Amruthadhaare: ಮಹಿಮಾ ಮದುವೆಯಲ್ಲಿ ಭಾವುಕರಾದ ಶಕುಂತಲಾ, ಗೌತಮ್, ತೊಂದರೆಯಲ್ಲಿ ಜಯದೇವ!
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಅಜ್ಜಿ ಮಹಿಮಾಳನ್ನು ಪ್ರತ್ಯೇಕವಾಗಿ ಕರೆದು, ಮಾತನಾಡಿಸುತ್ತಾಳೆ. ಇಷ್ಟು ದಿನ ಇದ್ದಂತೆ ಜೀವನ ಅಲ್ಲ. ಇನ್ನು ಮುಂದೆ ಹಾಗಿರುವುದಿಲ್ಲ. ನೀನು ನಮ್ಮ ಕುಟುಂಬಕ್ಕೆ ಬರುತ್ತಿರುವುದರಿಂದ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳುತ್ತಾಳೆ.
ಅದಕ್ಕೆ ಮಹಿಮಾ ಹಿಂದೆ-ಮುಂದೆ ಯೋಚಿಸದೇ ನಾನು ಜೀವ ಇಬ್ಬರೂ ಹೇಗಿದ್ದೀವೋ ಹಾಗೆ ಒಪ್ಪಿಕೊಂಡಿದ್ದೇವೆ. ಇನ್ನು ಮುಂದೆಯೂ ನಮ್ಮಿಬ್ಬರ ಇಷ್ಟದಂತೆ ಎಲ್ಲವೂ ನಡೆಯುತ್ತದೆ ಎನ್ನುತ್ತಾಳೆ. ಇತ್ತ ಗೌತಮ್ ಅಜ್ಜಿಯೂ ಭೂಮಿಕಾಳನ್ನು ಕರೆಸಿ ಹೀಗೆ ಪ್ರಶ್ನಿಸಿದ್ದಕ್ಕೆ, ಭೂಮಿಕಾ ನೀವೆಲ್ಲಾ ಹೇಗೆ ಹೇಳುತ್ತೀರೋ ಹಾಗೆ ಇರುತ್ತೇನೆ ಎಂದು ಸೌಮ್ಯವಾಗಿ ಉತ್ತರ ನೀಡುತ್ತಾಳೆ.

ಅದ್ಧೂರಿಯಾಗಿ ನಡೀತು ಮಹಿಮಾ ಮದುವೆ
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಹಿಮಾಳ ಮದುವೆಯನ್ನು ಅದ್ಧೂರಿಯಾಗಿ ಮಾಡಲಾಗಿದೆ. ಮಹಿಮಾ ಬಯಸಿದಂತೆಯೇ ಅದ್ಧೂರಿಯಾಗಿ ಗೌತಮ್ ಮದುವೆ ನಡೆಸಿಕೊಡುತ್ತಾನೆ. ಎಲ್ಲರೂ ಗೋಲ್ಡ್ ಉಡುಗೆಯಲ್ಲಿ ಮಿಂಚುತ್ತಿರುತ್ತಾರೆ. ಮಹಿಮಾಳಿಗೆ ಜೀವ ಜೊತೆಗೆ ಮದುವೆ ಆಗುತ್ತಿರುವುದಕ್ಕೆ ಬಹಳ ಖುಷಿ ಇರುತ್ತದೆ. ಸಡಗರದಲ್ಲೇ ಮದುವೆ ಆಗುತ್ತಾಳೆ. ಜೀವನ್ಗೂ ಕೂಡ ಪ್ರೀತಿಸಿದ ಮಹಿಮಾಳನ್ನೇ ಮದುವೆಯಾಗುತ್ತಿರುವುದಕ್ಕೆ ಖುಷಿಯಾಗಿರುತ್ತಾನೆ. ಎಲ್ಲರೂ ಮದುವೆ ಮನೆಯಲ್ಲಿ ಬ್ಯುಸಿಯಾಗಿದ್ದರೆ, ಭೂಮಿಕಾ ಅಲ್ಲೂ ಕೂಡ ತನ್ನ ಮದುವೆಯ ಅರೇಂಜ್ ಮೆಂಟ್ಸ್ ಬಗ್ಗೆ ಕಾಳಜಿ ವಹಿಸುತ್ತಿರುತ್ತಾಳೆ.
ಸಂಕಷ್ಟದಲ್ಲಿ ಸಿಲುಕಿರುವ ಜಯದೇವ!
ಇತ್ತ ಜಯದೇವ ಮದುವೆ ಮನೆಯಲ್ಲಿ ಓಡಾಡಿಕೊಂಡು ಖುಷಿಯಾಗಿರಬೇಕು. ಆದರೆ, ಆತ ಯಾವುದೋ ಆತಂಕದಲ್ಲಿ ಒದ್ದಾಡುತ್ತಿರುತ್ತಾನೆ. ಲಕ್ಷ್ಮೀಕಾಂತ ಎಷ್ಟೇ ಕೇಳಿದರೂ ಏನಾಗುತ್ತಿದೆ ಎಂದು ಹೇಳುವುದೇ ಇಲ್ಲ. ಈಗಲೇ ತನಗೆ ಐವತ್ತು ಲಕ್ಷ ರೂಪಾಯಿ ಬೇಕು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ಲಕ್ಷ್ಮೀಕಾಂತನಿಗೆ ಶಾಕ್ ಆಗುತ್ತದೆ.

