'ಯುವರತ್ನ'ದಲ್ಲಿ ನಟಿಸಿದ್ದ ಈ ನಟಿ ಕಿರುತೆರೆಯ ಸ್ಟಾರ್: ಯಾರಿವರು? ಹಿನ್ನೆಲೆಯೇನು?
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮೈನಾ' ಧಾರಾವಾಹಿಯನ್ನು ನೀವೆಲ್ಲಾ ನೋಡಿಯೇ ಇರುತ್ತೀರಿ. ಇದರಲ್ಲಿ ಮುಖ್ಯ ಭೂಮಿಕೆಯಲ್ಲಿರುವ ಮೈನಾ ಪಾತ್ರದಲ್ಲಿ ನಟಿಸುತ್ತಿರುವವರ ನಿಜವಾದ ಹೆಸರೇನು ಎಂದು ಹೆಚ್ಚಿನವರಿಗೆ ತಿಳಿದೇ ಇಲ್ಲ. ಅಲ್ಲದೆ ಈ ಧಾರಾವಾಹಿಗೂ ಮುನ್ನ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷಣ' ಧಾರಾವಾಹಿಯ ನಾಯಕಿಯಾಗಿದ್ದ ಇವರು ಎಲ್ಲೆಡೆ ಮೆಚ್ಚುಗೆ ಗಳಿಸಿದ್ದರು.
ಈಗಲೂ ಫೇಮಸ್ ಕಿರುತೆರೆ ನಾಯಕಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಇವರ ಹಿನ್ನೆಲೆ ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಾದರೆ ಈ ನಟಿ ಯಾರು? ತಿಳಿದುಕೊಳ್ಳೋಣ.

ಇವರ ನಿಜವಾದ ಹೆಸರು ವಿಜಯಲಕ್ಷ್ಮಿ. ಇವರು ಮೂಲತಃ ಕೋಲಾರ ಜಿಲ್ಲೆಯ ಮಾಲೂರಿನವರು. ತಂದೆ ರಾಧಾಕೃಷ್ಣ ಹಾಗೂ ತಾಯಿ ಉದಯಲಕ್ಷ್ಮಿಯವರ ಏಕೈಕ ಪುತ್ರಿ. ಮಗಳು ಓದಿ ಅಧ್ಯಾಪಕಿಯಾಗಬೇಕು ಅನ್ನೋದು ಹೆತ್ತವರ ಬಯಕೆಯಾಗಿತ್ತು. ಆದರೆ, ವಿಜಯಲಕ್ಷ್ಮಿಯವರಿಗೆ ಕಲಾವಿದೆಯಾಗಬೇಕೆಂಬುದು ಮೊದಲಿನಿಂದಲೂ ಇದ್ದ ಕನಸಾಗಿತ್ತು. ಹಾಗಾಗಿ ಮನೆಯವರ ಬಳಿ ನಿಗದಿತ ಸಮಯವನ್ನು ಕೇಳಿ ತಮ್ಮ ಗುರಿಯನ್ನು ನನಸಾಗಿಸಿಕೊಂಡು ಇಂದು ತಮ್ಮ ಇಷ್ಟದ ಬದುಕನ್ನು ಬದುಕುತ್ತಿದ್ದಾರೆ.
ಅಂದ ಹಾಗೆ ಇವರು ಓದು ಮುಗಿದ ಬಳಿಕ ನಟನೆಗೆ ಇಳಿದವರಲ್ಲ. ಕನಸಾಗಿದ್ದ ತಮ್ಮ ನಟನೆಯನ್ನು ಚಿಕ್ಕ ವಯಸ್ಸಿನಿಂದಲೇ ಅರಸುತ್ತಾ ಬಂದವರು. ಶಾಲಾ-ಕಾಲೇಜುಗಳಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜಯಲಕ್ಷ್ಮಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಅಲ್ಲದೆ ಕಾಲೇಜು ದಿನಗಳಲ್ಲೇ ಬೇರೆ ಬೇರೆ ಆಡಿಷನ್ಗಳನ್ನೂ ನೀಡಿದ್ದರು. ಆದರೆ ಪ್ರಮುಖ ಪಾತ್ರದಲ್ಲೇ ಕಾಣಿಸಿಕೊಳ್ಳಬೇಕೆನ್ನುವ ಹಂಬಲವೇನೂ ನಟಿಗಿರಲಿಲ್ಲ. ಹಾಗೆಯೇ ನಟನೆಗಾಗಿ ಇವರು ಯಾವುದೇ ತರಬೇತಿಯನ್ನು ಪಡೆದವರಲ್ಲ. ಒಟ್ಟಿನಲ್ಲಿ ಕಲಾವಿದೆಯಾಗಬೇಕೆನ್ನುವ ಕನಸು 'ಲಕ್ಷಣ' ಧಾರಾವಾಹಿಯ ಮುಖಾಂತರ ನನಸಾಯಿತು. ಅದೂ ನಾಯಕಿಯಾಗಿ.
