Amruthadhaare: ಇಬ್ಬರು ಅಜ್ಜಿಯರ ನಡುವೆ ಸಿಲುಕಿದ ಗೌತಮ್-ಭೂಮಿಕಾ
35 ವರ್ಷದ ಭೂಮಿಕಾ ಮನೆಗಾಗಿ ದುಡಿಯುತ್ತಾ ತನ್ನ ಬದುಕು ಕಟ್ಟಿಕೊಳ್ಳುವುದನ್ನೇ ಮರೆತಿದ್ದಳು. ಪ್ರೀತಿಸಿದ ವ್ಯಕ್ತಿ ಬೆನ್ನಿಗೆ ಚೂರಿ ಹಾಕಿದ್ದಕ್ಕೆ ಮದುವೆ ಆಗುವ ಆಸೆಯನ್ನೇ ಕೈ ಬಿಟ್ಟಿದ್ದಳು. ಮನೆಯಲ್ಲಿ ಎಷ್ಟೇ ಗಂಡು ನೋಡಿದರು, ಆತಂಕದಲ್ಲಿದ್ದ ಭೂಮಿಕಾ ಮದುವೆಗೆ ಒಪ್ಪುತ್ತಿರಲಿಲ್ಲ. ಇದರಿಂದ ಭೂಮಿಕಾ ಮನೆಯಲ್ಲಿ ಎಲ್ಲರಿಗೂ ಅವಳದ್ದೇ ಚಿಂತೆಯಾಗಿತ್ತು.
ಹೇಗಾದರೂ ಮಾಡಿ ಭೂಮಿಕಾ ಮದುವೆ ಮಾಡಬೇಕು. ಅವಳಿಗೆ ಎಂದು ಒಂದು ಬದುಕನ್ನು ಕಟ್ಟಿಕೊಡಬೇಕು ಎಂದು ಸತತವಾಗಿ ಪ್ರಯತ್ನ ಪಡುತ್ತಲೇ ಇದ್ದರು. ಆದರೆ, ಭೂಮಿಕಾ ಮಾತ್ರ ನಾನು ಹೀಗೆ ಇರಬೇಕು. ಮದುವೆಯೇ ಬೇಡ ಎಂದು ನಿರ್ಧರಿಸಿದ್ದಳು. ಇಂತಹ ಭುಮಿಕಾ ಬಾಳಲ್ಲಿ ಈಗ ಗೌತಮ್ ದಿವಾನ್ ಎಂಬ ತಂಗಾಳಿ ಬೀಸುತ್ತಿದೆ.

ಗೌತಮ್ ದಿವಾನ್ ಕೂಡ 45 ವರ್ಷದವ. ಮನೆಯವರಿಗಾಗಿ ಎಲ್ಲವನ್ನೂ ಮಾಡುವ ಗೌತಮ್ ತನಗಾಗಿ ಯೋಚಿಸುವುದೇ ಇಲ್ಲ. ಇನ್ನು ಇವರ ಮಲತಾಯಿ ಶಕುಂತಲಾಳಿಗೆ ಗೌತಮ್ ದಿವಾನ್ ಮದುವೆ ಆಗುವುದು ಬೇಕಿಲ್ಲ. ಕಾರಣ ಮದುವೆಯಾಗಿ ಗೌತಮ್ಗೆ ತನ್ನದೇ ಸಂಸಾರ ಶುರುವಾದರೆ, ಶಕುಂತಲಾ ಹಾಗೂ ಅವಳ ಮಕ್ಕಳಿಗೆ ಆಸ್ತಿಯಲ್ಲಿ ಬಿಡಿಗಾಸು ಸಿಗುವುದಿಲ್ಲ ಎಂಬ ಆತಂಕವೇ ಕಾರಣ. ಹೀಗಾಗಿ ಶಕುಂತಲಾ, ಗೌತಮ್ ಮದುವೆಯಾಗದಂತೆ ನೋಡಿಕೊಂಡಿದ್ದಳು.
ಸಾಮ್ರಾಜ್ಯ ಆಳುವ ಕನಸಿನಲ್ಲಿ ಶಕುಂತಲಾ
ಮಹಿಮಾ ಪ್ರೀತಿಸಿದ ಜೀವನ್ ಅಕ್ಕ ಭೂಮಿಕಾ, ಗೌತಮ್ಗೆ ಸರಿಯಾದ ಜೋಡಿ. ಇಬ್ಬರೂ ಸದಾ ಹಾವು ಮುಂಗುಸಿಯಂತೆ ಕಿತ್ತಾಡುತ್ತಾರೆ. ಇವರಿಬ್ಬರಿಗೂ ಮದುವೆ ಬೇಕಿಲ್ಲ. ಮಹಿಮಾ ಹಾಗೂ ಜೀವನ್ ಚೆನ್ನಾಗಿರಲಿ ಎಂದು ಬಯಸುವ ಇವರಿಬ್ಬರಿಗೂ ಮದುವೆ ಮಾಡಿದರೆ, ಶಕುಂತಲಾ ಆಸೆಯಂತೆ ಎಲ್ಲವೂ ತನ್ನ ಕೈಯಡಿಯಲ್ಲಿ ಇರುತ್ತಾರೆ. ಭೂಮಿಕಾ ಜುಟ್ಟು ಹಿಡಿದುಕೊಂಡು ದಿವಾನ್ ಸಾಮ್ರಾಜ್ಯವನ್ನು ಆಳಬಹುದು ಎಂದು ಭಾವಿಸಿದ್ದಾಳೆ. ಹೀಗಾಗಿ ಈಗ ಬಲವಂತ ಮಾಡಿ ಈ ಮದುವೆ ಮಾಡಲು ಹೊರಟಿದ್ದಾಳೆ. ಎರಡೂ ಮನೆಯಲ್ಲಿ ಈಗ ಮದುವೆಯ ಸಂಭ್ರಮ ಕಳೆಕಟ್ಟಿದ್ದು, ಸಂಬಂಧಿಕರು ತುಂಬಿ ತುಳುಕುತ್ತಿದ್ದಾರೆ.

