ಅಮಿತಾಬ್ ಬಚ್ಚನ್ಗೆ ಅಗೌರವ; 'ಕೆಬಿಸಿ'ಯಲ್ಲಿ 5ನೇ ಪ್ರಶ್ನೆಗೆ ಔಟ್ ಆದ ಓವರ್ ಕಾನ್ಫಿಡೆನ್ಸ್ ಬಾಲಕ- ಪೋಷಕರಿಗೊಂದು ಪಾಠ
ಕೂತು ಉಣ್ಣುವವನಿಗೆ ಕುಡುಕೆ ಹೊನ್ನೂ ಸಾಲದು ಎಂಬ ಮಾತನ್ನ ಚೆನ್ನಾಗಿ ಅರಿತು ಬದುಕು ಕಟ್ಟಿಕೊಂಡವರು ಅಮಿತಾಬ್ ಬಚ್ಚನ್ . 81ರ ಪ್ರಾಯದಲ್ಲಿಯೂ ಕೂಡ ದುಡಿಮೆಯೇ ದುಡ್ಡಿನ ತಾಯಿ ಎಂದು ನಂಬಿ, ಕಾಯಕವೇ ಕೈಲಾಸ ಎಂಬ ಮಂತ್ರವನ್ನ ಪಠಿಸುತ್ತಿರುವ ಅಮಿತಾಬ್ ಬಚ್ಚನ್ ಕೇವಲ ಬೆಳ್ಳಿತೆರೆಯಲ್ಲಿ ಮಾತ್ರವಲ್ಲ ಕಿರುತೆರೆಯ ಸಕ್ರಿಯ ಸದಸ್ಯ ಕೂಡ ಹೌದು.
ಕಳೆದ 24 ವರ್ಷಗಳಿಂದ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಾ ಬಂದಿರುವ ಅಮಿತಾಬ್, ತಮ್ಮೆದುರು ಕುಳಿತ ವ್ಯಕ್ತಿಗೆ ಪ್ರಶ್ನೆಯನ್ನು ಕೇಳುವುದಷ್ಟೇ ಅಲ್ಲದೇ ಅವರ ಜೊತೆ ಮುಕ್ತವಾಗಿ ಮಾತನಾಡಿಕೊಂಡು ಬಂದಿದ್ದಾರೆ. ಸ್ಫರ್ಧಿಗಳ ಬದುಕಿನ ಸುಖ ದುಃಖವನ್ನೂ ಕೇಳುತ್ತಾ ಬಂದಿದ್ದಾರೆ. ತಾವೂ ನಕ್ಕಿದ್ದಾರೆ.ಸ್ಫರ್ಧಿಗಳನ್ನು ನಗಿಸಿದ್ದಾರೆ. ಸ್ಪರ್ಧಿಗಳು ಕಣ್ಣೀರಾದಾಗ ಅಮಿತಾಬ್ ಕೂಡ ಕಣ್ಣೀರಾಗಿದ್ದಾರೆ.

ಇಂಥಾ ದಣಿವರಿಯದ ಮಹಾನಾಯಕನ ಎದುರು ಬಾಲಕ ಉದ್ಧಟತನದ ಪ್ರದರ್ಶನ ಮಾಡಿದ್ದಾನೆ. ಅಮಿತಾಬ್ ಬಚ್ಚನ್ ಅವರಿಗೆ ಅವಮಾನ ಮಾಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಹೌದು, ಪ್ರತಿ ವರ್ಷದಂತೆ ಈ ವರ್ಷ ಕೂಡ ಅಮಿತಾಬ್ ''ಕೌನ್ ಬನೇಗಾ ಕರೋಡ್ಪತಿ ಜ್ಯೂನಿಯರ್'' ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಗುಜರಾತ್ನ ಗಾಂಧಿನಗರದ ಐದನೇ ತರಗತಿ ವಿದ್ಯಾರ್ಥಿ ಇಷಿತ್ ಭಟ್ಗೆ ಅವಕಾಶ ಸಿಕ್ಕಿತ್ತು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾದ ಇಷಿತ್ ಕಾರ್ಯಕ್ರಮದೂದ್ದಕ್ಕೂ ಅಮಿತಾಬ್ ಬಚ್ಚನ್ ಅವರನ್ನು ಅಗೌರವದಿಂದ ಕಂಡಿದ್ದಾನೆ. ಅವಮಾನವಾಗುವಂತೆ ಮಾತನಾಡಿದ್ದಾನೆ.
