ತನ್ನ ಕನಸಿನಂತೆ ನಡೀತು ವೈಷ್ಣವಿ ಗೌಡ ಎಂಗೇಜ್ಮೆಂಟ್; ಇಲ್ಲಿದೆ ಫೋಟೊಗಳು
ಕಿರುತೆರೆ ನಟಿ ವೈಷ್ಣವಿ ಗೌಡ ಮದುವೆ ನಿಶ್ಚಯವಾಗಿದೆ. ಸದ್ದಿಲ್ಲದೇ ಎಂಗೇಜ್ಮೆಂಟ್ ಕೂಡ ನಡೆದಿದೆ. ಅದಕ್ಕೆ ಸಂಬಂಧಿಸಿ ಫೋಟೊಗಳು ವೈರಲ್ ಆಗುತ್ತಿದೆ. ನಟಿ ಅಮೂಲ್ಯ ಸೇರಿ ಆಪ್ತರು, ಸ್ನೇಹಿತರು ಈ ಅದ್ಧೂರಿ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.
ಅನುಕೂಲ್ ಮಿಶ್ರಾ ಎಂಬುವವರ ಜೊತೆ ವೈಷ್ಣವಿ ಗೌಡ ಮದುವೆ ಆಗುತ್ತಿದ್ದಾರೆ. ವೈಷ್ಣವಿ ಕೈ ಹಿಡಿಯಲಿರುವ ಅನುಕೂಲ್ ಏರ್ಫೋರ್ಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಏರ್ಶೋನಲ್ಲಿ ವೈಷ್ಣವಿ ಗೌಡ ಭಾಗಿ ಆಗಿದ್ದರು. ಆಗ ಅಕಾಯ್ ಅವರಿಗೆ ಥ್ಯಾಂಕ್ಸ್ ಹೇಳಿ ಪೋಸ್ಟ್ ಮಾಡಿದ್ದರು. ಅಂದೇ ಕೆಲವರಿಗೆ ಯಾರಪ್ಪಾ ಈತ ಎಂದು ಕುತೂಹಲ ಮೂಡಿತ್ತು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ವೈಷ್ಣವಿ ಗೌಡ ಬಳಿಕ ಬಿಗ್ಬಾಸ್ ಶೋನಲ್ಲಿ ಸ್ಪರ್ಧಿಸಿದ್ದರು. ಬಳಿಕ ಕೊಂಚ ವಿರಾಮ ಪಡೆದಿದ್ದರು. ಆ ಬಳಿಕ ಜೀ ಕನ್ನಡ ವಾಹಿನಿಯ 'ಸೀತಾರಾಮ' ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದರು.
ಸ್ವತಃ ವೈಷ್ಣವಿ ಗೌಡ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಮದುವೆ ನಿಶ್ಚಿತಾರ್ಥದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. "ಅವಳ ಪ್ರಪಂಚವು ಸ್ಕ್ರಿಪ್ಟ್ಗಳು ಮತ್ತು ಸ್ಟೇಜ್ಗಳಾಗಿತ್ತು. ಅವನದು ಆಕಾಶ ಮತ್ತು ಸೇವೆ. ಆದರೆ ವಿಧಿ ಪರಿಪೂರ್ಣ ಪ್ರೇಮಕಥೆಯನ್ನು ಬರೆದಿತು" ಎಂದು ವೈಷ್ಣವಿ ಕ್ಯಾಪ್ಷನ್ ಕೊಟ್ಟಿದ್ದಾರೆ.
ತಾವು ಕೈ ಹಿಡಿಯುವ ವರ ಏರ್ಪೋರ್ಸ್ನಲ್ಲಿ ಕೆಲಸ ಮಾಡುವ ಬಗ್ಗೆ ಪರೋಕ್ಷವಾಗಿ ವೈಷ್ಣವಿ ಗೌಡ ಮಾಹಿತಿ ನೀಡಿದ್ದಾರೆ. ಈ ಹಿಂದೆ 2022ರಲ್ಲಿ ವಿದ್ಯಾಭರಣ್ ಎಂಬುವವರ ಜೊತೆ ವೈಷ್ಣವಿ ಗೌಡ ಮದುವೆ ಮಾತುಕತೆ ನಡೆದಿತ್ತು. ಹೂ ಮುಡಿಸುವ ಶಾಸ್ತ್ರದ ಫೋಟೊಗಳು ವೈರಲ್ ಆಗಿತ್ತು. ಅದನ್ನು ಕೆಲವರು ನಿಶ್ಚಿತಾರ್ಥ ಎಂದೇ ಭಾವಿಸಿದ್ದರು. ಆದರೆ ಕಾರಣಾಂತರಗಳಿಂದ ಆ ಮಾತುಕತೆ ಮುರಿದು ಬಿದ್ದಿತ್ತು.
