Amruthadhaare ; ಮನೆಯವರೆಲ್ಲಾ ಆತಂಕದಲ್ಲಿದ್ದರೆ, ಈಗಲೂ ನಟಿಸುತ್ತಾ ಎಲ್ಲರನ್ನೂ ಆಡಿಸುತ್ತಿರುವ ಜೈದೇವ್..!
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಆಟಗಳಿಗೆ ಬ್ರೇಕ್ ಹಾಕಬೇಕು ಎಂದು ಭೂಮಿಕಾ ಪ್ರತಿಯೊಂದಕ್ಕೂ ಸಾಕ್ಷಿ ಹೊಂದಿಸಿ, ಗೌತಮ್ ಮುಂದೆ ಸತ್ಯ ಬಾಯಿ ಬಿಟ್ಟಿದ್ದಾಳೆ. ತಮ್ಮನನ್ನು ಹೀಗೆ ಬಿಟ್ಟರೆ ಆಗದು ಎಂದು ಭಾವಿಸಿದ ಗೌತಮ್, ಜೈದೇವ್ ನನ್ನು ಕರೆದು ಮನೆಯವರ ಎದುರು ಅವನ ಬಣ್ಣವನ್ನು ಬಯಲು ಮಾಡಿದ್ದಲ್ಲದೇ, ಕರ್ಮಕಾಂಡವನ್ನು ತೆರೆದಿಟ್ಟಿದ್ದಾನೆ. ಶಕುಂತಲಾ ತನ್ನ ಮಗನೇ ಸ್ವಂತ ತಮ್ಮನನ್ನು ಕೊಲ್ಲಲು ಮುಂದಾದನಲ್ಲ ಎಂದು ಬೇಸರಗೊಂಡಿದ್ದು, ಮನೆಯಿಂದ ಹೊರ ಹಾಕಲು ಯತ್ನಿಸಿದಾಗ ಜೈದೇವ್ ಬೇಕಂತಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಆತಂಕದಲ್ಲಿರುವ ಗೌತಮ್ ಕುಟುಂಬ
ಕೈಗೆ ಸಿಕ್ಕ ವಸ್ತುವಿನಿಂದ ಹೊಟ್ಟೆಗೆ ಚುಚ್ಚಿಕೊಂಡ ಜೈದೇವ್ ನನ್ನು ಮನೆಯವರೆಲ್ಲರೂ ಆಸ್ಪತ್ರೆಗೆ ಸೇರಿಸಿದ್ದಾರೆ. ಜೈದೇವ್ ಗೆ ಪ್ರಜ್ಞೆಯೇ ಬಂದಿಲ್ಲ. ಪ್ರಾಣಾಪಯದಿಂದ ಪಾರಾಗಿದ್ದರೂ ಜೈದೇವ್ ಗೆ ಪ್ರಜ್ಞೆ ಬರುವವರೆಗೂ ಏನೂ ಹೇಳಲಾಗದು ಎಂದು ವೈದ್ಯರು ಹೇಳಿದ್ದಾರೆ. ಇದರಿಂದ ಮನೆಯವರೆಲ್ಲಾ ಆತಂಕಗೊಂಡಿದ್ದಾರೆ. ಅಪರ್ಣಾ ತನ್ನಿಂದಲೇ ಹೀಗಾಯ್ತು ಎಂದು ನೊಂದುಕೊಂಡಿದ್ದಾಳೆ. ಜೈದೇವ್ ಬಗ್ಗೆ ಗೌತಮ್ ಗೆ ಸತ್ಯ ಹೇಳಿದ್ದೇ ತಪ್ಪಾಯ್ತು ಎಂದು ಭಾವಿಸಿ ಭೂಮಿಕಾ ಬೇಸರಿಸಿಕೊಂಡಿದ್ದಾಳೆ. ಇತ್ತ ಮಲ್ಲಿಯೂ ಕೂಡ ತನ್ನ ಮಾತುಗಳಿಂದಲೇ ಪತಿ ಜೈದೇವ್ ಗೆ ಇಂತಹ ಸ್ಥಿತಿ ಬಂತು ಎಂದು ಕೊರಗುತ್ತಿದ್ದಾಳೆ. ಸದ್ಯ ಜೈದೇವ್ ಕಣ್ಣು ಬಿಟ್ಟರೆ ಸಾಕು ಎಂದು ಗೌತಮ್ ಕಾದು ಕುಳಿತಿದ್ದಾನೆ.

ಈಗಲೂ ನಾಟಕ ಮಾಡುತ್ತಿರುವ ಜೈದೇವ್
ಮನೆಯವರೆಲ್ಲಾ ಆತಂಕದಲ್ಲಿದ್ದುಕೊಂಡು ಒದ್ದಾಡುತ್ತಿದ್ದಾರೆ. ಆದರೆ, ಜೈದೇವ್ ಈಗಲೂ ಕೂಡ ನಾಟಕ ಮಾಡುತ್ತಿದ್ದಾನೆ. ಪ್ರಜ್ಞೆ ಇದ್ದರೂ ಕೂಡ ಜೈದೇವ್ ನಟಿಸುತ್ತಿದ್ದಾನೆ. ಲಕ್ಷ್ಮೀಕಾಂತ ಅಳಿಮಯ್ಯನನ್ನು ನೋಡಲೇಬೇಕು ಎಂದು ಆಸ್ಪತ್ರೆಗೆ ಬಂದಿದ್ದಾನೆ. ಜೈದೇವ್ ಎದುರಿಗೆ ಕಣ್ಣೀರು ಹಾಕುತ್ತಾ ಯಾಕೆ ಹೀಗೆ ಮಾಡಿಕೊಂಡೆ ಎಂದು ಗೋಳಾಡಿದ್ದಾನೆ. ನಿನ್ನಿಂದ ಅಲ್ಲಿ ಅಮ್ಮ ಕೂಡ ಹಾಸಿಗೆ ಹಿಡಿದಿದ್ದಾಳೆ ಎಂದು ಲಕ್ಷ್ಮೀಕಾಂತ ಒಬ್ಬನೇ ವಟಗುಡಡುತ್ತಿದ್ದಾನೆ. ಇದ್ದಕ್ಕಿದ್ದ ಹಾಗೆಯೇ ಮಾನಿಟರ್ ಶಬ್ಧ ಮಾಡಿದ್ದಕ್ಕೆ ಗಾಬರಿಯಾಗುತ್ತಾನೆ.
