Amruthadhaare ; ಗೌತಮ್ ಗೌರವಕ್ಕೆ ಧಕ್ಕೆ - ವಠಾರದವರ ವಿರುದ್ದ ಕೆರಳಿ ಕೆಂಡವಾದ ಭೂಮಿಕಾ
''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಮನ ಪರಸ್ಪರ ಮಿಡಿಯುತ್ತಿದೆ. ಆದರೆ, ಮೌನ ಮಾತಾಗುತ್ತಿಲ್ಲ. ಪ್ರೇಮಧಾರೆ ಹರಿಯುತ್ತಿಲ್ಲ. ಎಷ್ಟೇ ಕಷ್ಟ ಆದರೂ ತಮ್ಮ ಪ್ರೀತಿಯನ್ನು ಇಬ್ಬರು ವ್ಯಕ್ತಪಡಿಸುತ್ತಿಲ್ಲ. ಗೌತಮ್ ಮತ್ತು ಭೂಮಿಕಾಳ ಈ ನಡೆಯಿಂದ ಇಬ್ಬರನ್ನೂ ಒಂದು ಮಾಡಬೇಕೆಂಬ ಮಲ್ಲಿ, ಕಾವೇರಿ ಮತ್ತು ಆನಂದ್ ಆಸೆಗೆ ತಣ್ಣೀರರೆಚಿದಂತಾಗುತ್ತಿದೆ.ಹೀಗಿರುವಾಗ ಇದೀಗ ಗೌತಮ್ ಹಾಸಿಗೆ ಹಿಡಿದಿದ್ದಾನೆ.
ಪ್ರತಿ ದಿನ ಕಣ್ಣೇದುರು ಕಾಣುವ ಗೌತಮ್ ಕಾಣ್ತಿಲ್ಲ. ಇದರಿಂದ ವಿಚಲಿತಗೊಂಡಿರುವ ಭೂಮಿಕಾಗೆ ಮಿಂಚು ಕಡೆಯಿಂದ ಗೌತಮ್ ಅನಾರೋಗ್ಯಕ್ಕೀಡಾದ ವಿಚಾರ ಗೊತ್ತಾಗುತ್ತೆ.ಈ ಸುದ್ದಿ ಕೇಳಿ ಭೂಮಿಕಾ ಇನ್ನೂ ಚಿಂತೆಗೀಡಾಗಿದ್ದಾಳೆ. ಮನಸ್ಸು ತಡೆಯಲಾರದೆ ಸೀದಾ ಗೌತಮ್ ಮನೆಗೆ ಹೋಗಿದ್ದಾಳೆ. ಜ್ವರದಿಂದ ಬಳಲುತ್ತಿರುವ ಗೌತಮ್ ಹಣೆಯ ಮೇಲೆ ತಣ್ಣೀರು ಪಟ್ಟಿ ಇಟ್ಟು ಆರೈಕೆ ಮಾಡಿದ್ದಾಳೆ.

ಆದರೆ, ಎಲ್ಲರಿಗೆ ಗೊತ್ತಿರುವಂತೆ ಅದೂ-ಇದೂ ಎಂದು ಮಾತನಾಡುವ ಸಮಾಜ ನಮ್ಮದು. ಅದರಲ್ಲಿಯೂ ಮದುವೆಯಾದ ಹೆಣ್ಣು ಒಬ್ಬ ಗಂಡಿನ ಮನೆಗೆ ಒಬ್ಬಂಟಿಯಾಗಿ ಹೋದರೆ ನೂರೆಂಟಯ ಕಥೆ ಹೆಣೆಯುತ್ತೆ ನಮ್ಮ ಸಮಾಜ. ಸದ್ಯ ಭೂಮಿಕಾ ವಿಚಾರದಲ್ಲಿ ಕೂಡ ಇದೇ ಆಗಿದ್ದು, ಗಂಡ-ಹೆಂಡ್ತಿ ಎನ್ನುವ ಸತ್ಯ ಅರಿಯದ ವಠಾರದವರು ಗೌತಮ್ ಮನೆಯಿಂದ ಭೂಮಿಕಾ ಹೊರ ಬಂದಿದ್ದನ್ನು ಕಂಡು ಕಥೆ ಕಟ್ಟುತ್ತಾರೆ.
