ಬಬ್ಲಿ ಮತ್ತು ಭಾವನಾತ್ಮಕ ಪಾತ್ರದ ಮೂಲಕ ಹಿರಿತೆರೆಯಲ್ಲಿ ಮಿಂಚಲಿದ್ದಾರೆ ಕೌಸ್ತುಭಮಣಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನನ್ನರಸಿ ರಾಧೆ' ಧಾರಾವಾಹಿ ಖ್ಯಾತಿಯ ಕೌಸ್ತುಭ ಮಣಿ ಇದೀಗ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. 'ಇಂಚರ' ಎಂಬ ಪಾತ್ರದ ಮೂಲಕ ತಮ್ಮ ಮುದ್ದು ಮುದ್ದು ಮಾತು ಮುಗ್ಧ ಅಭಿನಯದಿಂದ ಕಿರುತೆರೆ ಪ್ರಿಯರನ್ನು ರಂಜಿಸುತ್ತಿರುವ ಈ ನಟಿ ಇದೀಗ '45' ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಹಿರಿತೆರೆಯಲ್ಲಿ ಮೋಡಿ ಮಾಡಲಿದ್ದಾರೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮೊದಲ ನಿರ್ದೇಶನದ ಚಿತ್ರ ಇದಾಗಿದ್ದು ನಟರಾದ ರಾಜ್ ಬಿ ಶೆಟ್ಟಿ, ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ರೀತಿ ಸ್ಯಾಂಡ್ ವುಡ್ ನ ಮೂರು ಸ್ಟಾರ್ ಗಳು ಅಭಿನಯಿಸುತ್ತಿರುವ ಮೂವಿಯಲ್ಲಿ ನಟಿಸುತ್ತಿರುವುದು ಕೌಸ್ತುಭ ಅವರಿಗಂತೂ ಬಹಳ ಖುಷಿ ತಂದಿದೆ.
ಆಕಾಶದೆತ್ತರಕ್ಕೆ ಹಾರಿದ ಕೌಸ್ತುಭಮಣಿ!
ಮೊದಲ ಸಿನಿಮಾದಲ್ಲಿಯೇ ಇಷ್ಟು ಜೋರಾಗಿ ಮಿಂಚಲು ಅವಕಾಶ ಸಿಕ್ಕಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ ನಟಿ ಕೌಸ್ತುಭಮಣಿ. 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಬ್ಯುಸಿ ಇದ್ದಾಗ 45 ಚಿತ್ರದ ತಂಡ ನಾಯಕಿ ಪಾತ್ರಕ್ಕೆ ಆಡಿಶನ್ ಕರೆದಿದ್ದರು. ಕೌಸ್ತುಭಮಣಿ ಫೋಟೋಗಳನ್ನು ನೋಡಿ ಇಷ್ಟಪಟ್ಟ ಚಿತ್ರತಂಡ ಆಡಿಶನ್ ನಂತರ ಫೋನ್ ಮಾಡಿ ಸೆಲೆಕ್ಟ್ ಆಗಿದ್ದೀರಿ ಎಂದಾಗ ಸಂತಸದಿಂದ ಆಕಾಶದೆತ್ತರಕ್ಕೆ ಹಾರಿದ್ದರಂತೆ ಕೌಸ್ತುಭಮಣಿ.

ಬೆಳ್ಳಿತೆರೆಯಲ್ಲಿ ಇಷ್ಟು ಒಳ್ಳೆಯ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಸಂತಸದಿಂದ ಹೇಳುವ ಕೌಸ್ತುಭ ಈ ಸಿನಿಮಾದಲ್ಲಿರುವ ಪಾತ್ರವೂ ಬಹಳಷ್ಟು ಬಬ್ಲಿ ಹಾಗೂ ಭಾವನಾತ್ಮಕವಾಗಿದೆ ಎಂದಿದ್ದಾರೆ. ಜೊತೆಗೆ ವಿಭಿನ್ನ ರೀತಿಯ ಕಥಾಹಂದರವುಳ್ಳ ಸಿನಿಮಾದಲ್ಲಿ ಬಣ್ಣ ಹಚ್ಚಲು ಕಾತರದಿಂದ ಕಾಯುತ್ತಿದ್ದಾರೆ. ಮಾತ್ರವಲ್ಲ ಈ ಚಿತ್ರ ಆಕೆಗೆ ಇನ್ನೂ ಹತ್ತಾರು ಅದ್ಭುತಾವಕಾಶಗಳನ್ನು ಕೊಡುತ್ತದೆ ಎಂದು ಆಕೆ ನಂಬಿದ್ದಾರೆ. ಮುಂದೆಯೂ ಖುಷಿ ಕೊಡುವಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂದು ಆಸೆ ಕೌಸ್ತುಭಮಣಿ ಅವರದು.
ಹಿರಿತೆರೆಗೆ ಹೊಸಬರಲ್ಲ!
ಸ್ಯಾಂಡಲ್ ವುಡ್ನ ಹೊಸ ಪ್ರತಿಭೆ ತೇಜ್ ನಿರ್ದೇಶಿಸಿ ನಟಿಸುತ್ತಿರುವ ರಾಮಚಾರಿ 2.0 ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಹಿರಿತೆರೆಗೆ ಕಾಲಿಟ್ಟ ಕೌಸ್ತುಭಮಣಿ ಕಿರುತೆರೆಯ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ಚೆಲುವೆ.

ಇಂಜಿನಿಯರಿಂಗ್ ಪದವಿ ಪಡೆದು ಕಾರ್ಪೊರೇಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಕೌಸ್ತುಭಮಣಿ ನಟನೆಗೆ ಕಾಲಿಟ್ಟಿದ್ದು ಆಕಸ್ಮಿಕ. ಮಾಡೆಲಿಂಗ್ ಮೂಲಕ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡ ಕೌಸ್ತುಭ ಕಿರುತೆರೆಯ ನಂತರ ಹಿರಿತೆರೆಯಲ್ಲಿ ಮಿಂಚಲು ತಯಾರಾಗಿದ್ದಾರೆ.


Click it and Unblock the Notifications











