'ಅಗ್ನಿಸಾಕ್ಷಿ'ಯ ಸನ್ನಿಧಿ.. 'ಸೀತಾರಾಮ'ನ ಸೀತೆ ಕಿರಿತೆರೆಗೆ ಬಂದು ದಶಕ: ನಟಿ ವೈಷ್ಣವಿ ಗೌಡ ಯಾವ ಸೀರಿಯಲ್ ಇಷ್ಟ?
ನಟಿ ವೈಷ್ಣವಿ ಗೌಡ ಎನ್ನುವುದಕ್ಕಿಂತ 'ಅಗ್ನಿಸಾಕ್ಷಿ'ಯ ಸನ್ನಿಧಿ ಅಥವಾ 'ಸೀತಾರಾಮ' ಧಾರಾವಾಹಿಯ ಸೀತಾ ಎಂದರೆ ಜನರಿಗೆ ಬೇಗ ಪರಿಚಯವಾಗುತ್ತದೆ. ಈ ನಟಿಯ ನಿಜವಾದ ಹೆಸರು ವೈಷ್ಣವಿ ಗೌಡ. ಈಕೆ 'ಅಗ್ನಿಸಾಕ್ಷಿ' ಧಾರಾವಾಹಿಯ ಸನ್ನಿಧಿ ಎಂದೇ ಕಿರುತೆರೆ ಜಗತ್ತಿನಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಬೆಡಗಿ.
ಧಾರಾವಾಹಿ ಮುಗಿದು ವರ್ಷಗಳು ಕಳೆದರೂ ಸನ್ನಿಧಿ ಎಂದೇ ಜನರೂ ಇವರನ್ನು ಗುರುತಿಸುವುದು ಇವರ ಪಾತ್ರದ ವಿಶೇಷತೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಗ್ನಿಸಾಕ್ಷಿ' ಧಾರಾವಾಹಿ 2013 ರಿಂದ 2020 ರವರೆಗೆ ಬರೋಬ್ಬರಿ ಏಳು ವರ್ಷಗಳ ಕಾಲ ಜನರನ್ನು ರಂಜಿಸಿತು. ಕಲಾವಿದರಾದ ವೈಷ್ಣವಿ ಗೌಡ, ವಿಜಯ್ ಸೂರ್ಯ, ಶೋಭಾ ಶೆಟ್ಟಿ, ಮುಖ್ಯಮಂತ್ರಿ ಚಂದ್ರು, ರಾಜೇಶ್ ಧ್ರುವ ಮುಂತಾದವರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. ಸನ್ನಿಧಿ ಹಾಗೂ ಸಿದ್ದಾರ್ಥ್ ಜೋಡಿ ಇಂದಿಗೂ ಕಿರುತೆರೆ ಪ್ರೇಕ್ಷಕರ ಫೇವರೆಟ್ ಜೋಡಿಗಳಲ್ಲೊಂದು.