ವಿದ್ಯಾಭರಣ್ ಸರಿಯಿಲ್ಲ ಎಂದು ಇಬ್ಬರೂ ಹುಡುಗಿಯರು ಮಾತನಾಡಿರುವ ಆಡಿಯೋ ಕ್ಲಿಕ್ ಲೀಕ್ ಆಗಿ ವಿವಾದ ಸೃಷ್ಟಿಸಿತ್ತು. ಬಳಿಕ ಇದಕ್ಕೆ ಸ್ಪಷ್ಟನೆ ಕೊಟ್ಟು ವೈಷ್ಣವಿ ಗೌಡ ವಿವಾದಕ್ಕೆ ತೆರೆ ಎಳೆದಿದ್ದರು. ಅದು ನನ್ನ ತಾಯಿಯಿಂದ ಬಂದ ಸಂಬಂಧ, ಕೆಲ ದಿನಗಳ ಬಳಿಕ ಎಲ್ಲವೂ ಬದಲಾಯಿತು. ನಂತರ ಅದನ್ನು ಮುಂದುವರೆಸಲಿಲ್ಲ" ಎಂದು ವೈಷ್ಣವಿ ಗೌಡ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ವೈಷ್ಣವಿ ಗೌಡ ತಮ್ಮ ಮದುವೆಯ ಬಗ್ಗೆ ಸಾಕಷ್ಟು ಕನಸು ಕಂಡಿದ್ದಾರೆ. ಇದನ್ನು ಕೆಲ ಸಂದರ್ಭಗಳಲ್ಲಿ ಸ್ವತಃ ಹೇಳಿಕೊಂಡಿದ್ದರು. ಇನ್ನು ಅವರ ತಂದೆ ರವಿಕುಮಾರ್ ಕೂಡ ಮಗಳ ಮದುವೆ ಮದುವೆಯನ್ನು ಅದ್ಧೂರಿಯಾಗಿ ನಡೆಸಲು ನಿರ್ಧರಿಸಿದ್ದರು. ಈ ವಿಚಾರವನ್ನು ಒಮ್ಮೆ ಹೇಳಿಕೊಂಡಿದ್ದರು. ಕೊರೊನಾ ಸಮಯದಲ್ಲಿ ಮಗನ ಮದುವೆಯನ್ನು ಗ್ರ್ಯಾಂಡ್ ಆಗಿ ಮಾಡಿದ್ದೆ. ಮುಂದೆ ಮಗಳು ವೈಷ್ಣವಿ ಮದುವೆಯನ್ನು ಅದೇ ರೀತಿ ಮಾಡುತ್ತೇನೆ ಎಂದು ತಂದೆ ತಿಳಿಸಿದ್ದರು.
ಅಂದಹಾಗೆ ವೈಷ್ಣವಿ ಗೌಡ ಎಂಗೇಜ್ಮೆಂಟ್ ಬಗ್ಗೆ ಯಾರಿಗೂ ಸುಳಿವು ಇರಲಿಲ್ಲ. ಸದ್ದಿಲ್ಲದೇ ಅದ್ಧೂರಿ ಕಾರ್ಯಕ್ರಮ ನಡೆದಿದೆ. ಸಂಪ್ರದಾಯ ಪ್ರಕಾರ ಮದುವೆ ನಿಶ್ಚಿತಾರ್ಥ ನಡೆದಿದೆ. ಬಳಿಕ ಸಂಜೆ ಅದ್ಧೂರಿಯಾಗಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ. 'ಸೀತಾರಾಮ' ಧಾರಾವಾಹಿ ಕಲಾವಿದರು ಸೇರಿದಂತೆ ಹಲವರು ಈ ಪಾರ್ಟಿಗೆ ಸಾಕ್ಷಿ ಆಗಿದ್ದಾರೆ. ನಿರೂಪಕಿ ಚೈತ್ರಾ ವಾಸುದೇವನ್ ಕೂಡ ಭಾಗಿ ಆಗಿ ಜೋಡಿಗೆ ಶುಭ ಕೋರಿದ್ದಾರೆ.
ಚೈತ್ರಾ ವಾಸುದೇವನ್ ಹಂಚಿಕೊಂಡ ಫೋಟೊದಿಂದ ವೈಷ್ಣವಿ ಗೌಡ ಮದುವೆ ನಿಶ್ಚಿತಾರ್ಥ ನಡೆದಿರುವ ಸುದ್ದಿ ಬಹಿರಂಗವಾಗಿತ್ತು. ಇದೀಗ ಸ್ವತಃ ವೈಷ್ಣವಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಎಂಗೇಜ್ಮೆಂಟ್ ಪಾರ್ಟಿಯಲ್ಲಿ ವೈಷ್ಣವಿ ಗೌಡ ಕ್ರೀಮ್ ಕಲರ್ ಗೌನ್ ಧರಿಸಿದ್ದಾರೆ. ಇನ್ನು ಅನುಕೂಲ್ ಬ್ಲಾಕ್ ಕಲರ್ ಸೂಟ್ ಧರಿಸಿದ್ದರು. ಇನ್ನು ಎಂಗೇಜ್ಮೆಂಟ್ ಸಮಾರಂಭದಲ್ಲಿ ವೈಷ್ಣವಿ ಲಹೆಂಗಾ ತೊಟ್ಟಿದ್ದರೆ ಅನುಕೂಲ್ ಶೇರ್ವಾಣಿ ಧರಿಸಿ ಮಿಂಚಿದ್ದಾರೆ.


Click it and Unblock the Notifications











