ಬಿಗ್ಬಾಸ್ ಬಳಿಕ ಮತ್ತೆ ದಿವ್ಯಾ ಸುರೇಶ್ 'ಆಮ್ರಪಾಲಿ' ಅವತಾರದಲ್ಲಿ ಪ್ರತ್ಯಕ್ಷ!
ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ದಿವ್ಯಾ ಸುರೇಶ್ ಯಾರಿಗೆ ಗೊತ್ತಿಲ್ಲ ಹೇಳಿ? ನಟನೆಯ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಮುದ್ದು ಮುಖದ ಚೆಲುವೆ ದಿವ್ಯಾ ಸುರೇಶ್ ಅವರು ಬಿಗ್ ಬಾಸ್ಗೆ ಬಂದ ನಂತರ ತಮ್ಮ ಮನೋಸ್ಥೈರ್ಯವನ್ನು ಪ್ರದರ್ಶಿಸಿ ಇನ್ನು ಫೇಮಸ್ ಆದರು. ಇದೀಗ ಕಲರ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ತ್ರಿಪುರ ಸುಂದರಿ' ಎಂಬ ಸೂಪರ್ ನ್ಯಾಚುರಲ್ ಫ್ಯಾಂಟಸಿ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಇವರು ತಮ್ಮ ಧಾರಾವಾಹಿ ಜರ್ನಿ ಬಗ್ಗೆ ಮಾತನಾಡಿದ್ದಾರೆ.
'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ ಗಂಧರ್ವ ಕನ್ಯೆ ಆಮ್ರಪಾಲಿ ಎಂಬ ಪಾತ್ರದ ಮೂಲಕ ತಮ್ಮ ಅಭಿನಯದ ಝಲಕ್ ಅನ್ನು ತೋರಿಸುತ್ತಿರುವ ನಟಿ ದಿವ್ಯ ಸುರೇಶ್ ಅವರದು ಬಿಗ್ ಬಾಸ್ ನಂತರ ಇದು ಮೊದಲ ಧಾರಾವಾಹಿ. ವರ್ಷಗಳಿಂದ ಕಿರುತೆರೆ ಜೊತೆ ಹಿರಿತೆರೆಯಲ್ಲಿಯೂ ಸಕ್ರಿಯವಾಗಿರುವ ದಿವ್ಯ ಸುರೇಶ್ ಅವರು ತೆಲುಗು ನಟನಾರಂಗದಲ್ಲೂ ಕಾಣಿಸಿಕೊಂಡಿದ್ದಾರೆ.

ಫೇಮಸ್ ಕೊಟ್ಟಿದ್ದು ಆಮ್ರಪಾಲಿ ಪಾತ್ರ
ಇದೀಗ ತಮ್ಮ ಹೊಸ ಪಾತ್ರದ ಬಗ್ಗೆ ಮಾತನಾಡಿದ ಅವರು " ಗಂಧರ್ವ ಕನ್ಯೆಯಾಗಿ ಒಂದು ಸೂಪರ್ ನ್ಯಾಚುರಲ್ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಸಿಕ್ಕಾಗ ನನಗೆ ಬಹಳ ಖುಷಿಯಾಯಿತು. ಕೇಳಿದ ತಕ್ಷಣ ಕಥೆಯು ಹಿಡಿಸಿತು. ಪಾತ್ರ ಬಹಳ ಚಾಲೆಂಜಿಂಗ್ ಆಗಿದೆ ಎಂದು ಎನಿಸಿತು. ಏಕೆಂದರೆ ಈ ರೀತಿಯ ಫ್ಯಾಂಟಸಿ ಧಾರಾವಾಹಿಗಳನ್ನು ಜನರು ಒಪ್ಪಿಕೊಳ್ಳಬೇಕೆಂದರೆ ಸುಲಭದ ಮಾತಲ್ಲ. ಅದರ ಹಿಂದೆ ಬಹಳಷ್ಟು ಶ್ರಮವಿರುತ್ತದೆ. ಗಂಧರ್ವ ಕನ್ಯೆ ಲುಕ್ಗೆ ಅವಳ ಮಾತಿಗೆ ಮಾತಿನ ಸ್ಪಷ್ಟತೆ ಎಲ್ಲಕ್ಕೂ ಬಹಳ ಪ್ರಶಂಸೆ ಸಿಕ್ಕಿದೆ. ಇದು ನನಗೆ ವೈಯಕ್ತಿಕವಾಗಿ ಬಹಳ ಸಂತೋಷ ತಂದಿದೆ. ಇದರ ಹಿಂದೆ ಧಾರಾವಾಹಿ ತಂಡ ಬಹಳಷ್ಟು ಶ್ರಮಿಸಿದೆ. ಇದು ನನಗೆ ಬಿಗ್ ಬಾಸ್ ನಂತರ ಸಿಕ್ಕ ಮೊದಲ ಅವಕಾಶ, ಈ ರೀತಿಯ ಒಂದು ವಿಶೇಷ ಪಾತ್ರದಲ್ಲಿ ಅವಕಾಶ ಸಿಗುತ್ತದೆ ಎಂದು ನಿರೀಕ್ಷೆಯು ಮಾಡಿರಲಿಲ್ಲ. ಹಾಗಾಗಿ ಇದು ನನಗೊಂದು ಬ್ಯೂಟಿಫುಲ್ ಸರ್ಪ್ರೈಸ್ ಗಿಫ್ಟ್" ಎಂದಿದ್ದಾರೆ.

