Amruthadhaare: ಗೌತಮ್ ಮತ್ತು ಆನಂದ್ ಸ್ನೇಹಕ್ಕೆ ಸೇತುವೆ ಆಗುತ್ತಾಳಾ ಭೂಮಿಕಾ..?
ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಅಂತೂ ಇಂತೂ ಗೌತಮ್ ಮತ್ತು ಆನಂದ್ ಸಂಬಂಧಕ್ಕೆ ದೊಡ್ಡ ಗೋಡೆ ಕಟ್ಟಲು ಶುರು ಮಾಡಿದ್ದಾಳೆ. ಆನಂದ್ಗೆ ಈಗ ಯಾರ ಬಳಿಯೂ ಹೇಳಿಕೊಳ್ಳಲಾಗದಂತಹ ಸಂಕಟ. ತಾನು ಕಳ್ಳತನ ಮಾಡದಿದ್ದರೂ ಕೂಡ ಈಗ ಬೇರೆ ದಾರಿ ಇಲ್ಲದೇ ಅಪವಾದವನ್ನು ಹೊತ್ತುಕೊಳ್ಳಬೇಕಾಗಿದೆ.
ಗೌತಮ್ಗೂ ಬೇರೆ ದಾರಿ ಇಲ್ಲದೇ, ಆನಂದ್ ಮೇಲಿನ ಅಪವಾದವನ್ನು ಒಪ್ಪಿಕೊಳ್ಳುವಂತಹ ಸಂದರ್ಭ ಬಂದಿದೆ. ಈಗ ಇಬ್ಬರ ಹಲವು ವರ್ಷಗಳ ಸ್ನೇಹ ಮುರಿದು ಬಿದ್ದಿದೆ.

ಗೌತಮ್ ಆತಂಕದಲ್ಲಿ ಈಗ ಭೂಮಿಕಾ ಜೊತೆಗೂ ಜಗಳ ಮಾಡಿದ್ದಾನೆ. ಬೆಳಗ್ಗೆ ಎದ್ದವನೇ ಸೀದಾ ವಾಕಿಂಗ್ ಎಂಬ ನೆಪದಲ್ಲಿ ಆನಂದ್ ಗಾಗಿ ಪಾರ್ಕ್ ನಲ್ಲಿ ಕಾಯುತ್ತಾ ಕುಳಿತಿದ್ದಾನೆ. ಆನಂದ್ ಬಾರದಿದ್ದನ್ನು ಕಂಡು ಬೇಸರದಲ್ಲಿದ್ದಾನೆ.
ಭೂಮಿಕಾಳಿಗೆ ಗೌತಮ್ ಬಗ್ಗೆ ಯೋಚನೆ
ಗೌತಮ್ ಬಗ್ಗೆ ಕಾಳಜಿ ಇರುವ ಭುಮಿಕಾ, ಆತನನ್ನು ಹುಡುಕಿಕೊಂಡು ಪಾರ್ಕ್ಗೆ ಬಂದಿದ್ದಾಳೆ. ಗೌತಮ್, ಆನಂದ್ ಜೊತೆಗೆ ಕಳೆದ ಕ್ಷಣಗಳನ್ನು ನೆನೆದು ಕುಳಿತಿರುತ್ತಾನೆ. ಭೂಮಿಕಾ ಬಂದು ಗೌತಮ್ಗೆ ಸಮಾಧಾನದ ಮಾತುಗಳನ್ನು ಆಡುತ್ತಾಳೆ. ಬಳಿಕ ಬನ್ನಿ ಎಂದು ಕರೆದುಕೊಂಡು ಹೋಗಿ ಎಳನೀರು ಕುಡಿಸುತ್ತಾಳೆ. ಗೌತಮ್ ಮತ್ತು ಆನಂದ್ ಸ್ನೇಹವನ್ನು ಭೂಮಿಕಾ ಸರಿ ಮಾಡುತ್ತಾಳಾ ಕಾದು ನೋಡಬೇಕಿದೆ.
ಮಹಿಮಾಳ ಕಷ್ಟಕ್ಕೆ ಮಿಡಿದ ಸ್ನೇಹಿತ
ಇನ್ನು ಮಹಿಮಾಳಿಗೆ ಜೀವನ್ ಮನೆಯಲ್ಲಿ ಹೊಂದಿಕೊಳ್ಳುವುದೇ ಕಷ್ಟವಾಗುತ್ತಿದೆ. ಆದರೆ, ಪ್ರೀತಿಸಿ ಮದುವೆಯಾದ ಕಾರಣಕ್ಕೆ ಕಷ್ಟವೋ ಸುಖವೋ ಎಲ್ಲದಕ್ಕೂ ಮಹಿಮಾ ಹೊಂದಿಕೊಂಡು ಹೋಗುತ್ತಿದ್ದಾಳೆ. ಸಣ್ಣ ಪುಟ್ಟ ಸಮಸ್ಯೆ ಎದುರಾದರೂ ಕೂಡ ಮ್ಯಾನೇಜ್ ಮಾಡುತ್ತಿದ್ದಾಳೆ. ಇದರ ನಡುವೆ ಮಹಿಮಾಳನ್ನು ಅವರ ಅಕ್ಕ ಅಶ್ವಿನಿ ಬೇರೆ ವ್ಯಂಗ್ಯ ಮಾಡಿದ್ದಾಳೆ. ಮಾತು ಮಾತಿಗೂ ಚುಚ್ಚುತ್ತಿದ್ದಾಳೆ. ಇದರಿಂದ ಮಹಿಮಾಳಿಗೆ ಬಹಳ ಬೇಸರವಾಗಿದೆ.