ವಠಾರಕ್ಕೆ ಬಂದಾಗಲೇ ಕೇಳಬೇಕು ಎಂದುಕೊಂಡಿದ್ದೇ, ಎಲ್ಲಿ ನಿನ್ನ ಗಂಡ ಕಾಣಿಸೋದೇ ಇಲ್ಲ ಎಂದು ಒಬ್ಬ ಹೆಂಗಸು ಪ್ರಶ್ನೆಯನ್ನು ಭೂಮಿಕಾಗೆ ಕೇಳಿದರೆ, ಮತ್ತೊಬ್ಬ ಹೆಂಗಸು ಅವಳ ಗಂಡ ಇದೆಲ್ಲ ನೋಡಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ ಎನ್ನುತ್ತಾರೆ. ಯಾರಿಗೆ ಗೊತ್ತು ಇದೆಲ್ಲಾ ನೋಡಲು ಆಗದೇ ಮನೆ ಬಿಟ್ಟು ಹೋಗಿದಾನೋ ಏನೋ ಎಂದು ಭೂಮಿಕಾಳನ್ನು ಕಂಡು ಆಡಿಕೊಳ್ಳುತ್ತಾರೆ.
ಹೀಗೆ ವಠಾರದವರು ಬಾಯಿಗೆ ಬಂದಂತೆ ಮಾತನಾಡುವುದನ್ನು ಕಂಡ ಮಲ್ಲಿ, ಇವರಿಗೆಲ್ಲಾ ಮಾಡೋಕೆ ಕೆಲಸ ಇಲ್ವಾ..? ಎಂದು ಮನದಲ್ಲಿಯೇ ಅಂದುಕೊಳ್ಳುತ್ತಾಳೆ. ಇದೆಲ್ಲ ಕೇಳಿಸಿಕೊಂಡು ಅಕ್ಕಾ ಯಾಕೆ ಸುಮ್ಮನೆ ಇದ್ದಾರೆ ಎಂದುಕೊಳ್ಳುತ್ತಾಳೆ. ಇಷ್ಟೆಲ್ಲಾ ಆದರೂ ಕೂಡ, ಮನದಲ್ಲಿ ಆಕ್ರೋಶದ ಜ್ವಾಲೆ ಹೊತ್ತಿ ಉರಿಯುತ್ತಿದ್ದರೂ ಕೂಡ ಭೂಮಿಕಾ ಎಲ್ಲವನ್ನು ಸಹಿಸಿಕೊಂಡು ಸುಮ್ಮನೆ ಇರುತ್ತಾಳೆ.
ಆದರೆ.. ಇಷ್ಟಕ್ಕೆ ಸುಮ್ಮನಾಗದ ವಠಾರದವರು ಗೌತಮ್ನ ವ್ಯಕ್ತಿತ್ವವನ್ನೇ ಪ್ರಶ್ನೆ ಮಾಡುತ್ತಾರೆ. ಗೌತಮ್ ಒಳ್ಳೆಯವನು ಎಂದುಕೊಂಡಿದ್ವಿ ಆದರೆ ಅವನು ಕೂಡ ಕೆಟ್ಟವನು ಎಂಬರ್ಥದಲ್ಲಿ ಮಾತನಾಡುತ್ತಾರೆ. ವಠಾರದವರು ಆಡಿದ ಈ ಮಾತುಗಳಿಗೆ ಸಹನೆ-ತಾಳ್ಮೆಯನ್ನು ಕಳೆದುಕೊಳ್ಳುವ ಭೂಮಿಕಾ, ಕೆರಳಿ ಕೆಂಡವಾಗುತ್ತಾಳೆ. ನಿಮಗೆಲ್ಲಾ ನಾಚಿಕೆಯಾಗಲ್ವಾ ಎಂದು ಆಕ್ರೋಶ ವ್ಯಕ್ತಪಡಿಸುತ್ತಾಳೆ.

