ಜೀ ವಾಹಿನಿಯ 'ಸೀತಾ ರಾಮ' ಗೆಲುವು: ಇನ್ಮುಂದೆ ಧಾರಾವಾಹಿ ನಿರ್ಮಾಪಕರಿಗೆ ಸಂಕಷ್ಟ?
ಒಂದ್ಕಾಲದಲ್ಲಿ ಕನ್ನಡ ಕಿರುತೆರೆ ವಾಹಿನಿಗಳೇ ಕೆಲ ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದವು. ಬಳಿಕ ಒಂದೊಂದಾಗಿ ಧಾರಾವಾಹಿ ನಿರ್ಮಾಣ ಸಂಸ್ಥೆಗಳು ಹುಟ್ಟಿಕೊಂಡವು. ಆ ಸಂಸ್ಥೆಗಳು ಕಿರುತೆರೆ ವಾಹಿನಿಗಳಿಗೆ ಮೆಗಾ ಧಾರಾವಾಹಿಗಳನ್ನು ನಿರ್ಮಿಸಿಕೊಡುವ ಸಂಪ್ರದಾಯ ಬೆಳೆಯಿತು. ನಿಧಾನವಾಗಿ ಅದು ಒಂದು ಉದ್ಯಮದ ಸ್ವರೂಪ ಪಡೆಯಿತು. ಆದರೆ ಇದೀಗ ಮತ್ತೆ ವಾಹಿನಿಗಳೇ ತಮ್ಮ ಧಾರಾವಾಹಿ ನಿರ್ಮಿಸಿಕೊಳ್ಳುವ ಶುರುವಾಗುವಂತೆ ಕಾಣುತ್ತಿದೆ.
ಸಿಹಿ ಕಹಿ ಚಂದ್ರು, ಬಿ ಸುರೇಶ್, ಬಾಲಾಜಿ ಟಿಲಿ ಫಿಲಂಸ್, ಮತ್ತು ಟಿ ಎನ್ ಸೀತಾರಾಮ್ ತರಹದದವರಯ ದಶಕಗಳಿಂದ ಕಿರುತೆರೆ ಉದ್ಯಮದಲ್ಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರಾಮ್ ಜೀ, ದಿಲೀಪ್ ರಾಜ್, ಆರೂರು ಜಗದೀಶ್, ಹಯವದನ, ಮುಂಗಾರು ಮಳೆ ಕೃಷ್ಣ, ಶೃತಿ ನಾಯ್ಡು ಹೀಗೆ ಹಲವು ಧಾರಾವಾಹಿ ನಿರ್ಮಾಣ ಕ್ಷೇತ್ರಕ್ಕೆ ಧುಮುಕಿದರು. ಬಂಡವಾಳ ಹೂಡಲು ಆರಂಭಿಸಿದರು. ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಮುಂದಿನ ದಿನಗಳಲ್ಲಿ ಧಾರಾವಾಹಿ ನಿರ್ಮಿಸುವ ಬಗ್ಗೆ ಚರ್ಚೆ ನಡೀತಿದೆ.

ಕಿರುತೆರೆ ಲೋಕದಲ್ಲಿ ಸಕ್ಸಸ್ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಟಿಆರ್ಪಿ ಚೆನ್ನಾಗಿ ಬಂದ ಮಾತ್ರಕ್ಕೆ ಒಳ್ಳೆ ಲಾಭ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ 80ರಿಂದ 100 ಜನರ ತಂಡ ಕಟ್ಟಿಕೊಂಡು ಪ್ರತಿದಿನ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಲ್ಲ. ಇದೇ ಕಾರಣಕ್ಕೆ ಇಷ್ಟು ದಿನ ವಾಹಿನಿಗಳು ಈ ಬಗ್ಗೆ ಚಿಂತಿಸಿರಲಿಲ್ಲ.
