'ಬಿಗ್ ಬಾಸ್' ಮುನ್ನವೇ ನಯನ ಈ ರಿಯಾಲಿಟಿ ಶೋ ವಿನ್ನರ್
'ಬಿಗ್ ಬಾಸ್ ಕನ್ನಡ 6' ಕಾರ್ಯಕ್ರಮ ಶುರುವಾಗಿ ನಾಳೆಗೆ ಒಂದು ವಾರ ಆಗುತ್ತದೆ. ಈ ಒಂದು ವಾರದಲ್ಲಿ ನಗು, ನೋವು, ಜಗಳ, ಅಸಮಾಧಾನ, ಆಟ, ಹೊಡೆದಾಟ ಎಲ್ಲವೂ ಅಲ್ಲಿ ನಡೆದಿದೆ.
ಪ್ರತಿ ಬಾರಿಯಂತೆ ಈ ಬಾರಿಯೂ ಸ್ಪರ್ಧಿಗಳು 'ಬಿಗ್ ಬಾಸ್' ಟ್ರೋಫಿ ಗೆಲ್ಲುವ ಆಸೆಯಿಂದ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಇವರುಗಳ ಪೈಕಿ ನಯನ ಪುಟ್ಟಸ್ವಾಮಿ ಒಂದು ಕಾರಣಕ್ಕೆ ಕೊಂಚ ವಿಭಿನ್ನವಾಗಿದ್ದಾರೆ.
ನಯನ ಪುಟ್ಟಸ್ವಾಮಿ ಅವರಿಗೆ ರಿಯಾಲಿಟಿ ಶೋ ಎನ್ನುವುದು ಹೊಸತೇನಲ್ಲ. 'ಬಿಗ್ ಬಾಸ್'ಗೆ ಬರುವ ಮುನ್ನವೇ ನಯನ ಒಂದು ರಿಯಾಲಿಟಿ ಶೋ ವಿನ್ನರ್ ಆಗಿದ್ದಾರೆ. ಆ ಕಾರ್ಯಕ್ರಮದ ರೀತಿ ಈ ಕಾರ್ಯಕ್ರಮದಲ್ಲಿಯೂ ಗೆಲ್ಲುವ ಭರವಸೆಯ ಜೊತೆಗೆ ನಯನ ಹೊಸ ಪ್ರಯತ್ನಕ್ಕೆ ಹೆಜ್ಜೆ ಇಟ್ಟಿದ್ದಾರೆ.
ಬಿಗ್ ಮನೆಯ ಅತಿಥಿ ಆಗಿರುವ ನಯನ ಪುಟ್ಟಸ್ವಾಮಿ ಅವರ ಕಿರು ಪರಿಚಯ ಮುಂದಿದೆ ಓದಿ...

'ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫು' ವಿನ್ನರ್
ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫು' ಸೀಸನ್ 1 ರಲ್ಲಿ ನಯನ ಪುಟ್ಟಸ್ವಾಮಿ ವಿಜೇತೆ ಆಗಿದ್ದರು. ಈ ಕಾರ್ಯಕ್ರಮದ ಮೂಲಕ ಅವರು ಮೊದಲು ಕನ್ನಡಿಗರಿಗೆ ಪರಿಚಯ ಆಗಿದ್ದರು. ಈ ಕಾರ್ಯಕ್ರಮ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು.

ಸಿನಿಮಾಗಳಲ್ಲಿ ನಟನೆ
ರಿಯಾಲಿಟಿ ಶೋ ನಂತರ 'ಚಿಟ್ಟೆ ಹೆಜ್ಜೆ' ಎಂಬ ಧಾರಾವಾಹಿಯಲ್ಲಿಯೂ ನಯನ ನಟಿಸಿದರು. ಪುನೀತ್ ರಾಜ್ ಕುಮಾರ್ ಅವರ 'ಪವರ್', 'ಸಿದ್ಧಾರ್ಥ', 'ಅಲೆಮಾರಿ', 'ಘರ್ಷಣೆ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.

ಅಡ್ವೆಂಚರ್ ಅಂದರೆ ಇಷ್ಟ
ನಯನ ಪುಟ್ಟಸ್ವಾಮಿ ಅವರಿಗೆ ಅಡ್ವೆಂಚರ್ ಅಂದರೆ ತುಂಬ ಇಷ್ಟ ಅಂತೆ. ಈಗಾಗಲೇ ಅನೇಕ ಅಡ್ವೆಂಚರ್ ಆಟಗಳನ್ನು ಆಡಿದ್ದಾರಂತೆ. ಇದರ ಜೊತೆಗೆ ಪ್ರವಾಸ ಹೋಗುವುದು ಸಹ ಅವರಿಗೆ ಬಹಳ ಇಷ್ಟವಂತೆ. ಬಿಗ್ ಬಾಸ್ ಗೆದ್ದರೇ ದೇಶ ಸುತುತ್ತೇನೆ ಎನ್ನುತ್ತಾರೆ ನಯನ.

ನಾಲ್ಕು ತಿಂಗಳ ಹಿಂದೆ ವಿವಾಹ
ನಟಿ ನಯನ ಪುಟ್ಟಸ್ವಾಮಿ ವಿವಾಹ ಇತ್ತೀಚಿಗೆ ನೆರವೇರಿದೆ. ಚರಣ್ ತೇಜ್ ಎಂಬ ಯುವಕನ ಜೊತೆ ನಯನ ಹಸೆಮಣೆ ಏರಿದ್ದಾರೆ. ನಯನ ಅವರ ಪತಿ ಚರಣ್ ತೇಜ್ ಮೂಲತಃ ಹೈದರಾಬಾದ್ ನವರಾಗಿದ್ದಾರೆ ಜೂನ್ 25 ರಂದು ಇವರ ವಿವಾಹ ಕಾರ್ಯಕ್ರಮ ನಡೆದಿತ್ತು.

'ಬಿಗ್ ಬಾಸ್'ಗೆ ಬಂದಿದ್ದು ಯಾಕೆ ?
ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ನಯನ ''ಬಿಗ್ ಬಾಸ್ ಬೇರೆ ರಿಯಾಲಿಟಿ ಶೋ ಗಳ ರೀತಿ ಅಲ್ಲ ಎನ್ನುವುದು ನನಗೆ ಗೊತ್ತು. ಬಿಗ್ ಬಾಸ್ ಮನೆಯಲ್ಲಿ ಜೀವನದ ಪಾಠ ಕಲಿಯಬಹುದು. ಇದು ಒಂದು ಒಳ್ಳೆಯ ವೇದಿಕೆ. ಮನೆಯ ಒಳಗೆ ಹೋದ ಮೇಲೆ ಬೇರೆ ತರನೇ ಇರುತ್ತದೆ, ಮನೆಯಿಂದ ಆಚೆ ಬಂದ ಮೇಲೆ ಇನ್ನು ಅದ್ಬುತವಾಗಿರುತ್ತದೆ.'' ಎಂದು ಹೇಳಿದ್ದಾರೆ.


Click it and Unblock the Notifications











