹಾಡಿಗೆ ಸುದೀಪ್ ಹೆಜ್ಜೆ ಹಾಕಿದರು.


Click it and Unblock the Notifications











