"ನನ್ನ ಹೆಸರಿನಲ್ಲಿ ಅಮ್ಮನ ಹೆಸರು ಬೆರೆತರೆ ಹೇಗೆ?"; ಈಗ 'ಅಗ್ನಿಸಾಕ್ಷಿ' ನಟನ ಹೆಸರೇನು ಗೊತ್ತೇ?
ವಿಶ್ವ ತಾಯಂದಿರ ದಿನ.. ತಾಯಂದಿರ ದಿನದಂದು ಎಲ್ಲರೂ ತಮ್ಮ ತಮ್ಮ ತಾಯಿಯ ಜೊತೆಗಿನ ಫೋಟೋವನ್ನು ಹಾಕಿ ಸಂಭ್ರಮಿಸಿದ್ದಾರೆ. ಜೊತೆಗೆ ತಾಯಂದಿರ ದಿನದ ಶುಭಾಶಯಗಳನ್ನು ಕೂಡಾ ತಿಳಿಸಿದ್ದಾರೆ. ಆ ಮೂಲಕ ಅಮ್ಮ ನಮ್ಮ ಬದುಕಿನಲ್ಲಿ ಎಷ್ಟು ಮುಖ್ಯ ಎಂಬುದನ್ನು ಪ್ರಸ್ತುತಪಡಿಸಿದ್ದಾರೆ. ಈಗ ಕಿರುತೆರೆ ನಟ ವಿಜಯ್ ಸೂರ್ಯ ಅವರು ಮಹತ್ಕಾರ್ಯದ ಮೂಲಕ ಸುದ್ದಿಯಲ್ಲಿದ್ದಾರೆ.
ಹೌದು, 'ಅಗ್ನಿಸಾಕ್ಷಿ' ಖ್ಯಾತಿಯ ನಟ ವಿಜಯ್ ಸೂರ್ಯ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. "ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ. ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ.. ಎಂ ಆರ್ ಕಮಲಾ ಅವರು ಬರೆದ ಈ ಸಾಲನ್ನು ಮನದಲ್ಲಿ ನೆನೆಯುತ್ತಾ ಅಮ್ಮನಿಗೊಂದು ಭಾವುಕ ನಮನ ಸಲ್ಲಿಸುತ್ತೇನೆ. Happy Mother's Day Amma" ಎಂದು ಅವರು ಬರೆದುಕೊಂಡಿದ್ದಾರೆ.

ಇದರ ಜೊತೆಗೆ "ಇಷ್ಟು ಹೇಳಿದರೆ ಸಾಕಾ ? ಅಮ್ಮ ಪ್ರತಿ ಕ್ಷಣದ ಮಿಡಿತ ಅಲ್ವಾ ? ಈ ಪ್ರಶ್ನೆ ನನ್ನನ್ನು ಸದಾ ಕಾಡಿದೆ. ಇದಕ್ಕೆ ಉತ್ತರ ಹುಡುಕಲು ಹೊರಟಾಗ ಅನ್ನಿಸಿದ್ದು ನನ್ನ ಹೆಸರಿನಲ್ಲಿ ಅಮ್ಮನ ಹೆಸರು ಬೆರೆತರೆ ಹೇಗೆ ಎಂಬ ಭಾವ. ಅದನ್ನು ಅಳವಡಿಸಿಕೊಳ್ಳಲು ಅಮ್ಮಂದಿರ ದಿನಕ್ಕಿಂತ ವಿಶೇಷ ಸಂದರ್ಭ ಯಾವುದಿದೆ ಅಲ್ವಾ?" ಎಂದು ಬರೆದುಕೊಂಡಿರುವ ನಟ ವಿಜಯ್ ಸೂರ್ಯ ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವ ವಿಚಾರವನ್ನು ಹೇಳಿಕೊಂಡಿದ್ದಾರೆ.
"ಇಂದಿನಿಂದ ನಾನು ನನ್ನ ಹೆಸರನ್ನು ವಿಜಯ್ ಲಲಿತಾ ಸೂರ್ಯ ಎಂದು ಬದಲಿಸಿಕೊಳ್ಳುತ್ತಿದ್ದೇನೆ. ಲಲಿತಾ ನನ್ನ ಅಮ್ಮನ ಹೆಸರು. ನನ್ನ ಪಾಲಿನ ಉಸಿರು" ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ನಟ ವಿಜಯ್ ಸೂರ್ಯ. ತಾಯಿಯ ಮೇಲಿನ ಅಭಿಮಾನಕ್ಕಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವುದನ್ನು ಕಂಡು ವಿಜಯ್ ಸೂರ್ಯ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ನಾಯಕ ಸಂಗಮ್ ಆಗಿ ನಟಿಸಿ ಸೈ ಎನಿಸಿಕೊಂಡಿದ್ದರು ನಟ ವಿಜಯ್ ಸೂರ್ಯ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು ನಟ ವಿಜಯ್ ಸೂರ್ಯ. ಮುಂದೆ 'ಪ್ರೇಮಲೋಕ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದ ಇವರು 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ಮೋಡಿ ಮಾಡಿದ್ದರು.


Click it and Unblock the Notifications











