'ರಾಮಾಯಣ' ಅಂದ್ರೆ ಇದು: 'ಆದಿಪುರುಷ್'ಗೆ ಟಕ್ಕರ್ ಕೊಡೋಕೆ ಮತ್ತೆ ಬರ್ತಿದೆ ಎವರ್ಗ್ರೀನ್ ದೃಶ್ಯಕಾವ್ಯ
ಪ್ರಭಾಸ್ 'ಆದಿಪುರುಷ್'ಗೆ ಟಾಂಗ್ ಕೊಡೋಕೆ ಮತ್ತೆ ಬರ್ತಿದೆ ಜೂನ್ 16ಕ್ಕೆ ಬಿಡುಗಡೆಯಾದ 'ಆದಿಪುರುಷ್' ಸಿನಿಮಾ ಭಾರೀ ವಿವಾದ ಸೃಷ್ಟಿಸಿದೆ. ಸಿನಿಮಾ ಬ್ಯಾನ್ ಮಾಡುವಂತೆ ಆಗ್ರಹ ವ್ಯಕ್ತವಾಗುತ್ತಲೇ ಇದೆ. ಚಿತ್ರದಲ್ಲಿ ರಾಮಾಯಣದ ಪಾತ್ರಗಳನ್ನು ತಿರುಚಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಆದಾಗ್ಯೂ ಸಿನಿಮಾ 450 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇದೆಲ್ಲದರ ನಡುವೆ ರಮಾನಂದ್ ಸಾಗರ್ ಸಾರಥ್ಯದ ರಾಮಾಯಣ ಧಾರಾವಾಹಿ ಮರುಪ್ರಸಾರವಾಗುತ್ತಿದೆ.
ಟೀಸರ್ ರಿಲೀಸ್ ಆದ ದಿನದಿಂದಲೂ 'ಆದಿಪುರುಷ್' ಸಿನಿಮಾ ವಿವಾದ ಸೃಷ್ಟಿಸುತ್ತಲೇ ಬರ್ತಿದೆ. ಸಿನಿಮಾ ಪ್ರೇಕ್ಷಕರ ಮುಂದೆ ಬಂದು ಮತ್ತಷ್ಟು ಗದ್ದಲ ಎಬ್ಬಿಸಿದೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ, ಕೂಡಲೇ ಸಿನಿಮಾ ಬ್ಯಾನ್ ಮಾಡಬೇಕೆಂದು ದೆಹಲಿ, ಅಲಹಾಬಾದ್ ಹೈಕೋರ್ಟ್ಗಳಲ್ಲಿ ದೂರು ದಾಖಲಾಗಿದೆ. ನಿನ್ನೆಯಷ್ಟೆ(ಜೂನ್ 27) ಅಲಹಾಬಾದ್ ಹೈಕೋರ್ಟ್ ಈ ಸಂಬಂಧ ವಿಚಾರಣೆ ನಡೆಸಿ ಸೆನ್ಸಾರ್ ಮಂಡಳಿ ಹಾಗೂ ಚಿತ್ರತಂಡಕ್ಕೆ ಛೀಮಾರಿ ಹಾಕಿತ್ತು. ಈ ಪ್ರಕರಣದಲ್ಲಿ ಸಿನಿಮಾದ ಸಂಭಾಷಣೆಕಾರ ಮನೋಜ್ ಮುಂತಶೀರ್ ಶುಕ್ಲಾ ಅನ್ನು ಪ್ರತಿವಾದಿ ಮಾಡುವಂತೆ ಸೂಚಿಸಿತ್ತು.

'ಆದಿಪುರುಷ್' ವಿವಾದ ಆರಂಭವಾದ ದಿನದಿಂದಲೂ ಎಲ್ಲರೂ ರಾಮಾನಂದ್ ಸಾಗರ್ 'ರಾಮಾಯಣ' ಧಾರಾವಾಹಿ ಬಗ್ಗೆ ಮಾತನಾಡುತ್ತಿದ್ದಾರೆ. ರಾಮನ ಚರಿತ್ರೆಯನ್ನು ಆ ಧಾರಾವಾಹಿಯಲ್ಲಿ ಚಿತ್ರಿಸಿರುವಂತೆ ತೋರಿಸಬೇಕು. ಓಂ ರಾವುತ್ ಅದನ್ನು ನೋಡಿ ಕಲಿಯಬೇಕಿತ್ತು. ಆ ಧಾರಾವಾಹಿಯಲ್ಲಿ ರಾಮಾಯಣ ಕಾವ್ಯ ಕಣ್ಣಿಗೆ ಕಟ್ಟಿದಂತಿತ್ತು. ಇನ್ನು ಧಾರಾವಾಹಿಯಲ್ಲಿ ನಟಿಸಿದ್ದ ಕಲಾವಿದರು ಕೂಡ 'ಆದಿಪುರುಷ್' ಸಿನಿಮಾ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.
ರಾಮಾಯಣ ಧಾರಾವಾಹಿ ಮರುಪ್ರಸಾರ
'ಆದಿಪುರುಷ್' ಸಿನಿಮಾ ಇಷ್ಟೆಲ್ಲಾ ವಿವಾದ ಸೃಷ್ಟಿಸುತ್ತಿದ್ದಂತೆ ರಾಮಾನಂದ್ ಸಾಗರ್ 'ರಾಮಾಯಣ' ಧಾರಾವಾಹಿ ಮತ್ತೆ ಕಿರುತೆರೆಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಮುಂದಿನ ಸೋಮವಾರದಿಂದಲೇ ಮತ್ತೆ 80ರ ದಶಕದ ಸೂಪರ್ ಹಿಟ್ ಪೌರಾಣಿಕ ಟಿವಿ ಶೋ ಮೂಡಿ ಬರಲಿದೆ. "ವಿಶ್ವವಿಖ್ಯಾತ ಪೌರಾಣಿಕ ಧಾರಾವಾಹಿ ರಾಮಾಯಣವು ಮತ್ತೆ ವೀಕ್ಷಕರ ಮುಂದೆ ಬರ್ತಿದೆ ನೋಡಿ" ಎಂದು ಹೇಳಿ ಸಣ್ಣ ಪ್ರೋಮೊ ರಿಲೀಸ್ ಮಾಡಿದ್ದಾರೆ. ಶೆಮರೂ ಟಿವಿ (Shemaroo TV) ವಾಹಿನಿಯಲ್ಲಿ ರಾಮಾಯಣ ಮರುಪ್ರಸಾರವಾಗಲಿದೆ.