ಮಹಿಮಾಳನ್ನು ಔಟಿಂಗ್ ಕರೆದ ಸ್ನೇಹಿತ
ಮಹಿಮಾ ತನ್ನ ಸಂಕಟವನ್ನು ಹೇಳಿಕೊಳ್ಳಲೂ ಕೂಡ ಯಾರೂ ಇಲ್ಲದಂತಾಗಿದೆ. ಹೀಗಾಗಿ ತನ್ನ ಸ್ನೇಹಿತನ ಬಳಿ ವಿಚಾರ ಹೇಳಿಕೊಂಡಿದ್ದು, ಆತ ಈಗ ಔಟಿಂಗ್ ಹೋಗೋಣ ರೆಡಿಯಾಗು ಎಂದು ಹೇಳಿದ್ದಾನೆ. ಮಹಿಮಾ ತನಗೇ ತಿಳಿಯದಂತೆ ದಾರಿ ತಪ್ಪುತ್ತಾಳಾ? ಅನ್ನೋ ಕುತೂಹಲ ಮೂಡಿದೆ.
ಆಫೀಸ್ಗೂ ಬಾರದ ಆನಂದ್
ಇನ್ನು ಗೌತಮ್ ಬೇಸರದಲ್ಲೇ ಆಫೀಸ್ಗೆ ಬಂದಿದ್ದಾನೆ. ಆನಂದ್ಗೋಸ್ಕರ ಎಷ್ಟು ಕಾದರೂ, ಆನಂದ್ ಮಾತ್ರ ಆಫಿಸಿಗೆ ಬಂದಿಲ್ಲ. ಅಲ್ಲದೇ, ಶಕುಂತಲಾ ಕೂಡ ಪ್ಲಾನ್ ಮಾಡಿ ಆನಂದ್ ಮತ್ತು ಗೌತಮ್ ಇಬ್ಬರ ನಡುವಿನ ಬಿರುಕನ್ನು ಹೆಚ್ಚು ಮಾಡಲು ಮುಂದಾಗಿದ್ದಾಳೆ. ಹೀಗಾಗಿ ಆನಂದ್ ಆಫೀಸಿಗೆ ಬಾರದಿರಲು ಕಾರಣ ತಾನು ಮಾಡಿರುವ ತಪ್ಪು ಎಂದು ಜೈದೇವ ಮತ್ತು ಲಕ್ಷ್ಮೀಕಾಂತ ಇಬ್ಬರೂ ಗೌತಮ್ ತಲೆ ತುಂಬುತ್ತಿದ್ದಾರೆ. ಆದರೆ ಗೌತಮ್ಗೆ ಆನಂದ್ ಇಲ್ಲದೇ ಆಫಿಸಿನಲ್ಲಿ ಯಾವ ಕೆಲಸವನ್ನು ಮಾಡಲೂ ಸಾಧ್ಯವಾಗುತ್ತಿಲ್ಲ.
ಆನಂದ್ ಮನೆಗೆ ಬಂದ ಭೂಮಿಕಾ
ಇತ್ತ ಆನಂದ್ ಮೇಲೆ ಗೌತಮ್ ಅನುಮಾನಿಸಿದ್ದಕ್ಕಾಗಿ ಅಪರ್ಣಾ ಕೋಪ ಮಾಡಿಕೊಂಡಿದ್ದಾಳೆ. ಹೀಗಾಗಿ ಆನಂದ್ಗೆ ಯಾವುದೇ ಕಾರಣಕ್ಕೂ ಆಫಿಸಿಗೆ ಹೋಗಬಾರದು ಎಂದು ಗಲಾಟೆ ಮಾಡಿದ್ದಾಳೆ. ನೀವು ಮಾಡದ ತಪ್ಪಿಗೆ ಅವಮಾನ ಮಾಡಿ ಗೂಬೆ ಕೂರಿಸಿದ್ದಾರೆ, ಅಂತಹ ಮನೆಯವರ ಸಂಬಂಧ ನಮಗೆ ಬೇಡ ಎಂದಿದ್ದಾರೆ. ಇನ್ನು ಗೌತಮ್ ಬಗ್ಗೆ ಕಾಳಜಿ ಮಾಡುತ್ತಿರುವ ಭೂಮಿಕಾ ನೇರವಾಗಿ ಆನಂದ್ ಮನೆಗೆ ಹೊರಟಿದ್ದಾಳೆ. ಇಬ್ಬರ ನಡುವಿನ ಬಿರುಕನ್ನು ಸರಿ ಮಾಡಲು ಭೂಮಿಕಾ ಮುಂದಾಗಿದ್ದಾಳೆ. ಆದರೆ, ಇದಕ್ಕೆ ಅಪರ್ಣಾ ಅವಕಾಶ ಮಾಡಿಕೊಡುತ್ತಾಳಾ? ಎಂಬ ಅನುಮಾನವಿದೆ.


Click it and Unblock the Notifications