ಕೊನೆಗೆ ಜಯದೇವನನ್ನು ಶಕುಂತಲಾ ಬಳಿ ಕರೆದುಕೊಂಡು ಹೋಗಿ, ಈಗಲೇ ಇವನ ಅಕೌಂಟ್ ಗೆ ಐವತ್ತು ಲಕ್ಷ ಹಾಕಿಸು ಎಂದಿದ್ದಕ್ಕೆ ಶಕುಂತಲಾ ಸ್ವಲ್ಪವೂ ಗಾಬರಿಯಾಗದೇ ಗೌತಮ್ ಮೂಲಕ ಹಾಕಿಸುವುದಾಗಿ ಹೇಳುತ್ತಾಳೆ. ಸೀದಾ ಗೌತಮ್ ಬಳಿ ಹೋಗಿ ಮದುವೆಯ ಖರ್ಚು ಎಂದು ಸುಳ್ಳು ಹೇಳಿ ಹಣ ಹಾಕಿಸಲು ಮುಂದಾಗುತ್ತಾಳೆ. ಆದರೆ, ಜಯದೇವ ಯಾವ ಸಮಸ್ಯೆ ಅಲ್ಲಿ ಸಿಲುಕಿದ್ದಾನೆ ಎಂಬುದು ಮಾತ್ರ ತಿಳಿಯುವುದಿಲ್ಲ. ಲಕ್ಷ್ಮೀಕಾಂತ ಎಷ್ಟೇ ಬಲವಂತ ಮಾಡಿದರೂ ಹೇಳುವುದಿಲ್ಲ.
ಭೂಮಿಕಾಳನ್ನು ಅತ್ತಿಗೆ ಎಂದು ಕರೆದ ಪಾರ್ಥ
ಇನ್ನು ಭೂಮಿಕಾ ಒಬ್ಬಳೇ ಇರುವುದನ್ನು ನೋಡಿ ಅಲ್ಲಿಗೆ ಬರುವ ಪಾರ್ಥ ಮನಸಾರೆ ಅತ್ತಿಗೆ ಎಂದು ಕರೆಯುತ್ತಾನೆ. ಬಳಿಕ ತಾನು ಭೂಮಿಕಾಳನ್ನು ಅಪಾರ್ಥ ಮಾಡಿಕೊಂಡಿದ್ದು, ಈಗ ಗೌತಮ್ಗೆ ತುಂಬಾ ಒಳ್ಳೆಯ ಸಂಗಾತಿ ಸಿಗುತ್ತಿರುವ ಬಗ್ಗೆ ಮಾತನಾಡುತ್ತಾನೆ. ಭೂಮಿಕಾ ಪಾರ್ಥ ಬೇಸರದಲ್ಲಿ ಮಾತನಾಡಿದಾಗಲೂ, ಈಗ ಸಂತಸಗೊಂಡು ಮಾತನಾಡಿಸಿದಾಗಲೂ ಒಂದೇ ಭಾವನೆಯಲ್ಲಿ ಇರುತ್ತಾಳೆ. ಸ್ವಲ್ಪವೂ ಭೂಮಿಕಾ ತನ್ನ ಭಾವನೆಗಳಲ್ಲಿ ಏರಿಳಿತ ಮಾಡಿಕೊಳ್ಳುವುದಿಲ್ಲ.
ಭಾವುಕರಾದ ಶಕುಂತಲಾ, ಗೌತಮ್
ಹೆಣ್ಣು ಒಪ್ಪಿಸುವ ಶಾಸ್ತ್ರದಲ್ಲಿ ಅಶ್ವಿನಿ ಮಹಿಮಾಳನ್ನು ಮಂದಾಕಿನಿ ಹಾಗೂ ಸದಾಶಿವನ ಕೈಗೆ ಒಪ್ಪಿಸುತ್ತಾಳೆ. ಆಗ ಶಕುಂತಲಾ ಕಣ್ಣು ತುಂಬಿಕೊಂಡು, ನನ್ನ ಮಗಳು ಮಹಿಮಾಳನ್ನು ಚಿಕ್ಕವಯಸ್ಸಿನಿಂದಲೂ ಏನೂ ಕೊರತೆ ಇಲ್ಲದಂತೆಯೂ, ಅವಳು ಇಷ್ಟ ಪಟ್ಟಿದ್ದನ್ನೆಲ್ಲವನ್ನೂ ಕೊಡಿಸಿದ್ದೇವೆ. ಅವಳಿಗೆ ನೋವಾಗದಂತೆ ನೋಡಿಕೊಳ್ಳಿ. ಇನ್ನು ಮುಂದೆ ಅವಳ ಜವಾಬ್ದಾರಿ ನಿಮ್ಮದು. ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೀರಾ ಎಂದು ನಂಬಿದ್ದೇವೆ ಎಂದು ಹೇಳುತ್ತಾಳೆ. ಗೌತಮ್ ಕೂಡ ಮನದಲ್ಲೇ ಭಾವನೆಗಳನ್ನು ತುಂಬಿಕೊಂಡು ಕಣ್ಣೀರು ಹಾಕುತ್ತಿರುತ್ತಾನೆ.


Click it and Unblock the Notifications











