'ಹಿಟ್ಲರ್ ಕಲ್ಯಾಣ' ಧಾರಾವಾಹಿಯಿಂದ ಅಭಿನಯ ಹೊರಕ್ಕೆ: ಇನ್ಮುಂದೆ ಕೌಸಲ್ಯ ಯಾರು?
ಕಿರುತೆರೆಯ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಕಥೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಎಜೆ, ಲೀಲಾಳನ್ನು ತನ್ನ ಹೆಂಡತಿ ಸ್ಥಾನದಿಂದ ದೂರ ಮಾಡಿದ್ದಾನೆ. ಇನ್ಯಾವತ್ತೂ ನಿನಗೆ ನನ್ನ ಮನದಲ್ಲಿ ಜಾಗವಿಲ್ಲ ಎಂದು ಹೇಳಿದ್ದಾನೆ.
ದುರ್ಗಾ ಪ್ಲ್ಯಾನ್ನಂತೆಯೇ ಎಲ್ಲವೂ ನಡೆಯುತ್ತಿದ್ದು, ಲೀಲಾಗೆ ಉಳಿಗಾಲವಿಲ್ಲದಂತಾಗಿದೆ. ಅಜ್ಜಿಯೂ ಕೂಡ ಲೀಲಾಳನ್ನು ಅಪಾರ್ಥ ಮಾಡಿಕೊಂಡಿದ್ದು, ನನ್ನ ಮಗನಿಗೆ ದ್ರೋಹ ಮಾಡಿದೆ ಎಂದು ಬೈಯುತ್ತಾಳೆ.
ಇನ್ನು ಲೀಲಾ, ಮಲತಾಯಿ ಕೌಸಲ್ಯ ಕೂಡ ಅವಳನ್ನು ಮನೆಗೆ ಕರೆದುಕೊಂಡು ಬರಬಾರದು ಎಂದು ರಾಮಚಂದ್ರ ಅವರಿಗೆ ಫೋನ್ನಲ್ಲಿ ಹೇಳಿರುವುದನ್ನು ಲೀಲಾ ಕೇಳಿಸಿಕೊಂಡಿದ್ದಾಳೆ. ಇದೆಲ್ಲಾ ಧಾರಾವಾಹಿಯ ಕಥೆಯಾದರೆ, ಕೌಸಲ್ಯ ಪಾತ್ರಧಾರಿ ಬದಲಾಗಿರುವುದು ಎಲ್ಲರಿಗೂ ಅಚ್ಚರಿ ತಂದಿದೆ.

ಅಭಿನಯ ಧಾರಾವಾಹಿಯಿಂದ ಔಟ್
ಇಷ್ಟು ದಿನ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಕೌಸಲ್ಯ ಪಾತ್ರವನ್ನು ನಟಿ ಅಭಿನಯ ಅವರು ನಡೆಸಿಕೊಡುತ್ತಿದ್ದರು. ಆದರೆ ಇಂದಿನಿಂದ ಈ ಪಾತ್ರಧಾರಿ ಬದಲಾಗಿದ್ದಾರೆ. ಬದಲಾಗಿರುವುದಕ್ಕೆ ಕಾರಣ ತಿಳಿದಿಲ್ಲವಾದರೂ ಎಲ್ಲರೂ ನಟಿ ಅಭಿನಯ ವಿರುದ್ಧ ಇತ್ತೀಚೆಗೆ ಕೇಳಿ ಬಂದ ಆರೋಪವೇ ಕಾರಣವಿರಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ನಟಿ ಅಭಿನಯ ಅವರಿಗೆ ಎರಡು ವರ್ಷದ ಜೈಲು ಶಿಕ್ಷೆಯನ್ನು ನೀಡಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಅಭಿನಯ, ಅವರ ಕುಟುಂಬದವರು ಅವರ ಮನೆಯ ಸೊಸೆ ಲಕ್ಷ್ಮಿದೇವಿಗೆ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧ ಹೈಕೋರ್ಟ್ ವಿಚಾರಣೆ ನಡೆಸಿ ಈ ತೀರ್ಪು ಪ್ರಕಟಿಸಿತ್ತು. ಬಹುಶಃ ಅಭಿನಯ ಅವರು ಈ ಕಾರಣಕ್ಕೆ ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗಿದೆ.

