ಸಾವಿನ ಮನೆಯಲ್ಲಿ ಹಾಡುತ್ತಿದ್ದ ನವೀನ್ 'ಬಿಗ್ ಬಾಸ್'ಗೆ ಬಂದ ಕಥೆ
Recommended Video

'ಬಿಗ್ ಬಾಸ್ ಕನ್ನಡ' ಮತ್ತೆ ಶುರುವಾಗಿದೆ. ಈ ಬಾರಿಯ ಸ್ಪರ್ಧಿಗಳು ಈಗಾಗಲೇ ಮನೆ ಸೇರಿದ್ದು, ಅದರಲ್ಲಿ ಗಾಯಕ ನವೀನ್ ಸಜ್ಜು ಕೂಡ ಒಬ್ಬರು.
ಆತ್ಮವಿಶ್ವಾಸ ಇದ್ದರೆ ಏನನ್ನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಗಾಯಕ ನವೀನ್ ಸಜ್ಜು ಒಂದು ಉತ್ತಮ ಉದಾಹರಣೆ. ಹೌದು, ಎಲ್ಲೋ ಹಳ್ಳಿಯಲ್ಲಿ ಬೆಳೆದು, ಸಾವಿನ ಮನೆಯಲ್ಲಿ ಹಾಡುತ್ತಿದ್ದ ನವೀನ್ ಇಂದು 'ಬಿಗ್ ಬಾಸ್' ವೇದಿಕೆ ಏರಿದ್ದಾರೆ.
ಸಾಮಾನ್ಯ ಹುಡುಗನಾಗಿದ್ದ ನವೀನ್ ಇವತ್ತು ಕನ್ನಡ ಚಿತ್ರರಂಗದಲ್ಲಿ ಒಂದು ಸ್ಥಾನ ಗಳಿಸಿದ್ದಾರೆ. ಅದೆಷ್ಟೋ ಗಾಯಕರ ನಡುವೆ ತನ್ನ ವಿಭಿನ್ನ ಶೈಲಿಯ ಗಾಯನದ ಮೂಲಕ ಗುರುತಿಸಿಕೊಂಡಿದ್ದಾರೆ. ಅಂದಹಾಗೆ, ಸದ್ಯ 'ಬಿಗ್ ಬಾಸ್' ಮೆಟ್ಟಿಲು ಹತ್ತಿರುವ ಈ ಮಂಡ್ಯದ ಹುಡುಗನ ಕಥೆ ಮುಂದಿದೆ ಓದಿ...

ಸಾವಿನ ಮನೆಗಳಲ್ಲಿ ಹರಿಕಥೆ
ಮಂಡ್ಯ ಜಿಲ್ಲೆಯ, ಶ್ರೀರಂಗಪಟ್ಟಣ ತಾಲೂಕಿನ ಬಳ್ಳೆಕೆರೆ ಎಂಬ ಊರಿನಲ್ಲಿ ನವೀನ್ ಹುಟ್ಟಿದರು. ಅಲ್ಲೇ ಅವರ ಶಾಲಾ ಶಿಕ್ಷಣ ಮುಗಿಯಿತು. ಚಿಕ್ಕ ಹುಡುಗನಾಗಿದ್ದಾಗಲೇ ಅವರ ಊರಿನ ಸಾವಿನ ಮನೆಗಳಲ್ಲಿ ಹರಿಕಥೆ ನೋಡಿ, ಅವರ ಜೊತೆಗೆ ಹಾಡಲು ಶುರು ಮಾಡಿದರು. ಇನ್ನೊಂದು ಕಡೆ ನಾಟಕದಲ್ಲಿಯೂ ನಟಿಸಲು ಶುರು ಮಾಡುತ್ತಾರೆ.