ಕಾರ್ಯಕ್ರಮದ ಆರಂಭದಲ್ಲಿಯೇ ಅಮಿತಾಬ್ ಬಚ್ಚನ್ ಎಲ್ಲರಿಗೆ ಹೇಳುವಂತೆ ಕಾರ್ಯಕ್ರಮದ ನೀತಿ-ನಿಯಮವನ್ನು ಹೇಳಲು ಮುಂದಾದಾಗ ಅಮಿತಾಬ್ ಅವರನ್ನು ತಡೆದ ಬಾಲಕ ನನಗೆ ಎಲ್ಲ ನಿಯಮಗಳು ಗೊತ್ತು. ನೀವು ಅದೆಲ್ಲವೂ ನನಗೆ ಹೇಳುತ್ತಾ ಕೂರಬೇಡಿ ಎಂದು ಹೇಳುತ್ತಾನೆ. ಆ ನಂತರ ಬೆಳಿಗ್ಗೆ ಇವುಗಳಲ್ಲಿ ಯಾವುದನ್ನು ತಿನ್ನಲಾಗುತ್ತೆ ಎಂದು ಅಮಿತಾಬ್ ಕೇಳಿದಾಗ ಮತ್ತೆ ಕೈ ಮಾಡಿ ತಡೆಯುವ ಬಾಲಕ ಆಯ್ಕೆ ಕೊಡುವುದು ಬೇಡ ಬ್ರೇಕ್ಫಾಸ್ಟ್ ಎಂಬ ಉತ್ತರ ನೀಡುತ್ತಾನೆ. ಆದ್ಯಾಗೂ ಅಮಿತಾಬ್ ಆಯ್ಕೆಗಳನ್ನು ನೀಡುತ್ತಾರೆ. ಆಗ ಮತ್ತೆ ಬ್ರೇಕ್ ಫಾಸ್ಟ್ ಲಾಕ್ ಮಾಡುವಂತೆ ಇಷಿತ್ ಹೇಳುತ್ತಾನೆ.
ಆ ನಂತರ ಅಮಿತಾಬ್ ಟ್ಯಾಂಗೋ.. ಕಥಕ್.. ಮತ್ತು ಬ್ರೇಕ್ ಯಾವ ವಿಭಾಗಕ್ಕೆ ಸೇರಿದ್ದು ಎಂದು ಕೇಳಿದಾಗ ಆಯ್ಕೆ ಬರುವ ಮುನ್ನವೇ ಡ್ಯಾನ್ಸ್ ಎಂದು ಇಷಿತ್ ಹೇಳುತ್ತಾನೆ. ಆಯ್ಕೆ ನಿಮಗೆ ಬೇಡದೆ ಇರಬಹುದು ಆದರೆ ನೋಡುಗರಿಗೆ ತೋರಿಸಬೇಕಾಗುತ್ತೆ ಎಂದು ಅಮಿತಾಬ್ ಆಯ್ಕೆಗಳನ್ನು ತೋರಿಸುತ್ತಾರೆ. ಆ ನಂತರ ''ಚೆಸ್''ನಲ್ಲಿ ಎಷ್ಟು ಜನ ರಾಜರು ಇರುತ್ತಾರೆ ಎಂದು ಅಮಿತಾಬ್ ಕೇಳಿದಾಗ ಇದೊಂದು ಕೇಳುವ ಪ್ರಶ್ನೆನಾ..? ಇಬ್ಬರು ಇರುತ್ತಾರೆ ಎಂದು ಉತ್ತರಿಸುತ್ತಾನೆ. ಇಲ್ಲಿಯೂ ಕೂಡ ಆಯ್ಕೆಯನ್ನು ಹೇಳುವುದಕ್ಕೆ ಇಷಿತ್ ಬಿಡುವುದಿಲ್ಲ.

