Amruthadhaare: ಮನೆಗೆ ಬಂದ ಲಾಯರ್ ಹೇಳಿದ ವಿಲ್ ಯಾವುದು ಮತ್ತು ಅದು ಯಾರಿಗಾಗಿ..?
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಅಜ್ಜಿ ಮೊಮ್ಮೊಗ ಹಾಗೂ ಸೊಸೆ ಚೆನ್ನಾಗಿರಬೇಕು ಎಂದು ಸದಾ ಬಯಸುತ್ತಿರುತ್ತಾರೆ. ಹೀಗಾಗಿ ಇಬ್ಬರನ್ನೂ ಒಂದು ಇಡೀ ದಿನ ಹೊರಗೆ ಸುತ್ತಾಡಿಕೊಂಡು ಬನ್ನಿ ಎಂದು ಕಳಿಸಿದ್ದಾರೆ. ಆದರೆ, ಗೌತಮ್ ಮತ್ತು ಭೂಮಿಕಾ ಇಬ್ಬರಿಗೂ ಇದು ಕೊಂಚವೂ ಇಷ್ಟವಿಲ್ಲ. ಅಜ್ಜಿ ಮಾತನ್ನು ತೆಗೆದು ಹಾಕಲಾಗದೇ ಇಬ್ಬರೂ ಮನೆಯಿಂದ ಹೊರಗೆ ಹೊರಡುತ್ತಾರೆ.
ಇಬ್ಬರಿಗೂ ಎಲ್ಲಿಗೆ ಹೋಗಬೇಕು ಎನ್ನುವುದೇ ತಿಳಿಯುವುದಿಲ್ಲ. ಕೊನೆಗೆ ಭೂಮಿಕಾ ಕೆಫೆ ಒಂದಕ್ಕೆ ಹೋಗೋಣ, ಅಲ್ಲಿಯ ವಾತಾವರಣ ಚೆನ್ನಾಗಿರುತ್ತೆ ಎಂದು ಹೇಳಿ ಕರೆದುಕೊಂಡು ಹೋಗುತ್ತಾಳೆ.

ಕೆಫೆಯಲ್ಲಿ ಭೂಮಿಕಾಳಿಗೆ ಇಷ್ಟವಾಗುವ ಪುಸ್ತಕಗಳು ಇರುತ್ತವೆ. ಗೌತಮ್ಗೆ ತಿನ್ನಲು ರುಚಿ ರುಚಿಯಾದ ತಿನಿಸುಗಳು ಸಿಗುತ್ತವೆ. ಇಬ್ಬರೂ ಕೂಡ ಒಂದು ಸ್ವಲ್ಪವೂ ಬೇಸರ, ಜಗಳ ಮಾಡಿಕೊಳ್ಳದೇ ಕಾಲ ಕಳೆಯುತ್ತಾರೆ.
ಔಟಿಂಗ್ ಹೋದ ಜೋಡಿ
ಗೌತಮ್ಕೆಫೆಯಲ್ಲಿನ ತಿಂಡಿಗಳು ಇಷ್ಟವಾಗುತ್ತದೆ. ಮಂಚೂರಿಯನ್ ಅಂತೂ ಬಹಳ ರುಚಿಯಾಗಿದೆ ಎಂದು ಎರಡೆರಡು ಪ್ಲೇಟ್ ತರಿಸಿಕೊಂಡು ತಿನ್ನುತ್ತಾನೆ. ಇದ್ದಕ್ಕಿದ್ದ ಹಾಗೆಯೇ ಇಲ್ಲಿ ಶೆಫ್ ಯಾರು ಈಗಲೇ ಬನ್ನಿ ಎಂದು ಜೋರಾಗಿ ಕೂಗುತ್ತಾನೆ. ಸ್ವತಃ ಮ್ಯಾನೇಜರ್ ಬಂದರೂ ಗೌತಮ್ ಒಪ್ಪುವುದಿಲ್ಲ.
ಕೆಫೆಯಲ್ಲಿ ಗಲಾಟೆ ಮಾಡಿದ ಗೌತಮ್
ಶೇಫ್ ಬರುವವರೆಗೂ ಗಲಾಟೆ ಮಾಡುತ್ತಾನೆ. ಗೌತಮ್ ನಡೆದುಕೊಂಡ ರೀತಿ ಕಂಡು ಭೂಮಿಕಾಳಿಗೆ ಗಾಬರಿಯಾಗುತ್ತದೆ. ಯಾಕಾದರೂ ಇಲ್ಲಿಗೆ ಕರೆದುಕೊಂಡು ಬಂದೆನೋ ಎಂದು ಆತಂಕ ಪಡುತ್ತಾಳೆ. ಶೇಫ್ ಬಂದಕೂಡಲೇ ಗೌತಮ್ ಆತನನ್ನು ತಬ್ಬಿಕೊಂಡು ಮಂಚೂರಿಯನ್ ಬಹಳ ಟೇಸ್ಟಿಯಾಗಿದೆ. ನನಗೆ ಬಹಳ ಇಷ್ಟ ಆಯ್ತು ಎಂದು ಹೇಳುತ್ತಾನೆ. ಇಲ್ಲಿ ಕೊಡುವ ಸಂಬಳಕ್ಕಿಂತ ಹೆಚ್ಚು ಕೊಡುತ್ತೇನೆ. ನನ್ನ ಮನೆಗೆ ಬಾ ಎಂದು ಕರೆಯುತ್ತಾನೆ. ಇದನ್ನು ನೋಡಿದ ಭೂಮಿಕಾ ಊಟಕ್ಕೊಸ್ಕರ ಗೌತಮ್ ಏನು ಬೇಕಿದ್ದರೂ ಮಾಡುತ್ತಾನೆ ಎಂಬುದನ್ನು ಬಹಳ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತ್ತಾಳೆ.

