Amruthdhaare; ಗರ್ಭಿಣಿ ಹೆಂಡತಿಗಾಗಿ ಗೌತಮ್ ದಿವಾನ್ ತಂದ ಉಡುಗೊರೆ ಏನು..?
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಜೋಡಿ ಮೇಡ್ ಫಾರ್ ಈಚ್ ಅದರ್ ಎಂಬಂತಿದೆ. ಎಲ್ಲೂ ಕೂಡ ಒಬ್ಬರನ್ನೊಬ್ಬರು ಬಿಟ್ಟುಕೊಡರು. ಯಾವ ವಿಚಾರವೇ ಆಗಿರಲಿ, ಯಾರ ಬಗ್ಗೆಯೇ ಆಗಲೀ, ಎಂಥಹದ್ದೇ ಸಂದರ್ಭವಿರಲಿ ಕೂತು-ನಿಂತು ಸಮಾಧಾನವಾಗಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಜೋಡಿ.ಒಬ್ಬರ ಮಾತಿಗೆ ಇನ್ನೊಬ್ಬರು ಬೆಲೆ ಕೊಡುತ್ತಾರೆ. ಸಂಬಂಧಗಳನ್ನು ಉಳಿಸಿಕೊಳ್ಳಲು ಹೋರಾಡುತ್ತಾರೆ. ಮನೆಯವರಿಗಾಗಿ ಸದಾ ಮಿಡಿಯುವ ಈ ಜೋಡಿಯನ್ನು ನೋಡುವುದೇ ಒಂದು ಖುಷಿ.
ದ್ವೇಷದ ಕಿಚ್ಚಿನಲ್ಲಿ ರಾಜೇಂದ್ರ ಭೂಪತಿ
ತಡವಾಗಿ ಮದುವೆಯಾದರೂ ಪೋಷಕರಾಗುವ ಖುಷಿಯನ್ನು ಗೌತಮ್ ಮತ್ತು ಭೂಮಿಕಾ ಅನುಭವಿಸುತ್ತಿದ್ದಾರೆ. ಆದರೆ, ರಾಜೇಂದ್ರ ಭೂಪತಿಗೆ ಗೌತಮ್ ಜೀವನದಲ್ಲಿ ನಡೆಯುತ್ತಿರುವ ಖುಷಿ ಘಟನೆಗಳು ಹಿಂಸೆ ಮಾಡುತ್ತಿವೆ. ತನ್ನ ಶತ್ರುವಾಗಿರುವ ಗೌತಮ್ ಬದುಕನ್ನು ನಿರ್ನಾಮ ಮಾಡಬೇಕು ಎಂದು ಒದ್ದಾಡುತ್ತಿದ್ದಾನೆ. ಗೌತಮ್ ಇನ್ನೊಂದು ಮದುವೆಯಾಗುತ್ತಾನೆ. ಭೂಮಿಕಾಳಿಂದ ದೂರಾಗಿದ್ದಕ್ಕೆ ನೋವನ್ನು ಅನುಭವಿಸುತ್ತಾನೆ. ಬಳಿಕ ತನಗಾದ ಮಗುವನ್ನು ಕಳೆದುಕೊಂಡು ನರಳುತ್ತಾನೆ ಎಂದು ಭಾವಿಸಿದ್ದ. ಆದರೆ, ರಾಜೇಂದ್ರ ಭೂಪತಿಯ ಲೆಕ್ಕಾಚಾರವು ಉಲ್ಟಾ ಆಗಿದೆ. ಇದರಿಂದ ತನ್ನ ಸಂಕಟ ಹೆಚ್ಚಾಗಿದ್ದು, ತನ್ನದೇ ದ್ವೇಷದ ಕಿಚ್ಚಿನಲ್ಲಿ ರಾಜೇಂದ್ರ ಭೂಪತಿ ಬೇಯುತ್ತಿದ್ದಾನೆ. ಹೇಗಾದರೂ ಮಾಡಿ ಗೌತಮ್ ಬಾಳನ್ನ ಹಾಳು ಮಾಡಬೇಕು. ಅವನ ಸಂಕಟವನ್ನು ನೋಡಿ ತಾನು ಖುಷಿ ಪಡಬೇಕು ಎಂದು ಸಾಕಷ್ಟು ಲೆಕ್ಕಾಚಾರವನ್ನು ಹಾಕುತ್ತಿದ್ದಾನೆ.