ಕೌಸಲ್ಯ ಆಗಿ ಬಂದ ವಾಣಿ ಹರಿಶ್ಚಂದ್ರ
ಅಭಿನಯ ಅವರು 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಕೌಸಲ್ಯ ಪಾತ್ರವನ್ನು ಅದ್ಭುತವಾಗಿ ನಡೆಸಿಕೊಡುತ್ತಿದ್ದರು. ಆದರೆ ಈಗ ಈ ಪಾತ್ರಕ್ಕೆ ನಟಿ ವಾಣಿ ಹರಿಶ್ಚಂದ್ರ ಅವರು ಬಂದಿದ್ದಾರೆ. ಇದಕ್ಕಿದ್ದಂತೆ ಪಾತ್ರಧಾರಿ ಬದಲಾಗಿರುವುದನ್ನು ಕಂಡು ಪ್ರೇಕ್ಷಕರು ಶಾಕ್ ಆಗಿದ್ದಾರೆ. ನಟಿ ಅಭಿನಯ ಅವರು 1983 ರಲ್ಲಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರು, ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಕನ್ನಡದ ಕಿರುತೆರೆಯಲ್ಲೂ ಹಲವು ಧಾರಾವಾಹಿಯಗಳಲ್ಲಿ ನಟಿಸಿದ್ದು, ಇದೀಗ ಹಿಟ್ಲರ್ ಕಲ್ಯಾಣ ಧಾರಾವಾಹಿಯಿಂದ ಹೊರ ನಡೆದಿದ್ದಾರೆ.

ಸಿನಿಮಾ, ಕಿರುತೆರೆಯಲ್ಲಿ ಸಕ್ರಿಯ
ಕೌಸಲ್ಯ ಪಾತ್ರವನ್ನು ಈಗ ನಟಿ ವಾಣಿ ಹರಿಶ್ಚಂದ್ರ ಅವರು ನಿರ್ವಹಿಸುತ್ತಿದ್ದು, ಇವರು ಕಳೆದ 27 ವರ್ಷಗಳಿಂದ ಬಣ್ಣದ ಲೋಕದಲ್ಲಿದ್ದಾರೆ. ಅಚಾನಕ್ ಆಗಿ ನಟನೆಗೆ ಆರಂಭಿಸಿದ ವಾಣಿಶ್ರೀ ಅವರು ಕೂಡ ಹಲವು ಚಿತ್ರಗಳಲ್ಲಿ ನಟಿಸಿದ್ದು, ಕಿರುತೆರೆಯಲ್ಲೂ ಸಕ್ರಿಯರಾಗಿರುವ ನಟಿ. 'ಸ್ವರ ಸಂಪದ', 'ರಾಧಾ', 'ಚುಕ್ಕಿ', 'ಮಾಂಗಲ್ಯ', 'ಯಾರಿವಳು', 'ಪ್ರೇಮಲೋಕ', 'ಸೀತಾ ವಲ್ಲಭ' ಸೇರಿದಂತೆ 300ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಚಾರಿ' ಸಿನಿಮಾದಿಂದ ಬಣ್ಣದ ಲೋಕಕ್ಕೆ ಬಂದ ವಾಣಿಶ್ರೀ ಅವರು 90ಕ್ಕೂ ಅಧಿಕ ಚಿತ್ರಗಳಿಗೆ ವಾಣಿಶ್ರೀ ಅವರು ಬಣ್ಣ ಹಚ್ಚಿದ್ದಾರೆ. ಧಾರಾವಾಹಿಗಳಲ್ಲಿ ನೆಗೆಟಿವ್ ಶೇಡ್ನಲ್ಲೂ ಕಾಣಿಸಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಗೆ ಹೋಗಿದ್ದ ವಾಣಿ
ಇನ್ನು ಇತ್ತೀಚೆಗೆ ವಾಣಿಶ್ರೀ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಯಾವುದಾದರೂ ಒಂದು ಕಾಮಿಡಿ ಕಾನ್ಸೆಪ್ಟ್ ಜೊತೆಗೆ ಇನ್ ಸ್ಟಾಗ್ರಾಂನಲ್ಲಿ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಇದರ ಜೊತೆಗೆ ಹಬ್ಬಗಳಲ್ಲಿ ಹೊಸ ಹೊಸ ಗೆಟಪ್ ನಲ್ಲಿ ಫೋಟೋ ಶೂಟ್ ಕೂಡ ಮಾಡಿಸುತ್ತಿರುತ್ತಾರೆ. ಬಿಗ್ ಬಾಸ್ ಸೀಸನ್ 4 ರಲ್ಲಿ ಭಾಗವಹಿಸಿದ್ದ ವಾಣಿಶ್ರೀ ಅವರು ಒಂದೇ ವಾರಕ್ಕೆ ವಾಪಸ್ ಬಂದಿದ್ದರು. ಇನ್ನು ಇವರ ಮಗಳು ಖುಷಿ ಕೂಡ ಟಿಕ್ ಟಾಕ್ ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಇದೀಗ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಕೌಸಲ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.


Click it and Unblock the Notifications