78 ಎಪಿಸೋಡ್ಗಳಾಗಿ ಪ್ರಸಾರ
ಅಶೋಕ್ ಕುಮಾರ್ ನಿರೂಪಣೆಯಲ್ಲಿ 1987 ಹಾಗೂ 1988ರ ಅವಧಿಯಲ್ಲಿ 'ರಾಮಾಯಣ' ಧಾರಾವಾಹಿ ಮೂಡಿ ಬಂದಿತ್ತು. ದೂರದರ್ಶನದಲ್ಲಿ 78 ಎಪಿಸೋಡ್ಗಳಾಗಿ ರಾಯಯಣ ಚರಿತ್ರೆ ಪ್ರಸಾರವಾಗಿತ್ತು. ರಮಾನಂದ್ ಸಾಗರ್ ನಿರ್ದೇಶನದ ಈ ಧಾರಾವಾಹಿಯಲ್ಲಿ ರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಕಾಲಿಯಾ, ಲಕ್ಷ್ಮಣನಾಗಿ ಸುನಿಲ್ ಲಹ್ರಿ, ರಾವಣನಾಗಿ ಅರವಿಂದ್ ತ್ರಿವೇದಿ ಹಾಗೂ ಹನುಮಂತನಾಗಿ ಧಾರಾಸಿಂಗ್ ನಟಿಸಿದ್ದರು.
ಪೌರಾಣಿಕ ಧಾರಾವಾಹಿ ದಾಖಲೆ
ರಮಾನಂದ್ ಸಾಗರ್ ಧಾರಾವಾಹಿ ದಾಖಲೆ ಮಟ್ಟದಲ್ಲಿ ವೀಕ್ಷಕರ ಮನಗೆದ್ದಿತ್ತು. ಅವತ್ತಿನ ಕಾಲಕ್ಕೆ ಅತಿ ಜನಪ್ರಿಯ ಧಾರಾವಾಹಿ ಎನಿಸಿಕೊಂಡಿತ್ತು. 60 ಕೋಟಿಗೂ ಅಧಿಕ ಜನ ಧಾರಾವಾಹಿ ವೀಕ್ಷಿಸಿ ದಾಖಲೆ ಬರೆದಿತ್ತು. ಚಿತ್ರದಲ್ಲಿ ನಟಿಸಿದ ಕಲಾವಿದರನ್ನು ನೋಡಿ ಕೆಲವರು ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದರಂತೆ ಅಷ್ಟರಮಟ್ಟಿಗೆ ಧಾರಾವಾಹಿ ಪರಿಣಾಮ ಬೀರಿತ್ತು. ಅದಕ್ಕೂ ಹಿಂದೆ ಒಂದಷ್ಟು ಸಿನಿಮಾಗಳಲ್ಲಿ ರಾಮಾಯಣವನ್ನು ಕಟ್ಟಿಕೊಟ್ಟಿದ್ದರೂ ಈ ಧಾರಾವಾಹಿಯಲ್ಲಿ ಸವಿಸ್ತಾರವಾಗಿ ರಾಮನ ಚರಿತ್ರೆ ತೆರೆದಿಡಲಾಗಿತ್ತು.
ಲಾಕ್ಡೌನ್ ಸಮಯದಲ್ಲೂ ಪ್ರಸಾರ
ಎರಡು ವರ್ಷದ ಹಿಂದೆ ಕೊರೊವಾ ಹಾವಳಿಯಿಂದ ದೇಶ್ಯಾದ್ಯಂತ ಲಾಕ್ಡೌನ್ ಜಾರಿಯಾಗಿತ್ತು. ಈ ಸಮಯದಲ್ಲಿ ಜನ ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುವಂತಾಗಿತ್ತು. ಕಿರುತೆರೆ, ಸಿನಿಮಾ ಕೆಲಸಗಳು ನಿಂತು ಹೋಗಿತ್ತು. ಅಂತಹ ಸಮಯದಲ್ಲಿ ರಮಾನಂದ್ ಸಾಗರ್ ನಿರ್ದೇಶನದ 'ರಾಮಾಯಣ' ಧಾರಾವಾಹಿಯನ್ನೂ ಮರುಪ್ರಸಾರ ಮಾಡಲಾಗಿತ್ತು. ಆಗ ಕೂಡ ದಾಖಲೆಯ ವೀಕ್ಷಣೆ ಕಂಡಿತ್ತು. 30 ವರ್ಷಗಳ ನಂತರ ಕೂಡ ಸಂಚಲನ ಸೃಷ್ಟಿಸಿತ್ತು.


Click it and Unblock the Notifications