ನಟಿ ವಿಜಯಲಕ್ಷ್ಮಿ ಬಿ ಎಸ್ಸಿ ಮುಗಿಸಿ, ಗಣಿತದಲ್ಲಿ ಎಂ ಎಸ್ಸಿ ಮಾಡಿರುವ ಇವರು ಕೋರ್ಸ್ ಮಾಡುತ್ತಿರುವಾಗಲೇ ಸಿನಿಮಾವೊಂದರಲ್ಲಿ ನಟಿಸಿದ್ದರು. ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಚಿತ್ರದಲ್ಲಿ ಚಿಕ್ಕದೊಂದು ಪಾತ್ರವನ್ನು ಮಾಡುವ ಅವಕಾಶ ನಟಿಗೆ ದೊರಕಿತ್ತು. ಅಭಿನಯವನ್ನು ಬಯಸುವಂತಹ ಪಾತ್ರಗಳನ್ನು ಮಾಡಬೇಕು ಎನ್ನುವುದು ವಿಜಯಲಕ್ಷ್ಮಿ ಕನಸಾಗಿತ್ತು. ಇನ್ನು ಅಧ್ಯಯನ ಮುಗಿಯುತ್ತಿದ್ದಂತೆಯೇ ಕಿರುತೆರೆಯಲ್ಲಿ ಅವಕಾಶ ಸಿಕ್ಕಿದುದು ಅವರ ಕನಸನ್ನು ಸಾಕಾರಗೊಳಿಸಲು ಪ್ರೇರಣೆಯಾಯಿತು.
ಇಂದು ಈಕೆ ನಟಿ ಮೈನಾ ಆಗಿ ಮೋಡಿ ಮಾಡುತ್ತಿದ್ದಾರೆ. ಅದೆಷ್ಟೋ ಪ್ರೇಕ್ಷಕರಿಗೆ ಇವರ ರಿಯಲ್ ನೇಮ್ ಏನು ಅನ್ನೋದೇ ಮರೆತು ಹೋಗಿದೆ. ಲಕ್ಷಣ ಅಥವಾ ಮೈನಾ ಎಂದೇ ಹೋದಲ್ಲೆಲ್ಲಾ ಜನ ಗುರುತಿಸುತ್ತಾರೆ ಎನ್ನುತ್ತಾರೆ ನಟಿ. ಅಲ್ಲದೆ ಇವರು ಮಾಡಿರುವ ಎರಡು ಪಾತ್ರಗಳು ಕೂಡ ಹಳ್ಳಿಯ ಸೊಗಡನ್ನು ಒಳಗೊಂಡಿರುವ ಪಾತ್ರ. ಹಾಗೆಯೇ ತುಂಬಾ ಶಕ್ತಿಯುತವಾದ ಹಾಗೂ ದಿಟ್ಟತನದ ಹುಡುಗಿಯ ಪಾತ್ರ. ಕಾಣಲು ಕಂದು ಬಣ್ಣದ ಲಕ್ಷಣವಾಗಿರುವ ಈ ಚೆಲುವೆಯ ಮಾತು ಮುದ್ದಾಗಿ ಕೇಳುತ್ತದೆ.
ಒಟ್ಟಿನಲ್ಲಿ ಕಿರುತೆರೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ನಟಿ ವಿಜಯ ಲಕ್ಷ್ಮಿ ಯಶಸ್ವಿಯಾಗಿದ್ದಾರೆ. ಬರಿ ನಟಿಯಾಗಿರುವುದು ಮಾತ್ರವಲ್ಲದೆ ನಿರ್ದೇಶನದ ಕನಸು ಕೂಡ ಇವರಿಗಿದೆ. ಉತ್ತಮ ಅವಕಾಶಗಳು ಒದಗಿಬಂದಲ್ಲಿ, ತಾಂತ್ರಿಕ ಸಹಕಾರ, ಒಳ್ಳೆಯ ತಂಡ ದೊರಕಿದಲ್ಲಿ ಮುಂದೆ ನಿರ್ದೇಶನಕ್ಕೂ ಮುಖ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











