ವೀಕ್ಷಕರ ಮನ ಗೆಲ್ಲಲು ಸಜ್ಜಾಗುತ್ತಿದೆ ಹೊಚ್ಚ ಹೊಸ ಧಾರಾವಾಹಿ 'ಮೈನಾ'!
ಉದಯ ವಾಹಿನಿಯಲ್ಲಿ ಸದ್ಯದಲ್ಲೇ ಶುರುವಾಗಲಿರುವ 'ಮೈನಾ' ಧಾರಾವಾಹಿ ಈಗಾಗಲೇ ಬಹಳಷ್ಟು ಕೌತುಕ ಮೂಡಿಸಿದೆ. ವಿಭಿನ್ನ ಕಥೆ ಹೊತ್ತು ಬರುತ್ತಿರುವ ಈ ಧಾರಾವಾಹಿಗೆ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಸಾಮಾನ್ಯವಾಗಿ ಧಾರಾವಾಹಿಗಳೆಲ್ಲ ಸ್ತ್ರೀ ಪ್ರಧಾನಿಯತೆಯನ್ನು ಹೊಂದಿರುತ್ತದೆ. ಅಂತೆಯೇ 'ಮೈನಾ' ಧಾರಾವಾಹಿ ಕೂಡ ಅದ್ಭುತ ಸಂದೇಶವನ್ನು ಇಟ್ಟುಕೊಂಡು ಮುಂಬರಲಿದೆ.
ಮೈಲಾರ ಕೋಟೆಯ ಮೈನಾ ಕಡುಬಡತನದವಳು. ಮನೆಗೆ ಕಿರಿಮಗಳಾದ 'ಮೈನಾ' ಮದುವೆ ವಯಸ್ಸಿನ ಅಕ್ಕ ಹಾಗೂ ಕಾಲೇಜಿಗೆ ಹೋಗುತ್ತಿರುವ ಅಣ್ಣನ ಪ್ರೀತಿಯ ಪುಟ್ಟ ತಂಗಿ. ಚಿಕ್ಕ ಪೆಟ್ಟಿಗೆ ಅಂಗಡಿ ನಡೆಸುವ ತಂದೆ ಮುತ್ತಣ್ಣ ಹಾಗೂ ಅವರಿವರ ಮನೆಯಲ್ಲಿ ಕೂಲಿ ಕೆಲಸ ಮಾಡಿ ಸಂಸಾರ ಸಾಗಿಸುತ್ತಿರುವ ತಾಯಿ ಇದೊಂದು ಶ್ರಮಜೀವಿ ಕುಟುಂಬದ ಕಥೆ.

ಹೀಗಿರುವಾಗಲೇ ಅಕ್ಕನಿಗೆ ಮದುವೆ ವಯಸ್ಸು ಮೀರುತ್ತಿದ್ದು ಯಾವುದೇ ಸಂಬಂಧಗಳು ಕೂಡಿ ಬರದ ಕಾರಣ ಮನೆಯವರಿಗೆ ಆತಂಕ ಹೆಚ್ಚುತ್ತಲೆ ಇರುತ್ತದೆ. ದುರಾದೃಷ್ಟಕ್ಕೆ ಕೆಲ ಸಂಬಂಧಗಳು ಮುರಿಯಲು 'ಮೈನಾ' ನೆಪವಾಗುತ್ತಾಳೆ. ಅದೇ ಸಮಯದಲ್ಲಿ ಜವಾಬ್ದಾರಿ ಹೊರಬೇಕಾದ ಅಣ್ಣ ಕೈ ಕೊಟ್ಟಾಗ ಮೈನಾ ಇವೆಲ್ಲದರ ಜವಾಬ್ದಾರಿ ಹೊರುತ್ತಾಳೆ. ಮನೆಯಲ್ಲಿ ಪ್ರೀತಿ ವಾತ್ಸಲ್ಯಕ್ಕೆ ಕಮ್ಮಿ ಇಲ್ಲದಿದ್ದರೂ ಬಡತನ ಹಾಗೂ ಸಂಸಾರ ತಾಪತ್ರಯಗಳಿಂದ ಒಂದು ಸಂದಿಗ್ಧ ಪರಿಸ್ಥಿತಿ ಉಂಟಾದಾಗ ಮೈನಾ ಮನೆ ಬಿಟ್ಟು ಪಟ್ಟಣದ ಕಡೆಗೆ ಹೊರಡುತ್ತಾಳೆ.