ಜೈದೇವ್ ಗೆ ಸಾಥ್ ಕೊಟ್ಟ ಲಕ್ಷ್ಮೀಕಾಂತ
ಆದರೆ, ಜೈದೇವ್ ಬೇಕಂತಲೇ ಉಸಿರನ್ನು ಹಿಡಿದುಕೊಂಡು ಎಲ್ಲರನ್ನು ಹೆದರಿಸುತ್ತಾನೆ. ಬಳಿಕ ಲಕ್ಷ್ಮೀಕಾಂತ ಒಬ್ಬನೇ ಇರುವಾಗ ಇದೆಲ್ಲಾ ನಾನು ಮಾಡುತ್ತಿರುವ ನಾಟಕ. ಬೇರೆಯವರನ್ನು ಕೊಲ್ಲುವ ನಾನು ಇಷ್ಟು ಸುಲಭವಾಗಿ ಸಾಯುವುದಿಲ್ಲ. ಬೇಕಂತಲೇ ರಕ್ತ ಬರುವಂತೆ ಚುಚ್ಚಿಕೊಂಡು ನಟಿಸಿದೆ. ಈಗ ನೀವು ಹೇಗಾದರೂ ಮಾಡಿ ಅಮ್ಮನನನ್ನು ಒಪ್ಪಿಸಿ ವಾಪಸ್ ನನ್ನನ್ನು ಮನೆಗೆ ಸೇರಿಸಿಕೊಳ್ಳಿ ಎಂದು ಕೇಳುತ್ತಾನೆ. ಇತ್ತ ಪಾರ್ಥ ಅಣ್ಣನನ್ನು ನೋಡಲು ಆಸ್ಪತ್ರೆಗೆ ಹೋಗಲು ಬಯಸಿದ್ದರೆ, ಅಪೇಕ್ಷಾ ನಿರಾಕರಿಸಿದ್ದು, ಕೋಪ ಮಾಡಿಕೊಂಡಿದ್ದಾಳೆ. ನಮ್ಮನ್ನೇ ಕೊಲ್ಲಲು ಬಂದ ಆತನನ್ನು ನೋಡುವ ಅಗತ್ಯವಿಲ್ಲ ಎಂದು ಹೇಳುತ್ತಾಳೆ. ಪಾರ್ಥ ಈಗ ಇಬ್ಬಂದಿ ಸ್ಥಿತಿಯಲ್ಲಿದ್ದಾನೆ.
ಮಗನ ಮೇಲೆ ಕೋಪಗೊಂಡಿರುವ ಶಕುಂತಲಾ
ಶಕುಂತಲಾಳಿಗೆ ಜೈದೇವ್ ಮೇಲೆ ಬಹಳ ಕೋಪವಿದೆ. ಪಾರ್ಥನನ್ನು ಕೊಲ್ಲಲು ಯತ್ನಿಸಿದ್ದಕ್ಕೆ ಬೇಸರ ಮಾಡಿಕೊಂಡಿದ್ದಾಳೆ. ಹೀಗಾಗಿ ಯಾವುದೇ ಕಾರಣಕ್ಕೂ ಜೈದೇವ್ ನನ್ನು ತನ್ನ ಮನೆಯಲ್ಲಿ ಇರಿಸಿಕೊಳ್ಳಬಾರದು ಎಂದು ತೀರ್ಮಾನಿಸಿದ್ದಾಳೆ. ಮನೆಯವರಿಗೆ ಮೋಸ ಮಾಡಿ ಬದುಕುತ್ತಿದ್ದಾನೆ. ಅವನನ್ನು ಎಲ್ಲರಿಗಿಂತಲೂ ಹೆಚ್ಚಾಗಿ ಪ್ರೀತಿಸಿದ್ದೆ. ಆದರೆ, ಅವನೇ ತನಗೆ ಮೋಸ ಮಾಡಿದ್ದಾನೆ ಎಂದು ಬೇಸರಗೊಂಡಿದ್ದಾಳೆ. ಇದೇ ವೇಳೆಗೆ ಶಕುಂತಲಾ ತನ್ನ ಮಗನ ಆರೋಗ್ಯ ಹೇಗಿದೆಯೋ ಏನೋ ಎಂದು ಆತಂಕಗೊಂಡಿದ್ದಾಳೆ. ಹೀಗಿರುವಾಗ ಲಕ್ಷ್ಮೀಕಾಂತ ಜೈದೇವ್ ನನ್ನು ಮನೆಗೆ ವಾಪಸ್ ಹೇಗೆ ಕರೆಸಿಕೊಳ್ಳುತ್ತಾನೆ. ಮನೆಯವರನ್ನು ಹಾಗೂ ಶಕುಂತಲಾಳನ್ನು ಹೇಗೆ ಒಪ್ಪಿಸುತ್ತಾನೆ ಎಂಬ ಕುತೂಹಲ ಮೂಡಿದೆ.


Click it and Unblock the Notifications











