ಕಿರುತೆರೆಯಲ್ಲಿ ಅಕ್ಕ-ತಂಗಿಯರದ್ದೇ ದರ್ಬಾರ್: ಭಾಗ್ಯಲಕ್ಷ್ಮಿ ಬಳಿಕ 'ಸಂಧ್ಯಾರಾಗ'
ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯ ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಆ ಧಾರಾವಾಹಿಗಳೆಲ್ಲವೂ ಕುಟುಂಬ ಹಾಗೂ ಅವರ ಸಂಬಂಧಗಳ ಮೇಲೆ ಹೆಚ್ಚು ಕೇಂದ್ರಿಕೃತವಾಗಿರುತ್ತೆ. ಇದರಲ್ಲಿ ಅಕ್ಕ ತಂಗಿಯರ ಸಂಬಂಧದ ಕಥೆಗಳು ಕೂಡ ಒಂದು.
ಒಂದಲ್ಲ ಒಂದು ಧಾರಾವಾಹಿಯಲ್ಲಿ ಅಕ್ಕ ತಂಗಿಯರ ಸಂಬಂಧವೇ ಮುಖ್ಯ ವಿಷಯವಾಗಿರುತ್ತೆ. ಇತ್ತೀಚೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ಬಾರಮ್ಮ' ಹಾಗೂ 'ಭಾಗ್ಯಲಕ್ಷ್ಮಿ' ಧಾರಾವಾಹಿಗಳು ಕಿರುತೆರೆ ವೀಕ್ಷಕರ ಮನಗೆದ್ದಿದೆ.

ಈಗ ಮತ್ತೊಂದು ಧಾರಾವಾಹಿ ಅಕ್ಕ ತಂಗಿಯ ಬಾಂಧವ್ಯದ ಕಥೆಯನ್ನು ಹೇಳುವುದಕ್ಕೆ ಬರುತ್ತಿದೆ. ಜೀ ಕನ್ನಡದಲ್ಲಿ ಈ ಧಾರಾವಾಹಿ ಮೇ 1ರಿಂದ ಪ್ರಸಾರ ಆಗಲಿದೆ. ಅದುವೇ 'ಸಂಧ್ಯಾ ರಾಗ'. ಅಂದ್ಹಾಗೆ ಇದು ಡಬ್ಬಿಂಗ್ ಧಾರಾವಾಹಿ ಅನ್ನೋದು ವಿಶೇಷ.
ಅಕ್ಕ ತಂಗಿಯ ಬಾಂಧವ್ಯದ ಕಥೆ
ಇದೀಗ ಇನ್ನೊಂದು ಅಕ್ಕ ತಂಗಿಯ ಬಾಂಧವ್ಯದ ಧಾರಾವಾಹಿ 'ಸಂಧ್ಯಾರಾಗ' ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ. ಅಕ್ಕ ತಂಗಿಯ ಪ್ರೀತಿ, ಅವರ ನಡುವಿನ ಆತ್ಮೀಯತೆ, ನೋವು-ನಲಿವು ಇವೆಲ್ಲವನ್ನೂ ತೆರೆಮೇಲೆ ತರುತ್ತಿದೆ. ಅಂದ್ಹಾಗೆ ಈ ಧಾರಾವಾಹಿ ತೆಲುಗಿನಿಂದ ಕನ್ನಡಕ್ಕೆ ಡಬ್ ಆಗಿ ಪ್ರಸಾರ ಆಗುತ್ತಿದೆ. ತೆಲುಗಿನಲ್ಲಿ 'ಸಂಧ್ಯಾರಾಗ' ಧಾರಾವಾಹಿ ತುಂಬಾನೇ ಫೇಮಸ್ ಆಗಿದೆ. ತೆಲುಗಿನಲ್ಲಿ 'ಪದಮತಿ ಸಂಧ್ಯಾ ರಾಗಂ' ಎಂದು ಪ್ರಸಾರವಾಗುತ್ತಿದ್ದು, ಇದೀಗ ಕನ್ನಡದಲ್ಲೂ ಮೂಡಿ ಬರಲಿದೆ.

