Amruthadhaare ; ಭೂಮಿಕಾಳನ್ನು ಯಾಮಾರಿಸಲು ಸುಳ್ಳು ಕಥೆ ಕಟ್ಟಿದ ಶಕುಂತಲಾ
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ತಲೆ ತುಂಬ ಮಲ್ಲಿ ತುಂಬಿಕೊಂಡಿದ್ದಾಳೆ. ಇದ್ದಕ್ಕಿದ್ದ ಹಾಗೆಯೇ ಮಲ್ಲಿ ಕಾಣೆಯಾಗಿರುವುದು ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಏನಾದರೂ ಆಗಲಿ ತನ್ನ ಮಗನ ಭವಿಷ್ಯಕ್ಕೆ ಕುತ್ತು ಬರಬಾರದು ಎಂದು ಶಕುಂತಲಾ ಚಿಟಿಕೆ ಹೊಡೆಯುವ ಮುನ್ನವೇ ಪರಿಸ್ಥಿತಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದಾಳೆ. ಭೂಮಿಕಾ ಹೇಳಿದ ಮಾತುಗಳೆಲ್ಲವೂ ಸುಳ್ಳು ಎಂಬಂತೆ ಸಾಬೀತು ಪಡಿಸಲು ಏನೆಲ್ಲಾ ಬೇಕೋ ಅದೆಲ್ಲವನ್ನು ಶಕುಂತಲಾ ತಯಾರಿ ಮಾಡಿಕೊಂಡಿದ್ದಾಳೆ.
ಪರಿಸ್ಥಿತಿಗೆ ಕಟ್ಟು ಬಿದ್ದ ಪಾರ್ಥ-ಅಪೇಕ್ಷಾ
ಇತ್ತ ಅಪೇಕ್ಷಾ ಮನೆಯಲ್ಲಿ ಮದುವೆ ಮನೆಯ ಕೆಲಸಗಳು ಜೋರಾಗಿ ನಡೆಯುತ್ತಿವೆ. ಮನೆಯವರೆಲ್ಲರೂ ಮದುವೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಅಪೇಕ್ಷಾ ಮಾತ್ರ ಪಾರ್ಥನ ನೆನಪಿನಲ್ಲಿ ಕ್ಷಣ ಕ್ಷಣವೂ ನೋವು ಅನುಭವಿಸುತ್ತಿದ್ದಾಳೆ. ಪಾರ್ಥ ಕೂಡ ಅಪ್ಪಿಯನ್ನು ಕಳೆದುಕೊಳ್ಳುತ್ತಿರುವ ನೋವಿನಲ್ಲಿ ಮುಳುಗಿ ಹೋಗಿದ್ದಾನೆ. ಅಪೇಕ್ಷಾಳಿಗೆ ಒಡವೆಗಳನ್ನು ಮನೆಯಿಂದ ಕೊಟ್ಟಿದ್ದು, ಅದನ್ನ ತೆಗೆದುಕೊಂಡು ಪಾರ್ಥ ಮಂದಾಕಿನಿ ಮನೆಗೆ ಬಂದಿದ್ದಾನೆ. ಪಾರ್ಥ ಕೈಯ್ಯಾರೆ ಮದುವೆ ಒಡವೆಗಳನ್ನು ಅಪ್ಪಿಗೆ ನೀಡುತ್ತಾನೆ. ಅಪೇಕ್ಷಾ ಒಲ್ಲದ ಮನಸ್ಸಿನಲ್ಲಿ ಮದುವೆ ಬಟ್ಟೆಗಳನ್ನು ಐರನ್ ಮಾಡುತ್ತಿರುತ್ತಾಳೆ. ಆಗ ಅಕಸ್ಮಾತ್ ಆಗಿ ಕೈ ಸುಟ್ಟುಕೊಳ್ಳುತ್ತಾಳೆ. ಪಾರ್ಥ ಬಂದು ತಾನೇ ಐರನ್ ಮಾಡಿಕೊಡುವುದಾಗಿ ಹೇಳುತ್ತಾನೆ. ಆಗ ಮಹಿಮಾ ನಿನಗೂ ಜವಾಬ್ದಾರಿ ಬಂದಿದೆ. ಒಳ್ಳೆಯ ಹುಡುಗಿಯನ್ನು ನೋಡಿ ಮದುವೆ ಮಾಡೋಣ ಎನ್ನುತ್ತಾಳೆ. ಈ ಎಲ್ಲ ಮಾತುಗಳು ಪಾರ್ಥ ಹಾಗೂ ಅಪೇಕ್ಷಾ ಮನಸ್ಸಿಗೆ ನೋವುಂಟು ಮಾಡುತ್ತವೆ