ಗ್ರಾಂಥಿಕ ಭಾಷೆ ಕಲಿಯಲು ಏನು ಮಾಡಿದ್ರು?
"ಈ ಧಾರಾವಾಹಿಗಾಗಿ ನಾನು ಗ್ರಾಂಥಿಕ ಭಾಷೆಯಲ್ಲಿ ಮಾತನಾಡಬೇಕಿತ್ತು. ಹಾಗಾಗಿ ಗ್ರಾಂಥಿಕ ಕನ್ನಡ ಕಲಿಯಲು ನಾನು ಎರಡು ತಿಂಗಳ ಕಾಲ ವರ್ಕ್ ಶಾಪ್ ಗೆ ಹೋದೆ. ಹಾಗೆ ಮಾರ್ಷಲ್ ಆರ್ಟ್ಸ್ ಅನ್ನು ಕೂಡ ಕಲಿತೆ. ಲುಕ್ ಟೆಸ್ಟ್, ಭಾಷೆ, ಬಾಡಿ ಲ್ಯಾಂಗ್ವೇಜ್ ಹೀಗೆ ಪ್ರತಿಯೊಂದು ಹಂತದಲ್ಲಿಯೂ ಬಹಳಷ್ಟು ಕಲಿಯಲು ಇತ್ತು. ಅದೆಲ್ಲಾ ಮಾಡಿ ಈ ಪಾತ್ರವನ್ನು ಗಿಟ್ಟಿಸಿಕೊಂಡಿದ್ದೇನೆ. ಹಾಗಾಗಿ ನನಗೆ ಬಹಳ ಸಂತೃಪ್ತಿ ಇದೆ." ಎಂದಿದ್ದಾರೆ.

ನಟಿಯಾಗುವ ಬಯಕೆ ಹುಟ್ಟಿದ್ದೇಗೆ?
ಚಿಕ್ಕಂದಿನಿಂದಲೂ ನಟಿಯಾಗಬೇಕೆಂದು ಬಹಳ ಆಸೆ ಹೊತ್ತ ದಿವ್ಯಾ ಸುರೇಶ್ ಅವರಿಗೆ ನಟನೆಯಲ್ಲಿ ತುಂಬಾ ಆಸಕ್ತಿ ಇತ್ತು. ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಭಾಗವಹಿಸುತ್ತಾ ಮುಂದೆ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ನಂತರ ಹಿರಿತೆರೆ ಕಿರುತೆರೆ ಎರಡರಲ್ಲೂ ಸಾಕಷ್ಟು ಕಾಣಿಸಿಕೊಂಡಿದ್ದಾರೆ.

ಒಂದೊಳ್ಳೆ ಪಾತ್ರಕ್ಕಾಗಿ ಕಾಯ್ತಿರೋ ದಿವ್ಯಾ
"ನನಗೆ ಕಿರುತೆರೆ ಅಥವಾ ಹಿರಿತೆರೆ ಎಂಬ ಯಾವುದೇ ವ್ಯತ್ಯಾಸವಿಲ್ಲ. ಆದರೂ ಸಿನಿಮಾಗಳಿಗೆ ನಾನು ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತೇನೆ. ಅದರಲ್ಲೂ ನನಗೆ ನಾಯಕಿ ನಟಿಯಾಗಿ ಜನಪ್ರಿಯಳಾಗಬೇಕೆಂದು ಆಸೆ ಇದೆ. ಈಗಾಗಲೇ ಬಹಳಷ್ಟು ಪಾತ್ರಗಳು ಅವಕಾಶಗಳು ಸಿಗುತ್ತಿದ್ದರೂ ನಾನು ಒಳ್ಳೆಯ ವಿಭಿನ್ನ ಪಾತ್ರಗಳಿಗಾಗಿ ಕಾಯುತ್ತಿದ್ದೇನೆ" ಎಂದರು.

'ಹಿರಣ್ಯ' ಸಿನಿಮಾದಲ್ಲಿ ನಟನೆ
'ತ್ರಿಪುರ ಸುಂದರಿ' ಧಾರಾವಾಹಿಗೂ ಮೊದಲು ನಟಿ ದಿವ್ಯ ಸುರೇಶ್ ಅವರು 'ಪ್ರೇಮಲೋಕ' ಹಾಗೂ 'ನನ್ ಹೆಂಡ್ತಿ ಎಂಬಿಬಿಎಸ್' ಎಂಬ ಎರಡು ಧಾರಾವಾಹಿಗಳಲ್ಲಿ ನಟಿಸಿದ್ದರು. 9 'ಹಿಲ್ಟನ್ ಹೌಸ್', 'ಥರ್ಡ್ ಕ್ಲಾಸ್' ಹಾಗೂ 'ರೌಡಿ ಬೇಬಿ' ಎಂಬ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ನಟ ರಾಜವರ್ಧನ್ ಅವರು ನಟಿಸುತ್ತಿರುವ 'ಹಿರಣ್ಯ' ಎಂಬ ಸಿನಿಮಾದಲ್ಲಿ ಪಾತ್ರ ಮಾಡಿರುವ ದಿವ್ಯ ಸುರೇಶ್ ಅವರು ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.


Click it and Unblock the Notifications