'ಅಮೃತಧಾರೆ' ಮಹಿಮಾ ಪಾತ್ರವನ್ನು ರಿಜೆಕ್ಟ್ ಮಾಡಿದ್ದಿದ್ದೇಕೆ? ಮತ್ತೆ ಅದೇ ಪಾತ್ರ ಒಪ್ಪಿದ್ದೇಕೆ?
ಇಶಿತಾ ವರ್ಷ. ದಶಕಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ'ಯ ವೀಕ್ಷಕರು ನೀವಾಗಿದ್ದರೆ ನಿಮಗೆ ಈಕೆ ಖಂಡಿತಾ ನೆನಪಿರುತ್ತಾರೆ. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಮಾಯಾಳಾಗಿ ಇಶಿತಾ ನಟಿಸಿದ್ದರು. ಬರೋಬ್ಬರಿ ಐದಾರು ವರ್ಷಗಳ ಕಾಲ ಮಾಯಾ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ ಇಶಿತಾ ವರ್ಷ ಕಿರುತೆರೆ ಜರ್ನಿ ಶುರುವಾಗಿದ್ದು ನಂದಿನಿ ಪಾತ್ರದ ಮೂಲಕ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ನಂದಿನಿಯಾಗಿ ಕಾಣಿಸಿಕೊಂಡ ಇಶಿತಾ ವರ್ಷ ಎಂದಿಗೂ ನಟಿಯಾಗಬೇಕು ಎಂದು ಬಯಸಿದರವರಲ್ಲ. ಬದಲಿಗೆ ಇದು ಆಕೆಯ ಪಾಲಿಗೆ ಬಯಸದೇ ಬಂದ ಅವಕಾಶ ಎನ್ನಬಹುದು.

'ಕೃಷ್ಣ ರುಕ್ಮಿಣಿ' ಧಾರಾವಾಹಿಯ ನಂತರ 'ಹೊಸ ಬಾಳಿಗೆ ನೀ ಜೊತೆಯಾದೆ', 'ತಂಗಾಳಿ', 'ಅಸಂಭವ', 'ಅಗ್ನಿಸಾಕ್ಷಿ' ಧಾರಾವಾಹಿಗಳಲ್ಲಿ ಇಶಿತಾ ಬಣ್ಣ ಹಚ್ಚಿದ್ದು, ಕಿರುತೆರೆ ವೀಕ್ಷಕರು ಆಕೆಯನ್ನು ಮೆಚ್ಚಿಕೊಂಡದ್ದು ಮಾತ್ರ ಮಾಯಾ ಪಾತ್ರದ ಮೂಲಕ. ಯಾಕೆಂದರೆ ಮಾಯಾ ಆಗಿ ಆಕೆ ಅಭಿನಯಿಸಿದ್ದು ಬರೋಬ್ಬರಿ ಏಳು ವರ್ಷ!
ಹಾಗಾಗಿ ಆ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದರು. 'ಅಗ್ನಿಸಾಕ್ಷಿ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಇಶಿತಾ ಮುಂದೆ ಒಂದೆರಡು ಧಾರಾವಾಹಿಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದೂ ಉಂಟು.