ಅದಕ್ಕೂ ಮೊದಲು 'ದೇವಿ' ಎಂಬ ಧಾರಾವಾಹಿಯಲ್ಲಿ ಬಹಳ ಮುದ್ದಾದ ಪಾತ್ರವನ್ನು ಮಾಡಿ ಜನಮನ ಗೆದ್ದಿದ್ದರು. ಹೌದು, ನಟಿ ನಿರ್ದೇಶಕಿ ಶ್ರುತಿ ನಾಯ್ಡು ಅವರ ನಿರ್ದೇಶನದಲ್ಲಿ ಮೂಡಿ ಬಂದ 'ದೇವಿ' ಎಂಬ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವಾದ ದೇವಿ ಆಗಿ ನಟಿಸಿದ ವೈಷ್ಣವಿ ಗೌಡ ತಮ್ಮ ಅಭಿನಯದ ಮೂಲಕ ಜನಮನ ಗೆದ್ದಿದ್ದರು. ಈ ಧಾರಾವಾಹಿಯಲ್ಲಿ ಕಲಾವಿದರಾದ ಇಂದಿರಾ ರಮೇಶ್, ಮೇಘನಾ ಲೋಕೇಶ್, ಪವಿತ್ರ ಲೋಕೇಶ್, ಅನಂತವೇಲು ಮುಂತಾದವರು ನಟಿಸಿದ್ದರು. 2010 ರಿಂದ 2013 ರ ವರೆಗೂ ಈ ಧಾರಾವಾಹಿ ಪ್ರೇಕ್ಷಕರನ್ನು ರಂಜಿಸಿತ್ತು.
ಶೃತಿ ನಾಯ್ಡು ಅವರದ್ದೇ ನಿರ್ದೇಶನದ 'ಪುನರ್ ವಿವಾಹ' ಎಂಬ ಧಾರಾವಾಹಿಯಲ್ಲಿಯೂ ನಟಿ ವೈಷ್ಣವಿ ಗೌಡ 'ರಾಕಿ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಮುಖ ಪಾತ್ರವಾಗದಿದ್ದರೂ ರಾಕಿ ಪಾತ್ರ ಸ್ವಲ್ಪ ಖಳನಾಯಕಿ ಪಾತ್ರದ ರೀತಿ ಇದ್ದುದರಿಂದ ಜನ ಮನ ಗೆದ್ದಿತ್ತು.
ಕಿರುತೆರೆ ಅಷ್ಟೇ ಅಲ್ಲದೆ 'ಬಹುಕೃತವೇಷಂ' ಎಂಬ ಸಿನಿಮಾ ಮೂಲಕ ಬೆಳ್ಳಿತರೆಗೂ ಕಾಲಿಟ್ಟರು ನಟಿ ವೈಷ್ಣವಿ ಗೌಡ. ಇಂದು ಕನ್ನಡ ಪ್ರೇಕ್ಷಕರ ನೆಚ್ಚಿನ ನಟಿಯರಲ್ಲೊಬ್ಬರಾಗಿರುವ ಈಕೆಗೆ ಇನ್ಸ್ಟಾಗ್ರಾಂನಲ್ಲಿ ಒಂದು ಮಿಲಿಯನ್ಗೂ ಹೆಚ್ಚಿನ ಫಾಲೋವರ್ಸ್ ಇದ್ದಾರೆ. ಇತ್ತೀಚೆಗೆ ಒಂದು ಯೂಟ್ಯೂಬ್ ಚಾನೆಲ್ ಅನ್ನು ಕೂಡ ಆರಂಭ ಮಾಡಿರುವ ನಟಿ ವೈಷ್ಣವಿ ಗೌಡ, ತಮ್ಮ ದೈನಂದಿನ ಚಟುವಟಿಕೆಗಳಿಂದ ಹಿಡಿದು ಧಾರಾವಾಹಿ ಶೂಟಿಂಗ್ ಸೆಟ್ನಲ್ಲಿ ನಡೆಯುವ ಮೋಜು ಮಸ್ತಿಯನ್ನು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಒಂದು ವರ್ಷದ ಹಿಂದಷ್ಟೇ ಆರಂಭ ಮಾಡಿರುವ ಯೂಟ್ಯೂಬ್ ಚಾನೆಲ್ ಗೆ 5 ಲಕ್ಷಕ್ಕೂ ಹೆಚ್ಚಿನ ಚಂದದಾರರು ಇದ್ದಾರೆ. ನಟನೆ ಅಲ್ಲದೆ ಡ್ಯಾನ್ಸ್ ಹಾಗೂ ಓದುವುದು ಇವರ ನೆಚ್ಚಿನ ಹವ್ಯಾಸಗಳಲ್ಲೊಂದಂತೆ.

ಪ್ರಸ್ತುತ 'ಸೀತಾರಾಮ' ಧಾರಾವಾಹಿಯಲ್ಲಿ ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ವೈಷ್ಣವಿ ಗೌಡ ತಮ್ಮ ಅಭಿನಯದ ಮೂಲಕ ಮತ್ತೆ ಕಿರುತೆರೆ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ. ಮಗುವನ್ನು ಕಳೆದುಕೊಂಡ ತಾಯಿಯ ಖಿನ್ನತೆ, ದುಗುಡ, ಇತ್ಯಾದಿ ಭಾವನೆಗಳನ್ನು ಬಹಳ ಅಚ್ಚುಕಟ್ಟಾಗಿ ತೆರೆ ಮೇಲೆ ತರುತ್ತಿರುವ ಈ ನಟಿ ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ವರ್ಷಗಳ ಕಾಲ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಕೆಲವೇ ಕೆಲವು ನಟಿಯರಲ್ಲಿ ಒಬ್ಬರು ಎಂದರೆ ತಪ್ಪಾಗಲ್ಲ.
ಪ್ರತಿ ಧಾರಾವಾಹಿಯಲ್ಲೂ ಹೊಸ ನಟ ನಟಿಯರನ್ನು ನೋಡಬಯಸುವ ಪ್ರೇಕ್ಷಕರ ಮುಂದೆ ಪ್ರತಿ ಬಾರಿ ಹೊಸ ಧಾರಾವಾಹಿಗಳ ಮೂಲಕ ಹೊಸ ಕಲಾವಿದರನ್ನು ಪರಿಚಯಿಸುತ್ತಿರುವ ಇಂದಿನ ಕಾಲದಲ್ಲಿ, ಒಂದು ದಶಕಕ್ಕೂ ಹೆಚ್ಚಿನ ಕಾಲ ಹಲವಾರು ಸೀರಿಯಲ್ಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹೆಗ್ಗಳಿಕೆ ನಟಿ ವೈಷ್ಣವಿ ಗೌಡ ಅವರದ್ದು. ಕಿರುತೆರೆ ಅಷ್ಟೇ ಅಲ್ಲದೆ ಸಿನಿಮಾದಲ್ಲಿಯೂ ಕೆಲಸ ಮಾಡುವ ಆಸೆ ಹೊಂದಿರುವುದನ್ನು ಇತ್ತೀಚೆಗಷ್ಟೇ ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದರು ಈ ನಟಿ.


Click it and Unblock the Notifications