ಪದೇ ಪದೇ ಕಿರಿಕ್
ಪ್ರತಿದಿನ ಆಯಾ ಸಮಯದಲ್ಲಿ ಧಾರಾವಾಹಿಯನ್ನು ಮನೆಯಲ್ಲಿ ಕೂತು ನೋಡಿದ್ದಷ್ಟು ಸುಲಭ ಅಲ್ಲ. ಅದರ ಹಿಂದಿನ ಪರಿಶ್ರಮ. ವೀಕ್ಷಕರಿಗೆ ಉತ್ತಮವಾದ ಧಾರಾವಾಹಿ ನೀಡಬೇಕು. ಅವರು ನಿರಂತರವಾಗಿ ಟಿವಿ ನೋಡುವಂತೆ ಆಗಬೇಕು, ಇದರಿಂದ ಟಿಆರ್ಪಿ ಬರುತ್ತದೆ. ಟಿಆರ್ಪಿ ಚೆನ್ನಾಗಿದ್ದಾರೆ ಒಳ್ಳೆ ಜಾಹೀರಾತು ಸಿಗುತ್ತದೆ. ಆ ಜಾಹೀರಾತಿನಿಂದೇ ವಾಹಿನಿಗೆ ವರಮಾನ. ಆ ವರಮಾನದಿಂದ ಧಾರಾವಾಹಿ ನಿರ್ಮಾಣ ಸಂಸ್ಥೆಗಳಿಗೆ ಹಣ ಹೋಗುತ್ತದೆ. ಹೀಗೆ ಇದೊಂದು ದೊಡ್ಡ ಸರಪಳಿ. ಆದರೆ ಈ ಹಾದಿಯಲ್ಲಿ ವಾಹಿನಿಗಳು ಮತ್ತು ಧಾರಾವಾಹಿ ನಿರ್ಮಾಪಕರ ನಡುವೆ ಪದೇ ಪದೆ ಕಿರಿಕ್ಗಳು ನಡೆಯುತ್ತಲೇ ಇದೆ.

ಜೀ ನಿರ್ಮಾಣದ ಸೀತಾ ರಾಮ
ಧಾರಾವಾಹಿ ಎಷ್ಟೇ ಚೆನ್ನಾಗಿ ಪ್ರಸಾರವಾಗುತ್ತಿದ್ದರೂ ವಾಹಿನಿ ಹಾಗೂ ನಿರ್ಮಾಪಕರ ನಡುವಿನ ಹಗ್ಗ ಜಗ್ಗಾಟ ನಿಂತಿರಲಿಲ್ಲ. ಇನ್ನು ಪದೇ ಪದೇ ನಿರ್ಮಾಪಕರು ನಮಗೆ ನಷ್ಟವಾಗುತ್ತಿದೆ ಎಂದು ಹೇಳುತ್ತಿದ್ದಂತೆ. ಇದರಿಂದ ಬೇಸತ್ತ ವಾಹಿನಿಗಳು ತಾವೇ ಸ್ವಂತ ಧಾರಾವಾಹಿ ನಿರ್ಮಿಸಲು ಆರಂಭಿಸುತ್ತಿದ್ದಾರೆ. ಜೀ ವಾಹಿನಿ ಇದೀಗ 'ಸೀತಾ ರಾಮ' ಧಾರಾವಾಹಿ ನಿರ್ಮಿಸಿದೆ. 2 ವಾರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಟಿಆರ್ಪಿ ಚೆನ್ನಾಗಿ ಬಂದಿದೆ. ಇದನ್ನು ನೋಡಿ ಮುಂದೆ ವಾಹಿನಿಗಳೇ ತಮಗೆ ಬೇಕಾದ ಧಾರಾವಾಹಿಗಳನ್ನು ನಿರ್ಮಿಸಿಕೊಳ್ಳುತ್ತಾವಾ? ಎನ್ನುವ ಬಗ್ಗೆ ಚರ್ಚೆ ನಡೀತಿದೆ.
ನಿರ್ಮಾಪಕರಿಗೆ ಶುರು ಸಂಕಷ್ಟ?