ಗೌತಮ್ ಮಗುವಿನ ಮೇಲೆ ಕೆಟ್ಟ ಕಂಗಳು
ಭೂಮಿಕಾ ತಾಯಿಯಾಗುತ್ತಿರುವುದರಿಂದ ಅವಳ ಕುಟುಂಬದ ಮೇಲೆ ಕೆಟ್ಟ ಶಕ್ತಿಗಳ ಕಣ್ಣು ಬಿದ್ದಿದೆ. ಜೀವನದಲ್ಲಿ ಬಹಳ ಕಷ್ಟಪಟ್ಟು ಸಾಧನೆ ಮಾಡಿರುವ ಗೌತಮ್ ಗೆ ತನ್ನ ಮನೆಯಲ್ಲೇ ಶತ್ರುಗಳಿದ್ದಾರೆ ಎಂಬ ಸತ್ಯ ಗೊತ್ತಿಲ್ಲ. ಶಕುಂತಲಾ ಹಿತಶತ್ರುವಾಗಿದ್ದು, ಗೌತಮ್ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಅನ್ಯಾಯವನ್ನು ಮಾಡಿದ್ದಾಳೆ. ಆದರೆ, ಇದ್ಯಾವುದೂ ಗೌತಮ್ ಗೆ ಇದುವರೆಗೂ ಗೊತ್ತಾಗಿಲ್ಲ. ಇನ್ನು ಜೈದೇವ್, ರಾಜೇಂದ್ರ ಭೂಪತಿ ಕೂಡ ಕೂಡ ಗೌತಮ್ ವಿರುದ್ಧವೇ ಸಂಚು ರೂಪಿಸುತ್ತಿದ್ದಾರೆ. ಇನ್ನು ಭೂಮಿಗೆ ಬಾರದ ದಿವಾನ್ ಕುಡಿಯ ಮೇಲೆ ಈ ಕೆಟ್ಟ ಕಂಗಳ ದೃಷ್ಟಿ ಬಿದ್ದಿದೆ. ಮಗು ಜೀವಂತವಾಗಿ ಬರಬಾರದು ಎಂದು ಪ್ಲಾನ್ ಮಾಡುತ್ತಿದ್ದಾರೆ.
ಭೂಮಿಕಾಳಿಗಾಗಿ ಗೌತಮ್ ತಂದ ಪ್ರೀತಿಯ ಗಿಫ್ಟ್
ಇತ್ತ ಹೆಂಡತಿ ಭೂಮಿಕಾ ಗರ್ಭಿಣಿ ಆಗಿದ್ದಾಳೆ. ದಿವಾನ್ ಕುಟುಂಬದ ಕುಡಿ ಮೊಳಕೆಯೊಡೆದಿದೆ ಎಂದು ಸಖತ್ ಖುಷಿಯಲ್ಲಿದ್ದಾನೆ. ಹೀಗಾಗಿ ಹೆಂಡತಿ ಭೂಮಿಕಾಳಿಗೆ ಉಡುಗೊರೆ ಕೊಡಲು ಗೌತಮ್ ಆಲೋಚಿಸಿದ್ದು, ಒಂದು ನೆಕ್ಲೇಸ್ ಮತ್ತು ಮಗುವಿನ ಚಿತ್ರವನ್ನು ಖರೀದಿಸಿದ್ದಾನೆ. ಎರಡೂ ಉಡುಗೊರೆಯನ್ನೂ ಗೌತಮ್ ಪತ್ನಿ ಭೂಮಿಕಾಳಿಗೆ ಕೊಟ್ಟು ಸಂಭ್ರಮ ಪಟ್ಟಿದ್ದಾನೆ. ಗಂಡ ಕೊಟ್ಟ ಪ್ರೀತಿಯ ಉಡುಗೊರೆಯನ್ನು ಪಡೆದ ಭೂಮಿಕಾ ಕೂಡ ಖುಷಿಯಾಗಿದ್ದು, ಇವೆಲ್ಲಕ್ಕೂ ಮಿಗಿಲಾದ ಉಡುಗೊರೆ ನನಗೆ ಸಿಕ್ಕಿದೆ ಎಂದು ಸಂತಸಗೊಂಡಿದ್ದಾಳೆ.
ಸಂಭ್ರಮದಿಂದ ಕೂಡಿರುವ ಮನೆ-ಮನಗಳು
ಇನ್ನು ಭೂಮಿಕಾ ಗರ್ಭಿಣಿ ಆಗಿರುವುದಕ್ಕೆ ಎರಡೂ ಮನೆಯಲ್ಲೂ ಸಂಭ್ರಮದಿಂದ ಕೂಡಿದೆ. ಮಂದಾಕಿನಿ ಮಗಳು ಗರ್ಭಿಣಿ ಎಂಬ ಕಾರಣಕ್ಕೆ ತರಹೇವಾರಿ ತಿಂಡಿಗಳನ್ನು ತಯಾರಿಸುತ್ತಿದ್ದಾಳೆ. ಸದಾಶಿವ ಕೂಡ ಮಗಳಿಗಾಗಿ ರವೆ ಉಂಡೆಯನ್ನು ಮಾಡಿದ್ದು, ಎರಡೂ ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ. ಗೌತಮ್ ಅಜ್ಜಿಯೂ ಕೂಡ ಕಾಳಜಿಯಿಂದ ಮನೆಯಲ್ಲಿ ಅಡುಗೆಯನ್ನು ತಯಾರಿಸಲು ಕೆಲಸದವರಿಗೆ ಹೇಳಿದ್ದಾರೆ. ಸುಧಾ ಕೂಡ ಅತ್ತಿಗೆಯನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದ್ದಾಳೆ. ಆದರೆ, ಈ ಸಂಭ್ರಮ ಹೆಚ್ಚು ಕಾಲ ಉಳಿಯುತ್ತಾ..? ಇಲ್ಲವೇ ಶತ್ರುಗಳ ಕಾಟಕ್ಕೆ ಇನ್ನೂ ಆಕಾರ ಮೂಡದ ಕಂದಮ್ಮ ಅಸುನೀಗುತ್ತಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.


Click it and Unblock the Notifications