ಸಣ್ಣ ಸಣ್ಣ ವಿಚಾರಕ್ಕೂ ಜಗಳ
ಇತ್ತ ಜೀವನ್ ಮನೆಯಲ್ಲಿ ನಿತ್ಯ ಒಂದಲ್ಲ ಒಂದು ವಿಚಾರಕ್ಕೆ ಕಿರಿಕಿರಿಯಾಗುತ್ತಲೇ ಇರುತ್ತದೆ. ಮಹಿಮಾ ಮನೆಗೆ ಎಸಿ ತರಿಸಿಕೊಂಡರೂ ತಪ್ಪು. ರಾತ್ರಿ ಲೇಟ್ ಆಗಿ ಮನೆಗೆ ಬಂದರೂ ತಪ್ಪು, ಬೆಳಗ್ಗೆ ಲೇಟ್ ಆಗಿಯೂ ಹೇಳುವಂತಿಲ್ಲ. ಕುಡಿಯುವ ಹಾಗಿಲ್ಲ, ಸಿಗರೇಟ್ ಸೇದುವಂತಿಲ್ಲ. ಪ್ರತಿಯೊಂದು ವಿಚಾರಕ್ಕೂ ಜೀವ ಬೇಡ ಬೇಡ ಎನ್ನುತ್ತಿರುತ್ತಾನೆ. ಇದು ನಮ್ಮ ಮನೆ, ಸಂಪ್ರದಾಯ ಅದು ಇದು ಎಂದು ಏನಾದರೂ ಒಂದು ವಿಚಾರವನ್ನು ಹೇಳುತ್ತಲೇ ಇರುತ್ತಾನೆ. ಇದರಿಂದ ಮಹಿಮಾಳಿಗೆ ಬಹಳ ಹಿಂಸೆಯಾಗುತ್ತಿರುತ್ತದೆ.
ಜೀವಾನ ಪ್ರಶ್ನಿಸಿದ ಮಹಿಮಾ
ಮಹಿಮಾ ಈಗ ಮನೆಗೆ ಚಿಕನ್ ತರಿಸಿಕೊಂಡಿರುತ್ತಾಳೆ. ಇದಕ್ಕೂ ಮನೆಯಲ್ಲಿ ಚರ್ಚೆಯಾಗುತ್ತದೆ. ಆಗ ಮಂದಾಕಿನಿ ಸೊಸೆಯನ್ನು ವಹಿಸಿಕೊಳ್ಳುತ್ತಾಳೆ. ಆದರೆ, ಜೀವಾ, ಮಹಿಮಾ ಜೊತೆ ಇದೆಲ್ಲಾ ಸರಿಯಿಲ್ಲ ಎಂದು ಮತ್ತೆ ಹೇಳುತ್ತಾನೆ. ಮಹಿಮಾ ನನ್ನ ಬಗ್ಗೆ ಗೊತ್ತಿದ್ದು, ನೀನು ಹೀಗೆಲ್ಲಾ ಮಾಡುತ್ತಿದ್ದೀಯಾ? ಯಾಕೆ ಜೀವ ಫ್ರೀಡಂ ಅನ್ನು ಕಿತ್ತುಕೊಳ್ಳುತ್ತಿದ್ದೀಯಾ? ಎಂದು ಪ್ರಶ್ನಿಸುತ್ತಾಳೆ.
ಗೌತಮ್ ತಾತನ ವಿಲ್ನಲ್ಲಿ ಏನಿರಬಹುದು..?
ಇತ್ತ ಗೌತಮ್ ಮನೆಗೆ ಲಾಯರ್ ಬರುತ್ತಾರೆ. ಗೌತಮ್ ತಾತ ಒಂದು ವಿಲ್ ಅನ್ನು ಬರೆದಿದ್ದರು. ಅದನ್ನು ಗೌತಮ್ ಮದುವೆಯಾದ ಬಳಿಕ ತೆರೆಯಬೇಕು ಅಂತಿದೆ. ಹಾಗಾಗಿ ಬಂದೆವು ಎಂದು ಹೇಳಿ ಹೋಗುತ್ತಾರೆ. ಗೌತಮ್ ಹಾಗೂ ಭೂಮಿಕಾ ಮನೆಯಲ್ಲಿ ಇಲ್ಲದ ಕಾರಣ, ವಿಲ್ನಲ್ಲಿ ಏನಿದೆ ಎಂದು ಹೇಳುವುದಿಲ್ಲ. ಇದು ಶಕುಂತಲಾ ಮನಸ್ಸಲ್ಲಿ ನೂರೆಂಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ವಿಲ್ನಲ್ಲಿ ಭೂಮಿಕಾಳಿಗೆ ಆಸ್ತಿ ಸಿಗುತ್ತೆ ಎಂದು ಬರೆದಿರಬಹುದೇ? ಎಂದು ಯೋಚಿಸುತ್ತಿದ್ದಾಳೆ.


Click it and Unblock the Notifications