ಆ ನಂತರ ವಾಲ್ಮೀಕಿ ರಾಮಾಯಣದ ಮೊದಲ ಕಾಂಡ ಯಾವುದು ಎಂದು ಐದನೇ ಪ್ರಶ್ನೆಯನ್ನು ಅಮಿತಾಬ್ ಬಚ್ಚನ್ ಕೇಳುತ್ತಾರೆ. ಈ ಸಮಯದಲ್ಲಿ ಆಯ್ಕೆಗಳನ್ನು ನೀಡದೆ ಅಮಿತಾಬ್ ಸತಾಯಿಸುತ್ತಾರೆ. ಇಲ್ಲಿಯವರೆಗೆ ನನಗೆ ಆಯ್ಕೆಗಳನ್ನೇ ಕೊಡಬೇಡಿ ಎಂದು ಹೇಳುತ್ತಿದ್ದ ಇಷಿತ್ ಈಗ ಆಯ್ಕೆ ನೀಡುವಂತೆ ಕೇಳುತ್ತಾನೆ. ಆಗ ಅಲ್ಲಿದ್ದ ಪ್ರೇಕ್ಷಕರೆಲ್ಲಾ ಚಪ್ಪಾಳೆ ಹೊಡೆಯುತ್ತಾರೆ. ಅಮಿತಾಬ್ ಕೂಡ ನಸು ನಗುತ್ತಾರೆ. ಆ ನಂತರ ಎ. ಬಾಲ ಕಾಂಡ, ಬಿ. ಅಯೋಧ್ಯಾ ಕಾಂಡ, ಸಿ. ಕಿಷ್ಕಿಂಧಾ ಕಾಂಡ, ಡಿ. ಯುದ್ಧ ಕಾಂಡ ಎಂದು ಆಯ್ಕೆಗಳನ್ನು ನೀಡುತ್ತಾರೆ. ಇಲ್ಲಿ ಇಷಿತ್ ಎಡವುತ್ತಾನೆ. ಅತಿಯಾದ ಆತ್ಮವಿಶ್ವಾಸದಲ್ಲಿ ಯೋಚನೆಯನ್ನು ಕೂಡ ಮಾಡದೇ ಅಯೋಧ್ಯಾ ಕಾಂಡನ್ನು ಚೆನ್ನಾಗಿ ಲಾಕ್ ಮಾಡಿ ಎಂದು ಹೇಳುತ್ತಾನೆ.
ಆಗ ಅಮಿತಾಬ್ ನಿಜಕ್ಕೂ ಲಾಕ್ ಮಾಡೋದಾ ಎಂದಾಗ ಅಯ್ಯೋ ಲಾಕ್ ಮಾಡಿ ಸರ್ ಒಂದು ಬೇಡ ಅದರ ಮೇಲೆ ನಾಲ್ಕು ಲಾಕ್ಗಳನ್ನು ಹಾಕಿ ಎನ್ನುತ್ತಾನೆ. ಆದರೆ ಉತ್ತರ ತಪ್ಪಾಗಿರುತ್ತೆ. ಸರಿಯಾದ ಉತ್ತರ ಬಾಲ ಕಾಂಡ ಆಗಿರುತ್ತೆ. ಈ ಮೂಲಕ 25,000 ಗೆದ್ದಿದ್ದ ಇಷಿತ್ ಎಲ್ಲವನ್ನು ಕಳೆದುಕೊಂಡು ಮರಳುತ್ತಾನೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನಾಕ್ರೋಶಕ್ಕೆ ಕೂಡ ಕಾರಣವಾಗಿದೆ. ಹಲವರು ಉದ್ದಟತನದ ಪ್ರದರ್ಶನ ಮಾಡಿದ ಇಷಿತ್ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇಷಿತ್ ಮತ್ತು ಇಷಿತ್ನ ಪೋಷಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮಗುವಿನ ಲಾಲನೆ ಪಾಲನೆ ಹೇಗೆ ಮಾಡಬೇಕು ಎನ್ನುವುದಕ್ಕೆ ಪ್ರತಿ ಪೋಷಕರಿಗೆ ಇದೊಂದು ಪಾಠ ಎಂದು ಹೇಳಿದ್ದಾರೆ.