ಕಿರುತೆರೆ ವೀಕ್ಷಕರು ಕನ್ನಡದಲ್ಲೂ ಈ ಧಾರಾವಾಹಿ ಬರುತ್ತಿರುವುದಕ್ಕೆ ಖುಷಿ ಪಟ್ಟಿದ್ದಾರೆ. ಯಾಕೆಂದರೆ, ತೆಲುಗಿನ ಜನರು ಈ ಧಾರಾವಾಹಿಗೆ ಮಾರು ಹೋಗಿದ್ದಾರೆ. ವಿದೇಶದಲ್ಲಿ ಇರುವ ತಂಗಿಗೆ ತನ್ನ ಅಕ್ಕನದ್ದೇ ನೆನವು. ಹಾಗೆಯೇ ಅಕ್ಕನಿಗೆ ತಂಗಿಯದ್ದೇ ನೆನಪು . ಇವರಿಬ್ಬರ ನಡುವಿನ ಬಾಂಧವ್ಯದ ಕಥೆಯೇ 'ಸಂಧ್ಯಾರಾಗ'.
ಜಾನಕಿಯ ಗಂಡ ಸುತ್ತೂರಿಗೂ ನಾಯಕ
ರಾಜಾರಾಂ.. ಜಾನಕಿಯ ಗಂಡ . ಆತನ ಮಾತನ್ನು ಯಾರೂ ಕೂಡ ಮನೆಯಲ್ಲಿ ತೆಗೆದು ಹಾಕುವುದಿಲ್ಲ. ಮನೆಯ ಓಡೆಯನಾಗಿ ಅನಿವಾರ್ಯ ಕಾರಣದಿಂದ ಆತ ಜಾನಕಿಯನ್ನು ಮದುವೆ ಆಗುತ್ತಾನೆ. ಮನೆಯ ಮರ್ಯಾದೆಗೆ ಅಂಜಿದ ರಾಜಾರಾಂ, ಸಂಧ್ಯಾಳನ್ನು ಮನೆಯಿಂದ ದೂರ ಇಡುತ್ತಾನೆ. ಇನ್ನು ಜಾನಕಿ ಮಾತ್ರ ಸಂಧ್ಯಾ ನೆನಪಲ್ಲೇ ಕಾಲ ಕಳೆಯುತ್ತಾ ಇರುತ್ತಿರುತ್ತಾಳೆ. ಇವರಿಬ್ಬರ ನಡುವೆ ಅಂತಹದ್ದೇನಾಗಿದೆ? ಅನ್ನೋದು ಧಾರಾವಾಹಿಯಲ್ಲೇ ನೋಡಬೇಕಿದೆ.
ಆದ್ಯಾಗೆ ಅಮ್ಮ ಎಂದರೆ ಪ್ರಾಣ
ಇನ್ನು ಸಂಧ್ಯಾ ಮಗಳು ಆದ್ಯಾ. ಅಮ್ಮ ಎಂದರೆ ಆಕೆಗೆ ಪಂಚಪ್ರಾಣ. ಒಂದು ಕ್ಷಣ ಕೂಡ ಅಮ್ಮನನ್ನು ಬಿಟ್ಟು ಇರದ ಆದ್ಯಾಗೆ ಅಮ್ಮನ ನೋವಿಗೆ ಕಾರಣವಾಗಿರುವ ಆ ಜಾನಕಿ ಕುಟುಂಬವನ್ನು ಕಂಡರೆ ಉರಿದು ಬೀಳುತ್ತಾಳೆ. ಅಮ್ಮನ ಅನಾರೋಗ್ಯದ ಬಗ್ಗೆ ಆದ್ಯಾಗೆ ಇನ್ನೂ ತಿಳಿದಿಲ್ಲ . ಸದಾ ಖುಷಿ ಖುಷಿಯಿಂದ ಇರುವ ತುಂಟ ಹುಡುಗಿ ಈಕೆ.