ಪ್ರಶ್ನೆ ಕೇಳುವ ಶಾಸ್ತ್ರ
ಇನ್ನು ಎರಡೂ ಮನೆಯಲ್ಲಿ ಇಬ್ಬರ ಅಜ್ಜಿಯರದ್ದೇ ಬೇರೆ ರೀತಿ. ಇಬ್ಬರೂ ಕೂಡ ತಾವು ಹೇಳಿದಂತೆಯೇ ನಡೆಯಬೇಕು ಎನ್ನುವ ಈ ಜೀವಗಳು ಮೊಮ್ಮಕ್ಕಳ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದಾರೆ. ಭೂಮಿಕಾ ಅವರ ಅಮ್ಮಮ್ಮ ತುಂಬಾ ಮಾಡ್ರನ್ ಆಗಿದ್ದಾರೆ. ಬ್ಯೂಟಿಗೆ ಹೆಚ್ಚು ಒತ್ತುಕೊಡುವ ಅಮ್ಮಮ್ಮ ಈಗ ಹೊಸ ಶಾಸ್ತ್ರದ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ. ಈ ಶಾಸ್ತ್ರ ನಡೆಯಲೇಬೇಕು ಎಂದು ಹಠ ಮಾಡಿದ್ದಾರೆ. ಗಂಡಿನ ಕಡೆಯವರು ಹುಡುಗಿಗೆ, ಹುಡುಗಿ ಕಡೆಯವರು ಗಂಡಿಗೆ ಪ್ರಶ್ನೆ ಮಾಡುವ ಪ್ರಶ್ನೆ ಕೇಳುವ ಶಾಸ್ತ್ರವನ್ನು ಮಾಡಬೇಕು ಎಂಬುದು ಅಮ್ಮಮ್ಮನ ಆಸೆ.
ಇಬ್ಬರು ಅಜ್ಜಿಯರ ಹಠ
ಭೂಮಿಕಾ ಈ ಬಗ್ಗೆ ಗೌತಮ್ಗೆ ಫೋನ್ ಮಾಡಿ ಈ ಶಾಸ್ತ್ರ ನಡೆಯಬೇಕು ಎಂದು ಹೇಳುತ್ತಾಳೆ. ಆದರೆ, ಗೌತಮ್ ಅವರ ಅಜ್ಜಿಗೆ ಇದೆಲ್ಲಾ ಇಷ್ಟವಿಲ್ಲ. ನಮ್ಮ ಕಡೆ ಇಂತಹ ಶಾಸ್ತ್ರಗಳಿಲ್ಲ. ಬೇಡ ಎಂದು ಖಡಾಖಂಡಿತವಾಗಿ ಹೇಳಿ ಬಿಡುತ್ತಾಳೆ. ಆದರೆ, ಅಮ್ಮಮ್ಮ ಮಾತ್ರ ಇಲ್ಲ ಈ ಶಾಸ್ತ್ರ ನಡೆಯಲೇಬೇಕು. ನಾನು ಮಾಡೇ ಮಾಡುತ್ತೀನಿ ಎಂದು ಹಠ ಮಾಡುತ್ತಿದ್ದಾರೆ.
ಗೌತಮ್, ಭೂಮಿಕಾಗೆ ಪೀಕಲಾಟ
ಇಬ್ಬರು ಅಜ್ಜಿಯಂದಿರ ನಡುವೆ ಈಗ ಗೌತಮ್ ದಿವಾನ್ ಹಾಗೂ ಭೂಮಿಕಾ ಸಿಕ್ಕಿ ಬಿದ್ದಿದ್ದಾರೆ. ಈಗ ಯಾರ ಹಠ ನಡೆಯುತ್ತದೆ. ಇವರಿಬ್ಬರ ನಡುವೆ ಸಿಲುಕಿ ಯಾರೆಲ್ಲಾ ಏನೆಲ್ಲಾ ಅವಸ್ಥೆ ಎದುರಿಸುತ್ತಾರೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.


Click it and Unblock the Notifications