ಆರ್ಕೆಸ್ಟ್ರಾದಿಂದ 'ಲೂಸಿಯಾ'
ಆರ್ಕೆಸ್ಟ್ರಾದಲ್ಲಿ ಇದ್ದ ನವೀನ್ ಊರೂರು ಸುತ್ತಿ ಹಾಡುಗಳನ್ನು ಹಾಡುತ್ತಿರುತ್ತಾರೆ. ಈ ವೇಳೆ ಒಮ್ಮೆ ಇವರ ಹಾಡನ್ನು ನಿರ್ದೇಶಕ ಪವನ್ ಕುಮಾರ್ ಕೇಳುತ್ತಾರೆ. ತಮ್ಮ ಸಿನಿಮಾಗೆ ಇದೇ ಧ್ವನಿ ಬೇಕು ಅಂತ ನವೀನ್ ಅವರಿಗೆ ತರಬೇತಿ ನೀಡಿ ಚಿತ್ರದಲ್ಲಿ ಅವಕಾಶ ನೀಡುತ್ತಾರೆ. ಈ ರೀತಿ ನವೀನ್ ಚಿತ್ರ ಬದುಕು ಶುರು ಆಗುತ್ತದೆ.

ರಾಜ್ಯ ಪ್ರಶಸ್ತಿ ಬಂತು
ಮೊದಲ ಸಿನಿಮಾ 'ಲೂಸಿಯಾ'ದಲ್ಲಿಯೇ ನವೀನ್ ನಾಲ್ಕು ಹಾಡುಗಳನ್ನು ಹಾಡಿದರು. ಆ ಸಿನಿಮಾಗೆ ಅವರಿಗೆ ರಾಜ್ಯ ಪ್ರಶಸ್ತಿ ಕೂಡ ಬಂತು. ಮೊದಲ ಸಿನಿಮಾದಿಂದ ಇಲ್ಲಿಯ ವರೆಗೆ ನವೀನ್ ಒಂದರ ನಂತರ ಒಂದು ಸಿನಿಮಾಗೆ ಹಾಡುತ್ತ ಹೋದರು. ಜೊತೆಗೆ ಅದೆಷ್ಟೋ ಮ್ಯೂಸಿಕ್ ಕಾರ್ಯಕ್ರಮಗಳನ್ನು ನೀಡಿದ್ದಾರೆ.

120 ಸಿನಿಮಾಗಳಿಗೆ ಗಾಯಕ
ನವೀನ್ ಸದ್ಯ 120ಕ್ಕೂ ಹೆಚ್ಚು ಸಿನಿಮಾಗಳಿಗೆ, 150ಕ್ಕೂ ಅಧಿಕ ಹಾಡುಗಳನ್ನು ಹಾಡುಗಳನ್ನು ಹಾಡಿದ್ದಾರೆ. 'ಕನಕ' ಸಿನಿಮಾದ ಮೂಲಕ ಅವರು ಸಂಗೀತ ನಿರ್ದೇಶಕರಾಗಿ ಬಡ್ತಿ ಪಡೆದರು. ಆ ಸಿನಿಮಾದ 'ಎಣ್ಣೆ ನಮ್ದು.. ಊಟ ನಿಮ್ದು..'' ಹಾಡು ಸೂಪರ್ ಹಿಟ್ ಆಗಿದೆ.

'ಬಿಗ್ ಬಾಸ್' ನಲ್ಲಿ ನವೀನ್
ಈ ಎಲ್ಲ ಏಳು ಬೀಳು ಕಷ್ಟಗಳ ನಡುವೆ ಇದೀಗ ನವೀನ್ 'ಬಿಗ್ ಬಾಸ್' ವೇದಿಕೆ ಏರಿದ್ದಾರೆ. ನಗು ಮುಖದಿಂದ ಮನೆಯೊಳಗೆ ಪ್ರವೇಶ ಮಾಡಿರುವ ನವೀನ್ ಗೆಲ್ಲುತ್ತಾರೋ ಅಥವಾ ಅರ್ಧದಲ್ಲಿಯೇ ಹೊರ ಬರುತ್ತಾರೋ ಕಾದು ನೋಡಬೇಕು.


Click it and Unblock the Notifications