ಪದೇ ಪದೆ ನಿರ್ಮಾಪಕರ ಜೊತೆ ಕಿರಿಕ್, ಮನಸ್ತಾಪ, ಎಲ್ಲಕ್ಕಿಂತ ಹೆಚ್ಚಾಗಿ ನಿರ್ಮಾಪಕರು ನಷ್ಟವಾಗುತ್ತಿದೆ ಎನ್ನುವುದನ್ನು ಕೇಳಿ ಕೇಳಿ ಸುಸ್ತಾಗಿ ಜೀ ಸಂಸ್ಥೆ ಧಾರಾವಾಹಿ ನಿರ್ಮಾಣಕ್ಕೆ ಕೈ ಹಾಕಿದೆ ಎನ್ನಲಾಗ್ತಿದೆ. ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರ್ ಹಾಗೂ ಪ್ರೊಡಕ್ಷನ್ ಮುಖ್ಯಸ್ಥ ಪ್ರಭಾಕರ್ ತೆಗೆದುಕೊಂಡ ನಿರ್ಧಾರದಿಂದ 'ಸೀತಾ ರಾಮ' ಧಾರಾವಾಹಿ ಈಗ ಧಾರಾವಾಹಿ ನಿರ್ಮಾಪಕರ ನಿದ್ದೆ ಕೆಡಿಸಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ತಾವೇ ಸ್ವತಃವಾಗಿ ಧಾರಾವಾಹಿ ನಿರ್ಮಾಣ ಮಾಡುತ್ತಿರುವುದರಿಂದ ಅದರ ಸಾಧಕ ಬಾಧಕಗಳ ಬಗ್ಗೆ ಗೊತ್ತಾಗುತ್ತದೆ. ಮುಂದೆ ಒಂದು ವೇಳೆ ಬೇರೆ ನಿರ್ಮಾಪಕರು ಬಂದು ಧಾರಾವಾಹಿ ಮಾಡಿಕೊಡುತ್ತೇವೆ ಎಂದಾಗ ಅವರಿಗೆ ಎಷ್ಟು ಕೊಡಬೇಕು? ಕೊಡಬಾರದು? ಎನ್ನುವ ಅಂದಾಜು ಸಿಗುತ್ತದೆ ಎನ್ನುವ ನಿಟ್ಟಿನಲ್ಲಿ ವಾಹಿನಿ ಯೋಚಿಸುತ್ತಿದೆಯಂತೆ. ಆದರೆ ವಾಹಿನಿಗಳೇ ಧಾರಾವಾಗಿ ನಿರ್ಮಿಸಿಕೊಂಡರೇ ನಿರ್ಮಾಪಕರಿಗೆ ಸಮಸ್ಯೆಯಾಗುವ ಮಾತುಗಳು ಕೇಳಿಬರ್ತಿದೆ.
ಸ್ವಂತವಾಗಿ 50 ಸಂಚಿಕೆ!
ಹೊಸ ಧಾರಾವಾಹಿ ಆರಂಭಿಸುವಾಗ ಮೊದಲ 50 ಸಂಚಿಕೆಗಳನ್ನು ತಾವೇ ನಿರ್ಮಾಣ ಮಾಡುವ ಬಗ್ಗೆ ಜೀ ಸಂಸ್ಥೆ ಆಲೋಚಿಸುತ್ತಿದೆಯಂತೆ. 50 ಸಂಚಿಕೆಗಳ ಬಳಿಕ ಬೇರೆ ನಿರ್ಮಾಪಕರಿಗೆ ಹಸ್ತಾಂತರಿಸುವ ಬಗ್ಗೆಯೂ ಆಲೋಚನೆ ನಡೀತಿದೆ ಎನ್ನಲಾಗ್ತಿದೆ. ಒಟ್ಟಾರೆ 'ಸೀತಾ ರಾಮ' ಧಾರಾವಾಹಿ ಸಕ್ಸಸ್ ಕನ್ನಡ ಕಿರುತೆರೆಯಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡುವಂತೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಉದಯ ಟಿವಿ, ಸ್ಟಾರ್ ಸುವರ್ಣ ವಾಹಿನಿಗಳು ಇದೇ ರೀತಿ ಧಾರಾವಾಹಿ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟರೂ ಅಚ್ಚರಿ ಪಡಬೇಕಿಲ್ಲ.


Click it and Unblock the Notifications











