'ಚಾರುಲತಾ' ಪಾತ್ರದ ಮೂಲಕ ಮತ್ತೆ ಮೋಡಿ ಮಾಡ್ತಿರೋ ನಟಿ ಐಶ್ವರ್ಯಾ ಬಸ್ಪುರೆ ಹಿನ್ನೆಲೆಯೇನು ಗೊತ್ತೇ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಕ್ತಿಪ್ರಧಾನ ಧಾರಾವಾಹಿ 'ಎಡೆಯೂರು ಶ್ರೀಸಿದ್ಧಲಿಂಗೇಶ್ವರ' ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಧಾರಾವಾಹಿಯಲ್ಲಿ ಚಾರುಲತಾ ಪಾತ್ರದಲ್ಲಿ ನಟಿಸುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಐಶ್ವರ್ಯಾ ಬಸ್ಪುರೆ.
ಐಶ್ವರ್ಯಾ ಬಸ್ಪುರೆ ಎಂದರೆ ಯಾರು ಎಂಬ ಕುತೂಹಲ ನಿಮಗೆ ಮೂಡುವುದು ಸಹಜ. ಯಾಕೆಂದರೆ ಬಣ್ಣದ ಜಗತ್ತಿನಲ್ಲಿ ಆಕೆ ಮಾಯಾಳಾಗಿ ಫೇಮಸ್ಸು. ಹೌದು, ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ಯಾರೇ ನೀ ಮೋಹಿನಿ'ಯಲ್ಲಿ ಮಾಯಾಳಾಗಿ ನಟಿಸಿದ್ದರು. ಮಾಯಾಳ ಪಾತ್ರ ಸಂಪೂರ್ಣ ನೆಗೆಟಿವ್ ಆಗಿದ್ದು, ಆ ಪಾತ್ರದ ಮೂಲಕ ಐಶ್ವರ್ಯ ಅವರು ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

ಎರಡು ಮೂರು ವರ್ಷಗಳ ಕಾಲ ಮಾಯಾಳಾಗಿ ನಟಿಸಿದ್ದ ಈಕೆ ಮುಂದೆ ಸ್ಟಾರ್ ಸುವರ್ಣ ವಾಹಿನಿಯ 'ಸಂಘರ್ಷ' ಧಾರಾವಾಹಿಯಲ್ಲಿ ಪ್ರಿಯಾ ಆಗಿಯೂ ಅಭಿನಯಿಸಿದ್ದರು. ಅದು ಕೂಡಾ ಖಳನಾಯಕಿಯ ಪಾತ್ರವೇ. ಧಾರಾವಾಹಿಯ ಕಥೆಗೆ ಟ್ವಿಸ್ಟ್ ಕೂಡಾ ಈ ಪ್ರಿಯಾ ಪಾತ್ರ ನೀಡಿತ್ತು.
ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ಖಳನಾಯಕ ಧೀರಜ್ ಅಕ್ಕ ದೇವಿಕಾ ಆಗಿಯೂ ಈಕೆ ಬಣ್ಣ ಹಚ್ಚಿದ್ದರು. ತದ ನಂತರ ಕಿರುತೆರೆಯಿಂದ ದೂರವಿದ್ದ ಈಕೆ ಇದೀಗ ಪೌರಾಣಿಕ ಧಾರಾವಾಹಿಯ ಮೂಲಕ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದ ಹಾಗೇ ಐಶ್ವರ್ಯಾ ಅವರ ನಟನಾ ಪಯಣ ಶುರುವಾಗಿದ್ದು 'ಮಹಾಸತಿ' ಧಾರಾವಾಹಿಯ ಮೂಲಕ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾಸತಿ' ಧಾರಾವಾಹಿಯಲ್ಲಿ ನಾಯಕಿ ಆರತಿ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು ಐಶ್ವರ್ಯಾ ಬಸ್ಪುರೆ.
ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಈಕೆ ಆ ಧಾರಾವಾಹಿಯಲ್ಲಿ ಅಳುಮುಂಜಿ ವಿಧವೆ ಆಗಿ ಕಾಣಿಸಿಕೊಂಡಿದ್ದರು. ತದ ನಂತರ ಖಳನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದ ಐಶ್ವರ್ಯಾ ಸದ್ಯ ಪೌರಾಣಿಕ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.


Click it and Unblock the Notifications











