ಪುಣ್ಯಕೋಟಿ ಖ್ಯಾತಿಯ ಎಜಿ ಶೇಷಾದ್ರಿ ಮಾತುಗಳು

*ಬೆಳ್ಳಿತೆರೆಯಿಂದ ಕಿರುತೆರೆಗೆ ಮರಳಿದ ನಿಮಗೆ ಮತ್ತೆ ಅದೇ ಸ್ವಾಗತ ಸಿಕ್ಕಿತೇ?
ಖಂಡಿತ. ಮೊದಲಿಗಿಂತಲೂ ಉತ್ತಮ ಅವಕಾಶ ನನಗಾಗಿ ಕಾದಿತ್ತು. ಕಾರಣ, ಟಿವಿಯಲ್ಲಿ ಆಗಷ್ಟೇ ಮೆಗಾ ಧಾರಾವಾಹಿಗಳು ಕಣ್ತೆರೆಯತೊಡಗಿದ್ದವು. ನನಗೆ ಅದಾಗಲೇ ಸಾಕಷ್ಟು ಅನುಭವ ಇತ್ತು. ಹೀಗಾಗಿ ಸಹಜವಾಗಿ ಧಾರಾವಾಹಿಗಳು ನನ್ನನ್ನು ಕೈಬೀಸಿ ಕರೆದವು. ಐಒಬಿ ಚಂದ್ರುರ 'ಚಂದ್ರಬಿಂಬ' ಮೆಗಾ ಧಾರಾವಾಹಿಯಲ್ಲಿ ಕೆಲಸ ಮಾಡಿದೆ.
ನಂತರ ಮತ್ತೆ ಬಂದ ಡಾ ರಾಜ್ ಕುಮಾರ್ ಬ್ಯಾನರ್ ಆಮಂತ್ರಣಕ್ಕೆ ಓಗೊಟ್ಟು 'ಸಹನಾ', 'ಬೆಳದಿಂಗಳಾಗಿ ಬಾ', 'ಲಾಲಿ', ಧಾರಾವಾಹಿಗಳಿಗೆ ಕೆಲಸ ಮಾಡಿದೆ. ಹೈದ್ರಾಬಾದಿನ 'ಆರ್ಕಾ ಮೀಡಿಯಾ' ಸಂಸ್ಥೆ ನಿರ್ಮಾಣದ 'ಮನೆಯೊಂದು ಮೂರು ಬಾಗಿಲು (ಮೊದಲ 125 ಸಂಚಿಕೆ)', ಮಾಡಿ ಮುಗಿಸುವಷ್ಟು ಹೊತ್ತಿಗೆ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ 'ಪುಣ್ಯಕೋಟಿ' ಕೈಬೀಸಿ ಕರೆಯಿತು.
'ಅನ್ನಪೂರ್ಣೇಶ್ವರಿ ಕ್ರಿಯೇಷನ್ಸ್' ಬ್ಯಾನರ್ ಅಡಿ ಮಣಿಕಂಠ ಸೂರ್ಯ ನಿರ್ಮಾಣದ 'ಪುಣ್ಯಕೋಟಿ' ಧಾರಾವಾಹಿ ನನಗೆ ತುಂಬಾ ಪ್ರಸಿದ್ಧಿ ತಂದುಕೊಟ್ಟಿತು. ಬರೋಬ್ಬರಿ 1570 ಸಂಚಿಕೆಗಳ್ನು ಮೀರಿ ಅದು ಇನ್ನೂ ಜನಪ್ರಿಯತೆ ತುಟ್ಟತುದಿಯಲ್ಲಿದ್ದಾಗಲೇ ನಾವೇ ಅದಕ್ಕೆ ಅಂತ್ಯ ಹಾಡಿದ್ದೇವೆ. ಕಾರಣ, ಜನರು ಅದನ್ನು ಮೆಚ್ಚಿಕೊಂಡಿರುವಾಗಲೇ ಅದಕ್ಕೊಂದು ಮಂಗಳ ಹಾಡಿದರೆ ಆ ನೆನಪೇ ಮಧುರ ಗೀತೆಯಾಗಿ ಉಳಿಯುತ್ತದೆ. ನಂತರ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ವಸುದೈವ ಕುಟುಂಬದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ.
*ಮತ್ತೆ ಸಿನಿಮಾ ಕ್ಷೇತ್ರದ ಕಡೆ ಮುಖ ಹಾಕುವ ಮನಸ್ಸಿದೆಯೇ? ನಿಮ್ಮ ಮುಂದಿನ ಕನಸು?
ಕನಸುಗಳು ಬೇಕಾದಷ್ಟಿವೆ. ಸದ್ಯಕ್ಕೆ ಧಾರಾವಾಹಿಯಲ್ಲಿ ನನ್ನನ್ನು ನಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ಇಲ್ಲೇ ನನಗೆ ಹೆಸರು, ಹಣ, ಕೀರ್ತಿ ಎಲ್ಲವೂ ಸಿಕ್ಕಿದೆ. ಪ್ರೇಕ್ಷಕರ ಆಶೀರ್ವಾದದಿಂದ ನನ್ನಿಷ್ಟದ ಬದುಕೂ ದಕ್ಕಿದೆ. ಇನ್ನು, ಸಿನಿಮಾದಲ್ಲಿ ನನಗಿಷ್ಟವಾದ ಒಳ್ಳೆಯ ಅವಕಾಶ ಬಂದರೆ ಆಗ ಯೋಚಿಸುವೆ.
ಸದ್ಯಕ್ಕೆ ಸೀರಿಯಲ್ ನಲ್ಲೇ ಸಂತೋಷ ಕಾಣುತ್ತಿದ್ದೇನೆ. ಮುಂದಿನ ಗುರಿಯ ಬಗ್ಗೆ ಈಗಲೇ ಏನೂ ಹೇಳಲಾರೆ. ಕಾಲಾಯ ತಸ್ಮೈ ನಮಃ ಎಂಬ ಪಾಠವನ್ನು ಸ್ವತಃ ಕಾಲದಿಂದಲೇ ಕಲಿತಿದ್ದೇನೆ. ನಾನಂದುಕೊಂಡ ಬಣ್ಣದ ಬದುಕಿನ ಪ್ರಯಾಣದಲ್ಲಿ ನನ್ನಿಷ್ಟದ ಪ್ರಕಾರ ಪ್ರಯಾಣಿಸುತ್ತಿದ್ದೇನೆ...
***


Click it and Unblock the Notifications