ಗೌತಮ್ ಅವರು ಹಾಗೇ ಹೀಗೆ, ದೇವ್ರಂಥಾ ಮನುಸ್ಯ ಎಂದು ನೀವೆ ತಾನೇ ಹೇಳುತ್ತಿದ್ದಿದ್ದು ಎಂದು ಕೆರಳುವ ಭೂಮಿಕಾ ನಿನ್ನೆ ಮಧ್ಯಾಹ್ನದಿಂದ ಅವರು ಮನೆಯಾಚೆ ಬಂದಿಲ್ಲ. ಯಾರಾದ್ರೂ ಒಬ್ಬರಾದರೂ ನೋಡಿದೀರಾ..? ಗಮನಿಸಿದೀರಾ..? ಎಂದು ಕಿಡಿ ಕಾರುತ್ತಾಳೆ. ಏನಾಗಿದೆ ಎಂದು ಹೋಗಿ ವಿಚಾರಿಸಿದ್ದೀರಾ..? ಎನ್ನುತ್ತಾಳೆ.ನಮ್ಮ ಕೆಲಸ ಆದರೆ ಸಾಕು ಯಾರಾದರೂ ಹಾಳಾಗಿ ಹೋಗ್ಲೀ ಎನ್ನುವ ಮನಸ್ಥಿತಿ ನಿಮ್ಮದೆಲ್ಲಾ ಎಂದು ಛೀಮಾರಿ ಹಾಕುತ್ತಾಳೆ. ಬರೀ ಸಹಾಯ ತೆಗೆದುಕೊಳ್ಳುವುದು ಅಲ್ಲ ಬೇರೆಯವರಿಗೆ ನಾವು ಸಹಾಯ ಮಾಡಬೇಕು ಎನ್ನುತ್ತಾಳೆ.
ಭೂಮಿಕಾಳ ಈ ರೌದ್ರಾವತಾರಕ್ಕೆ ಪ್ರಶ್ನೆ ಮಾಡುತ್ತಿದ್ದ ವಠಾರದ ಜನ ಥಂಡಾ ಹೊಡೆದಿದ್ದು, ನಿಮ್ಮ ಮಾತು ನಿಮ್ಮ ಯೋಚನೆಯಿಂದನೇ ನಿಮ್ಮ ಮನಸ್ಸು ಎಷ್ಟು ಕೊಳೆತು ನಾರುತ್ತಿದೆ ಎನ್ನುವುದು ಗೊತ್ತಾಗುತ್ತೆ ಎಂದು ಭೂಮಿಕಾ ಹೇಳುತ್ತಾಳೆ. ನೀವೆಲ್ಲಾ ಹಿರಿಯರು ಎಂದು ತಪರಾಕಿ ಹಾಕುತ್ತಾಳೆ. ನಾನು ಯಾರು..? ನನ್ನ ಹಿನ್ನೆಲೆ ನಿಮಗೇನಾದರೂ ಗೊತ್ತಾ ..? ಎಂದು ಇದೇ ಸಮಯದಲ್ಲಿ ಮಾತನಾಡುವ ಭೂಮಿಕಾ ಆ ನಂತರ ನನ್ನ ಬಗ್ಗೆ ಗೊತ್ತಾಗುವುದು ಬೇಡ, ಆದರೆ ಗೌತಮ್ ಅವರು 5 ವರ್ಷದಿಂದ ಈ ವಠಾರದಲ್ಲಿದ್ದಾರೆ, ಅವರ ಬಗ್ಗೆ ಗೊತ್ತಿರಬೇಕಲ್ವಾ..? ಅವರೇನು ಅಂತ ಗೊತ್ತಿರಬೇಕಿಲ್ವಾ..? ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಈ ವಠಾರದಲ್ಲಿದ್ದೀರಾ, ಒಂದು ದಿನ ಆದರೂ ಗೌತಮ್ ಅವರು ನಿಮ್ಮನ್ನೆಲ್ಲಾ ಕೆಟ್ಟ ದೃಷ್ಟಿಯಿಂದ ನೋಡಿದ್ದಾರಾ ಎಂದು ಭೂಮಿಕಾ ಬೆಂಕಿಯುಂಡೆ ಉಗುಳಿದ್ದಾಳೆ.


Click it and Unblock the Notifications