ಹೌದು, 'ಸರಸು', 'ಪುಟ್ಟಕ್ಕನ ಮಕ್ಕಳು', 'ಶ್ರೀಗೌರಿ' ಧಾರಾವಾಹಿಗಳಲ್ಲಿನ ಕೆಲವೊಂದು ಸಂಚಿಕೆಗಳಲ್ಲಿ ಈಕೆ ಅಭಿನಯಿಸಿದ್ದರು. ಇಂತಿಪ್ಪ ಇಶಿತಾ ಇದೀಗ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಅದು ಮಹಿಮಾ ಆಗಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕ ಗೌತಮ್ ದಿವಾನ್ ತಂಗಿ ಮಹಿಮಾ ಆಗಿ ನಟಿಸುತ್ತಿದ್ದಾರೆ ಇಶಿತಾ.
ಅಸಲಿಗೆ ಮಹಿಮಾ ಆಗಿ ಬಣ್ಣ ಹಚ್ಚುತ್ತಿದ್ದ ಸಾರಾ ಅಣ್ಣಯ್ಯ ಕಾರಣಾಂತರಗಳಿಂದ ಧಾರಾವಾಹಿಯಿಂದ, ಪಾತ್ರದಿಂದ ಹೊರಬಂದಾಗ ಆ ಜಾಗಕ್ಕೆ ಇಶಿತಾ ಆಯ್ಕೆಯಾದರು. ಅದರ ಬಗ್ಗೆ ಫಿಲ್ಮಿಬೀಟ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ ಇಶಿತಾ.
'ಅಮೃತಧಾರೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದೀರಿ.. ಹೇಗೆ ಅನ್ನಿಸ್ತಿದೆ?
"ಸದ್ಯ ನಾನು ಮಹಿಮಾ ಆಗಿ ಕಿರುತೆರೆಗೆ ಬಂದಿದ್ದೇನೆ. ನನ್ನ ನಟನಾ ಕೆರಿಯರ್ನಲ್ಲಿ ನಾನು ಇದೇ ಮೊದಲ ಬಾರಿಗೆ ಬದಲಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಮಹಿಮಾ ಪಾತ್ರದಲ್ಲಿ ನಟಿಸಲು ಶುರು ಮಾಡಿದಾಗ ಕಿರುತೆರೆ ವೀಕ್ಷಕರು ಮಹಿಮಾ ಆಗಿ ನನ್ನನ್ನು ಒಪ್ಪಿಕೊಳ್ಳಲು ಜನರು ಸಮಯ ತೆಗೆದುಕೊಳ್ಳುತ್ತಾರೆ ಎಂದು ಭಾವಿಸಿದ್ದೆ. ಆದರೆ, ನಾನು ನಿರೀಕ್ಷಿಸಿದ್ದಕ್ಕಿಂತ ಬೇಗ ಅವರು ಮಹಿಮಾ ಆಗಿ ನನ್ನನ್ನು ಒಪ್ಪಿಕೊಂಡಿದ್ದಾರೆ ಅದರ ಬಗ್ಗೆ ತುಂಬಾ ಸಂತೋಷವಾಗಿದೆ.
ಮಹಿಮಾ ಪಾತ್ರದ ಬಗ್ಗೆ ಏನು ಹೇಳ್ತೀರಿ?
"ಆರಂಭದಲ್ಲಿ ಮಹಿಮಾ ಪಾತ್ರ ಒಂದು ಚೂರು ಗ್ರೇಶೇಡ್ ಹೊಂದಿದಂತಹ ಪಾತ್ರ. ಆದರೆ ಈಗ ಅದು ಪಾಸಿಟಿವ್ ಆಗಿ ಬದಲಾಗಿದೆ. ಅಗ್ನಿಸಾಕ್ಷಿ ಧಾರಾವಾಹಿಯ ನಂತರ ನಾನು ಒಂದೆರಡು ಧಾರಾವಾಹಿಗಳಲ್ಲಿ ನಟಿಸಿದ್ದರೂ, ಅದು ಅತಿಥಿ ಪಾತ್ರವಾಗಿತ್ತು. ಇದೀಗ ಮಹಿಮಾ ಪಾತ್ರದ ಮೂಲಕ ಪೂರ್ಣ ಪ್ರಮಾಣದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿಯಿದೆ. ಇದೊಂದು ನ್ಯಾಚುರಲ್ ಆಗಿರುವಂತಹ ಪಾತ್ರ ಎಂದು ಹೇಳಬಹುದು."
ಸಹಕಲಾವಿದರ ಬಗ್ಗೆ ಏನು ಹೇಳ್ತೀರಿ?
"ಅಮೃತಧಾರೆ ಧಾರಾವಾಹಿಯ ತಂಡ ನಿಜಕ್ಕೂ ತುಂಬಾ ಒಳ್ಳೆಯದಾಗಿದೆ. ಜೊತೆಗೆ ಈ ಧಾರಾವಾಹಿಯಲ್ಲಿರುವ ಹೆಚ್ಚಿನ ಕಲಾವಿದರುಗಳು ಸಿನಿಮಾರಂಗದವರು. ಚಿತ್ರಾ ಶೆಣೈ, ಸಿಹಿ ಕಹಿ ಚಂದ್ರು, ರಾಜೇಶ್ ನಟರಂಗ, ಛಾಯಸಿಂಗ್ ಸಿನಿಮಾ ರಂಗದಲ್ಲಿ ಸೈಎನಿಸಿಕೊಂಡಿರುವಂತಹ ಕಲಾವಿದರ ಜೊತೆ ಕೆಲಸ ಮಾಡುತ್ತಿರುವುದಕ್ಕೆ ನನಗೆ ದೊರೆತ ಆಶೀರ್ವಾದ ಎನ್ನಬಹುದು. ಪ್ರತಿಯೊಬ್ಬರಿಂದಲೂ ನಾನು ಕಲಿಯುವುದು ಸಾಕಷ್ಟಿದೆ."
ಕಿರುತೆರೆಗೆ ಕಂ ಬ್ಯಾಕ್ ಆದ ಬಗ್ಗೆ ಏನನ್ನಿಸುತ್ತಿದೆ?
"ಸೇಮ್ ಪ್ರೊಡಕ್ಷನ್ ಹೌಸ್ನಿಂದ ನನಗೆ ಎರಡು ಮೂರು ಬಾರಿ ಬೇರೆ ಪ್ರಮುಖ ಪಾತ್ರದಲ್ಲಿ ನಟಿಸುವಂತೆ ಕರೆ ಬಂದಿತ್ತು. ಆದರೆ ಆ ಸಮಯದಲ್ಲಿ ಕಾರಣಾಂತರಗಳಿಂದ ನಟಿಸಲು ನನಗೆ ಸಾಧ್ಯವಾಗಿರಲಿಲ್ಲ. ಅಸಲಿಗೆ ಮಹಿಮಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶ ಬಂದಾಗಲೂ ನಾನು ರಿಜೆಕ್ಟ್ ಮಾಡಿದ್ದೆ. ಬದಲಿ ಪಾತ್ರ ಎಂಬ ಕಾರಣದಿಂದ ನಾನು ನಟಿಸಲು ಹಿಂದೆ ಮುಂದೆ ನೋಡಿದ್ದೆ. ಮುಂದೆ ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಪಾತ್ರದ ಪ್ರಾಮುಖ್ಯತೆ ನೋಡಿದ ಮೇಲೆ ನಾನು ನಟಿಸಲು ಒಪ್ಪಿಕೊಂಡೆ. ಜೊತೆಗೆ ನಾನು ನಟಿಸುವಾಗ ಪಾತ್ರವೂ ಕೊಂಚ ಬದಲಾಗಿತ್ತು. ಜೊತೆಗೆ ಒಂದು ರೀತಿಯಲ್ಲಿ ಇದು ಸೆಕೆಂಡ್ ಲೀಡ್ ಪಾತ್ರ ಎಂದು ಹೇಳಬಹುದು. ಒಂದು ಒಳ್ಳೆಯ ಪಾತ್ರದ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿರುವುದು ಖುಷಿಯಾಗಿದೆ." ಎನ್ನುತ್ತಾರೆ ಇಶಿತಾ ವರ್ಷ.


Click it and Unblock the Notifications