ಮಗನಿಗಾಗಿ ಸುಳ್ಳು ಕಥೆ ಕಟ್ಟಿದ ಶಕುಂತಲಾ
ಶತಾಯ ಗತಾಯ ಜೈದೇವನ ಮದುವೆಯನ್ನು ಅಪೇಕ್ಷಾ ಜೊತೆಗೆ ಮಾಡಬೇಕು ಎಂದು ಶಕುಂತಲಾ ತೀರ್ಮಾನಿಸಿದ್ದಾಳೆ. ಹೀಗಾಗಿ ಮಲ್ಲಿ ಹಾಗೂ ಅಜ್ಜ ಇಬ್ಬರನ್ನೂ ಮನೆಯಿಂದ ಕ್ಷಣಾರ್ಧದಲ್ಲಿ ಖಾಲಿ ಮಾಡಿಸಿದ್ದಾಳೆ. ಭೂಮಿಕಾಳಿಂದ ಮದುವೆಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳಲು ಎಲ್ಲಾ ರೀತಿಯ ಸರ್ಕಸ್ ಕೂಡ ಮಾಡುತ್ತಿದ್ದಾಳೆ. ಹೀಗಾಗಿ ಮನೆಯಲ್ಲಿರುವ ಕೆಲಸದವರನ್ನೆಲ್ಲಾ ಕರೆಸಿದ್ದಾಳೆ. ಭೂಮಿಕಾ ಎದುರಿಗೆ ತಾತನ ಮನೆಯಲ್ಲಿ ಇದ್ದ ಮಲ್ಲಿ ಎಂಬ ಹುಡುಗಿಯನ್ನು ಯಾರು ನೋಡಿದ್ದೀರಾ..? ಅವಳ ಬಗ್ಗೆ ಯಾರಿಗೆ ಗೊತ್ತು ಎಂದೆಲ್ಲಾ ವಿಚಾರಿಸುತ್ತಾಳೆ. ಎಲ್ಲರೂ ಕೂಡ ಶಕುಂತಲಾಳಿಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದೆಲ್ಲವೂ ಶಕುಂತಲಾ ಈ ಮುನ್ನವೇ ಪ್ಲಾನ್ ಮಾಡಿ ಹೇಳಿಸಿರುವ ಸುಳ್ಳು.
ಭೂಮಿಕಾಳನ್ನು ಯಾಮಾರಿಸಿದ ಶಕುಂತಲಾ
ಆದರೆ, ಒಬ್ಬಳು ಮಾತ್ರ ಮಲ್ಲಿಯನ್ನು ನೋಡಿರುವುದಾಗಿ ಹೇಳುತ್ತಾಳೆ. ಮಲ್ಲಿ ಹಾಗೂ ಗೋಪಿ ಇಬ್ಬರ ನಡುವೆಯೂ ಸಂಬಂಧವಿತ್ತು ಹಾಗಾಗಿ ಇಬ್ಬರೂ ಓಡಿ ಹೋಗಿರಬಹುದು. ಆದರೆ, ಈ ವಿಚಾರ ತಾತನಿಗೆ ಗೊತ್ತಿರಲಿಲ್ಲ ಎಂದು ಸುಳ್ಳು ಹೇಳುತ್ತಾಳೆ. ಶಕುಂತಲಾ ಬೇಕಂತಲೇ ಎಲ್ಲರನ್ನೂ ಬೈಯುತ್ತಾಳೆ. ಭೂಮಿಕಾ ಜೈದೇವನ ವಾಚ್ ಮಲ್ಲಿ ರೂಮಿನಲ್ಲಿ ಸಿಕ್ಕ ವಿಚಾರವನ್ನು ತಿಳಿಸಿದಾಗ, ಆಕೆ ಅದು ಗೋಪಿಯದ್ದೇ ಕೆಲಸ. ಅವನು ಕಳ್ಳತನ ಮಾಡುತ್ತಿದ್ದ. ಅವನೇ ಆ ವಾಚ್ ಅನ್ನು ಕದ್ದಿರಬಹುದು ಎಂದು ಹೇಳುತ್ತಾಳೆ. ಸುಳ್ಳು ಕಥೆಯನ್ನು ಶಕುಂತಲಾಳೇ ಸೃಷ್ಟಿಸಿದ್ದು, ಭೂಮಿಕಾಳನ್ನು ಯಾಮಾರಿಸಲು ಯತ್ನಿಸಿದ್ದಾಳೆ.

ಭೂಮಿಕಾಳಲ್ಲಿ ಹೆಚ್ಚಿದ ಗೊಂದಲ
ಇಷ್ಟಕ್ಕೆ ಸುಮ್ಮನಾಗದೇ ಲಕ್ಷ್ಮೀಕಾಂತ ಸಿಸಿಟಿವಿ ವಿಡಿಯೋ ಕೂಡ ತರಿಸಿ ತೋರಿಸುತ್ತಾನೆ. ಅದರಲ್ಲಿ ಮಲ್ಲಿ ಹಾಗೂ ಗೋಪಿ ಇಬ್ಬರೂ ಮನೆಯಿಂದ ಓಡಿ ಹೋಗುವುದು ರೆಕಾರ್ಡ್ ಆಗಿರುತ್ತದೆ. ಭೂಮಿಕಾಳಿಗೆ ಈಗ ಮಲ್ಲಿ ತನ್ನ ಬಳಿ ಸುಳ್ಳು ಹೇಳಿದ್ಯಾಕೆ. ಅದರ ಹಿಂದೆ ಏನಿರಬಹುದು. ತಾನು ಇಷ್ಟು ದಿನ ನಂಬಿದ್ದೆಲ್ಲವೂ ಸುಳ್ಳೇ ಎಂಬ ಆಲೋಚನೆಯಲ್ಲಿ ಮುಳುಗಿದ್ದಾಳೆ. ಭೂಮಿಕಾಳಿಗೆ ಈಗ ಶಕುಂತಲಾ ಮಾತುಗಳನ್ನು ನಂಬಬೇಕಾ ಇಲ್ಲ ಮಲ್ಲಿ ಮಾತನ್ನು ನಂಬಬೇಕಾ ಎಂಬುದು ಅರ್ಥವಾಗದೇ ಗೊಂದಲದಲ್ಲಿದ್ದಾಳೆ.


Click it and Unblock the Notifications











