ನೀರಿಲ್ಲ ನೀರಿಲ್ಲ ಬೆಂಗಳೂರಲ್ಲಿ ನೀರಿಲ್ಲ; ಕಳವಳ ವ್ಯಕ್ತಪಡಿಸಿದ ನಟಿ ಯಮುನಾ ಶ್ರೀನಿಧಿ
ನಟಿ ಯಮುನಾ ಶ್ರೀನಿಧಿಯವರು ಎಲ್ಲರಿಗೂ ಚಿರಪರಿಚಿತ. ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಇವರು ಧಾರಾವಾಹಿಗಳಲ್ಲೂ ನಟಿಸಿ ಮನೆ ಮನ ಗೆದ್ದಿರುವ ನಟಿ. ಇತ್ತೀಚೆಗೆ 'ಸಪ್ತಸಾಗರದ ಆಚೆ ಎಲ್ಲೋ' ಸಿನಿಮಾದಲ್ಲಿಯೂ ಪ್ರಮುಖ ಪಾತ್ರವೊಂದಲ್ಲಿ ನಟಿಸಿದ್ದರು. ಈಗ ನಟಿ ಯಮುನಾ ಶ್ರೀನಿಧಿ ಬೆಂಗಳೂರಿನ ನೀರಿನ ಸಮಸ್ಯೆ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ.
"ಬೆಂಗಳೂರು ಬೆಳೆಯುತ್ತಿರುವ ನಗರ. ಉದ್ಯೋಗಾವಕಾಶ ತಂತ್ರಜ್ಞಾನ ಇತ್ಯಾದಿ ಎಲ್ಲದಕ್ಕೂ ಕೇಂದ್ರ ಬೆಂಗಳೂರು. ಹೀಗಿರುವಾಗ ದೇಶದ ರಾಜ್ಯದ ಮೂಲೆ ಮೂಲೆಗಳಿಂದ ಜನರು ಬಂದು ಬೆಂಗಳೂರಿನಲ್ಲಿ ನಿವಾಸಿಸುವುದು ಸಹಜ. ಆದರೆ, ಅದಕ್ಕೆ ಸರಿಯಾದ ನೀರಿನ ಪೂರೈಕೆ ಆಗುತ್ತಿಲ್ಲ. ಇದೊಂದು ಚಿಂತಾಜನಕ ಸ್ಥಿತಿ" ಎಂದಿದ್ದಾರೆ.

ನಟಿ ಯಮುನಾ ಶ್ರೀನಿಧಿ ಅವರು ಪ್ರತಿಯೊಬ್ಬ ನಾಗರಿಕರಿಗೂ ಈ ನೀರಿನ ಅಭಾವದ ಜವಾಬ್ದಾರಿಯನ್ನು ಹೊರಲು ಕರೆ ನೀಡಿದ್ದಾರೆ. "ಸಾಮಾನ್ಯವಾಗಿ ಯಾವುದೇ ಸಂಕಷ್ಟ ಎದುರಾಗುವ ಮೊದಲ ನಮಗೆ ಒಂದಷ್ಟು ಸೂಚನೆಗಳು ಸಿಕ್ಕಿರುತ್ತವೆ. ಆದರೂ ನಾವು ಅದನ್ನು ನಿರ್ಲಕ್ಷಿಸಿ ನಮ್ಮದೇ ಆಟ ಎಂಬಂತೆ ನಡೆದುಕೊಳ್ಳುತ್ತೇವೆ. ಕೊನೆಗೆ ಆಪತ್ತು ಬಂದಾಗ ಕೈ ಕಾಲು ಆಡದೆ ನಿಲ್ಲುವ ಸಮಯ ನಮ್ಮದಾಗುತ್ತದೆ. ನೀರಿನ ಅಭಾವವು ಹಾಗೆ" ಎಂದಿದ್ದಾರೆ.
"ಕೆರೆಗಳನ್ನು ಮುಚ್ಚಿ ಸರಿಯಾದ ನೀರು ಬಳಕೆಯನ್ನು ಮಾಡದೆ, ಅನಾವಶ್ಯಕ ನೀರು ಪೋಲು ಮಾಡಿರುವುದರ ಪರಿಣಾಮ ಇಂದು ನೀರಿನ ಅಭಾವವನ್ನು ಅನುಭವಿಸಬೇಕಾಗಿದೆ. ಇದಕ್ಕೆ ಈ ದೇಶದ ರಾಜ್ಯದ ನಗರದ ನಾಗರಿಕರಾದ ನಾವೆಲ್ಲರೂ ಜವಾಬ್ದಾರರು. ಕಾವೇರಿ ನದಿಗೆ ಮಾತ್ರ ಡಿಪೆಂಡ್ ಆದರೆ ಪ್ರಯೋಜನವಿಲ್ಲ. ಇತರೆ ನೀರಿನ ಮೂಲಗಳನ್ನು ಸೃಷ್ಟಿಸಬೇಕು. ಇನ್ನಾದರೂ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು" ಎಂದು ಯಮುನಾ ಶ್ರೀನಿಧಿ ಹೇಳಿದ್ದಾರೆ.
ಅಂದ ಹಾಗೆ ನಟಿಯ ಯಮುನಾ ಶ್ರೀನಿಧಿ ಅವರು 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಅಧ್ಯಾಪಕಿಯಾಗಿ ನಟಿಸಿದ್ದರು. ಇದಕ್ಕಿಂತಲೂ ಮೊದಲು 'ಕಮಲಿ' ಧಾರಾವಾಹಿಯಲ್ಲಿ ನಾಯಕಿ ಕಮಲಿಯ ಅಮ್ಮ ಮಂಗಳಮ್ಮನಾಗಿ ನಟಿಸಿದ್ದರು. ಜೊತೆಗೆ ನಾಲ್ಕೈದು ವರ್ಷಗಳ ಕಾಲ ಆ ಪಾತ್ರದಿಂದ ಪ್ರೇಕ್ಷಕರನ್ನು ರಂಜಿಸಿದ್ದರು.

ಇತ್ತೀಚೆಗೆ 'ಶ್ರೀರಂಗ', 'ಟೈಗರ್', 'ಕೌಸಲ್ಯಾ ಸುಪ್ರಜಾ ರಾಮ', 'ಸಪ್ತ ಸಾಗರದಾಚೆ ಎಲ್ಲೊ' ಸಿನಿಮಾ ಪಾರ್ಟ್ ಒನ್ ಹಾಗೂ ಟೂ ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ. ಕಿರುತೆರೆ ಅಷ್ಟೇ ಅಲ್ಲದೆ, ಸಿನಿಮಾಗಳಲ್ಲಿಯೂ ನಟಿಸಿ ಮನಗೆದ್ದಿದ್ದಾರೆ. ಇದೀಗೆ ಬೆಂಗಳೂರಿನಲ್ಲಿ ಎದುರಾಗಿರುವ ನೀರಿನ ಸಮಸ್ಯೆ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.


Click it and Unblock the Notifications