ನಿಮ್ಮ ಮಗು ಕೇವಲ ಜ್ಞಾನ ಇದ್ದರೆ ಮಾತ್ರ ಪ್ರಯೋಜನ ಇಲ್ಲ. ಆ ಮಗುವಿನಲ್ಲಿ ಸಭ್ಯತೆ ಇಲ್ಲದಿದ್ದರೆ ಅಥವಾ ಹಿರಿಯರ ಮುಂದೆ ಹೇಗೆ ಮಾತನಾಡಬೇಕೆಂದು ತಿಳಿದಿಲ್ಲದಿದ್ದರೆ, ಅವನು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಹೇಳಿರುವ ಒಬ್ಬರು ನಾನು ಅಮಿತಾಬ್ ಬಚ್ಚನ್ ಅವರ ಸ್ಥಾನದಲ್ಲಿದ್ದರೆ, ಎರಡು ಬಾರಿ ಹೊಡೆದು ನಂತರ ಪ್ರಶ್ನೆಗಳನ್ನು ಕೇಳುತ್ತಿದ್ದೆ ಎಂದು ಹೇಳಿದ್ಧಾರೆ. ಮತ್ತೊಬ್ಬರು, "ಪರಿಪೂರ್ಣ ಅಂತ್ಯ. ಅಹಂಕಾರಕ್ಕೆ ತಕ್ಕ ಪಾಠ. ಬಹುಶಃ ಈಗ ಪೋಷಕರಿಗೆ ನಾವು ಪೋಷಕರಾಗಿ ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ ಎನ್ನುವುದು ಮನವರಿಕೆಯಾಗಿರಬಹುದು ಎಂದು ಹೇಳಿದ್ಧಾರೆ. ಇದೇ ಮೊದಲ ಬಾರಿ ಒಂದು ಮಗು ಸೋತಾಗ ನಾನು ಚಪ್ಪಾಳೆ ಹೊಡೆದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಓವರ್ ಸ್ಮಾರ್ಟ್ ಕಿಡ್ ಎಂದು ಕೂಡ ಇಷಿತ್ನ ಕರೆಯುತ್ತಿದ್ದಾರೆ.
ಇನ್ನು ಕೆಲವರು ಮಗುವನ್ನು ಗುರಿಯಾಗಿಸಿಕೊಂಡು ಮಾತನಾಡಬೇಡಿ, ಟ್ರೋಲ್ ಮಾಡಬೇಡಿ, ತಪ್ಪು ಮಗುವಿನದ್ದಲ್ಲ ಅವನ ಹೆತ್ತವರದ್ದು ಅವರಿಗೆ ನೀವೇನೂ ಬೇಕಾದರು ಹೇಳಿ ಆದರೆ ಆ ಮಗುವನ್ನು ಬಿಟ್ಟು ಬಿಡಿ ಎಂದು ಮನವಿಯನ್ನು ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಕಾರ್ಯಕ್ರಮದಲ್ಲಿ ಎಲ್ಲಿಯೂ ತಾಳ್ಮೆಯನ್ನು ಕಳೆದುಕೊಳ್ಳದೇ ತುಂಬಾನೇ ಶಾಂತವಾಗಿ ಇಷಿತ್ನ ಕಾರ್ಯಕ್ರಮದಲ್ಲಿ ಸಂಭಾಳಿಸಿ ಕೊನೆಗೆ ಹೊರ ಕಳುಹಿಸಿದ ಅಮಿತಾಬ್ ಬಚ್ಚನ್ ಅವರ ಈ ವರ್ತನೆಯನ್ನು ಹಲವರು ಮೆಚ್ಚಿ ಕೊಂಡಾಡುತ್ತಿದ್ದಾರೆ. ತಾಳ್ಮೆ ತುಂಬಾ ಇದೆ ಎಂದು ಹೇಳುತ್ತಿದ್ದಾರೆ.


Click it and Unblock the Notifications