ಹಳ್ಳಿಯ ಕೂಸು ಮನೆಯ ಮುದ್ದು ಮಗಳು ಪಟ್ಟಣಕ್ಕೆ ಹೋದಾಗ ಹಲವಾರು ರೀತಿಯ ಏರುಪೇರುಗಳನ್ನು ಅನುಭವಿಸಬೇಕಾಗುತ್ತದೆ. ಅಷ್ಟಾದರೂ ಛಲ ಬಿಡದ ಮೈನಾ ಹೇಗೆಲ್ಲ ತನ್ನ ಸಂಕಷ್ಟಗಳನ್ನು ನಿವಾರಿಸುತ್ತಾಳೆ ಎಂಬುದೇ ಈ ಧಾರಾವಾಹಿ ಕಥಹಂದರವಾಗಿದೆ. ಉದಯ ಟಿವಿ ವಾಹಿನಿ ವೀಕ್ಷಕರ ನಡುವೆ ಈಗಾಗಲೇ ಭಾರವಾಗಿ ಬಹಳಷ್ಟು ಕುತೂಹಲ ಹಾಗೂ ಸಂಚಲನ ಮೂಡಿಸಿದ್ದು ಈ ಧಾರಾವಾಹಿ ಆತ್ಮವಿಶ್ವಾಸದ ಪ್ರತೀಕವಾಗಲಿದೆ ಎಂದು ವಾಹಿನಿಯ ಮುಖ್ಯಸ್ಥರು ಹೇಳಿದ್ದಾರೆ.
ಕೋಮಲ್ ಎಂಟರ್ಪ್ರೈಸಸ್ ಬ್ಯಾನರ್ ಅಡಿ ಈ ಧಾರಾವಾಹಿ ನಿರ್ಮಾಣವಾಗುತ್ತಿದ್ದು, ಇದೇ ಫೆಬ್ರವರಿ ಸೋಮವಾರ 19 ರಿಂದ ಆರಂಭವಾಗಲಿದೆ. ಮೈನಾ ಧಾರಾವಾಹಿಯನ್ನು ನಿರ್ದೇಶಕರಾದ ಸಂತೋಷ್ ಗೌಡ ಅವರು ನಿರ್ದೇಶಿಸಲಿದ್ದಾರೆ. ಕಲಾವಿದರಾದ ಮಾನಸಿ ಜೋಶಿ, ನಾಗಭರಣ, ಅಪೂರ್ವ, ಅಂಜಲಿ, ಸಿದ್ದಾರ್ಥ, ಸಚಿನ್ ಆಶಾ, ಅನುಷಾ, ಪ್ರಭಂಜನ್, ಯಶಸ್ವಿನಿ, ಹರ್ಷರ್ಜುನ್, ಇತ್ಯಾದಿ ಕಲಾವಿದರ ದೊಡ್ಡ ತಾರಾಂಗಣವೇ ಸಜ್ಜಾಗಿದೆ. ಒಟ್ಟಿನಲ್ಲಿ ಪ್ರೇಕ್ಷಕರು ಅಭಿಮಾನಿಗಳು ಫೆಬ್ರವರಿ 19ಕ್ಕೆ ಈ ಸೀರಿಯಲ್ ನೋಡುವುದಕ್ಕೆ ಕಾಯುತ್ತಿದ್ದಾರೆ.


Click it and Unblock the Notifications