ಹಳ್ಳಿ ಹುಡುಗಿ 'ರಾಮ ಲಕ್ಷ್ಮಿ'
'ರಾಮ ಲಕ್ಷ್ಮಿ' ಹಳ್ಳಿಯ ಹುಡುಗಿ. ಈಕೆ ಜಾನಕಿಯ ಮಗಳು . ಅಪ್ಪ ಅಂದರೆ ಭಯ . ಅಮ್ಮನೇ ಈಕೆಯ ಶಕ್ತಿ. ತುಂಟಾಟ ಮಾಡಿ ತಂದೆಯ ಕೆಂಗಣ್ಣಿಗೆ ಗುರಿಯಾಗುತ್ತಾಳೆ. ಅಮ್ಮನ ಬಳಿ ಎಲ್ಲಾ ವಿಚಾರವನ್ನು ಹೇಳಿಕೊಳ್ಳುತ್ತಾ ಇರುತ್ತಾಳೆ. ಅಮ್ಮ ಅಂದರೆ ಧೈರ್ಯ ಈಕೆಗೆ. ಇನ್ನು ಜಾನಕಿಗೆ ಕೂಡ ಆಕೆಯ ಮಗಳೇ ಪ್ರಪಂಚ. ಹೀಗಾಗಿ ಇಲ್ಲಿ ಅಮ್ಮ ಮತ್ತು ಮಗಳ ಕಹಾನಿನೂ ಇದೆ.
ಸಂಧ್ಯಾಗೆ ಅಕ್ಕನದ್ದೇ ನೆನಪು
ಇನ್ನೂ ಸಂಧ್ಯಾಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವಂತಹ ಗಂಡನಿಗೆ ಮುದ್ದಾದ ಮಗಳು ಇದ್ದಾಳೆ. ಹಾಗೆಯೇ ವಿದೇಶದಲ್ಲಿ ನೆಲೆಸಿದ್ದಾಳೆ. ಆದರೂ ಆಕೆ ತನ್ನ ಅಕ್ಕ ಜಾನಕಿ ಪ್ರೀತಿಗಾಗಿ ಹಂಬಲಿಸುತ್ತಿರುತ್ತಾಳೆ. ಅಪ್ಪನ ಕೋಪಕ್ಕೆ ತುತ್ತಾಗಿ ಜಾನಕಿಯಿಂದ ದೂರ ಇದ್ದಾಳೆ. ತನ್ನ ಆರೋಗ್ಯ ಸಮಸ್ಯೆ ಉಲ್ಬಣ ಆಗುತ್ತಿದೆ. ಸಾಯುವ ಮುನ್ನ ಅಕ್ಕನನ್ನು ನೋಡಲು ಸಂಧ್ಯಾ ಹಂಬಲಿಸುತ್ತಿರುತ್ತಾಳೆ. ಇನ್ನು ಜಾನಕಿ ತಾಳ್ಮೆಯ ಪ್ರತಿ ರೂಪ ಇಂದಲ್ಲ ನಾಳೆ ನನ್ನ ತಂಗಿ ಪ್ರೀತಿ ಸಿಕ್ಕೇ ಸಿಗುತ್ತದೆ ಎಂದು ಕಾಯುತ್ತಾ ಇದ್ದಾಳೆ.
ಜಾನಕಿಗೆ ಗಂಡ ಅಂದರೆ ಭಯ
ಗಂಡ ಅಂದರೆ ಕೊಂಚ ಭಯ. ಆದರೆ ಪ್ರೀತಿಗೆ ಶ್ರೀಮಂತಿಕೆಗೆ ಕಡಿಮೆ ಏನಿಲ್ಲ. ತನ್ನ ತಂಗಿ ಸಂಧ್ಯಾ ಹೇಗಿದ್ದಾಳೋ.. ಏನೋ? ಎಂದು ಯೋಚನೆ ಮಾಡದ ದಿನಗಳೇ ಇಲ್ಲ. ಸಂಧ್ಯಾರಾಗ ಧಾರಾವಾಹಿ, ಇದೆ ಮೇ 1 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಆರಂಭ ಆಗಲಿದೆ. ಜೀ ಕನ್ನಡ ಈ ಸೂಪರ್ ಹಿಟ್ ಧಾರಾವಾಹಿ ಕನ್ನಡಿಗರ ಗಮನ ಸೆಳೆಯುತ್ತಾ? ಅನ್ನೋ ಕುತೂಹಲಕ್ಕೆ ಮೇ 1ರ ಬಳಿಕ ತೆರೆಬೀಳಬಹುದು.


Click it and Unblock the Notifications











